Tuesday, July 5, 2011

ಪಾಪಿ ಪರದೇಶಿ



ಗುಂಪಲ್ಲಿದ್ದೂ ಇಲ್ಲದಿದ್ದಂತೆ, ಜೊತೆಯಿದ್ದೂ ದೂರವಿದ್ದಂತೆ, ಜನಜಂಗುಳಿಯಲ್ಲಿದ್ದರೂ ಒಂಟಿಯಾಗಿರುವುದು ಅತ್ಯಂತ ಯಾತನಾದಾಯಕ. ಪರದೇಶಿಯಾಗಿ, ಪರಕೀಯನಾಗಿ, ಗುಂಪಿಗೆ ಸೇರದ ಪದವಾದಾಗ ಬಾಳು ಬವಣೆ. ಜೊತೆಯಿದ್ದವರಿಂದ ದೂರವಾಗಿ ಆಚೆ ದಡದಲ್ಲಿ ಕೂತು ಮತ್ತೆ ಭೇಟಿಯಾಗುವ ನಿರೀಕ್ಷೆಯಲ್ಲಿ ಸಮಯ ಮುಂದಕ್ಕೆ ಓಡುವುದನ್ನು ಕ್ಷಣ ಕ್ಷಣವೂ ಎಣಿಸಬಹುದು. ಅಲ್ಲೆಲ್ಲೋ ಇರುವುವರು ಈಗೇನು ಮಾಡುತ್ತಿರಬಹುದು, ನನ್ನ ನೆನಪಿದೆಯೇ? ನಾನಲ್ಲಿದ್ದಿದ್ದಲ್ಲಿ ಹೇಗಿರುತ್ತಿತ್ತು?‌ ಬಹುಶಃ ಅಲ್ಲಿರುವವರಿಗೂ ಇದೇ ಗೊಂದಲವಿರಬಹುದಲ್ಲವೇ? ಕೆಲವೊಮ್ಮೆ  ದುಃಖ ಹಂಚಿಕೊಳ್ಳಲು ಮನಸ್ಸಾಗದು. ಸಂತಸ ಹಂಚಿಕೊಂಡಷ್ಟು ಸುಲಭವಾಗಿ ದುಃಖ ಹಂಚಲಾಗದು. ಮನಸ್ಸು ಹಗುರಾಗುವ ಮುನ್ನ ಎಳೆಯಲಾಗದಷ್ಟು ಭಾರವಾಗುತ್ತದೆ. ಆ ಕ್ಷಣ ಹೊತ್ತು ನರಕಯಾತನೆ.

ದೂರದೂರಿಗೆ ಹೋದಷ್ಟೂ ನೆನಪುಗಳ ಭಾರ ಭಾರಿ.  ಎಲ್ಲಿ ಏನು ನೋಡಿದರೂ‌ ಹೋಲಿಸಲು ಮನ ನಿಂತುಬಿಡುತ್ತದೆ. ಅದೆಷ್ಟೇ ಎತ್ತರದ ಕಟ್ಟಡವಿದ್ದರೂ, ಊರಲ್ಲಿ ಕಟ್ಟಿದ ಎರಡಂತಸ್ತಿನ ಮನೆ ನೋಡಿದ ಖುಶಿಯಾಗದು. ಮೈ ಕೊರೆವ ಚಳಿ, ಮುಂಜಾನೆ ನದಿಯಲ್ಲಿ ಮಿಂದ ನೆನಪಿನ ಎಳೆ ಹೊತ್ತು ತರುತ್ತದೆ. ಅದೇನೇ ಪಂಚತಾರಾ ಹೋಟಲಿನ ತಿಂಡಿಯಾಗಿದ್ದರೂ ಅಮ್ಮನ ಕೈ ತುತ್ತಿನ ಮುಂದೇನೂ‌ ಅಲ್ಲ. ಮೂರು ಹೊತ್ತೂ‌ ಉರಿವ ದೀಪಗಳು 'ಅಯ್ಯೋ ಎಂಟಕ್ಕೆ ಕರೆಂಟ್ ಹೋಗುತ್ತೆ, ಬೇಗ ಮಿಕ್ಸಿ ಹಾಕು' ಅನ್ನುವ ಧಾವಂತ ದುಮ್ಮಾನಗಳಿಗೆ ಜಾಗವಿಲ್ಲದಂತೆ ಮಾಡಿದೆ. ಅದೆಲ್ಲಾ ಈಗ ಮತ್ತೆ ಬೇಕಾಗಿದೆ. ಸುಖದ ಸುಪ್ಪತ್ತಿಗೆಯಿದ್ದರೂ ಏನೋ ಅತೃಪ್ತಿ. ಕಳಚಿದ ಕೊಂಡಿಗೆ ಮನ ತಡಪಡಿಸುತ್ತಿದೆ. ಮಲಗುವ ಮುನ್ನ ಈ ದಿನ ಅಮ್ಮ ಕ್ಯಾಲೆಂಡರಿನಲ್ಲಿ ಮತ್ತೊಂದು ಗೀಟನ್ನೆಳೆದಿರುತ್ತಾಳೆ ಎಂಬ ನೆನಪಾಗುತ್ತದೆ. ದಿನದ ಲೆಕ್ಕ ಅವಳಿಟ್ಟರೆ, ಈ ಹೊತ್ತಿಗೆ ನಾನೇನು ಮಾಡುತ್ತಿರುತ್ತೀನಿ ಎಂಬ ಲೆಕ್ಕ ಅಪ್ಪನ ಪಾಲಿನದ್ದು. ಅವರಿಬ್ಬರ ಲೆಕ್ಕದ ವರದಿ ನನಗೊಪ್ಪಿಸುವುದು ನನ್ನ ತಂಗಿಯ ಕೆಲಸ.
ಸದಾ ಗೆಳೆಯರ ಬಳಗದಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಹೊಸ ಹವೆ ಇನ್ನೂ ಒಗ್ಗಿಲ್ಲ. ಪಾಪಿಗಳು, ಮಾತಿಗೆ ಸಿಕ್ಕಾಗೊಮ್ಮೆ ತಾವೇನೇನು ಮಾಡಿದೆವೆಂಬ ಸುದ್ದಿ ಹೇಳಿ ಹೊಟ್ಟೆ ಉರಿಸುತ್ತಾರೆ. ಸದ್ಯಕ್ಕೆ ಸಂಗೀತವೊಂದೇ ಸಂಗಾತಿಯಾಗಿದೆ.

---

ಮನಸು ಹುಚ್ಚು ಹಯದ ಮೇಲೆ ಹೊರಟಿದೆ. ಒಮ್ಮೊಮ್ಮೆ ತೀವ್ರವಾಗಿ ಕಾಡುವ ಒಂಟಿತನ, ಮತ್ತೊಮ್ಮೆ ಮುದ ನೀಡುತ್ತದೆ. ಕ್ಷಣ ಚಿತ್ತ, ಕ್ಷಣ ಪಿತ್ಥ. ಸುಮ್ಮನೆ ಬರೆಯುತ್ತಾ ಹೊರಟರೆ ಏನಾದರೂ ಸಿಗಬಹುದೆಂದು ಭಾವಿಸಿದವನಿಗೆ ಆತ್ಮಾವಲೋಕನಕ್ಕೊಂದು ಅವಕಾಶ ಸಿಕ್ಕಂತಾಗಿದೆ. ಕೆಲವೊಮ್ಮೆ ಜೀವನದ ನಿರರ್ಥಕತೆಯ ಬಗ್ಗೆ ಯೋಚಿಸಿದರೆ, ಮಗದೊಮ್ಮೆ ಅತುಲ ಸಾಧ್ಯಾ ಸಾಧ್ಯತೆಗಳ ಬಗ್ಗೆ, ವಿಪುಲ ಅವಕಾಶಗಳ ಬಗ್ಗೆ ಯೋಚಿಸುವಂತಾಗುತ್ತದೆ. ಒಟ್ಟಿನಲ್ಲಿ ಹೂಳೆತ್ತಬೇಕಾಗಿದೆ. ಜಡವಾಗಿರುವುದು ನನಗೇ ಗೊತ್ತಾಗುವಷ್ಟು ಬೇಸರವಾಗಿದೆ. ಕನಸಿನ ರೆಕ್ಕೆ ಬಿಚ್ಚಿ ಹಾರಬೇಕೆಂದುಕೊಂಡರೂ‌ ಮೇಲೆ ಯಾವುದೋ‌ ಅದೃಶ್ಯ ಪಂಜರವಿದೆಯೇನೋ ಎಂಬಂತೆ ಸುಮ್ಮನೆ ಕುಳಿತಿದ್ದೀನಿ. ಬಹುಶಃ ಇದೇ ಮೊದಲ ಬಾರಿಗೆ ಯಾವುದಾದರೂ ವಿಷಯದ ಬಗ್ಗೆ ಅತಿಯಾಗಿ ಯೋಚಿಸಿದ್ದರ ಫಲವಿರಬೇಕು. ಸುಮ್ಮನಿದ್ದುಬಿಡಬೇಕು. ಸುಮ್ಮನಿರುವುದು ಬಲು ಕಷ್ಟ. ದೈನಂದಿನ ಕಾರ್ಯ ಕಲಾಪಗಳು ಹೇಗೋ‌ ನಡೆದು ಹೋಗುತ್ತವೆ. ಯಾವುದರಲ್ಲೂ ಮನಸ್ಸಿಲ್ಲ. ಅಪ್ಪನಿಗೆ ಕಣ್ಣು ಹೊಡೆದು, ಒಂದಿಷ್ಟು ಪ್ರೇಮ ಕಾವ್ಯ ಸಂಕಲನಗಳನ್ನೆತ್ತುಕೊಂಡು ಬಂದವನು ಅದರಲ್ಲಿ ಒಂದನ್ನೂ ಮುಟ್ಟಿಲ್ಲ. ವ್ಯಾಸರ ಕತೆಗಳು ಈ ಸಮಯದಲ್ಲಿ ಹೆಚ್ಚಾಗಿ ಅರ್ಥವಾಗುತ್ತಿವೆ. ಬರೆಯ ಹೊರಟರೆ ವಿಚಾರಗಳೇ ಇಲ್ಲ. ಯಾವತ್ತೋ ಅರ್ಧ ಬರೆದ ಕತೆಗಳನ್ನು ಮುಂದುವರೆಸೋಣವೆಂದರೆ, ಬರೆದ ಅರ್ಧವೇ ನೆನಪಿಲ್ಲ. ಒಲವಿನ ಹಂಗಿಲ್ಲದೆ ಕವಿತೆ ಬರೆಯಲೂ ಮನಸ್ಸಿಲ್ಲ. ನನ್ನೆಲ್ಲ ಕಥೆಗಳೂ ನನ್ನ ಒಂದಿಲ್ಲೊಂದು ಭಾವ ತೀವ್ರತೆಯಲ್ಲಿ ಬರೆದಂತವು. ಈ ಭಾವ ಹೀನತೆಯಲ್ಲಿ ಏನಾದರೂ‌ ಹುಟ್ಟಬಹುದೆಂಬ ನಿರೀಕ್ಷೆಯಲ್ಲಿ...

---

ಮನೆಯೆದುರು ಬಿದ್ದಿರುವ ಹಿಮವನ್ನೇ ದಿಟ್ಟಿಸುತ್ತಾ ಕುಳಿತಿದ್ದೇನೆ. ಕೋಣೆಯೊಳಗಿಂದ ಕಲ್ಯಾಣಿ ತೇಲಿ ಬರುತ್ತಿದೆ. ನೆನಪುಗಳು ಒಂದೊಂದಾಗಿ ಬಂದು ಕದ ತಟ್ಟುತ್ತಿವೆ. ಕೆಲವು ಅತೀ ಮಧುರ, ಕೆಲವು ಹಾಗೇ ಘಟಿಸಿದಂತವು, ಮತ್ತೆ ಕೆಲವು ಇನ್ನೂ ಅರಗಿಸಿಕೊಳ್ಳಲಾಗದಂತಹವು. ಎಲ್ಲವೂ ನನ್ನವೇ. ಮನೆ ನನ್ನದೇ, ಮನ ನನ್ನದೇ. ಕದ ತೆರೆದರೆ ಸಾಕು ಒಳಮನೆಯಿಂದ ನಡು ಮನೆಗೆ ಬಂದು ಕೂರುತ್ತವೆ. ಎದೆಯ ಕಪಾಟಿನಲ್ಲಿ ಎಷ್ಟೆಲ್ಲಾ ಅಡಗಿದ್ದವು. ಪ್ರೀತಿ, ಅಸೂಯೆ, ಸಣ್ಣತನ, ಸಾವು, ಹಗೆ, ದುಃಖ, ನಗೆ, ನಲಿವು, ಸಾಧನೆ. ನಾನು ಸುಮ್ಮನೆ ನಗುತ್ತೇನೆ.  ಅವೂ ಸುಮ್ಮನೆ ನಗುತ್ತವೆ. ಮತ್ತದೇ ಮೌನ. ಅದು ಶಾಂತಿಯೋ, ರುದ್ರ ತಾಂಡವದ ಮುನ್ಸೂಚನೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಸಹನೀಯ. ಸುಮ್ಮನೆ ಯೋಚಿಸುತ್ತಾ ಕುಳಿತರೆ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋದಂತೆ ಭಾಸ. ರುದ್ರ ರಮಣೀಯ. ಅಲೆಗಳ ರೌದ್ರತೆಯಲ್ಲೂ ಒಂದು ಲಯ, ತಾಳವಿದ್ದಂತೆ. ಅವುಗಳಿಗೆ ನನ್ನನ್ನೊಪ್ಪಿಸಿ ಶರಣಾಗುತ್ತೇನೆ. ಒಂದು ವಿಲಕ್ಷಣ ಆನಂದ.  ಕಲ್ಯಾಣಿ ಮುಗಿದರೂ ಕಣ್ತೆರೆಯಲು ಮನಸ್ಸಿಲ್ಲ.

---

ಈಗ ಮತ್ತೆ ನ್ಯೂಯಾರ್ಕ್ ಗೆ ಹೋಗಿ ಬಂದೆ. ಕೆಲಸದ ಮೇಲೆ ಬೇರೆ ಊರಿಗೆ ಹೋದ ಮೇಲೆ ಪುನಃ ಅಲ್ಲಿಗೆ ಹೋಗಲಾಗಿರಲಿಲ್ಲ. ಎಲ್ಲಿಗೇ ಹೋದರೂ ಕೆಲ ಕಾಲ ಇದ್ದ ತಕ್ಷಣ ಅದೆಷ್ಟು ನಮ್ಮದು ಅನಿಸುತ್ತದೆ. ಅರೇ, ನಾನು ಹೋಗಿ ಬರುತ್ತಿದ್ದ ದಾರಿ, ಹತ್ತುತ್ತಿದ್ದ ರೈಲು, ಕಾಫಿ ಕುಡಿಯುವ ಜಾಗ, ಸಿನಿಮಾ ಥಿಯೇಟರು, ಎಲ್ಲವೂ ನನ್ನದೆನ್ನುವ ಭಾವ. ಬಹುಶಃ ನಾವಿರುವುದೇ ಹಾಗೇನೋ. ಊರಿಂದೂರಿಗೆ, ಪರದೇಶಕ್ಕೇ ಹೋದರೂ  ಕೆಲವೇ ದಿನಗಳಲ್ಲಿ ಎಲ್ಲವೂ ನಮ್ಮದೆನಿಸುತ್ತವೆ. ಒಂದಿಷ್ಟು ಜನರ ಪರಿಚಯವಾಗುತ್ತದೆ. ಗೆಳೆತನ ಮೂಡುತ್ತದೆ. ಮತ್ತೊಂದಿಷ್ಟು ದಿನಗಳಲ್ಲಿ ಅವರ ಮನೆಯಲ್ಲಿ ಯಾರಿದ್ದಾರೆ, ನಮ್ಮ ಮನೆಯಲ್ಲಿ ಎಷ್ಟು ಜನ, ನಮ್ಮಗಳ ಕಷ್ಟ ಸುಖ ಎಲ್ಲದರ ಪ್ರವರವೂ ಆಗಿ ಹೋಗುತ್ತದೆ. ನಮ್ಮದೇ ಪ್ರಪಂಚ ಹುಟ್ಟುಕೊಂಡಿರುತ್ತದೆ, ಕೇವಲ ನಮ್ಮದೇ ಆದ ಪ್ರಪಂಚ. ಅದೆಷ್ಟು ವಿಚಿತ್ರವಲ್ಲವೇ, ನಮ್ಮ ಕುಟುಂಬ, ನಮ್ಮ ಊರು, ನಮ್ಮ ಬಳಗ, ನಮ್ಮ ಸ್ನೇಹಿತರು ಎಲ್ಲರನ್ನೂ ಬಿಟ್ಟು ಬಂದಿದ್ದೀವಿ ಎಂದು ಕೊರಗುವಷ್ಟರಲ್ಲಿಯೇ ನಮಗರಿವಿಲ್ಲದಂತೆಯೇ ಮತ್ತೊಂದು ಎಲ್ಲಾ "ನಮ್ಮಗಳು"‌ಹುಟ್ಟಿಕೊಂಡಿರುತ್ತವೆ. ಎಲ್ಲೆಲ್ಲಿಯೋ ಕಟ್ಟಿದ ಅನೇಕ ಚಿಕ್ಕ ಚಿಕ್ಕ ಪ್ರಪಂಚಗಳ ಸಮೂಹವೇ ನನ್ನ ಬದುಕು.

ಹುಟ್ಟಿದ ಊರಲ್ಲಿ ಬೆಳೆಯಲಿಲ್ಲ, ಬೆಳೆದ ಕಡೆ ಉಳಿಯಲಿಲ್ಲ. ಇದು ನನ್ನದು ಎಂದು ಅನಿಸುವಷ್ಟರಲ್ಲಿಯೇ ಕಾಲಿಗೆ ಚಕ್ರ ಕಟ್ಟಿಕೊಂಡಾಗಿದೆ. ನಮ್ಮದೇ ಊರು, ನೆಲ, ಜನ ಎಲ್ಲವನ್ನೂ ಬಿಟ್ಟು ಮುಂದೆ ಬಂದಾಗಿದೆ. ಬದುಕು ಎಲ್ಲಿಂದಲೋ ಶುರುವಾಗಿ ಅದೆಲ್ಲಿಗೆ ಕರೆದೊಯ್ಯುತ್ತಿದೆಯೋ ಗೊತ್ತಾಗುತ್ತಿಲ್ಲ.

