Wednesday, November 18, 2009

ನಾವು ಕನ್ನಡ ಎಷ್ಟು ಕಲ್ತಿದ್ದೀವಿ?

ಇದು ಹದುಳ ಇದು ಕುಶಲ
ಇದು ಕಳಶ ಕುಂಭಗಳ ಮಂಗಳ ಮೇಳ

ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.
’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸಿ’ ಮಾಡಿದೆನಾದರೂ ಸಮಾಧಾನವಾಗಲಿಲ್ಲ. ಅದೃಷ್ಟವಶಾತ್ ಆ ಸಂಕಲನದ ಮುನ್ನುಡಿಯಲ್ಲಿ ಇದೇ ಕವಿತೆಯ ವಿಷಯ ಬರೋದರಿಂದ ಮತ್ತು ಹದುಳದ ಬಗ್ಗೆ ವಿವರಿಸಿರೋದರಿಂದ ಅರ್ಥ ಆಯ್ತು.

ನನ್ನಂತಹ ಪಾಮರರಿಗೆ ಅರ್ಥ ಆಗಲೀಂತ ಮುನ್ನುಡಿಯಿಂದ ಕೆಳಗಿನದನ್ನು ಯಥಾವತ್ತಾಗಿ ಕದ್ದಿದ್ದೀನಿ.

"’ಹದುಳ’ ಅನ್ನುವ ಪದ ಬಸವಣ್ಣನಲ್ಲಿ ಬರುತ್ತದೆ. ಅಲ್ಲಿ ಅವನು ಅದನ್ನು ವ್ಯಂಗ್ಯಕ್ಕೆ ಬಳಸುತ್ತಾನೆ. ’ಹದುಳ’ ಎಂದರೆ ಕುಂತ ನೆಲ ಕುಳಿ ಬೀಳುವುದಿಲ್ಲ ಎಂದು ಕಟಕಿಯಾಡುತ್ತಾನೆ. ಹದುಳ ಎಂಬುದು ಕೇವಲ ಶಬ್ದವಲ್ಲ. ಬಸವಣ್ಣನಲ್ಲಿ ಅದು ವ್ಯಕ್ತಿಯ ಗೌರವವನ್ನು ಎತ್ತಿ ಹಿಡಿಯುವಂಥದು, ವ್ಯಕ್ತಿಯೊಬ್ಬನ ಮನಸ್ಸಿನ ಆರೋಗ್ಯವನ್ನೂ ಸೂಚಿಸುವಂಥದು. ಇಷ್ಟು ಗಹನವಾದ ಅರ್ಥವುಳ್ಳ ’ಹದುಳ’ ಈ ಕವಿತೆಯಲ್ಲೂ ಬಳಕೆಯಾಗಿದೆ. ಆದರೆ ಇಲ್ಲಿ ಅದು ಸಂಭ್ರಮಕ್ಕೆ ಬಳಕೆಯಾಗಿದೆ. ಅದನ್ನು ಹೇಳುವ ರೀತಿಯೇ ಸಂಭ್ರಮದಂತಿದೆ. ಕವಿತೆಯ ಸಂಭ್ರಮ ಅದು."

ನಾನು ಬರೆಯ ಹೊರಟಿದ್ದು ಹದುಳದ ಬಗ್ಗೆಯಾಗಲೀ, ಕವಿತೆಯ ಬಗ್ಗೆ ಅಲ್ಲ. ಅದರ ಬಗ್ಗೆ ಇನ್ನೊಮ್ಮೆ ವಿಶದವಾಗಿ ಬರೆದೇನು. ಆದರೆ ಈ ಕವಿತೆಯನ್ನೋದಬೇಕಾದರೆ ಹೀಗೇ ಒಂದು ಯೋಚನೆ ಬಂತು.

ನಮಗೆ ಕನ್ನಡ ಎಷ್ಟು ಬರುತ್ತೆ? ದಿನಕ್ಕೆ ಮೂರು ಹೊತ್ತೂ (ನನ್ನಂತಹ ಕೆಲವರನ್ನು ಹೊರತು ಪಡಿಸಿ :( ) ಕನ್ನಡ ಮಾತಾಡುವ ನಾವು, ಅದೆಷ್ಟು ರೀತಿಯ ಪದ ಪ್ರಯೋಗ ಮಾಡ್ತೀವಿ? ಹೊಸದೇನೂ ಇಲ್ವಲ್ಲಾ? ತಿರುಗಾ ಮುರುಗಾ ( ಮುರುಗಾ ಅಂದ್ರೆ ತಮಿಳಾ? ಹೊಸ ಪ್ರಯೋಗ! ತಮಿಳ್ಗನ್ನಡ. ಹೇ ವಿಠ್ಠಲಾ :) ) ಅವೇ ಶಬ್ದಗಳನ್ನ ಬಳಸೀ ಬಳಸೀ ಹಿಂಡಿ ಹಿಪ್ಪೆ ಮಾಡ್ಬಿಟ್ತೀವಿ. ತೀರ ಕಾವ್ಯಮಯವಾಗಿ ಮಾತಾಡ್ಬೇಕೂಂತ ಇಲ್ಲ. ಅಲ್ಲೊಂದು ಇಲ್ಲೊಂದು ಹಾಗೇ ಒಂದೊಂದು ಶಬ್ದ ಬಳಸ್ತಾ ಹೋದ್ರೆ ಕೇಳ್ಲಿಕ್ಕೂ ಚೆನ್ನಾಗಿರುತ್ತೆ.