---

ಇಲ್ಲಿಗೆ ಎಲ್ಲಾ ಮುಗಿಯಿತು ಎಂದು ಯಾವಾಗ ಅನಿಸುತ್ತದೋ ಆಗ ಸಮಯ ಓಡಲು ಶುರು ಮಾಡುತ್ತದೆ. ಅಯ್ಯೋ ಅಲ್ಲಿಗೆ ಹೋಗಬೇಕಿತ್ತು, ಅದನ್ನು ನೋಡಬೇಕಿತ್ತು, ಛೇ, ಆ ಡ್ರೆಸ್ ಪುಟ್ಟುಗೆ ಚೆನ್ನಾಗಿರ್ತಿತ್ತೇನೋ ತಗೊಂಡು ಬಿಡಬೇಕಿತ್ತು. ಮನಸ್ಸು ಯೋಚಿಸುವ ಧಾಟಿಯೇ ಬದಲಾಗುತ್ತದೆ. ಮನೆಗೆ ಹೋಗುವ ಸಮಯ ಹತ್ತಿರವಾಗುತ್ತಿದೆ. ದೇಶ ಬಿಟ್ಟು ಬಂದು ಕಾಲವಾಗಿದ್ದರೂ, ನಮ್ಮೂರು, ನಮ್ಮೋರು ಎಲ್ಲ ನೆನಪುಗಳೂ ಇನ್ನೂ ಹಸಿರು.
ಇಲ್ಲಿಗೆ ಬಂದ ಮೇಲೆ ಬರೆದ ಒಂದಿಷ್ಟು ಸಾಲುಗಳನ್ನು ಡೈರಿಯಿಂದ ಹಾಗೇ ಎತ್ತಿ ಇಲ್ಲಿಟ್ಟಿದ್ದೇನೆ. ಡೈರಿಯಿಂದ ಇನ್ನೊಂದಿಷ್ಟು  ಎತ್ತಬಹುದಿತ್ತೇನೋ, ಆದರೆ ಮನಸ್ಸಿಲ್ಲ. ಅದಾಗಲೇ ಊರಿಗೆ ಹೋಗಿಯಾಗಿದೆ. ಇನ್ನು ನಾನು ಹೋಗಬೇಕಷ್ಟೇ.

ಅಪ್ಪನಿಗೆ ಫೋನ್ ಮಾಡಿದರೆ, 'ಬಾ ಮಗನೇ ಬಾ. ಅಲ್ಲಿಗೆ ಹೋಗಿ ಕೊಬ್ಬಿದೀಯಾ, ಇಲ್ಲಿಗೆ ಬಂದ ಮೇಲೆ ಕುತ್ತಿಗೆಗೆ ಒಂದು ಗುದಿ ಕಟ್ತೀನಿ. ಅವಾಗ ಬುದ್ದಿ ಬರುತ್ತೆ' ಎಂದು ಹೆದರಿಸ್ತಿದಾರೆ. ನನ್ನ ತಂಗಿಯಂತೂ 'ಏಯ್ ಐಫೋನ್ ತಗೊಂಡ್ಯೇನೋ' ಅಂತ ಆವಾಜ್ ಹಾಕ್ತಿದಾಳೆ.  ಬೆಂಗಳೂರಿನ ರೂಂಮೇಟ್ 'ನಂಗೆ ಲ್ಯಾಪ್ ಟಾಪ್ ತರ್ಲಿಲ್ಲ ಅಂದ್ರೆ ಬರಲೇ ಬೇಡ' ಅಂತ ಹೇಳಿದ್ದಾನೆ. ಯಾರಿಗೆ ಏನು ತಗೊಂಡು ಹೋಗ್ಬೇಕೋ ಗೊತ್ತಾಗ್ತಿಲ್ಲ. ಅಮ್ಮ ಮಾತ್ರ, 'ಏನೂ ತರಬೇಡ ಮಗನೇ, ಸುಖವಾಗಿ ಬಂದ್ಬಿಡು ಅಷ್ಟೇ ಸಾಕು' ಅಂತ ಹೇಳ್ತಿದಾಳೆ.  ನಾನು ಈ ಸಲ ಅಮ್ಮನ ಮಾತು ಮೀರಲ್ಲ.

Monday, June 20, 2011

ಅಪಾರವ್ಯಾಸ


ಸಾಕಷ್ಟು ನೋಡಿಯಾಗಿದೆ, ಸಾಕಷ್ಟು ಸುತ್ತಿಯಾಗಿದೆ, ಆದರೂ ಅನುಭವ ಸಾಲದು. ತಲೆಯೆತ್ತಿ ನೋಡಿದರೆ ಯಾರಾದರೂ‌ ಕಂಡಾರೆಯೇ ಎಂದು ಕಣ್ಣರಸುತ್ತವೆ. ಏನೇ ಬಡಾಯಿ ಕೊಚ್ಚಿಕೊಂಡರೂ‌ ಕೆಲವು ಗಳಿಗೆ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿ ಮಗುವಾಗಬೇಕೆನಿಸುತ್ತದೆ. ಮಗುವಾಗುವುದರಲ್ಲಿ ಹಿತವಿದೆ. ದೊಡ್ಡವರು ಚಿಕ್ಕ ಮಕ್ಕಳೊಂದಿಗೆ ಆಡುವುದು ಅವುಗಳನ್ನು ಖುಶಿ ಪಡಿಸಲೋ ಅಥವಾ ತಾವು ಮಗುವಾಗುವ ಹಂಬಲಕ್ಕೋ ಎಂಬ ಗೊಂದಲ ನನಗಿದೆ. ಅವುಗಳ ಮುಗ್ಧ ಲೋಕದಲ್ಲಿ ತೊದಲು ಮಾತನ್ನಾಡುತ್ತಾ ಅಂಬೆಗಾಲಿಡುವುದೇ ಒಂದು ಮಹದಾನಂದ. ಊರಿಗೆ ಹೋದಾಗಲೆಲ್ಲಾ ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಕೆಲ ಹೊತ್ತು ಮಲಗಿರುತ್ತೇನೆ. ಆ ಸಮಯದಲ್ಲಿ ಅಮ್ಮನ ಪಾಲಿಗೆ ನಾನು ಕೇವಲ ತಿಂಗಳ ಕೂಸು, ನನಗೋ ಆ ಕೆಲ ಹೊತ್ತು ಮತ್ತಾವ ಅಷ್ಟೈಶ್ವರ್ಯವೂ ಬೇಡ. ಅದೆಲ್ಲಿರುತ್ತಾರೋ ಗೊತ್ತಿಲ್ಲ, ಸರಿಯಾಗಿ ಅದೇ ಸಮಯಕ್ಕೆ ಅಪ್ಪ ಬರ್ತಾರೆ.

ಆಹಾಹ ಬಾಲ ಲೀಲೆ ನೋಡಲೇ, ಎದ್ದೇಳೋ‌ ಭಾಡ್ಕೋವ್, ಮೆಲ್ಲನೆ ಒದೀತಾರೆ.

ಒಂಚೂರು ಕಾಫಿ ಕೊಡ್ತೀಯೇನೇ ಅಂತ ಅಮ್ಮನ ಕೇಳ್ತಾರೆ.

ನಾನು, ಅಮ್ಮ ಇಬ್ಬರೂ ಗೊಣಗ್ತೀವಿ. ಅಮ್ಮ ಎದ್ದು ಅಡಿಗೆ ಮನೆಗೆ ಹೋದ್ರೆ, ನಾನು ಲೊಕೇಷನ್ ಶಿಫ್ಟ್. ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ಮಲಗ್ತೀನಿ. ಎರಡೇ ನಿಮಿಷ ಅಷ್ಟೇ. ನಾನು ಮೈಮರೆತಿದೀನಿ ಅಂತ ಅನಿಸಿದ ಕೂಡಲೇ ಫಟ್ ಅಂತ ಕಾಲೆಳೆದುಕೊಂಡು ದೂರ ಸರೀತಾರೆ. ಧಡ್ ಅಂತ ನೆಲಕ್ಕೆ ತಲೆ ಬಡಿಯಬೇಕು. ಆದ್ರೆ ನಾನು ಬಿಸಿ ಹಾಲು ಕುಡಿದ ಬೆಕ್ಕು. ತಲೆಯನ್ನು ಗಾಳಿಯಲ್ಲಿ ಹಾಗೇ ಇಟ್ಟು ಅಪ್ಪನ ಕಡೆ ನೋಡಿ ಹೆಂಗೆ ಅಂತ ನಕ್ಕು, ಪುನಃ ತೊಡೆ ಮೇಲೆ ತಲೆಯಿಡಲು ಮಲಗಿದಂತೆಯೇ ತೆವಳಿ ಅವರ ಬಳಿ ಹೋಗ್ತೀನಿ. ಪ್ಲಾನ್ ಫೇಲ್ ಆಯ್ತು ಅಂತ ಅಪ್ಪಂಗೆ ಬೇಜಾರಾಗಿರುತ್ತೆ. ಹೋಗೋ ಬೇಕೂಫ ಅಂತ ಬೈಯ್ದು ಅವರೂ ಕುಳಿತಂತೆಯೇ ದೂರ ಸರಿಯುತ್ತಾ ಹೋಗ್ತಾರೆ. ನಾನು ತೆವಳುವುದೂ, ಅವರು ದೂರ ಸರಿಯುವುದೂ ನಡೆದೇ ಇರುತ್ತೆ, ಅಷ್ಟರಲ್ಲಿ ಅಮ್ಮ ಕಾಫಿ ಹಿಡಕೊಂಡು ಬಾಗಿಲಲ್ಲಿ ನಿಂತು 'ಅಯ್ಯೋ! ನೋಡ್ಲಿಕ್ಕಾಗಲ್ಲಪ್ಪಾ ನಿಮ್ಮಿಬ್ರನ್ನೂ' ಅಂತ ಅನ್ನಬೇಕು, ನಾವಿಬ್ರೂ ಸುಮ್ಮನಾಗಬೇಕು.

ದೊಡ್ಡವನಾಗಿದೀಯ, ಮಂಗ ಚೇಷ್ಟೆ ಬಿಡು. ವಯಸ್ಸಿಗೆ ತಕ್ಕ ಹಾಗೆ ಇರೋದನ್ನ ಕಲಿ ಅಂತ ಇತ್ಯಾದಿ ಉಪದೇಶಗಳನ್ನು ಅವಾಗವಾಗ ಅಪ್ಪ ನನ್ನ ಕಿವಿ ಮೇಲೆ ಒಗೀತಾನೇ ಇರ್ತಾರೆ. ಅದ್ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಅದ್ಭುತವಾದ ಕಿವಿ ನನಗಿವೆ. ಇಂಥ ಮಾತುಗಳೆಲ್ಲಾ, ಈ‌ ಕಿವಿಯಿಂದ ಹೊರಟು ಆ ಕಿವಿಯಿಂದ ಹೊರ ಹೋಗಿ ಬಿಡ್ತಾವೆ. ನಾನು ಬಿಡುಗಡೆಯ ನಿಟ್ಟುಸಿರು ಬಿಡುತ್ತೇನೆ. ನಾನೇನು ಕಡಿಮೆಯಿಲ್ಲ, ಉಲ್ಟಾ ಶುರು ಮಾಡ್ತೀನಿ. ನೋಡಪ್ಪಾ, ನಿಂಗೂ ವಯಸ್ಸಾಯ್ತು, ಮುದುಕನಾಗಿಬಿಟ್ಟೆ ಎಂದು ಹೇಳೋದೇ ತಡ, ಮುದುಕ ಅನ್ನಬೇಡ ನನ್ನ. ನನಗೇನ್ಲೇ ವಯಸ್ಸಾಗಿರೋದು ಮಹಾ. ಇನ್ನೂ ರಿಟೈರ್ ಆಗಿಲ್ಲ ಕಣೋ‌ ನಾನು. ವಾದ ಶುರು.

ನನ್ನ ತಂಗಿ ಮನೇಲಿ ಇದ್ದರಂತೂ ಇಬ್ಬರೂ ಸೇರಿ ಮುದುಕ ಅಂತ ಛೇಡಿಸಲು ಶುರು ಮಾಡ್ತೀವಿ. ಒಂದೆರಡು ನಿಮಿಷ ನಮ್ಮ ಜೊತೆ ವಾದ ಮಾಡಲು ನೋಡ್ತಾರೆ ಅಷ್ಟೇ, ಉಪದೇಶ ಎಲ್ಲಾ ಕಟ್, ಅಪ್ಪ ಮನೆಯಿಂದ ಎಸ್ಕೇಪ್... ಅಮ್ಮ ಮುಸಿಮುಸಿ ನಗುತ್ತಿರುತ್ತಾಳೆ.

ನಾನು ಪಿತೃಪೀಡಕನೆಂದು ನೀವಂದುಕೊಂಡರೆ ತಪ್ಪು. ಪುಣ್ಯಾತ್ಮ ನಮ್ಮಪ್ಪ ಕಾಡೋದೇ ಬೇರೆ ತರಹ. ನನ್ನ ಇಂಜಿನಿಯರಿಂಗ್ ರಿಸಲ್ಟ್ ನೋಡಲು ಕೂಡ ನನ್ನನ್ನು ಒಬ್ಬನನ್ನೇ ಕಳಿಸುತ್ತಿರಲಿಲ್ಲ. ಅದೆಷ್ಟೇ ಸಬ್ಜೆಕ್ಟಲ್ಲಿ ಫೇಲ್ ಆಗಿದ್ರೂ ಮನೆಗೆ ಬರ್ತೀನಿ ಕಣಪ್ಪಾ, ಹೊಳೆ ಹಾರುವಷ್ಟು ಮೂರ್ಖ ನಾನಲ್ಲ ಎಂದು ನಾನೇನೇ ಹೇಳಿದರೂ ಕೇಳ್ತಿರ್ಲಿಲ್ಲ.
ಕುಲೋದ್ಧಾರಕ ಕಣಪ್ಪಾ ನೀನು, ಅದ್ಹೆಂಗೋ ಒಬ್ಬನ್ನೇ ಕಳಿಸ್ಲಿ. ಜೊತೆಗೆ ನಾನೂ ಬರ್ತೀನಿ ಅಂತ ತಮಾಷಿಯಾಗೆ ತೇಲಿಸಿಬಿಡೋರು.
ರಿಸಲ್ಟ್ ನೋಡುವುದಕ್ಕೂ ಮುಂಚೆಯೇ ಜಗಳ. ಒಬ್ಬನೇ ಹೋಗ್ತೀನಿ ಅಂತ ನಾನು, ಜೊತೆಗೆ ನಾನೂ ಬರ್ತೀನಿ ಅಂತ ಅಪ್ಪ.
ಅಯ್ಯೋ ಕರ್ಕೊಂಡ್ ಹೋಗ್ಬಾರೋ, ಮನೇಲೇ ಇದ್ರೆ ನನ್ನ ಪ್ರಾಣ ತಿಂತಾರೆ ಅಂತ ಅಮ್ಮ ಜೋರು ಮಾಡ್ಬೇಕು. ಅಪ್ಪ ಏನೋ ಗೆದ್ದವರ ತರಹ ನನ್ನ ಕಡೆ ನೋಡಿ ಬಾರಲೇ ಹೋಗಣ ಅನ್ನಬೇಕು. ನಾನು ಮುಖ ಕೆಟ್ಟದಾಗಿ ಮಾಡ್ಕೊಂಡು ಗೊಣಗಾಡ್ತಾ ಹೊರಡ್ಬೇಕು.

ಸುಮಾರು ಹತ್ತನೇ ತರಗತಿಯಿಂದಲೂ ನಮ್ಮನೇಲಿ ಈ‌ ಜಗಳ ಇದ್ದಿದ್ದೇ.
ನಮ್ಮಿಬ್ಬರ ಜಗಳದ ಫಲವೋ, ಅವಳ ಅದೃಷ್ಟವೋ ಏನೋ, ನನ್ನ ತಂಗಿಯ ರಿಸಲ್ಟ್ ನೋಡುವ ಭಾಗ್ಯ ನನ್ನ ಪಾಲಿನದ್ದು. ಆದರೆ ನಾನು ಬಿಡಬೇಕಲ್ಲ. ರಿಸಲ್ಟ್ ಹೇಳುವಾಗ ಅವಳ ಗೆಳತಿಯರದ್ದೆಲ್ಲಾ ಹೇಳಿ ಅವಳದ್ದೇ ಹೇಳ್ತಿರಲಿಲ್ಲ. ಒಂದು ವೇಳೆ ಹೇಳಿದರೂ ಎಲ್ಲಾ ತಪ್ಪು ತಪ್ಪಾಗಿ ಹೇಳ್ತಿದ್ದೆ. ಸರಿಯಾಗಿ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಲು ಅವಳು ಹರ ಸಾಹಸ ಮಾಡಬೇಕು. ಆದರೆ ಅವಳ ಕಷ್ಟ ಅಲ್ಲಿಗೇ ಮುಗಿಯಲ್ಲ. ಡಿಗ್ರಿಯಲ್ಲಿ ಒಂದಿಷ್ಟು ಗೋಲ್ಡ್ ಮೆಡಲ್ ಅವಳಿಗೆ ಕೊಡ್ತಾರೆ ಅಂತ ಹೇಳಿದ್ಲೋ ಇಲ್ವೋ, ಶುರುವಾಯ್ತಲ್ಲಪ್ಪ. ಅಪ್ಪನ ಕಡೆಯಿಂದ ಅವಳ ಗುಣಗಾನ. ಫೋನ್ ಮಾಡ್ದಾಗೊಮ್ಮೆ ಕನಕಮಾಲಾ, ಸ್ವರ್ಣಮಾಲಾ, ರತ್ನಮಾಲಾ, ರತ್ನಮಂಜರಿ ಅಂತ ಏನೇನೋ ಹೇಳ್ತಾರೆ ಕಣೋ ತಡ್ಕಳ್ಳಿಕ್ಕಾಗಲ್ಲ ಅಂತ ಹೇಳ್ತಿದ್ಲು. ಪಾಪದ ಹುಡುಗಿ. ಈಗ ನಾನು, ಅಪ್ಪ ಇಬ್ಬರೂ ಅವಳ ಗುಣಗಾನ ಮಾಡ್ತೀವಿ.

ನಮ್ಮನೇಲಿ ಎಲ್ಲರಿಗೂ ಅಡ್ಡ ಹೆಸರುಗಳಿವೆ. ಅಮ್ಮನ ಪಾಲಿಗೆ ನಾನು ನನ್ನ ತಂಗಿ ಇಬ್ರೂ ಕಂದಾ. ಅವಳು ಯಾರನ್ನ ಕರೀತಿದ್ದಾಳೆ ಅಂತ ನಾವೇ ಊಹಿಸಬೇಕು. ಇನ್ನು ಅಪ್ಪ, ನನ್ನ ಪಾಪು, ಕಂದಾ, ಹೈವಾನ್, ಭಾಡ್ಕೋವ್, ಬೇಕೂಫ ಇತ್ಯಾದಿಯಾಗಿ ಕರೆಯುತ್ತಿರುತ್ತಾರೆ. ನನ್ನ ತಂಗಿಯನ್ನಂತೂ ಅದೇನೇನೋ ಕರೀತಿರ್ತಾರೆ. ಹೆಚ್.ಎನ್, ಎನ್.ಹೆಚ್, ಹೆಚ್.ಎಮ್, ಹೆಚ್.ಹೆಚ್.ಎಮ್. ಅಪ್ಪ ಮಗಳ ಮಧ್ಯೆ ಹೀಗೆ ಅವೆಷ್ಟೋ ಕೋಡ್ ಗಳಿವೆ. ನೀನು ಏನು ಬೇಕಾದ್ರೂ ಕರಿ, ಬೇರೆಯವರಿಗೆ ಮಾತ್ರ ಗೊತ್ತಾಗಬಾರದು ಅಂತ ಅವಳು ಅಪ್ಪನಿಗೆ ತಾಕೀತು ಮಾಡಿದ್ದಾಳೆ. ಕೆಲವೊಂದು ಅತಿ ಮಧುರವಾಗಿದ್ದರೂ, ಇನ್ನು ಕೆಲವು ಪಕ್ಕಾ ಬಯಲುಸೀಮೆಯವರು ಮಾತ್ರ ಹೇಳಬಲ್ಲಂತವು. ನನ್ನ ಪಾಲಿಗೆ ಮಾತ್ರ ಅವಳು ಪುಟ್ಟು. ಕೆಲವೊಮ್ಮೆ ಪ್ರೀತಿ ಹೆಚ್ಚಾಗಿ ಪಿಶಾಚಿ ಅಂತ ಕರೆದಾಗ ಅವಳೂ ಅಷ್ಟೇ ಪ್ರೀತಿ ತೋರಿಸ್ತಾಳೆ. ಅಮ್ಮನನ್ನು ನಾನು ಗುಂಡಿ, ಸುಂದರಿ ಎಂದು ಕರೆದರೆ , ಅಪ್ಪನನ್ನು ನಾವೆಲ್ಲಾ ಪಿತಾಶ್ರೀ, ಸಾಮಿ, ಅಪಾರ ಎಂದು ಕರೀತೀವಿ. ಸಾಮಿ ಎಂಬುದು ಸ್ವಾಮಿಯ ಅಪಭ್ರಂಶವಾದರೆ, ಅಪಾರದ ಹಿಂದೆ ಒಂದು ಪುಟ್ಟ ಕಥೆಯಿದೆ.

ಸರಿಯಾಗಿ ನೆನಪಿಲ್ಲ, ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದೆ ಅಂತ ಕಾಣುತ್ತೆ. ಕುಮಾರವ್ಯಾಸನನ್ನು ಓದುವುದಾಗಿ, ಅಪ್ಪ ಓದುತ್ತಿದ್ದ ಭಾರತ ಕಥಾಮಂಜರಿಯನ್ನು ಎತ್ತಿಕೊಂಡಿದ್ದೆ. ಹೀಗೇ ಓದುತ್ತಾ ಕುಳಿತಿದ್ದಾಗ ಒಂದು ದಿನ ಹೆಸರು ಹೊಳೆದೇ ಬಿಟ್ಟಿತ್ತು. ಮನೆಗೆ ಬಂದವನೇ ಹೇಳಿದ್ದೆ. ಅಪ್ಪಾ. ಗದಗಿನ ನಾರಾಯಣ ಕುಮಾರವ್ಯಾಸನಾದರೆ, ನೀನು, ಕೊಮಾರನಹಳ್ಳಿ ನಾರಾಯಣ ಅಪಾರವ್ಯಾಸ.
ಅಮ್ಮ, ಏನೋ ಹಂಗಂದ್ರೆ ಅಂತ ಕೇಳಿದ್ಲು.
ಅದೇನಮ್ಮ, ಸುತ್ತಳತೆ ಜಾಸ್ತಿ ಇದೆಯಲ್ಲ. ಅದಕ್ಕೇ ಆ ಹೆಸರು. ಅಪಾರ-ವ್ಯಾಸ.
ಅವತ್ತು ಅಪ್ಪ ಅಟ್ಟಿಸಿಕೊಂಡು ಬಂದಿದ್ದರು.
ಈಗ ಮನೆಯಲ್ಲಿ ಎಲ್ಲರೂ ಅವರನ್ನು 'ಅಪಾರ' ಎಂದು ಪ್ರೀತಿಯಿಂದ ಕರೆಯುತ್ತೀವಿ.

ಅಪಾರನನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ವಿಷಯವೇ. ಯಾವಾಗ ಏನು ಮಾಡ್ತಾರೆ ಅಂತ ಹೇಳೋದು ಕಷ್ಟ. ತುಲಾ ರಾಶಿಯವರೇ ಹಾಗಂತೆ ಕಣೋ, ಮನಸ್ಸು ಮರ್ಕಟವಂತೆ. ನಂಗೆ ಮದುವೆಗೂ ಮುಂಚೇನೇ ಆನೆಗುಂದ ಅಣ್ಣ ಹೇಳಿದ್ದ ಎಂದು ಅಮ್ಮ ಹೇಳಿದರೆ, ಏನೇ ಅದು?‌ ಅಮ್ಮ ಮಗ ಸೇರ್ಕೊಂಡು ನನ್ನ ಬಗ್ಗೆ ಏನೇನೋ ಹೇಳ್ತೀರಾ ಅಂತ ಅಪ್ಪ ಗುಟುರು ಹಾಕ್ತಿರ್ತಾರೆ.
ಸಣ್ಣ ಸಣ್ಣ ವಿಷಯಕ್ಕೂ‌ ವಿಪರೀತವಾಗಿ ಖುಶಿ ಪಡುವ ಅಪ್ಪ, ನನಗೆ ಕೆಲಸ ಸಿಕ್ತು ಅಂತ ಗೊತ್ತಾದ ತಕ್ಷಣ ಇಡೀ ಊರಿಗೆ ಊಟ ಹಾಕ್ಸಿದ್ದ.
ಯಾಕಪ್ಪಾ ಕೆಲಸ ಬೇರೆ ಯಾರಿಗೂ ಸಿಗೋದೇ ಇಲ್ವೇ, ನಂಗೊಬ್ಬನಿಗೇನಾ ಅಂತ ಕೇಳಿದರೆ, ಊರೋವರ ಕಥೆ ತಗೊಂಡು ನನಗೇನೋ. ನನ್ನ ಮಗಂಗೆ ಕೆಲಸ ಸಿಕ್ಕಿದೆ ಅಂತ ನನಗೆ ಖುಶಿ, ನಮ್ಮ ಮನೆತನದಲ್ಲೇ ಓದ್ತಾ ಇರೋವಾಗಲೇ ಕೆಲ್ಸ ಸಿಕ್ಕಿದ್ದು ನಿಂಗೇ ಮೊದಲು. ನಿಮ್ಮ ಕಾಲೇಜಿನಲ್ಲೂ ಅಷ್ಟೇ ಅಲ್ವೇನೋ, ನಿಂಗೇ ತಾನೇ ಫಸ್ಟು?‌ ಅದೆಲ್ಲ ಬಿಡು. ನನ್ನ ಸಂತೋಷಕ್ಕೆ ನಾನು ಊಟ ಹಾಕಿಸಿದರೆ, ನಿಂಗೇನೋ‌ ಕಷ್ಟ?‌ ನಾನು ಸುಮ್ಮನಾಗಿದ್ದೆ.
ಏನಪ್ಪಾ ನಿನ್ಮಗ ಕೆಲ್ಸಕ್ಕೆ ಹೋಗ್ತತಾ, ಎಸ್ಟ್ ಸಣ್ಣಕೈತೆ? ಆಗ್ಲೇ ಸಿಕ್ತಾ?‌ ಸಂಬ್ಳ ಎಸ್ಟು ಎಂಬಿತ್ಯಾದಿ ಪ್ರಶ್ನೆಗಳನ್ನು ಊರ ಜನ ಕೇಳ್ತಿದ್ರೆ, ನಾನು ನಾಚಿಕೆಯಿಂದ ಮತ್ತಷ್ಟು ಮುದುಡಿ ಸಣ್ಣಗಾಗುತ್ತಿದ್ದೆ.

ಅದಲ್ಲಿಗೇ ಮುಗಿಯಲಿಲ್ಲ, ಅವರಿಗೆಲ್ಲಾ ಏನೇನು ಹೇಳಿದ್ರೋ ಗೊತ್ತಿಲ್ಲ. ಕೆಲಸಕ್ಕೆ ಸೇರಿ ಸ್ವಲ್ಪ ದಿನದ ಮೇಲೆ ಊರಿಗೆ ಹೋಗಿದ್ದೆ. ಊರಲ್ಲಿ ತಿರುಗಾಡಿಕೊಂಡು ಬಂದು ಅಪ್ಪನಿಗೆ ಹೇಳ್ದೆ, ಯಾಕೋ ಸ್ವಲ್ಪ ಜಾಸ್ತೀನೇ ಜನ ಮಾತಾಡ್ಸಿದ್ರು ಕಣಪ್ಪಾ ಇವತ್ತು.
ಹೌದು ಮಗನೇ, ನೀನು ಅವರ ಪಾಲಿಗೆ ಯಾವುದೋ ಬೇರೆ ಲೋಕದಿಂದ ಬಂದವನು ಕಣೋ ಅಂತ ಅಪ್ಪ ಹೇಳಿದ್ರು. ಅದರ ಅರ್ಥ ನನಗೆ ಗೊತ್ತಾಗಿದ್ದು ಮರುದಿನ.

ಊರಲ್ಲಿ ಒಬ್ಬರ ಮನೆಯಲ್ಲಿ ಕುಳಿತು ಟೀವಿ ನೋಡ್ತಾ ಮಾತಾಡ್ತಿದ್ದೆ. ಪಕ್ಕದ ಮನೆಯವರ ಮಗುವೊಂದು ಅಲ್ಲಿಗೆ ಬಂದು ಓದ್ತಾ ಇತ್ತು. ಆಗಾಗ ಟೀವಿ ನೋಡುವುದೂ, ನಮ್ಮ ಮಾತು ಕೇಳುವುದೂ ಮಾಡ್ತಾ ಇತ್ತು. ಆ ಹುಡುಗನ ಅಪ್ಪ ಆಗ ಅಲ್ಲಿಗೆ ಬಂದ. ಬಂದವನೇ ಆ ಮಗುವಿನ ತಲೆಗೊಂದು ರಪ್ಪನೆ ಹೊಡೆದು, 'ಲೇ ಆ ವಣ್ಣನ ತರ ಆಗಲೇ ಅಂತ ಹೇಳಿದ್ರೆ ಕಯ್ಯಾಗ ಪಾಟಿ ಹಿಡ್ಕಂಡ್ ಟೀವಿ ನೋಡ್ತೀಯ, ಆ ವಣ್ಣನ ಅಂಗ್ ಓದ್ಬುಕು ನೀನೂ' ಅಂದ.
ನನ್ನ ಕಡೆಗೆ ತಿರುಗಿ ಹೇಳಿದ. 'ನನ್ನ ಮಗಂಗೆ ಹೇಳ್ಬಿಟ್ಟಿವ್ನಿ ಕಣಪ್ಪಾ, ನಿನ್ನಂಗಾಗ್ಬೇಕು ಅಂತ'
ಆ ಮಗುವೋ, ನನ್ನನ್ನು ಕೊಲ್ಲುವಂತೆ ನೋಡುತ್ತಿತ್ತು. ನನಗೋ ತಡೆದುಕೊಳ್ಳಲಾಗದಷ್ಟು ಮುಜುಗರ. ಆ ಕ್ಷಣದಲ್ಲಿ ಅಪ್ಪನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು.

ನಾನಿಲ್ಲಿಗೆ ಬಂದ ಮೇಲೆ ಅಪ್ಪನ ದರ್ಬಾರು ಮತ್ತೂ ಕಳೆಕಟ್ಟಿದೆಯಂತೆ. ಸಂಜೆ ಹೊತ್ತು ಊರವರ ಜೊತೆ ಮಾತಾಡ್ತಿರಬೇಕಾದ್ರೆ, ನಾನೇನಾದ್ರೂ ಫೋನ್ ಮಾಡಿದ್ರೆ, ಮಗ ಫೋನ್ ಮಾಡಿದ್ದಾನೆ. ಅಮೇರಿಕಾದಿಂದ ಅಂತ  ಎದ್ದು ಹೋಗ್ತಾರೆ.
ಮಾತು ಮುಗಿಸಿ ಹೋದ ಮೇಲೆ ಅವರೆಲ್ಲಾ ಸಹಜವಾಗಿಯೇ - ಯಪ್ಪಾ, ಮಗ ಅಮೆರಿಕಕ್ಕೆ ಹೋಗಯ್ತಾ? ಏನ್ಮಾಡ್ತತೆ? ಏಟು ವರ್ಸ ಆತು? ಯಾವಾಗ್ಬರ್ತತೆ? ಸಂಬ್ಳ ಎಸ್ಟು? ಲಕ್ಷಗಟ್ಳೇ ಬರ್ತಿರ್ಬೇಕ್ ಬುಡು... ಎಂದೆಲ್ಲಾ ಕೇಳ್ತಿದ್ರೆ ಅಪ್ಪ ಅಲ್ಲೆಲ್ಲೋ ಮೋಡದ ಮೇಲೆ ತೇಲಿ ತೇಲಿ...
ಅಮ್ಮ ಈ ಕಥೆಗಳನ್ನೆಲ್ಲಾ ಹೇಳ್ತಿರ್ತಾಳೆ. ನಾನು ಅಮ್ಮ ಮಾತಾಡ್ತಿರಬೇಕಾದ್ರೆ ಇವಿಷ್ಟೂ ಒಂದ್ಸಲ ಬಂದು ಹೋಗ್ಬೇಕು. ಇಬ್ರೂ ಬಿದ್ದು ಬಿದ್ದು ನಗ್ತಿದ್ರೆ, ಏಯ್ ಮಾತು ಮುಗ್ಸೇ, ಅಲ್ಲಿಂದ ಫೋನ್ ಮಾಡಿದ್ದಾನೆ. ಬಿಲ್ ಎಷ್ಟು ಬರುತ್ತೆ ಅಂತ ನಿಂಗೇನು ಗೊತ್ತು ಅಂತ ಗುಟುರು ಹಾಕ್ತಿರ್ತಾರೆ.
ಅವರು ಆಫೀಸಿಗೆ ಹೋದಾಗ್ಲೇ ಫೋನ್ ಮಾಡೋ, ನೆಮ್ಮದಿಯಾಗಿ ಮಾತಾಡೋಕೇ ಬಿಡಲ್ಲ ಅಂತ ಅಮ್ಮ ಅವರೆದುರಿಗೇ ಹೇಳ್ತಿರ್ತಾಳೆ.

ಚಿಕ್ಕವನಿದ್ದಾಗ ಅಪ್ಪ ಎಂದರೆ ಭಯ. ನಮ್ಮಿಬ್ಬರ ಮಾತುಕತೆ ಎಂದರೆ ಬಿಜಾಪುರದಲ್ಲಿ ಮಳೆ ಬಂದಂತೆ. ಏನೇ ಕೆಲಸ ಆಗಬೇಕೆಂದರೂ ಅಮ್ಮನ ಮೂಲಕವೇ. ಹಂತಹಂತವಾಗಿ ಅಪ್ಪನ ಜೊತೆ ಸಲಿಗೆ ಮೂಡುತ್ತಾ ಬಂದು, ಈಗ ಮನೆಯಲ್ಲಿ ಅಪ್ಪನ ಪಾಡು ಕೇಳತೀರದು. ಮದುವೆ ಆದ ಮೇಲೆ ಹೆಂಡತಿ ಎದುರಲ್ಲಿ ಅಪ್ಪನನ್ನು ಕಾಡಬಾರದೆಂದು ಅಜ್ಜಿ ಕಡೆಯಿಂದ ಉಪದೇಶವಾಗಿದೆ.

ನಾವು ಗೇಲಿ ಮಾಡ್ತಿದ್ರೆ, ಅಪ್ಪ ಶುರು ಮಾಡ್ತಾರೆ. ಇವತ್ತು ನಗ್ತಿದೀಯಲ್ಲ, ನಾಳೆ ನೀನೇ ಹೇಳ್ತೀಯಾ ಅಪ್ಪ ಕರಕ್ಟಾಗೇ ಹೇಳ್ತಿದ್ದ ಅಂತ. By the time you think your dad was right, your child will be thinking you to be a fool. ಗೊತ್ತಾ? ನಾನು, ನನ್ನ ತಂಗಿ ಇಬ್ರೂ ಅಪ್ಪ ಹಾಗೆ ಹೇಳಿದ್ದನ್ನೂ ಉಲ್ಟಾ ಸೀದಾ ಮಾಡಿ ಮತ್ತಷ್ಟು ನಗ್ತೀವಿ.

ಅದೆಷ್ಟೇ ಗೇಲಿ, ತಮಾಷೆ ಮಾಡಿದರೂ, ಏನೇ ಕೆಲಸ ಮಾಡಬೇಕೆಂದರೂ ಒಂದು ಸಲ ಅಪ್ಪನನ್ನು ಕೇಳಲೇ ಬೇಕು. ಒಮ್ಮೊಮ್ಮೆ ಗೇಲಿಯ ವಸ್ತುವಾಗುವ ಅಪ್ಪ, ಮತ್ತೊಮ್ಮೆ ಕೈ ಹಿಡಿದು ನಡೆಸುವ ಗುರು. ಅತ್ಯಂತ ಕಷ್ಟ ಪಟ್ಟು ಒಂದು ನೆಲೆ ಕಂಡುಕೊಂಡು, ಇವತ್ತಿಗೂ ಹೊಲ, ಅಂಗಡಿ, ಆಫೀಸು ಅಂತ ಹೋರಾಡುವ ಅಪ್ಪ, ನಾನು 'ಇವತ್ತು ಬೋರಾಗಿದೆ, ಆಫೀಸಿಗೆ ಯಾರು ಹೋಗ್ತಾರೆ' ಎಂದು ಅಂದುಕೊಳ್ಳುವ ಹೊತ್ತಿಗೆ ನೆನಪಾಗುತ್ತಾರೆ.

ಅಪಾರನನ್ನು ಅಪಾರವಾಗಿ ಮಿಸ್ ಮಾಡಿಕೊಳ್ಳುತ್ತಾ
-ಪಾಪು

Tuesday, June 14, 2011

That's how it was


Whenever I saw those photos with blue sky, beautiful clouds, colorful birds and insects, playful children, smiling people, wow, I'd exclaim and promise myself that one day I too will capture such pictures and I too will show it to the world. I must say little did I know then.

And when the time came I bought a nice "NIKON" ( read in quotes, I took pride in it then ) DSLR camera. Top notch, I told myself. And while I was bringing the camera home I could already see myself taking pictures of those grand sunsets, a wonderfully moon lit blue canyon, a solo exhibition and a national geographic 'photo of the year' award. Well, that was until I sat down with the camera and saw the different buttons and menu options on it. 
Would a silly thing such as camera menu option stop me from taking great photos? Never. Who do you think I am? An engineer. Yes, I can crack anything. And I did. I dropped the camera once. 

Just after learning the basics of the camera ( that's all one needs to know ) I went out and started taking only the great pictures. That great moment when the bird flapped its wings or when the sun sank into that river, where did they go? Right into my camera. How were the pictures? Awesome! I hadn't seen the snaps on my laptop yet. When I did, hey what went wrong? Why did the bird lose its neck? And why does the river look so dark? Why doesn't sky show any colors?

Boy, even an engineer needs to know certain things. A whole new world opened up for me. Aperture, Exposure, Shutter, ISO, white balance, metering - It felt like reading a dictionary. The words were all there, but nothing sank in. I started using those words like a pro. Firmly believing that one doesn't need to know everything, just start using the lingo and things will show up. And they did, but not in the way I wanted.

It wasn't long before I realized that the job doesn't end after clicking the shutter release button. There's a laborious job of post processing. Correcting all your mistakes. Adjusting the exposure, saturation, white balance, temperature, phew, and what not? But then again, I'm an engineer, yes that's what I am. I can pick up anything. I'm always open to learn new things. I'd learn photography, I told myself. Only if I knew that thats exactly what I wouldn't learn!