ಊರಲ್ಲಿ ಹಿರಿಯರು, ಅಜ್ಜ ಅಜ್ಜಿಯರು ಮಾತಾಡುವಾಗ ಇದ್ದಕ್ಕಿದ್ದಂತೆ, ಅವರಿಗರಿವಿಲ್ಲದಂತೇ ಒಂದೊಂದು ಶಬ್ದ ಉಪಯೋಗಿಸಿಬಿಡ್ತಾರೆ. ಅದು ಅವರಿಗೆ ಅಭ್ಯಾಸ. ಅವರು ಬೆಳೆದು ಬಂದ ವಾತಾವರಣದಲ್ಲಿ ಆ ರೀತಿಯ ಪದ ಪ್ರಯೋಗಗಳು ತೀರ ಸಹಜವಾಗಿ ಬಂದು ಬಿಡುತ್ತವೆ. ಅವರು ಏನಾದರೂ ಹೇಳಿದಾಗ ಅದು ತಕ್ಷಣ ಅರ್ಥವಾಗುತ್ತದೆ. ( ಅಡ್ಡಾದಿಡ್ಡಿ ಮಾತ್ನಾಡಿ, ’ಅರೇ ಯಾರ್, ಭಾವ್ನಾವೋಂಕೊ ಸಮಝೋ’ - ಊಹೂಂ ಬೇಕಿಲ್ಲ. )

ಬರೆಯೋವಾಗ ತುಂಬ ಜನ ಹೊಸಬರು ಸಾಧ್ಯವಾದಷ್ಟು ಹೊಸ ಶಬ್ದಗಳನ್ನು ಬಳಸ್ತಾರಾದರೂ, ನಾನು ಗಮನಿಸಿದ ಮಟ್ಟಿಗೆ ( ಅಲ್ಪ ಜ್ಞಾನಂ ಮಹಾ ಪಾಪಂ! ) ಬರೀ ಗಾಳಿ, ಮರ, ಕಡಲು, ಆಗಸ ಅಂತ ಸಹಜಗನ್ನಡದಲ್ಲೇ ಬರೀತಾರೆ. ಖಂಡಿತ ತಪ್ಪಲ್ಲ, ಅದರ ಆಚೆಗೂ ಒಂದ್ಸಲ ಅಡ್ಡಾಡಿ ಬನ್ನಿ.

ಕಂಗ್ಲೀಷಿನಲ್ಲಿ ಬರೆಯೋದರ ಬಗ್ಗೇನೂ ನನ್ನ ತಕರಾರೇನಿಲ್ಲ. ಅವರಿಗ್ಯಾವುದು ಇಷ್ಟನೋ ಹಾಗೇ ಬರೀಲಿ. ಆದರೆ ಬರೆಯೋ ಒಂದೆರಡು ಕನ್ನಡ ಶಬ್ದನಾದ್ರೂ ಕೇಳೋಕೆ ಇಂಪಾಗಿರಲಿ. ಏನಂತೀರ?

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಟ್ಟು |
ಒಪ್ಪಿರ‍್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ||

2 comments:

  1. ಆನಂದ..
    ನಿಜಾ ಕಣ್ರೀ... ಕನ್ನಡ ಒಂದು ಸಾಗರ..ನಮಗೆ ತಿಳೀದಿರೋದು ಒಂದೆರಡು ಹನಿ ಮಾತ್ರ...
    ಆದರೂ ಚಿಂತೆಯಿಲ್ಲ.... ನಮಗೆ ಬಂದಷ್ಟು ಮಾತಾಡೋಣ...ಜೊತೆಗೆ ಇನ್ನಷ್ಟು ಕಲಿಯಲು ಪ್ರಯತ್ನಿಸೋಣ... ಏನಂತೀರಾ..?? :)

    ReplyDelete
  2. ದಿನಕ್ಕೊಂದು ಪದ, ನೀಡುವುದು ಮುದ!

    ReplyDelete