It started with the image editing softwares. By then I had realized that if I were to enhance my great pictures, I should use a great software. Since my laptop runs on linux I was forced to find the alternatives for the crazy photo editing softwares. Clearly the applications in the free world were not good enough for me. I ran those windows apps in linux - not a big deal for an engineer. Did it work? No. In no time, I was all into fixing linux to run those windows' softwares. I'd do anything to capture great pictures. But I wasn't learning anything about photography. I didn't worry about it then. In fact, that thought never crossed my mind. I had a bigger objective now, to fix Linux! I had to fix it otherwise I might have to use sissy windows. How I wished if I could run windows on linux. Nothing is impossible for an engineer, I'd run a virtual operating system! ( by the way, where is that great picture I promised? Just don't think about it for now alright, fix linux first ) 

Well, even the photo editors did not help much. I was short on the resources. 

To take great pictures you should have great lenses. A holy voice started speaking to me.

Lenses you say? Which ones? I questioned.

You see, it continued, to capture the wildlife ( ooooh the tiger ) you need a telephoto lense. To capture landscapes ( ah the great sunset ) wide angle lense and if you'd like to shoot the insects ( like the big ant, yes, i want to shoot them) macro lenses. And then there are others like prime lense, fisheye, zoom, super zoom, filters, converters.... stop it! I said, I want them all. No picture of mine should look bad.

Pictures were still no good. The divine voice started speaking again.

Son, when you take a picture, you should keep the camera still. Even with the slightest vibration you may mess up your shot. Did you buy the lenses with vibration reduction feature?

Ah! now I knew the problem. All I needed was a vibration reduction lense.
But why didn't you tell me this before? I asked.

You were not ready yet, my child. It said.

Pictures were still not great.

The voice spoke again. Son, when you capture the photo with long shutter speed, its hard to keep the camera still. You would need some tool to keep the camera still.
You should buy a tripod or a monopod or may be atleast a gorillapod. That'll help.

I asked again why it didn't tell me before.

You were not ready - was the reply.

When I complained that the images were not getting better, the godly voice spoke.

Son, there are times when the sun steps out of your way. Call it a fear of getting captured. But when the light is not good enough, you should manage it on your own. You can try buying the flashes. They come in various types. You can attach it to your camera or keep them separate. Oh, you may also consider buying umbrellas. No, not the ones you use during rains, but similar ones. You can control the harsh light and have a soothing effect on the subject.

Before I could ask, it said, I didn't tell this before because you were not ready.

Nothing changed, the pictures were not anything I wanted them to be.
This time, I was totally disappointed. When I started complaining, the voice spoke again.

Son, to capture a great photo you just need to envision it. Your camera and other accessories are tools to help you get that quicker or efficiently.
However harsh it may seem, you cannot take a great photo. You don't have what it takes. I'm sorry my child.

Bursting with anger, I asked - 'Why didn't you say so before?'

The voice calmly said, son, you wouldn't have believed me. You ask for the error report before accepting anything.
You are an engineer, thats how you are.

Sunday, January 9, 2011

ಕನಲು

ಶಹರಿನ ಗಗನಚುಂಬಿ ಕಟ್ಟಡಗಳ
ಬೆಂಕಿ ಪಟ್ಟಣದಂಥ ಗೂಡೊಳಗೆ
ಕೂತು ಗಾಜಿನ ಕಿಟಕಿಯಿಂದ
ಆಚೆ ನೋಡುವಾಗಲೇ ಬಿಟ್ಟು ಬಂದ
ಊರ ಮೂಲೆಯ ಮರದ ಮೇಲೆ ಹತ್ತಿ
ಆಡಿದ್ದು ನೆನಪಾಗುವುದು.
ಇಲ್ಲಿ ಒಂಟಿ ಮರಗಳಿಲ್ಲ, ಕೊಳ್ಳಿ
ದೆವ್ವಗಳಿಲ್ಲ ಚೌಡಿ ಮಾರಿಗಳಂತೂ
ಹತ್ತಿರಕ್ಕೂ ಸುಳಿಯುವುದಿಲ್ಲ.
ಬೀಸುವ ಗಾಳಿಯ ತುಂಬಾ ಸೋರಿ
ಹೋದ ಕನವರಿಕೆಗಳು ಮೈಗಂಟಿ
ದಂತಾಗಿ ಬೆಚ್ಚಿ ಬೀಳಬೇಕು.

Wednesday, December 29, 2010

ಒಮ್ಮೊಮ್ಮೆ ಹೀಗೂ..




ಮನದಲ್ಲೊಂದು ಮುಸಲಧಾರೆ
ಮುಗಿಲ ತುಂಬೆಲ್ಲಾ ಮಳೆಬಿಲ್ಲು 
ನಾಡೊಳಗೆ ನಲಿವಿನ ನರ್ತನ
ಸಂತೃಪ್ತಿಯೊಂದು ಮಗುವಾದರೆ
ಹೆಸರು ಹುಡುಕುವುದು ಬಲು ಕಷ್ಟ

ಮೆತ್ತನೆ ಹಿಮದ ಮೇಲೆ
ಸುಳಿಗಾಳಿಯ ಚೆಲ್ಲಾಟ.
ಸಂತೋಷ ಗಾಳಿಯಲ್ಲಡಗಿದೆಯೋ
ನೋಡುವ ಕಣ್ಣೊಳಗಿದೆಯೋ
ಗುಪ್ತಗಾಮಿನಿಯಾಗಿ ಮನದಲ್ಲಿದೆಯೋ
ಜೀವಸೆಲೆಯಾಗೆ ಎದೆಯಲ್ಲಿದೆಯೋ

ಮೆದುವಾಗಿ ಹಿತವಾಗಿ
ತೆರೆಯಾಗಿ ಅಲೆ ಬೀಸಲು
ಮೈಮೇಲೆ ಬಿದ್ದದ್ದು ಹಿಮವೋ
ಬಾನಿಂದುದುರಿದ ಬೆಳಕೋ
ಏನೋ ತಿಳಿಯದಾಗಿದೆ

ಬೆಳಗಾಗಿದೆ, ಗರಿ ಮೂಡಿದೆ, ಮಜವಾಗಿದೆ

Friday, September 17, 2010

ಅಪರಾಧಿ ನಾನಲ್ಲ

ಧಾವಂತದಿಂದ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಕಡೆಗೆ ಮೋಹನ ಅಡ್ಡಾಡುತ್ತಿದ್ದ. ಹಣೆಯ ಮೇಲೆ ಬೆವರ ಹನಿಗಳು ಸದ್ದಿಲ್ಲದಂತೆ ಹುಟ್ಟುತ್ತಿದ್ದವು. ಪದೇ ಪದೇ ರಸ್ತೆಯ ಕಡೆಗೆ ನೋಡುತ್ತಿದ್ದ. ಸಣ್ಣ ಶಬ್ದಕ್ಕೂ  ಬೆದರುವಂತಾಗುತ್ತಿತ್ತು. ಆರಡಿ ಎತ್ತರದ ಅಜಾನುಬಾಹು ಹೀಗೆ ಹೆದರುತ್ತಾ ನಿಲ್ಲುವುದು ಬೇರೆಯವರಿಗೆ ತಮಾಷೆಯಾಗಿ ಕಂಡರೂ ಉಸಿರು ಜೋರಾಗಿ ಬಿಡಲೂ ಆಗದಷ್ಟು ಮೋಹನ ಹೆದರಿದ್ದ.

ಜೀವನದಲ್ಲಿ ಮೊಟ್ಟಮೊದಲನೆಯ ಬಾರಿಗೆ ತಪ್ಪು ಮಾಡಿದ್ದ. ಮೇಲಾಗಿ ಸಿಕ್ಕಿ ಬಿದ್ದಿದ್ದ. ಶ್ರಾವಣಿ ನೋಡಿ ಬಿಟ್ಟಿದ್ದಳು. ಅವಳು ಈ ಹೊತ್ತಿನಲ್ಲಿ  ಇಲ್ಲಿಗೇಕೆ ಬಂದಳು ಎನ್ನುವುದು ಮೋಹನನಿಗೆ ತಿಳಿಯದಾಗಿತ್ತು. ಅದೆಷ್ಟು ದಿನಗಳಿಂದ ಈ‌ಯೋಜನೆ ರೂಪಿಸಿದ್ದ ಅವನು. ಹೀಗೆ ಸಿಕ್ಕಿ ಬೀಳುವುದರಲ್ಲಿ ಅರ್ಥವೇ ಇಲ್ಲ. ಛೇ, ಈಗೇನು ಮಾಡುವುದು?‌ಇಷ್ಟು ಹೊತ್ತಿನಲ್ಲಿ ಶ್ರಾವಣಿ‌ ಮನೆಗೆ ಹೋಗಿರಬಹುದಾ? ಅವಳ ಅಪ್ಪ-ಅಮ್ಮಂಗೆ ಹೇಳಿಬಿಟ್ಟಿರ‍್ತಾಳಾ? ಊಹೂಂ, ಇಲ್ಲ. ಅವಳ ಅಪ್ಪ ಅಮ್ಮ ಹೊರಗೆ ಹೋಗುವುದನ್ನ ಆಗಲೇ‌ ನೋಡಿದ್ದ. ಹಾಗಾದ್ರೆ, ಮನೆಗೆ ಹೋಗಿ ಶ್ರಾವಣಿ‌  ಹತ್ತಿರ ಮಾತಾಡ್ಲಾ? ಪ್ಚ, ಅಷ್ಟು ಚಿಕ್ಕ ಹುಡುಗಿಗೆ ಏನು ಅರ್ಥ ಆಗುತ್ತೆ? ಇವತ್ತಲ್ಲಾ‌ ನಾಳೆ ಯಾರಿಗಾದ್ರೂ ಹೇಳಿಯೇ ಬಿಡ್ತಾಳೆ. ಬೇಡ, ಬೇಡ. ಏನಾದ್ರೂ‌ ಮಾಡಲೇಬೇಕು. ಅದೂ ಅವಳ ಅಪ್ಪ ಅಮ್ಮ ಮನೆಗೆ ಬರೋದ್ರೊಳಗೇ ಆಗಬೇಕು. ಆದ್ರೆ ಏನು ಮಾಡಬೇಕು ? ಅಯ್ಯೋ, ಜೋರಾಗಿ ಉಸಿರು ಬಿಟ್ಟ. ಮೋಹನ ಎತ್ತಿ ಬೆಳೆಸಿದ ಹುಡುಗಿ ಶ್ರಾವಣಿ‌ . ಇನ್ನೂ ಹೈಸ್ಕೂಲಿಗೆ ಹೋಗ್ತ್ತಿದ್ದಾಳೆ. ಅವಳನ್ನು ಕಂಡರೆ ಮೋಹನನಿಗೆ ಏನೋ ಪ್ರೀತಿ, ಮಮತೆ. ಆದರೆ ಈಗ ಎದುರಿಗಿರುವುದು ತನ್ನ ಜೀವನದ ಪ್ರಶ್ನೆ. ವಿಷಯ ಹೊರಗೆ ಬಂದರೆ ಜೀವನ ಪೂರ್ತಿ ಜೈಲಿನಲ್ಲಿರಬೇಕು. ಮರ್ಯಾದೆಯಂತೂ ಹರಾಜಾಗಿ ಹೋಗುತ್ತದೆ. ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ.
ಛೇ, ಶ್ರಾವಣಿ‌  ಅಲ್ಲಿಗೆ ಬರದೇ ಹೋಗಿದ್ರೆ ಎಲ್ಲಾ ಸರಿ ಹೋಗುತ್ತಿತ್ತು.
ಈಗ್ಲೂ ಸರಿ ಹೋಗುತ್ತೆ, ಶ್ರಾವಣೀನೇ ಇಲ್ಲ ಎಂದರೆ. ಮನದಲ್ಲಿ ಯಾವುದೋ‌ ದನಿ ಹೇಳಿದಂತಾಯಿತು.
ಛೇ, ಛೇ, ಅದೆಲ್ಲಾ ಆಗಲ್ಲ.
ಮತ್ತೆ ನೀನು ಜೈಲಿಗೆ ಹೋಗ್ತೀಯಾ?
ಹ್ಮ್...
ಮೋಹನನೀಗ ಕಸಿವಿಸಿ ಶುರುವಾಗಿತ್ತು. ತನ್ನ ಜೀವನವೋ, ಇಲ್ಲಾ ತಾನು ಎತ್ತಿ ಆಡಿಸಿದ ಜೀವವೋ?
ಈಗ್ಲೇ ಹೋದ್ರೆ ಯಾರಿಗೂ ಗೊತ್ತಾಗಲ್ಲ. ಅವಳ ಮನೇಲೂ ಯಾರೂ ಇಲ್ಲ. ಚಿಕ್ಕ ಹುಡುಗಿ. ಲೆಕ್ಕವೇ ಅಲ್ಲ. ಒಳಗಿನ ದನಿ ಹೇಳುತ್ತಲೇ ಇತ್ತು.
ಆದ್ರೆ, ಪಾಪ. ಏನೂ ಗೊತ್ತಿಲ್ಲದ ಹುಡುಗಿ. ಇನ್ನೂ ಬಾಳಿ ಬದುಕಬೇಕಾದವಳು.
ಹಾಗಂತ ನಿನ್ನ ಜೀವನ ಬಲಿ ಕೊಡ್ತೀಯಾ? ಅವಳು ಯಾರ ಹತ್ರನಾದ್ರೂ ಬಾಯಿ ಬಿಟ್ರೆ ಕಥೆ ಮುಗಿಯಿತು. ಏನೇ ಮಾಡಿದರೂ ಇನ್ನು ಹತ್ತು ನಿಮಿಷದ ಒಳಗೆ ಮಾಡಿ ಮುಗಿಸಬೇಕು. ಬೇಗ, ಬೇಗ.. ಹೊರಡು. ದನಿ ಒತ್ತಾಯ ಪಡಿಸಿತು.

ಕೊನೆಗೂ ಮೋಹನನಿಗೆ ಅವನ ಜೀವನವೇ ಮುಖ್ಯವಾಯಿತು. ದುರ್ದಾನ ತೆಗೆದುಕೊಂಡವನಂತೆ ಶ್ರಾವಣಿಯ  ಮನೆ ಕಡೆಗೆ ಹೆಜ್ಜೆ ಹಾಕತೊಡಗಿದ. ಅವನ ಮನವಾಗಲೇ  ಕೆಲಸ ಹೇಗೆ  ಮುಗಿಸಬೇಕೆಂದು ಯೋಚಿಸತೊಡಗಿತ್ತು.

*******

ಬರೆಯುತ್ತಿದ್ದ ಕಥೆ ಅರ್ಧಕ್ಕೇ ನಿಲ್ಲಿಸಿ ಮಹರ್ಷಿ ಆಕಳಿಸಿದ. ತುಂಬ ಹೊತ್ತಿನಿಂದ ಬರೆಯುತ್ತಿದ್ದುದರಿಂದ ಮೈ ಕೈ ಎಲ್ಲಾ ಹಿಡಿದಂತಾಗಿತ್ತು. ಕುರ್ಚಿಗೆ ಹಾಗೇ ಒರಗಿ ಮೈ ಮುರಿದ. ಅವನ ಅತ್ಯಂತ ಮಹತ್ವಾಕಾಂಕ್ಷೆಯ ಕಥೆಯಾಗಿತ್ತದು.
ಮಹರ್ಷಿಯ ಕಥೆಗಳೆಲ್ಲಾ ಸುಖಾಂತ್ಯವಾಗುತ್ತವೆ. ಅವನ ಕಥೆಗಳು  ಒಂದು ಕಮರ್ಷಿಯಲ್ ಸಿನಿಮಾ ನೋಡಿದ ಹಾಗಿರುತ್ತದೆಯೇ ಹೊರತು ನಿಜ ಜೀವನಕ್ಕೆ ಹತ್ತಿರವಾಗಿರುವುದಿಲ್ಲ. ಮತ್ತೆ ಮತ್ತೆ ಕಾಡುವುದಿಲ್ಲ ಎಂಬಿತ್ಯಾದಿ ಯಾರೋ ಪತ್ರಿಕೆಯಲ್ಲಿ ವಿಮರ್ಶೆ ಮಾಡಿದ್ದರು. ಮಹರ್ಷಿಗೆ ಅದನ್ನು ಒಪ್ಪಲಾಗಿರಲಿಲ್ಲ. ಪತ್ರಿಕೆಗಾಗಲೀ, ಮತ್ತಿನ್ನಾರಿಗಾದರೂ‌ ಏನೂ‌ ಹೇಳದಿದ್ದರೂ ತಾನೊಂದು ಹೊಸ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದ್ದ. ಅವನ ಹೊಸ ಕಥೆಯಲ್ಲಿನ ಕೇಂದ್ರ ಪಾತ್ರ ಮೋಹನನ್ನು ತುಂಬಾ ಸಜ್ಜನನಂತೆ ಚಿತ್ರಿಸಿ, ಅಂತ್ಯದಲ್ಲಿ ಕೊಲೆಗಾರನನ್ನಾಗಿಸಿ ಓದುಗನನ್ನು ದಿಗ್ಭ್ರಮೆಗೊಳಿಸುವ ಉಪಾಯ ಮಾಡಿದ್ದ. ವೈಯಕ್ತಿಕವಾಗಿ ಅವನಿಗಿದು ತೀರಾ ವ್ಯತಿರಿಕ್ತ ನಿರ್ಧಾರ. ಕಥೆ ಓದಿದ ಮೇಲೆ ಓದುಗನಿಗೊಂದು ಭರವಸೆ ಸಿಗಬೇಕೇ ಹೊರತು ಮತ್ತಷ್ಟು ಸಂಕಟಕ್ಕೀಡು ಮಾಡಬಾರದೆಂಬುದು ಅವನ ಅಭಿಪ್ರಾಯ. ಈ‌ ಬಾರಿ ಯಾರೋ  ಅವನನ್ನು ಟೀಕಿಸಿದರೆಂದು  ಬಲವಂತಪೂರ್ವಕವಾಗಿ  ತನ್ನ ಶೈಲಿ ಬದಲಿಸಲು ಪ್ರಯತ್ನ ಪಡುತ್ತಿದ್ದ.

ಮಹರ್ಷಿ ಬರೆಯುತ್ತಿದ್ದ ಕಥೆ ಅದಾಗಲೇ ಮುಗಿಯುವ ಹಂತಕ್ಕೆ ಬಂದಿತ್ತು. ಮೋಹನನಿಂದ ಶ್ರಾವಣಿಯ ಕೊಲೆ ಮಾಡಿಸಿದ ತಕ್ಷಣಕ್ಕೆ ಮುಗಿದು ಹೋದಂತೇ ಲೆಕ್ಕ. ಕೊಲೆ ಮಾಡಿಸಲು ಯಾವ ಮಾರ್ಗ ಹಿಡಿಯುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ, ಟಕ್ ಟಕ್ ಟಕ್ ಎಂದು ಯಾರೋ ಬಾಗಿಲು ಬಡಿದರು.

ಮಹರ್ಷಿ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಯಾರೋ ಮಧ್ಯ ವಯಸ್ಕ. ಸಾಕಷ್ಟು ಎತ್ತರವಾಗಿದ್ದ. ಎಲ್ಲೋ ನೋಡಿದ್ದೀನಿ ಎಂದು ಮಹರ್ಷಿಗೆ ಅನ್ನಿಸಿದರೂ ತಕ್ಷಣಕ್ಕೆ ಗೊತ್ತಾಗಲಿಲ್ಲ.

ಮಹೀ, ನೀನು ಮಾಡುತ್ತಿರುವುದು ಸರಿಯಲ್ಲ.. ಬಂದಾತ ಹೇಳಿದ.

ಮಹರ್ಷಿಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೇವಲ ಅವನ ಆಪ್ತೇಷ್ಟರಷ್ಟೇ ಅವನನ್ನು ಮಹೀ ಎಂದು ಕರೆಯುತ್ತಿದ್ದುದು. ಬಂದಾತನ ಗುರುತು ನೆನಪಾಗುತ್ತಿಲ್ಲ. ಮೇಲಾಗಿ, ತಾನು ಏನು ತಪ್ಪು ಮಾಡುತ್ತಿದ್ದೇನೆ ಎಂಬುದೇ ಅವನಿಗೆ ಹೊಳೆಯಲಿಲ್ಲ.

ಏ..ಏನು ಮಾಡ್ತಿರೋದು ಸರಿಯಲ್ಲ? ನೀವ್ಯಾರು ಗೊತ್ತಾಗಲಿಲ್ಲ. ನಿಧಾನವಾಗಿ ಹೇಳಿದ.

ಯಾಕೆ ಮಹೀ, ಏನಾಯಿತು. ಗುರುತು ಸಿಗಲಿಲ್ವ?‌ನಾನು ಮೋಹನ.

ಬಾಗಿಲನ್ನು ಹಿಡಿದಿರಲಿಲ್ಲವೆಂದರೆ ಮಹರ್ಷಿ ಅಲ್ಲೇ ಬಿದ್ದುಬಿಡುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ನಿಶ್ಶಕ್ತಿ ಆವರಿಸಿಕೊಂಡಿತು. ಬಂದಾತನನ್ನು ಈಗ ಗುರುತು ಹಿಡಿದ.
ಮೋಹನ, ಮೋಹನ ಅಂದ್ರೆ... ಮಹರ್ಷಿ ತೊದಲಿದ.

ಹೌದು ಅದೇ ಮೋಹನ. ನಾನು ಕೊಲೆಗಾರ ಅಲ್ಲ ಮಹೀ. ದಯವಿಟ್ಟು ನನ್ನಿಂದ ಆ ಕೆಲಸ ಮಾಡಿಸಬೇಡ.

ಮಹರ್ಷಿಗೆ ತಲೆ ತಿರುಗುವುದೊಂದು ಬಾಕಿ. ಏನು ಹೇಳಬೇಕೆಂಬುದು ತಿಳಿಯದೆ ಅವನನ್ನು ಒಳಗೆ ಕರೆದು ಕೂರಿಸಿದ.

ನೀನು, ನೀ...ನೀವು ಇಲ್ಲಿಗೆ ಹೇಗೆ ಬಂದ್ರಿ? ಕೇಳಿದ

ನೀನು ಎಂದೇ ಹೇಳು. ಬೇರೆ ಏನು ಕರೆದರೂ ಅಸಹಜವಾಗಿರುತ್ತದೆ. ಮುಖ್ಯವಾಗಿ ನೀನೀಗ ಕೇಳಬೇಕಾಗಿರುವುದು ನಾನು ಹೇಗೆ ಬಂದೆ ಎನ್ನುವುದಲ್ಲ. ಯಾಕೆ ಬಂದೆ ಎನ್ನುವುದು. ಹೇಗೆ ಎನ್ನುವುದು ಸದ್ಯಕ್ಕೆ ಬೇಕಾಗಿಲ್ಲ. ಮೋಹನ ಹೇಳಿದ.

ಹಾಂ, ಹೌದು. ಯಾಕೆ ಬಂದೆ. ಮಹರ್ಷಿಗೆ ಇನ್ನೂ ಗೊಂದಲ.

ನಾನು ತಪ್ಪು ಮಾಡುವುದನ್ನು ತಪ್ಪಿಸಿಕೊಳ್ಳಲು.

ಅಂದರೆ?

ಕೊಲೆ ಮಾಡುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ ಮಹೀ. ಅದೂ ನಾನು ಎತ್ತಿ ಆಡಿಸಿದ ಮಗುವನ್ನು? ನಿನಗೆ ಆ ರೀತಿ ಯೋಚಿಸಲು ಮನಸ್ಸಾದರೂ‌ ಹೇಗೆ ಬಂತು? ಆ ಕೆಲಸ ನನ್ನಿಂದ ಸಾಧ್ಯವಿಲ್ಲ. ಅವನ ಧ್ವನಿ ಭಾರವಾಗಿತ್ತು.

ಮಹರ್ಷಿಗೆ ಅವನ ದು:ಖ ನೋಡಿ ಸ್ವಲ್ಪ ಎಚ್ಚೆತ್ತಂತಾಯಿತು.
ನೀನೇನು ಹೇಳಬೇಕು ಅಂತಿದ್ದೀಯಾ? ಕೇಳಿದ.

ನೀನು ಬರೆಯುತ್ತಿರುವ ಕಥೆಯಲ್ಲಿ ಕೊಲೆ ಮಾಡಿಸಬೇಡ. ನಾನು ಮಾಡಲಾರೆ. ಮೋಹನ ಹೇಳಿದ.

ಇಷ್ಟು ಹೊತ್ತಿಗಾಗಲೇ, ಮಹರ್ಷಿಗೆ ಧೈರ್ಯ ಬಂದಿತ್ತು.
ಅದು ಹೇಗಾಗುತ್ತೆ?‌ಅದು ನನ್ನ ಕಥೆ. ನಾನು ಬರೆಯುತ್ತಿರುವುದು. ನಾನು ಎಣಿಸಿದಂತೆಯೇ ಇರಬೇಕು.

ಅದು ನನ್ನ ಕಥೆ ಕೂಡ ಮಹೀ. ಮೋಹನ ಹೇಳಿದ.

ನೀನು ಕೇವಲ ಪಾತ್ರ. ನೀನಿಲ್ಲಿಗೆ ಬಂದು ಈ ರೀತಿ ಮಾತನಾಡುತ್ತಿರುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅದೂ ಈ‌ ರೀತಿ! ಮಹರ್ಷಿ ಹೇಳುತ್ತಲೇ ಹೋದ.

ಇದು ನನ್ನ ವ್ಯಕ್ತಿತ್ವದ ಅಳಿವು ಉಳಿವಿನ ಪ್ರಶ್ನೆ ಮಹೀ. ನಾನು ಬರಲೇ ಬೇಕಿತ್ತು. ನಾಳೆ ಬೇರೆ ಯಾರಾದರೂ ನಿನ್ನ ಕಥೆ ಹೇಳುವಾಗ ನಿಜ ಹೇಳಲಿ ಎಂದು ನೀನು ಬಯಸುವುದಿಲ್ಲವೇನು? ಇಲ್ಲ ಸಲ್ಲದ ಅಪವಾದ ಮಾಡಿದರೆ, ಇಲ್ಲವೇ ನಿನ್ನ ಸ್ವಭಾವವನ್ನೇ ತಿರುಚಿ ಬರೆದರೆ  ಸುಮ್ಮನಿರುತ್ತೀಯಾ?

ಅದು ಸರಿ, ಆದರೆ ನೀನು ಇಲ್ಲಿ?

ಪದೇ ಪದೇ ಅದನ್ನೇ ಕೇಳಬೇಡ. ಈಗ ನಾನು ಹೇಳುವುದನ್ನು ನೀನು ಮಾಡ್ತೀಯೋ ಇಲ್ಲವೋ  ಅಷ್ಟು ಹೇಳು. ಮೋಹನನ  ಧ್ವನಿ ಗಡುಸಾಗಿತ್ತು.

ಮಹರ್ಷಿಗೆ ಸಿಟ್ಟು ಬಂತು. ಅವನು ಬರೆಯುತ್ತಿರುವ, ಅವನ ಕಥೆಯಲ್ಲಿನ ಪಾತ್ರ ಅವನಿಗೇ ಧಮಕಿ ಹಾಕುವುದನ್ನು ಅವನು ಸಹಿಸದಾದ.
ನೋಡು, ನಾನು ಹೇಳಿದಂತೆ ಮಾಡುವುದಷ್ಟೇ‌ ನಿನ್ನ ಕೆಲಸ. ನನ್ನ ಸೃಷ್ಟಿ ನೀನು. ನನಗೇ‌ ಬುದ್ಧಿ  ಹೇಳುವಷ್ಟು  ನಿನಗೆ ಅಧಿಕಾರವಿಲ್ಲ.

ಬೇಡ ಮಹೀ, ನನ್ನಿಂದ ಆ ಕೊಲೆ ಮಾಡಿಸಬೇಡ.

ನೀನು ಜೋರು ಮಾಡುತ್ತೀಯೋ, ಬೇಡುತ್ತೀಯೋ, ಏನೇ ಮಾಡಿದರೂ ನನ್ನ ಮನಸು ಬದಲಿಸಲಾರೆ. ನನ್ನ ಕಥೆ ಅದು. ನಾನು ಹೇಗೆ ಬರೆಯಬೇಕೆಂದು ನಿರ್ಧರಿಸಿದ್ದೀನೋ ಹಾಗೇ ಬರೆಯುವೆ. ಆ ಕೊಲೆ ಆಗೇ ತೀರಬೇಕು. ಅದೇ ನನ್ನ ನಿರ್ಧಾರ.

ಯಾವುದೇ ಕಾರಣಕ್ಕ್ಕೆ ನೀನು ಮನಸು ಬದಲಿಸಲಾರೆಯೇನು?

ಖಂಡಿತಾ ಸಾಧ್ಯವಿಲ್ಲ.

ಇನ್ನೊಮ್ಮೆ ಯೋಚನೆ ಮಾಡು.

ಪ್ರಶ್ನೆನೇ ಇಲ್ಲ. ಏನು ಹೆದರಿಸ್ತಾ ಇದ್ದೀಯಾ?

ಹಾಗೇ‌ ತಿಳಿದುಕೋ. ಆದರೆ ನಾನು ಆ ಕೊಲೆ ಮಾಡಲಾರೆ.

ನಾನೂ‌ ನೋಡೇ ಬಿಡ್ತೀನಿ.

ಬೇಡ ಮಹೀ.

ಇಲ್ಲಾ ಅಂದ್ರೆ ಏನು ಮಾಡ್ತೀಯಾ? ನಿನ್ನಿಂದ ಏನೂ‌ ಮಾಡ್ಲಿಕ್ಕೆ ಸಾಧ್ಯವಿಲ್ಲ. ನಾನು ಹೇಳಿದಂಗೆ ನೀನು ಕೇಳ್ಬೇಕು. ಈಗ ನೀನು ಇಲ್ಲಿಂದ ಹೊರಡು. ಅದೆಲ್ಲಿಂದ ಬಂದಿದೀಯೋ ಅಲ್ಲಿಗೇ ಹೋಗು. ಮಹರ್ಷಿ ಸಿಟ್ಟಿನಿಂದ ಕೂಗಿದ.

ಮೋಹನ ನಿಟ್ಟುಸಿರುಬಿಟ್ಟ. ಸರಿ ಮಹೀ. ಕೊನೆಗೂ ನನ್ನ ಕೊಲೆಗಾರನನ್ನಾಗಿಸಿ ಬಿಡ್ತೀಯ ಅಂದಾಯ್ತು. ಹಂ, ಆಗ್ಲಿ. ಆದ್ರೆ ಶ್ರಾವಣೀನ ಕೊಲೆ ಮಾಡುವಷ್ಟು  ನೀಚ ನಾನಿನ್ನೂ ಆಗಿಲ್ಲ. ಅದರ ಬದಲಿಗೆ ನಿನ್ನನ್ನೇ ಮುಗಿಸಿದರೆ ಒಂದು ಚಿಕ್ಕ ಹುಡುಗಿಯ ಪ್ರಾಣ ಉಳಿಸಿದ ತೃಪ್ತಿ ನನಗಿರುತ್ತದೆ.
ಮೋಹನ ಮುಂದೆ ಬಂದವನೇ, ಮಹರ್ಷಿಯ ಕತ್ತು ಹಿಸುಕತೊಡಗಿದ. ಮಹರ್ಷಿಯ ಕಣ್ಣು ಕತ್ತಲಾಗುತ್ತಾ ಬಂತು. ದಡಬಡಿಸಿ ಕೈ ಕಾಲು ಆಡಿಸಿದ. ಆಸರೆಗಾಗಿ ತಡಕಾಡಿದ. ಇದ್ದಕ್ಕಿದ್ದಂತೆ  ಬಿಗಿತ ಸಡಿಲಾದಂತಾಯಿತು. ಮಹರ್ಷಿ ಕಣ್ಣು ತೆರೆದ. ಯಾರೂ ಇರಲಿಲ್ಲ. ಅವನು ಬರೆಯುತ್ತಾ ಕುಳಿತಿದ್ದ ಟೇಬಲ್ ಚೆಲ್ಲಾಪಿಲ್ಲಿಯಾಗಿತ್ತು. ಮಹರ್ಷಿ ಇನ್ನೂ ಕುರ್ಚಿಯಲ್ಲಿ ಕುಳಿತಿದ್ದ.

ತಾನು ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗಲಿಕ್ಕೆ ಕೆಲ ಹೊತ್ತು ಬೇಕಾಯಿತು. ಮಹರ್ಷಿ ಇನ್ನೂ‌ ಬೆವರುತ್ತಲೇ ಇದ್ದ. ಮನಸ್ಸನ್ನು ತಹಬದಿಗೆ ತರಲು ಅವನಿಗೆ ಮತ್ತೂ ಸ್ವಲ್ಪ ಹೊತ್ತೇ ಹಿಡಿಯಿತು. ಸ್ವಲ್ಪ ಸಮಾಧಾನವಾದ ಮೇಲೆ, ಕುರ್ಚಿಯಿಂದೆದ್ದು , ಕನಸಲ್ಲಿ ಬೆಚ್ಚಿಬಿದ್ದ ರಭಸಕ್ಕೆ ಹಾರಿ ಹೋಗಿದ್ದ ಹಾಳೆಗಳನ್ನೆಲ್ಲಾ ತಂದು ಮೇಜಿನ ಮೇಲೆ ಜೋಡಿಸಿದ. ಅವನಿಗೆ ತನ್ನ ಮೇಲೇ ನಗು ಬಂತು. ಕಥೆಯೊಳಗಿನ ಪಾತ್ರ ತನ್ನ ಕೊಲೆ ಮಾಡಿದಂತೆ? ಸಣ್ಣಗೆ ನಕ್ಕ. ಸರಿ, ದಣಿವಾರಿದ್ದರಿಂದ ಕಥೆ ಮುಂದುವರೆಸೋಣವೆಂದು  ಮಹರ್ಷಿ ಮತ್ತೆ ಬರೆಯಲು ಕುಳಿತ.

ಆಗ, ಟಕ್ ಟಕ್ ಟಕ್ ಎಂದು ಬಾಗಿಲು ಬಡಿದ ಸದ್ದಾಯಿತು.

Saturday, September 4, 2010

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನಿದ್ದು ಬಿಟ್ಟರೆ (ಆಸ್ಪತ್ರೆಯಲ್ಲಿದ್ದು ಬಂದಂತೆ), ಮತ್ತೆ ಮೊದಲಿನ ವೇಗಕ್ಕೆ ಮರಳಲು ಕೆಲ ಸಮಯ ಬೇಕಾಗುತ್ತದೆ. ಅದು ಮನಸ್ಸಿಗೂ ಅನ್ವಯಿಸುತ್ತದೆ ಅಂತ ಈಗ ಗೊತ್ತಾಗಿದೆ. ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಇಷ್ಟು ದಿನಗಳವರೆಗೆ ಬರವಣಿಗೆಗೆ ರಜೆ ಹಾಕಿ, ಆಫೀಸು-ಮನೆ ಅಂತ ಸುತ್ತಾಡುತ್ತಿದವನು ದಿಢೀರ್ ಆಗಿ ಪುಸ್ತಕ ಪೆನ್ನು ಎತ್ತಿಕೊಂಡರೆ, ಅಯ್ಯೋ ಊಹೂಂ ಏನೂ ಹೊಳೆಯುತ್ತಿಲ್ಲ. ಅರ್ಧ ಬರೆದ ಕತೆಗಳು ನನ್ನೆಡೆಗೆ ದೈನೇಸಿ ನೋಟ ಬೀರುತ್ತಿದ್ದರೆ, ನಾನು ಮುಖ ಮುಚ್ಚಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಸುತ್ತಾಡುತ್ತಿದ್ದಾಗ, ಸಿನಿಮಾ ನೋಡುತ್ತಿದ್ದಾಗ ಅಥವಾ ಏನಾದರೂ ಮಾಡುತ್ತಿದ್ದಾಗ ಒಂದಿಷ್ಟು ಯೋಚನೆಗಳು ಮೂಡುತ್ತಿದ್ದವು. ರಾತ್ರಿ ಬರೆಯೋಣವೆಂದು ಕುಳಿತರೆ, ಅಷ್ಟೊತ್ತಿಗಾಗಲೇ ಆ ಭಾವ ತೀವ್ರತೆ ಇರುತ್ತಿರಲಿಲ್ಲ. ಹೀಗೇ ಆದರೆ ಸರಿಯಿಲ್ಲ, ಏನಾದರೂ ಬರೆಯಲೇಬೇಕು ಅಂತ ನಿರ್ಧಾರ ಮಾಡಿ ಕುಳಿತಾಗ ಹೊಳೆದದ್ದೇ ಈ ಲೇಖನ.

ನನಗೆ ಮೊದಲಿನಿಂದಲೂ ಓದುವ ಗೀಳು. ನಾವು ಕೆಲವು ಗೆಳೆಯರು ಸೇರಿಕೊಂಡಾಗ ಬರೀ ಪುಸ್ತಕಗಳ ಬಗ್ಗೆಯೇ ಚರ್ಚೆ ಮಾಡುತ್ತಿರುತ್ತೇವೆ. ಒಂದು ಹೊಸ ಪುಸ್ತಕ, ಇಲ್ಲವೇ ಎಲ್ಲರೂ ಓದಿರುವ ಪುಸ್ತಕಕ್ಕೆ ಒಂದು ಹೊಸ ನೋಟ, ಇತ್ಯಾದಿ ಮಾತನಾಡಲು ತುಂಬ ಖುಶಿಯಾಗುತ್ತೆ. ಅದನ್ನೇ ಇಲ್ಲಿಯೂ ಮಾಡುವ ಪ್ರಯತ್ನ ಮಾಡಿದ್ದೇನೆ. ಒಂದಿಷ್ಟು ಪುಸ್ತಕಗಳನ್ನು ಓದಿದಾಗ ನನಗಾದ ಸಂತೋಷ, ಸಂಕಟಗಳನ್ನು ಹಂಚಿಕೊಳ್ಳುವ ಬಯಕೆಯಿದೆ. ಸ್ವಂತವಾಗಿಯಾದರೆ ಏನಾದರೂ ಬರೆಯಬಹುದು. ಆದರೆ, ಪರಿಚಯ? ಉಹುಂ, ನನಗಿನ್ನೂ ಬರುವುದಿಲ್ಲ. ನನ್ನ ಮೊದಲ ಪ್ರಯತ್ನವಿದು. ನಿಮಗಿಷ್ಟವಾದಲ್ಲಿ ಮುಂದಿನದ್ದು ಯೋಚಿಸಿದರಾಯಿತು.


ಧರ್ಮ, ದೇವರು, ಭಕ್ತಿ, ನಂಬಿಕೆಗಳಂತಹ ಸೂಕ್ಷ್ಮ ವಿಚಾರಗಳ ಮೇಲೆ, ಕಾಲಾಂತರದಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. ಪರ ವಿರೋಧ ಎಂದಿಗೂ ಇದ್ದಿದ್ದೇ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ, ಯೋಚನೆಗಳನ್ನು ಚರ್ಚಿಸುವ ಹಕ್ಕು, ಸ್ವಾತಂತ್ರ್ಯ ಇದ್ದೇ ಇದೆ. ವೈಯಕ್ತಿಕವಾಗಿ ಏನು ಮಾಡಿದರೂ ಚೆನ್ನವೇ. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹೇರಲು ಪ್ರಯತ್ನಿಸಿದಾಗಲೇ ತೊಂದರೆ ಶುರುವಾಗುವುದು.

ದೇವರೆಂಬ ಕಲ್ಪನೆ(!), ಮನುಷ್ಯನ ನೆನಪು ಎಲ್ಲಿಯವರೆಗೆ ಹೋಗುವುದೋ ಅಲ್ಲಿಯವರೆಗೆ ಸಾಗುತ್ತದೆ. ದೇವರು ಕಲ್ಪನೆಯೋ, ಸಾಧ್ಯತೆಯೋ ನಾನು ಚರ್ಚಿಸಲು ಹೋಗುವುದಿಲ್ಲ. ಕನ್ನಡದಲ್ಲಿ ಅನೇಕ ಹಿರಿಯರು ಇದೇ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಕಾರಂತರ ಮೂಕಜ್ಜಿ ಹೇಳುವ ದೇವರು ಎಷ್ಟು ಆಸಕ್ತಿಕರವಾಗಿದೆಯೋ, ಮೂರ್ತಿರಾಯರ ದೇವರೂ ಸಹ ಅಷ್ಟೇ ಚೆನ್ನಾಗಿದೆ. ಈ ಲೇಖನದ ಉದ್ದೇಶ ದೇವರಲ್ಲ. ಆದರೆ, ದೇವರೆಂಬ ಕಲ್ಪನೆ ಮತ್ತು ನಂಬಿಕೆಗಳ ಸುತ್ತ ಹೆಣೆದಿರುವ ಒಂದು ಪುಸ್ತಕ ಸರಣಿಯೊಂದರ ಪರಿಚಯ ಮಾಡಿಸುವ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ.

ನೀವು ಭೈರಪ್ಪನವರ ಪರ್ವ ಓದಿದ್ದಲ್ಲಿ, ಈ ರೀತಿಯ ಪ್ರಯತ್ನವನ್ನು ಖಂಡಿತಾ ಪ್ರಶಂಸಿಸುತ್ತೀರಿ. ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು, ಆದರೆ ಅಷ್ಟು ವಿಭಿನ್ನವಾಗಿ ಯೋಚಿಸುವುದು ನಿಜಕ್ಕೂ ಅಭಿನಂದನಾರ್ಹ.

Philip Pullman ಬರೆದಿರುವ "His Dark Materials" - trilogy ಈ‌ ಲೇಖನದ ಉದ್ದೇಶ.

ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಈ ಕಥಾ ಸರಣಿ, ಮೂರು ಪುಸ್ತಕಗಳಲ್ಲಿ , ಅತ್ಯಂತ ವಿವಾದಕ್ಕೀಡಾದ, ಚರ್ಚೆಗೊಳಗಾದ ಕಥೆ ಹೇಳುತ್ತದೆ. ( Northern Lights, Subtle Knife, Amber Spyglass ). ಈ ಸರಣಿ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ಕಥೆ ಪ್ರಾರಂಭಿಸುವ ಮುನ್ನ ಲೇಖಕ ಈ ಕೆಳಗಿನ ಪದ್ಯ ಉಲ್ಲೇಖಿಸುತ್ತಾನೆ. ಇಲ್ಲಿಂದಲೇ ಸರಣಿಯ ಹೆಸರನ್ನೂ ಎರವಲು ಪಡೆದಿದ್ದಾನೆ. ಮಿಲ್ಟನ್ ನ ಪುಸ್ತಕದ ಪ್ರಭಾವ, ಲೇಖಕನೇ ಒಪ್ಪಿಕೊಂಡಂತೆ, ಗಾಢವಾಗಿದೆ.

Into this wild abyss,
The womb of nature and perhaps her grave,
Of neither sea, nor shore, nor air, nor fire,
But all these in their pregnant causes mixed
Confusedly, and which thus must ever fight,
Unless the almighty maker them ordain
His dark materials to create more worlds,
Into this wild abyss the wary fiend
Stood on the brink of hell and looked a while,
Pondering his voyage...
John Milton: Paradise Lost, Book II

ದೇವರು, ವಿಜ್ಞಾನ ಮತ್ತು ಕಲ್ಪನೆಯನ್ನು ಈ ಸರಣಿಯಲ್ಲಿ ಎಷ್ಟು ಸುಂದರವಾಗಿ ಹೆಣೆಯಲಾಗಿದೆಯೆಂದರೆ, ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸದೆ ಕೆಳಗಿಡಲು ಮನಸ್ಸಾಗುವುದಿಲ್ಲ.ಒಂದು ಅದ್ಭುತ ಕಥೆಯಾಗಿಯೂ, ಧರ್ಮ ವಿರೋಧಿಯಾಗಿಯೂ ಎದ್ದು ನಿಲ್ಲುವುದು ಈ ಪುಸ್ತಕಗಳ ವಿಶೇಷ.

ಕೇವಲ ಕಥೆಯಾಗಿ ಓದುವುದಾದರೆ, ಒಂದು ಅದ್ಭುತ ಲೋಕವನ್ನು ಲೇಖಕ ಬಿಚ್ಚಿಡುತ್ತಾನೆ. ಆ ಲೋಕದಲ್ಲಿ, ಕೇವಲ ರವಿಯಿಲ್ಲ, ಭುವಿಯಿಲ್ಲ. ಬದಲಿಗೆ ಅನೇಕಾನೇಕ ಭುವಿಗಳಿವೆ. ಒಂದು ಸುಂದರ ಸಮಾನಾಂತರ ಜಗತ್ತುಗಳ ಕಲ್ಪನೆಯಿದೆ. ಅಲ್ಲಿ ಒಂದು ವಿಶ್ವದಿಂದ ಮತ್ತೊಂದು ವಿಶ್ವಕ್ಕೆ ಹೋಗಬಹುದು. ನಿಮ್ಮ ಆತ್ಮದ ಜೊತೆ ಮಾತನಾಡಬಹುದು. ಖುದ್ದು ಭಗವಂತನಿಗೇ ಯುದ್ಧಕ್ಕೆ ಆಹ್ವಾನ ನೀಡಬಹುದು!

ತುಂಬ ಕುತೂಹಲಕಾರಿಯಾಗಿ ಬರೆದಿರುವ ಈ ಸರಣಿಯನ್ನು ಸಿನಿಮಾ ಮಾಡುವ ಪ್ರಯತ್ನ ಕೂಡ ನಡೆಯಿತು. Golden Compass ಎನ್ನುವ ಹೆಸರಲ್ಲಿ ಬಿಡುಗಡೆಯಾದ ಚಿತ್ರ, ಈ ಸರಣಿಯಲ್ಲಿ ಮೊದಲ ಭಾಗದ ಕಥೆಯನ್ನು ಮಾತ್ರ ಹೇಳುತ್ತದೆ. ಚಿತ್ರ ಬಿಡುಗಡೆಯಾದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಒಬ್ಬ ಹನ್ನೆರಡು ವರ್ಷದ ಹುಡುಗಿಯ ಸುತ್ತ ಗಿರಕಿ ಹೊಡೆಯುವ ಈ ಕಥೆಯಲ್ಲಿ ಅನೇಕ ಅನೂಹ್ಯ ಕಲ್ಪನಾ ಪ್ರಯೋಗಗಳಿವೆ. ಮೊದಲಿಗೆ , ಲೇಖಕ, Daemon ಎನ್ನುವ ಹೊಸ ಕಲ್ಪನೆ ತೇಲಿ ಬಿಡುತ್ತಾನೆ. ನಿಮ್ಮ ಆತ್ಮದಿಂದ ಒಂದು ಭಾಗವನ್ನು ತೆಗೆದು ಅದಕ್ಕೊಂದು ರೂಪ ಕೊಟ್ಟರೆ, ಅದು Daemon. ನೀವು ಮತ್ತು ನಿಮ್ಮ Daemon ಒಬ್ಬರನ್ನೊಬ್ಬರು ಬಿಟ್ಟು ದೂರ ಹೋಗಲು ಸಾಧ್ಯವಿಲ್ಲ. Daemonಗಳ ರೂಪ ಕೂಡ ವಿಶಿಷ್ಟ. ಚಿಕ್ಕ ಮಕ್ಕಳ Daemonಗಳು ಯಾವ ವೇಷ ಬೇಕಾದರೂ ಧರಿಸಬಹುದು. ( ಬೆಕ್ಕು, ಗಿಳಿ, ನಾಯಿ ಇತ್ಯಾದಿ ). ದೊಡ್ಡವರ Daemonಗಳು ಒಂದೇ ರೂಪದಲ್ಲಿ ಸ್ಥಿರಗೊಂಡಿರುತ್ತವೆ. Daemonಗಳು ವ್ಯಕ್ತಿಗಳ ಸ್ವಭಾವಕ್ಕ್ಕೆ ತಕ್ಕಂತೆ ಇರುತ್ತವಾದ್ದರಿಂದ, ಸೇವಕರ Daemonಗಳು ಸಾಮಾನ್ಯವಾಗಿ ನಾಯಿಗಳಾಗಿರುತ್ತವೆ. ಸೈನಿಕರಿಗೆ ತೋಳ, ಹುಲಿ Daemonಗಳು. ನೀಚ ಬುದ್ಧಿಯವರಿಗೆ ಹಾವು ಇತ್ಯಾದಿ. ಅದೆಷ್ಟು ವಿಚಿತ್ರ ಈ ಕಲ್ಪನೆ!

ನಂತರ ಲೇಖಕ ಬೇರೆ ಬೇರೆ ವಿಶ್ವಗಳ ಬಗ್ಗೆ ಹೇಳುತ್ತಾನೆ. ವಿಜ್ಞಾನ ಹೇಳುತ್ತಾ ಬಂದಿರುವಂತೆ, ಈ ಬ್ರಹ್ಮಾಂಡದಲ್ಲಿ ನಮ್ಮದಷ್ಟೇ ಅಲ್ಲ, ಅನೇಕ ಭುವಿಗಳಿವೆ. ಅಲ್ಲಿಯೂ ಜೀವ ವಿಕಸನವಾಗಿದೆ. ಇಲ್ಲಿಯವರೆಗೂ ಸರಿ, ಎಲ್ಲರೂ ಒಪ್ಪುವಂಥದ್ದೇ. ಅಲ್ಲಿಂದ ಮುಂದೆ ಲೇಖಕ Quantum Physicsಗೆ ಸಾಗುತ್ತಾನೆ. ಸಮಾನಾಂತರ ಜಗತ್ತು ಬಿಚ್ಚಿಕೊಳ್ಳುತ್ತದೆ. ವಿಚಾರ ಮಾಡಿ, ಎರಡು ವಿಶ್ವಗಳು ಒಟ್ಟೊಟ್ಟಿಗೇ ವಿಕಸನಗೊಳ್ಳುತ್ತವೆ. ಎರಡೂ ಕಡೆ ಒಂದೇ ರೀತಿಯ ಜೀವ ಸಂಕುಲ. ನೀವು ಇಲ್ಲಿ ಇದ್ದಲ್ಲಿ, ಆ ವಿಶ್ವದಲ್ಲಿಯೂ ಇರಬಹುದು. ಆದರೆ ಇಲ್ಲಿ ಆದದ್ದೆಲ್ಲಾ ಅಲ್ಲಿಯೂ ಆಗಬೇಕೆಂದೇನಿಲ್ಲ. ಅವೆರಡೂ ಸಮಾನಾಂತರ ವಿಶ್ವಗಳಷ್ಟೇ (parallel universe).

ಈಗ ಸಮಾನಾಂತರ ಅಥವಾ ಅನೇಕ ವಿಶ್ವಗಳಿದ್ದಲ್ಲಿ, ಒಂದರಿಂದ ಮತ್ತೊಂದಕ್ಕೆ, ಅಥವಾ ಎಲ್ಲಾ ವಿಶ್ವಗಳಿಗೂ ಹೋಗಿ ಬರುವ ಅವಕಾಶವಿಲ್ಲದಿದ್ದಲ್ಲಿ ಕಥೆ ಕುತೂಹಲಕಾರಿಯಾಗಿರುವುದಿಲ್ಲ. ಹಾಗಾಗಿ, ಅದನ್ನು ಸಾಧಿಸಲು ಲೇಖಕ ಚಾಕುವೊಂದನ್ನು ಸೃಷ್ಟಿಸುತ್ತಾನೆ. ಈ ಚಾಕುವಿನ ಅಲಗು ಬರಿಗಣ್ಣಲ್ಲಿ ನೋಡಲಾಗದಷ್ಟು ಹರಿತ. ಅದು ಎಷ್ಟು ಶಕ್ತಿಶಾಲಿಯೆಂದರೆ, ಅದು ಯಾವ ವಸ್ತುವನ್ನು ಬೇಕಾದರೂ ತುಂಡು ಮಾಡೀತು. ಅದನ್ನು ಉಪಯೋಗಿಸಿ ವಿಶ್ವಗಳನ್ನು ಬೇರ್ಪಡಿಸುವ ಅದೃಶ್ಯ ಗೋಡೆಗಳನ್ನು ಕೂಡ ಸೀಳಬಹುದು.

ಮನುಷ್ಯ ಮಾತ್ರನಿಗೆ ಈ‌ ಅನೇಕ ವಿಶ್ವಗಳ ಬಗೆಗೆ ಕಲ್ಪನೆ ಬಂದದ್ದಾದರೂ ಹೇಗೆ? ಅವನು ಬೌದ್ಧಿಕವಾಗಿ ಇಷ್ಟು ಬೆಳವಣಿಗೆ ಹೊಂದಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಲೇಖಕ ಮತ್ತೊಂದು ಹೊಸ ವಿಚಾರವನ್ನು ಹೇಳುತ್ತಾನೆ. ಅವನ ಪ್ರಕಾರ ಇದಕ್ಕೆಲ್ಲಾ ಕಾರಣ Dust! ಹೌದು Dust ಅಥವಾ ಆಡು ಭಾಷೆಯಲ್ಲಿ ಹೇಳುವುದಾದರೆ , ಧೂಳು ಇದಕ್ಕೆಲ್ಲಾ ಕಾರಣ. ಆದರೆ Dust ಎಂದರೆ ಸಾಧಾರಣ ಧೂಳಿನ ಕಣಗಳಲ್ಲ. ಅವು ಪ್ರಜ್ಞೆ . ಅವೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ. ಭೌತಶಾಸ್ತ್ರ ಹೇಳುವಂತೆ, neutron, proton, electronಗಳ ತರಹ Dust ಕೂಡ ಒಂದು ಪರಮಾಣು ಕಣ. ಈಗ ಈ‌ ಕಣಗಳಿಗೆ ಪ್ರಜ್ಞೆ ಇದ್ದಲ್ಲಿ, ಅವಕ್ಕೆ ತಮ್ಮದೇ ಆದ ಇಚ್ಛೆ ಇದ್ದಲ್ಲಿ, ಉದ್ದೇಶವಿದ್ದಲ್ಲಿ! ಲೇಖಕ ಅವುಗಳಿಗೆ Dust ಅಥವಾ Dark Matter ಎಂದು ಕರೆಯುತ್ತಾನೆ. ಅವುಗಳಿಗೆ ತಮ್ಮದೇ ಆದ ಉದ್ದೇಶವಿದ್ದಿದ್ದರಿಂದ ಅವು ಮನುಷ್ಯನ ಬೆಳವಣಿಗೆಗೆ ಸಹಕರಿಸಿದವು. ಬೇರೆ ಇನ್ಯಾವುದೋ ವಿಶ್ವದಲ್ಲಿ, ಅವುಗಳ ಅನುಕೂಲಕ್ಕೆ ತಕ್ಕಂತೆ ಮತ್ತೆ ಬೇರೆ ಯಾವ ಪ್ರಾಣಿಗೋ ಅವು ಸಹಕರಿಸಿದ್ದಾವು!

ಮಕ್ಕಳೊಂದಿಗೆ Dustನ ನಂಟು ಸ್ವಲ್ಪ ಕಡಿಮೆ. ಹಾಗಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಕಡಿಮೆ. ಅವುಗಳ ವ್ಯಕ್ತಿತ್ವ ಇನ್ನೂ ಪರಿಪೂರ್ಣವಾಗಿ ರೂಪುಗೊಂಡಿಲ್ಲವಾದ್ದರಿಂದ ಮಕ್ಕಳ daemonಗಳಿಗೆ ಒಂದು ಸ್ಥಿರವಾದ ರೂಪವಿಲ್ಲ ! ಹರೆಯಕ್ಕೆ ಬರುತ್ತಿದ್ದಂತೆ, Dustನ ಸಾಂದ್ರತೆ ಹೆಚ್ಚಾಗುವುದರಿಂದ, ಬುದ್ಧಿಶಕ್ತಿ ಹೆಚ್ಚಾಗುತ್ತದೆ. ವ್ಯಕ್ತಿತ್ವ ಸ್ಪಷ್ಟವಾಗುತ್ತದೆ. Daemonಗಳೂ ಒಂದು ರೂಪದಲ್ಲಿ ಸ್ಥಿರವಾಗುತ್ತವೆ.

ಇಷ್ಟೆಲ್ಲಾ ಅನೂಹ್ಯ ಸಂಗತಿಗಳನ್ನು ಹೇಳುತ್ತಾ ಹೋಗುವ ಲೇಖಕ, ಕಥೆಯನ್ನು ಇನ್ನೂ ಕುತೂಹಲಕಾರಿಯನ್ನಾಗಿಸಲು, ಇಡೀ ಬ್ರಹ್ಮಾಂಡಕ್ಕೇ ಆಪತ್ತನ್ನು ತಂದಿಡುತ್ತಾನೆ, ಚಾಕುವಿನಿಂದ.ವಿಷಯವೇನೆಂದರೆ, ವಿಶ್ವದಿಂದ ವಿಶ್ವಕ್ಕೆ ಹೋಗಲು ಚಾಕುವಿನಿಂದ ಕನ್ನ ಕೊರೆದ ಮೇಲೆ, ಅದನ್ನು ಮುಚ್ಚದಿದ್ದಲ್ಲಿ, Dust ಪಾತಾಳಕ್ಕೆ ಸೋರಿಹೋಗುತ್ತದಂತೆ. ಹಾಗೂ ಪ್ರತಿ ಬಾರಿ ಕನ್ನ ಕೊರೆದಾಗ ಪಾತಾಳದಿಂದ ಒಂದು ದುಷ್ಟ ಕಣದ ಸೃಷ್ಟಿಯಾಗುತ್ತದಂತೆ. ಮತ್ತೆ ಆ ದುಷ್ಟ ಕಣದ ಆಹಾರವೇ ಸಮಸ್ತ ಲೋಕದ ಅಭ್ಯುದಯಕ್ಕೆ ಕಾರಣವಾದ Dust. ಹೀಗಾಗಿ, ಸೋರಿ ಹೋಗುತ್ತಿರುವ Dust ಉಳಿಸುವ ಮತ್ತು ಪಾತಾಳ ಲೋಕದ ದುಷ್ಟ ಕಣಗಳನ್ನು ನಾಶ ಮಾಡುವ ಜವಾಬ್ದಾರಿ, ನಮ್ಮ ಕಥಾನಾಯಕಿ, ಹನ್ನೆರಡು ವರ್ಷದ ಪೋರಿಯ ಮೇಲೆ ಬೀಳುತ್ತದೆ. ಇನ್ನೂ ಮಜವಾದ ಸಂಗತಿಯೆಂದರೆ, ಆಕೆ ತನಗರಿವಿಲ್ಲದಂತೆಯೇ ಈ ಕಾರ್ಯ ಮಾಡಿ ಮುಗಿಸಬೇಕು. ಆಕೆಯೇ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಯಾರಾದರೂ ಆಕೆಗೆ ಏನು ಮಾಡಬೇಕೆಂದು ಹೇಳಿದರೆ, ಭವಿಷ್ಯವೇ ಬದಲಾಗಬಹುದು. ಹೀಗಾಗಿ, ವಿಷಯ ಗೊತ್ತಿದ್ದವರು ಆಕೆಗೆ ಏನೂ ಹೇಳುವಂತಿಲ್ಲ, ಆದರೆ ಆಕೆಗೆ ಖುದ್ದು ವಿಷಯವೇ ಗೊತ್ತಿಲ್ಲ. In her ignorance lies the fate of the world!

ಸರಣಿಯ ಮೂರನೆಯ ಪುಸ್ತಕದಲ್ಲಿ, ಲೇಖಕ, ಅತ್ಯಂತ ಚರ್ಚೆಗೊಳಗಾದ ಭಗವಂತನ ಕುರಿತಾದ ತನ್ನ ಕಲ್ಪನೆಯನ್ನು ಹಂಚಿಕೊಳ್ಳುತ್ತಾನೆ. ಅವನ ಪ್ರಕಾರ, ಅನೇಕಾನೇಕ ವಿಶ್ವಗಳಿದ್ದಂತೆ, ನಮ್ಮ ಭೂಮಿಯಿದ್ದಂತೆ, ಸ್ವರ್ಗ (heaven) ಕೂಡ ಒಂದು ಲೋಕ. ಅಲ್ಲಿ ದೇವತೆಗಳು (Angel) ಇರುತ್ತಾರೆ. ಅದಕ್ಕೆ ಸರಿಯಾಗಿ ನರಕ ಸಹ ಮತ್ತೊಂದು ಲೋಕ. ಲೇಖಕ ಅದನ್ನು ಸತ್ತವರ ಲೋಕವೆಂದು ಕರೆಯುತ್ತಾನೆ.

ಲೇಖಕ ಹೇಳುವಂತೆ, ಜೀವ ವಿಕಸನದ ಪ್ರಕ್ರಿಯೆಯಲ್ಲಿ, ಭಗವಂತ (Authority) ಮೊದಲಿಗೆ ಜನಿಸಿದ. ಆ ನಂತರ ಹುಟ್ಟಿದವರಿಗೆ ಅವನೇ ಅವರನ್ನೆಲ್ಲ ಸೃಷ್ಟಿಸಿದ್ದೆಂದು ಸುಳ್ಳು ಹೇಳಿದ. ದೇವ, ದೇವತೆಗಳೆಂದರೆ, ಜೀವ ವೈವಿಧ್ಯತೆಯಲ್ಲಿ ಒಂದು ಬಗೆ. ಮನುಷ್ಯ, ಪ್ರಾಣಿ, ಪಕ್ಷಿಗಳಂತೆ ದೇವತೆಗಳೂ ಒಂದು ಬಗೆಯ ಜೀವಿ. Angels are one of those creatures which have evolved in some world, and Authority is just another angel. But he happens to be the first one to evolve.

ದೇವತೆಗಳಿಗೆ ದೇಹವಿಲ್ಲ. ಅವರ ಶರೀರ ಸಂಪೂರ್ಣವಾಗಿ Dustನಿಂದ ಕೂಡಿದೆ. ಕೇವಲ ಕಣಗಳಿಂದ ಮಾಡಲ್ಪಟ್ಟಿರುವುದರಿಂದ ಅವರಿಗೆ ದೇಹವಿಲ್ಲ. ಹಾಗಾಗಿ, ದೈಹಿಕವಾಗಿ ಅವರು ಮಾನವರಿಗಿಂತ ದುರ್ಬಲರು. ಅವರಲ್ಲಿ ಕೆಲವರು ದೇವತೆಗಳಾಗಿಯೇ ಜನಿಸುತ್ತಾರೆ. ಇನ್ನು ಕೆಲವು ಮಾನವರು ದೇವತೆಗಳ ಸಹಾಯದಿಂದ ಸತ್ತ ಮೇಲೆ ದೇವತೆಗಳಾಗುತ್ತಾರೆ.

ಇನ್ನು ಸಾವು! ಸಾವಿನ ಕಲ್ಪನೆ ಕೂಡ ಸೊಗಸಾಗಿದೆ. ಸಾವು ಸದಾ ನಮ್ಮೊಡನೆಯೇ ಇರುತ್ತದಂತೆ. ಪ್ರತಿಯೊಬ್ಬರಿಗೂ ಅವರದೇ ಆದ ಸಾವು ಇರುತ್ತದೆ. ಆದರೆ, ಸಾವನ್ನು ನೋಡಲು ಸಾಮಾನ್ಯವಾಗಿ ಯಾರೂ ಇಷ್ಟ ಪಡದ ಕಾರಣ, ಅದು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುತ್ತದೆ. ಸಾವಿನೊಂದಿಗೆ ಮನಸಾರೆ ಸ್ನೇಹ ಬಯಸಿದಲ್ಲಿ, ಸಾವಿನ ಸಾಂಗತ್ಯದಲ್ಲಿಯೇ ಬದುಕಬಹುದು. ಕೊನೆಗೆ , ಸಮಯ ಬಂದಾಗ ಸತ್ತವರ ಲೋಕಕ್ಕೆ ಕರೆದೊಯ್ಯಲು ಸಾವು ಸಹಾಯ ಮಾಡುತ್ತದೆ. ಕೇವಲ ಸಾವಿಗೆ ಮಾತ್ರ ಅಲ್ಲಿಗೆ ಹೋಗುವ ದಾರಿ ತಿಳಿದಿರುತ್ತದೆ. ಅಲ್ಲಿಗೆ ಕರೆದೊಯ್ದು ಬಿಟ್ಟ ಮೇಲೆ ಅದರ ಕರ್ತವ್ಯ ಮುಗಿಯುತ್ತದೆ.

ಕಥೆಯ ಕೊನೆಯ ಭಾಗ ರೋಚಕವಾಗಿದೆ. ಭಗವಂತನಿಗೀಗ ವಯಸ್ಸಾಗಿದೆ. ಈಗ ಆತ ಹೊರಗೆಲ್ಲೂ ಬರುವುದಿಲ್ಲ. ಆತನಿಗೊಬ್ಬ ಸೇನಾಧಿಕಾರಿಯಿದ್ದಾನೆ. ಭಗವಂತನಿಗೀಗ ವಯಸ್ಸಾಗಿರುವುದರಿಂದ ಸೇನಾಧಿಕಾರಿಯೇ ಎಲ್ಲ ಕಾರ್ಯಕಲಾಪಗಳನ್ನು ನೋಡಿಕೊಳ್ಳುತ್ತಾನೆ. ಬ್ರಹ್ಮಾಂಡದಲ್ಲಿನ ಎಲ್ಲಾ ಪ್ರಜ್ಞಾಪೂರ್ವಕ ಜೀವಿಗಳು ಅತ್ಯಂತ ಸ್ವತಂತ್ರರಾಗಿದ್ದಾರೆಂದು ಭಗವಂತನಿಗೆ ಅನಿಸಿದೆ. ಅವನು ಮತ್ತೆ ಸೇನಾಧಿಕಾರಿ ಸೇರಿ ಈ ಬಗ್ಗೆ ಮೊದಲೇ ವಿಚಾರ ಮಾಡಿದ್ದರಿಂದ, ಸೇನಾಧಿಕಾರಿ ಎಲ್ಲ ವಿಶ್ವಗಳ ಮೇಲೂ ತನ್ನ ಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾನೆ. ಇದಕ್ಕೆ ವಿರುದ್ಧವಾಗಿ ಮಾನವನೊಬ್ಬ ಸಿಡಿದೇಳುತ್ತಾನೆ. ಬ್ರಹ್ಮಾಂಡದೆಲ್ಲೆಡೆಯಿಂದ ಅವನಿಗೆ ಸಹಾಯ ಹರಿದು ಬರುತ್ತದೆ. ಈ ದೇವ-ಮಾನವ ಯುದ್ಧವನ್ನು ಪುಸ್ತಕದಲ್ಲಿ ಓದುವುದೇ ಒಂದು ಮುದ.

ಕಥೆಯ ಕೊನೆಯ ಹಂತದಲ್ಲಿ ಲೇಖಕ Butterfly Effect ಎಂಬ ಮತ್ತೊಂದು ಭೌತಶಾಸ್ತ್ರದ ಎಳೆಯೊಂದನ್ನು ತಂದು ಮುಕ್ತಾಯಗೊಳಿಸುತ್ತಾನೆ. ಅದರ ಪ್ರಕಾರ ಜಗತ್ತಿನಲ್ಲಿ ನಡೆಯುವ ಯಾವುದೇ ಅತಿ ಚಿಕ್ಕ ಘಟನೆ ಕಾಲಾಂತರದಲ್ಲಿ ಅತ್ಯಂತ ದೊಡ್ಡ ಘಟನೆಗೆ ಕಾರಣವಾಗುತ್ತದೆ. ಈ ಸಿದ್ಧಾಂತ ಎಷ್ಟು ವಿಚಿತ್ರವಾದ ವಿಷಯಗಳನ್ನು ಹೇಳುತ್ತದೆಯೆಂದರೆ, ಬೆಂಗಳೂರಲ್ಲಿ ಇವತ್ತು ಚಿಟ್ಟೆಯೊಂದು ರೆಕ್ಕೆ ಬಡಿದರೆ ಮುಂದೆ ಯಾವತ್ತೋ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವೇಳುತ್ತದೆಯಂತೆ!

ಕಥಾನಾಯಕಿ, ಕಥೆ ಮುಗಿಯುವ ಹಂತಕ್ಕೆ ಬಂದಾಗ ಹರೆಯಕ್ಕೆ ಬರುತ್ತಾಳೆ. ಗೆಳೆಯನೊಂದಿಗೆ ಪ್ರೇಮಾಂಕುರವಾಗುವುದರೊಂದಿಗೆ (Original sin ?) ಜಗತ್ತಿಗೆ ಬಂದಿದ್ದ ಗಂಡಾಂತರ ತೊಲಗುತ್ತದೆ. ಯಾವುದೇ ನದಿಯ ಹರಿವನ್ನು ಬದಲಿಸಲು, ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಒಂದೇ ಒಂದು ಚಿಕ್ಕ ಕಲ್ಲನ್ನಿಟ್ಟರೆ ಸಾಕೋ, ಅದೇ ರೀತಿ, ಕಥಾನಾಯಕಿಯ ಪ್ರೇಮಪ್ರಸಂಗ ಬ್ರಹ್ಮಾಂಡದ ಚಲನೆಯನ್ನೇ ಬದಲಿಸುತ್ತದೆ.


ಕೊ: ಇದೇ ಲೇಖಕನ ಇನ್ನೊಂದು ಕೃತಿ "Good Man Jesus and the Scoundrel Christ" ಇತ್ತೀಚಿಗೆ ಬಿಡುಗಡೆಯಾಗಿದೆ. ಒಂದು ಅಧ್ಯಾಯ ಇಲ್ಲಿದೆ.

Thursday, August 5, 2010

ಸಾಂತ್ವನ

ಹೂತು ಹೋದವು ಮಾತು
ಮರೆತೇ ಹೋಯಿತೆ ನಗು
ಎಲ್ಲಿಂದ ಇಳಿದಿದೀ‌ ಮೌನ
ಮನದ ಮೂಲೆಯೊಳಗೆ

ಬರಿದಾಗಿ ಹೋಯಿತೇ ಗಾಡಿ
ಕನಸು ಕೊಳ್ಳುವ ಮುನ್ನ
ಬರೆಯಲಾಗದ ಕವನ
ಹಾಕಿ ಒಯ್ದರೇ‌ ಕನ್ನ

ಮರೆಯಾಗದ ನೆನಪುಗಳು
ಮನದೊಳಗೆ ಮೆರೆದಿರಲು
ಉರುಟಿ ಹೋದ ಕನಸುಗಳು
ಮತ್ತೆ ಮತ್ತೆ ಮರಳಿರಲು
ಬಿಸಿ ಉಸಿರು, ಅಸಹನೆ
ತಾಳಲಾಗದ ತಪನೆ

ತಲ್ಲಣಿಸದಿರು ಗೆಳೆಯಾ
ಬೀಸುವುದು ತಂಗಾಳಿ.
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ
ಮತ್ತೆ ಮೂಡೀತು ಬೆಳಕು
ಕಾಲ ಸರಿದಂತೆ

Monday, July 19, 2010

ಮರಳಿ ಗೂಡಿಗೆ....

ದೂರ ಹೋಗುವ ಮಾತನಾಡಿದಾಗ, ನೀವು ತೋರಿಸಿದ ಪ್ರೀತಿ, ಹಾರೈಕೆ, ಸಾಂತ್ವನಗಳಿಗೆ ಆಭಾರಿ. ಅವುಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಕ್ಷಮೆಯಿರಲಿ.

ಈಗ ಎಲ್ಲಾ ಒಂದು ಹಂತಕ್ಕೆ ಬಂದಂತಿದೆ. ಅಬ್ಬ, ಇಲ್ಲಿಗೆ ಎಲ್ಲಾ ಸರಿಹೋಯಿತು ಅನ್ನುವಷ್ಟರಲ್ಲಿ ಮತ್ತೇನಾದರೂ ಅನಾಹುತವಾಗುತ್ತಿತ್ತು. ಸಣ್ಣವನಿದ್ದಾಗ ಸಾವು ನೋವು ನೋಡಿದ್ದು ಬಿಟ್ಟರೆ, ಇಲ್ಲಿಯವರೆಗೂ ಆ ಸಂಕಟ ಮತ್ತೆ ಅನುಭವಿಸಿರಲಿಲ್ಲ. ಅದೂ ಮೇಲಿಂದ ಮೇಲೆ. ಕಳೆದ ಕೆಲವು ತಿಂಗಳುಗಳಲ್ಲಿ ಬದುಕು ಸಾಕಷ್ಟು ಪಾಠ ಕಲಿಸಿದೆ. ಒಂದೇ ಗುಕ್ಕಿನಲ್ಲಿ ಸಾವು, ನೋವು, ಸಂಭ್ರಮ ಸಂತೋಷ ಎಲ್ಲವನ್ನೂ ಅನುಭವಿಸಿದ್ದೇನೆ. ರಜೆ ಹಾಕಿದ್ದು ಸಾಕು ಅಂತ ಅನಿಸಿದರೂ, ಮನಸ್ಸಿಗಿನ್ನೂ ಸೂತಕ ಕಳೆದಿಲ್ಲ. ಮನೆ-ಆಫೀಸು ಅಂತ ಇಷ್ಟರಲ್ಲೇ ದಿನ ಕಳೆದು ಹೋಗುತ್ತಿದೆ. ನನಗಾಗಿ ಒಂದಿಷ್ಟು ಸಮಯ ಎತ್ತಿಟ್ಟುಕೊಳ್ಳಬೇಕೆನ್ನುವುದು ಕೇವಲ ಮಾತಲ್ಲೇ ಉಳಿದು ಹೋಗುತ್ತದೆಯೆನ್ನುವ ಭಯದಿಂದ ಇವತ್ತು ಮತ್ತೆ ಬರೆಯಲು ಕುಳಿತಿದ್ದೇನೆ.

ಒಪ್ಪಿಕೊಂಡ ಕೆಲಸಗಳು ಒಂದಿಷ್ಟು ಹಾಗೇ ಉಳಿದಿವೆ. ಒಂದೊಂದಾಗಿ ಎಲ್ಲವನ್ನೂ ಮುಗಿಸಬೇಕಾಗಿದೆ. ನಾನು ತಪ್ಪಿಸಿಕೊಂಡ ನಿಮ್ಮೆಲ್ಲರ ಬರಹಗಳನ್ನು ಓದಬೇಕು, ಈ ಮುಂಚೆ ಅರ್ಧಕ್ಕೇ ನಿಲ್ಲಿಸಿರುವ ಕಥೆಗಳಿಗೊಂದು ಅಂತ್ಯ ಕಾಣಿಸಬೇಕು. ರಜೆ ಹಾಕಿದ ಇಷ್ಟು ದಿನಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅವನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹ ಲೋಕಕ್ಕೆ ಮತ್ತೆ ಮರಳಬೇಕು. ಹಾಗೆಂದು ನಿರ್ಧರಿಸಿದ್ದೇನೆ.

Friday, February 26, 2010

ದೂರ ಹೋಗುವ ಮುನ್ನ

ಇತ್ತ ಕಡೆ ತಲೆ ಹಾಕಿ ಬಹಳ ದಿನಗಳಾಗಿದ್ದವು. ಬರವಣಿಗೆ ಶುರು ಮಾಡಿದಾಗ ನಿರಂತರವಾಗಿ ಸಾಗುತ್ತದೆಂದುಕೊಂಡಿದ್ದೆ. ಆದರೆ ಈ ನಡುವೆ ಅನಿವಾರ್ಯ ಕಾರಣದಿಂದಾಗಿ ಅಂತರ್ಜಾಲದಿಂದಲೇ ದೂರವಾಗಿದ್ದೇನೆ. ಒಂದಾದ ಮೇಲೊಂದು ಅಹಿತಕರ ಘಟನೆಗಳು ನಡೆಯುತ್ತಿವೆ. ದೇಹಕ್ಕಿಂತಾ ಮನಸ್ಸಿಗೆ ಹೆಚ್ಚು ದಣಿವಾಗಿದೆ. ಸದ್ಯಕ್ಕಂತೂ ಬರವಣಿಗೆ ದೂರದ ಮಾತು. ರಜೆ ಹಾಕುವ ಮುನ್ನ ನಿಮಗೊಮ್ಮೆ ಹೇಳಬೇಕೆನಿಸಿತು.
ಮನಸ್ಸು ತಿಳಿಯಾದ ಮೇಲೆ ಮತ್ತೆ ಸಿಗುತ್ತೇನೆ.

ವಂದನೆಗಳು.

Monday, January 25, 2010

ಕವಿತೆ ಹುಟ್ಟದ ರಾತ್ರಿ

ಕೈಗೆ ಸಿಗದ ಶಬ್ದಗಳು
ಜಾರಿಬಿದ್ದ ಚಿನ್ಹೆಗಳು
ಬರೆ ಬರೆದು ಸವೆದ ಸಾಲುಗಳು
ಮರೆತುಹೋದ ಪದ್ಯಗಳು
ಅಮೂರ್ತ ಭಾವಗಳು
ದಂಡಾಗಿ ಬಂದು
ದಂಡೆಗೆ ಅಪ್ಪಳಿಸಿದಂತೆ.
ಭರ್ಜರಿ ಮೊರೆತ
ಕಿವಿ ತಮಟೆ ತೂತಾಗಿ
ಕಣ್ಣುಗಳು ಕತ್ತಲಾಗಿ
ಕಾಲ ಕೆಳಗಿನ ನೆಲ ಕುಸಿದು
ಆಸರೆಗೆ ತಡಕಾಡಿ
ಆಗಸಕೆ ಕೈ ಎತ್ತಿ
ದನಿ ಇಂಗಿ ಬಾಯ್ತೆರೆದು
ಕವಿತೆ ಹುಟ್ಟದ ರಾತ್ರಿ ಬೆಚ್ಚಿಬಿದ್ದೆ.

Friday, January 22, 2010

दिल तो बच्चा है जी

ಇತ್ತೀಚಿನ ದಿನಗಳಲ್ಲಿ ನಾನು ಕೇಳಿದ ಅತ್ಯಂತ ಸರಳ ಸುಂದರ ಹಾಡಿದು. ಥೇಟ್ ರಾಜ್ ಕಪೂರ್ ಕಾಲದ ಗೀತೆಯಂತಿದೆ.

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಇಷ್ಕಿಯಾ' ಚಿತ್ರದ ಗೀತೆಯಿದು. ಚಿತ್ರ ನಿರ್ದೇಶನದ ಜೊತೆಜೊತೆಗೆ ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನವನ್ನು ಸಹ ಮಾಡಿದ್ದಾರೆ. ಗುಲ್ಜಾರ್ ಸಾಹಿತ್ಯವಿದೆ.

ಸಂಗೀತ, ಸಾಹಿತ್ಯ ಒಂದಕ್ಕೊಂದು ಪೂರಕವಾಗಿದೆಯೋ, ಇಲ್ಲಾ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಿವೆಯೋ ಎನ್ನುವಷ್ಟರ ಮಟ್ಟಿಗೆ ಇದು ಚೆನ್ನಾಗಿ ಬಂದಿದೆ. ರಾಹತ್ ಫತೇ ಅಲಿ ಖಾನ್ ತಮ್ಮ ದ್ವನಿಯಿಂದ ಇದಕ್ಕೆ ಬೇರೆಯದೇ ಮೆರುಗು ನೀಡಿದ್ದಾರೆ.

ವೃದ್ಧನೊಬ್ಬನ ಆಲಾಪದಂತಿರುವ ಈ ಹಾಡಿಗೆ ನಾಸಿರುದ್ದೀನ್ ಷಾ ಹೇಗೆ ಅಭಿನಯಿಸಿರಬೇಡ ಎಂದು ಊಹಿಸುತ್ತಾ ಕುಳಿತಿದ್ದೇನೆ. ಮುಂದಿನವಾರ ಚಿತ್ರ ಬಿಡುಗಡೆಯಾಗಲಿದೆ.

ಇಂತಹ ಒಂದು ಹಾಡನ್ನು ನೀಡಿದ ವಿಶಾಲ್ ಮತ್ತು ಗುಲ್ಜಾರ್ ರಿಗೆ ವಂದನೆಗಳನ್ನು ಸಲ್ಲಿಸುತ್ತಾ ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದೇನೆ.

ಸುಮ್ಮನೆ ಹಾಡು ಕೇಳುತ್ತಾ ಓದುತ್ತಾ ಹೋಗಿ, ಆನಂದವಾದೀತು.



ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं
वल्ला ये धड़कन भड्ने लगी है
चेहरे की रंगत उड़ने लगी है
डर लगता है तनहा सोने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं

किसको पता था पेहलु में रखा
दिल ऐसा बाजी भी होगा
हम तो हमेशा समझते थे कोई
हम जैसा हाजी ही होगा
हाई जोर करें, कितना शोर करें
बेवजा बातों पे ऐंवे गौर करें
दिल सा कोई कमीना नहीं
कोई तो रोके, कोई तो टोके
इस उम्र में अब खाओगे धोखे
डर लगता है इश्क करने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उधासी बैठी है दिल पे
हस्सने से घबरा रहे हैं
सारी जवानी कतरा के काटी
पीरी में टकरा गए हैं
दिल धड़कता है तो ऐसे लगता है वो
आ रहा है यहीं देखता ही न वो
प्रेम की मारें कटार रे
तौबह ये लम्हे कट ते नहीं क्यूँ
आँखों से मेरी हट ते नहीं क्यूँ
डर लगता है मुझसे केहने में जी

दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

Wednesday, January 20, 2010

ಜಾರಿಬಿದ್ದ ನಕ್ಷತ್ರ

ಸುರಿವ ಕತ್ತಲೆಯ ರಾತ್ರಿ
ಮನೆಯ ಮಹಡಿಯ ಮೇಲೆ
ನಿಂತು ನೋಡುತ್ತಿರಲು
ದೈತ್ಯ ಗುಡ್ಡದ ಹಿಂದೆ
ಸ್ತಬ್ಧ ಕಾಡಿನ ನಡುವೆ
ನಕ್ಷತ್ರವೊಂದು ಜಾರಿಬಿತ್ತು

ತಾರೆಗಳ ರಾಜಕುಮಾರಿ
ತಾರಸಿಯಿಂದ ಬಗ್ಗಿ ನೋಡಿ
ಜಾರಿಬಿದ್ದು ಕಾಲುಮುರಿದುಕೊಂಡಿರಲು
ನಾನಲ್ಲಿಗೆ ಹೋಗಿ...
ಛೇ, ಅಪ್ಪ ಹೇಳಿದ ಕಥೆ ಈಗೆಷ್ಟು ಬಾಲಿಶ
ಓದಿ ಕೆಟ್ಟೆನೋ ನಾನು
ಅಬಲೆ ತಾರೆಯ ಕೂಗು
ನನಗಿಂದು ಕೇಳುತ್ತಿಲ್ಲ

ಹರಿವ ತುಂಗೆಯ ಮೇಲೆ
ಬೆರಗುಗಣ್ಣು ತೇಲಿದಂತಾಗಿ
ಮೆಟ್ಟಿಲಿಳಿದು ಮನೆಗೆ
ಬಂದು ಕದವಿಕ್ಕಿದೆ

ಬೀಸಿಬಂದ ಬಾಲ್ಯ
ಬಾಗಿಲಿಗೆ ಬಡಿದು
ಅಂಗಳದಲ್ಲಿ ಬಿದ್ದಿತ್ತು
ನಿನ್ನೆಯೇ ಉತ್ತರಾಯಣ
ಆದರೂ ರಾತ್ರಿಯಿಡೀ ನರಳಿತ್ತು





ಬಾಲ್ಯದ ನೆನಪನ್ನು ಬರೆಯ ಹೊರಟವನು ಮತ್ತೆಲ್ಲಿಗೋ ಹೋಗಿ ನಿಂತೆ. ಬಾಲ್ಯದ ನೆನಪು ಎಷ್ಟು ಮಧುರವೋ ಅದು ಮುಗಿದು ಹೋಯಿತೆಂಬ ಅರಿವು ಅಷ್ಟೇ ಖೇದಕರ. ನಾನಿನ್ನು ಚಿಕ್ಕಮಗುವಲ್ಲ, ಅವುಗಳ ಬೆರಗು, ಆ ಕುತೂಹಲ ನನ್ನಲ್ಲಿನ್ನೂ ಉಳಿದಿಲ್ಲ. ಮತ್ತೇನು ಮಾಡಹೊರಟರೂ ಅಂದಿನ ನೆನಪಿನ ನಕಲಾದೀತಷ್ಟೇ. ನಿಸರ್ಗದ ಸೊಬಗನ್ನು ಸವಿಯಬಲ್ಲೆ, ಆದರೆ ಹೌದಾ ಅಪ್ಪಾ, ಅದು ಹಾಗಾ... ಊಹೂಂ, ಉಳಿದಿಲ್ಲ. ಬದುಕಲು ಅನ್ನ ನೀಡಿದ ವಿದ್ಯೆ ಆ ಚಿಕ್ಕಚಿಕ್ಕ ಸಂತೋಷಗಳನ್ನು ನನ್ನಿಂದ ಕಸಿದಿದೆ.

Monday, January 18, 2010

ಬೇರಿಲ್ಲದ ಊರಲ್ಲಿ

ನಾಳೆ ಬೆಳಗಾದರೆ ಎದ್ದು ರೆಡಿಯಾಗಿ ಆಫೀಸಿಗೆ ಹೋಗಬೇಕು. ಈ ರಾತ್ರಿ ಯಾಕೋ ಊರಿನ ನೆನಪು ಸ್ವಲ್ಪ ಹೆಚ್ಚಾಗೇ‌ ಕಾಡುತ್ತಿದೆ. ಮಲಗಿದರೆ ಮುಗಿಯಿತು. ನಾಳೆಯಿಂದ ಮತ್ತೆ ಅದೇ‌ ಕೆಲಸ, ಅದೇ ಜೀವನ. ಸ್ವಲ್ಪ ಬೇಜಾರಾದರೂ ಸರಿ, ಊರಿನ ನೆನಪಿರಲಿ ಎಂದು ಹಾಗೇ‌ ಎದ್ದು ಕುಳಿತಿದ್ದೀನಿ. ಈ‌ ಹೊತ್ತಲ್ಲಿ ಅಲ್ಲಿ ಹೇಗಿದ್ದೀತು ಅಂತ ಯೋಚಿಸುತ್ತಾ ಅಲ್ಲಿಗೇ ನಿಧಾನವಾಗಿ ಹೋಗುತ್ತಿದ್ದೇನೆ. ಬೀದಿ ನಾಯಿಗಳ ಕೂಗು ಮತ್ತೆ ನನ್ನನ್ನು ಇಲ್ಲಿಗೇ ಕರೆ ತರುತ್ತಿದೆ.

ಊರಿಂದ ಹೊರಬಿದ್ದು ವರ್ಷಗಳೇ ಆದರೂ ದಿನದಿಂದ ದಿನಕ್ಕೆ ಅಲ್ಲಿನ ನೆನಪು, ಸೆಳೆತ ಹೆಚ್ಚಾಗುತ್ತಲೇ ಇದೆ. ನಾನಿರುವ ಜಾಗಕ್ಕೇ‌ ನನ್ನವರು ಬಂದರೂ ಅವರು ಪರಕೀಯ ಮತ್ತೆ ನಾನೂ. ನಾನು ಅಲ್ಲಿಗೇ‌ ಹೋಗಬೇಕು ಮತ್ತೆ ನನ್ನೂರು ನನ್ನ ಜನ ಹಾಗೇ ಇರಬೇಕು. ಸ್ವಾರ್ಥ ನಂದು. ಆದರೆ ಅದಾವುದೂ‌ ಆಗುವ ಮಾತಲ್ಲ. ನಾನಲ್ಲಿಗೆ ಹೋಗುವುದಿಲ್ಲ. ಹೋದರೂ ಎರಡು ದಿನದಅತಿಥಿ. ವಾಪಸ್ ಊರಿಗೆ ಯಾವಾಗ ಹೋಗ್ತೀರಾ?‌ ಅಲ್ಲಿಗೆ ಹೋದಾಗ ಜನ ಕೇಳ್ತಾರೆ. ನನ್ನಾಗಲೇ ಅವರು ತಮ್ಮ ಊರಿಂದ ಆಚೆ ಅಟ್ಟಿಬಿಟ್ಟಿದ್ದಾರೆ. ಆ ಮಟ್ಟಿಗೆ ನಾನು ನನ್ನ ಊರಲ್ಲಿ ಪರಕೀಯ. ಆದರೂ ನಾನಲ್ಲಿಗೆ ಹೋಗಬೇಕು.

ಊರಿಗೆ ಬಂದಾಗಲೂ ನೀನು ಪುಸ್ತಕ ಓದ್ತೀಯಾ, ಬಿಟ್ಟರೆ ಮಲಗ್ತೀಯಾ ಅಂತ ಅಮ್ಮ ಬೈತಾಳೆ. ಆದರೆ ಪ್ರತೀ ಸಲ ಊರಿಗೆ ಹೋದಾಗ ಮಲಗಲಿಕ್ಕೆ ಹಾಸಿಗೆ ಸಿದ್ಧ ಮಾಡ್ತಾಳೆ. ಎದ್ದ ಕೂಡಲೇ‌ ತಿಂಡಿ. ತಿಂಡಿ ತಿನ್ನುತ್ತಲೇ‌ ಆ ದಿನದ ಪೇಪರ್ ಓದುವುದು. ಮುಗಿದ ಮೇಲೆ ಟೀಪಾಯ್ ಕೆಳಗೆ ಬಗ್ಗಿ ನೋಡಿದರೆ ನಾನು ಓದಿರದ ಪುಸ್ತಕಗಳನ್ನೆಲ್ಲಾ ಒಂದೆಡೆ ಜೋಡಿಸಿ ಇಟ್ಟಿರುತ್ತಾಳೆ. ನಾನು ಯಾವುದಾದರೂ ಒಂದು ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ಅವಳು ಕಾಫಿ ತಂದು ಕೊಡುತ್ತಾಳೆ. ಕಾಫಿ ಕುಡಿದು ಮಂಚದ ಮೇಲೆ ಅಮ್ಮನ ತೊಡೆ ಮೇಲೆ ತಲೆಯಿಟ್ಟು ಮಲಗಿ ಹಾಗೇ‌ ಪುಸ್ತಕ ಓದ್ತಿರಬೇಕಾದ್ರೆ, ಅಮ್ಮ ಹಿತವಾಗಿ ತಲೆ ಒತ್ತುತ್ತಾ ಮೆಲ್ಲನೆಯ ದನಿಯಲ್ಲಿ ಮತ್ತೆ ಬೈತಿರುತ್ತಾಳೆ. ನೀನು ಊರಿಗೆ ಬಂದರೆ ಬರೀ ಮಲಗ್ತೀಯಾ, ಇಲ್ಲ ಓದ್ತೀಯಾ.. ಈ ಚಂದಕ್ಕೆ ಯಾಕೆ ಬರಬೇಕು...

ಇನ್ನು ಅಪ್ಪನ ಕಥೆ ಬೇರೆ. ನಾನು ಬರ್ತೀನಿ ಅಂದ್ರೆ ಸಾಕು. ಮಧ್ಯರಾತ್ರಿಯಿಂದಲೇ ಆಗಾಗ ಎದ್ದು ಗಡಿಯಾರ ನೋಡಿ ಇನ್ನೊಂದ್ ಸ್ವಲ್ಪ ಹೊತ್ತಿಗೆ ಬರ್ತಾನೆ ಅಂತ ಹೇಳ್ತಿರ್ತಾರೆ.
ನಂಗೆ ತಲೆ ಚಿಟ್ ಹಿಡಿದು ಹೋಗುತ್ತೆ ಮಾರಾಯ, ನೀನು ಹೇಳದಂಗೇ‌ ಊರಿಗೆ ಬಾ ಅಂತ ಅಮ್ಮ ಹೇಳ್ತಿರ್ತಾಳೆ. ಆದ್ರೂ‌ ಪ್ರತೀ ಸಲ ಅವರಿಗೆ ಸುದ್ದಿ ಮುಟ್ಟಿರುತ್ತದೆ. ಅಮ್ಮನೇ‌ ಹೇಳಿರ್ತಾಳೆ.
ನಾನು ಬಸ್ಸಿಂದ ಊರಲ್ಲಿ ಇಳಿಯುವ ಹೊತ್ತಿಗೆ ಕೈಯಲ್ಲೊಂದು ಸಿಗರೇಟ್ ಹಿಡ್ಕೊಂಡು ಬಸ್ ಸ್ಟ್ಯಾಂಡ್ ನ ಉದ್ದಕ್ಕೂ ಅಪ್ಪ ನಡೆದಾಡ್ತಿರುತ್ತಾರೆ.
ಈ ಹೊತ್ತಲ್ಲಿ ಯಾಕೆ ಬಂದ್ಯಪ್ಪಾ ಅಂತ ಕೇಳಿದ್ರೆ ಸುಮ್ನೆ ಬಾರಲೇ‌ ಅಂತ ಬೈದು ಮನೆಗೆ ಕರೆದೊಯ್ತಾರೆ.
ಮನೆಗೆ ಹೋದ ಮೇಲೆ ಯಥಾಪ್ರಕಾರ ನಾನು ಮಲಗ್ತೀನಿ. ಒಂದು ಗಂಟೆ ಸುಮ್ನಿರ್ತಾರೆ ಅಷ್ಟೇ. ಆಮೇಲೆ ಪ್ರತೀ ಅರ್ಧ ಗಂಟೆಗೊಂದ್ಸಲ 'ಎದ್ದೇಳೋ‌ ಪಾಪು, ಕಂದಾ ಎದ್ದೇಳೋ, ಎದ್ದೇಳೋ‌ ಹೈವಾನ್' ಅಂತ ಬಗೆಬಗೆಯಾಗಿ ಎಬ್ಬಿಸಲು ಪ್ರಯತ್ನ ಪಡುತ್ತಿರುತ್ತಾರೆ.
ಅಷ್ಟರಲ್ಲಿ ಅಮ್ಮ ಬಂದು 'ಅಯ್ಯೋ, ಸ್ವಲ್ಪ ಸುಮ್ನಿರಬಾರ‍್ದಾ, ಅಷ್ಟು ದೂರದಿಂದ ಬಂದಿದ್ದಾನೆ. ಪಾಪ, ಮಲಗಲಿಕ್ಕೆ ಬಿಟ್ಟರೆ ಗಂಟೇನು ಹೋಗುತ್ತೆ?' ಅಂತ ಅಪ್ಪನಿಗೆ ದಬಾಯಿಸುತ್ತಿರುತ್ತಾಳೆ.

ಸ್ವಲ್ಪ ಬೆಳಗಾಯ್ತು ಅನ್ನೋ ಹೊತ್ತಿಗೆ ಊರಲ್ಲಿ ಮುಲ್ಲಾ, ಬೀರಪ್ಪ, ಕಾಳಮ್ಮ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಜೋರಾಗಿ ಪ್ರಾರ್ಥನೆ ಶುರು ಮಾಡ್ತಾರೆ. ಅವರ ಆರ್ಭಟ ಎಲ್ಲಾ ಮುಗಿದ ಮೇಲೆ ಅಮ್ಮ ನನಗಿಷ್ಟವಾದ ಭಾವಗೀತೆಗಳನ್ನೋ, ಹಾಡುಗಳನ್ನೋ ಮೆಲ್ಲನೆಯ ದನಿಯಲ್ಲಿ ಪ್ಲೇಯರ್ ಗೆ ಹಾಕುತ್ತಾಳೆ.

ಅಷ್ಟರಲ್ಲಿ ಅಪ್ಪ, ಹೂಂ, ಇನ್ನೂ‌ ಎದ್ದಿಲ್ವೇನೇ‌ ಇವನು ಅಂತ ನಮ್ಮಿಬ್ಬರನ್ನೂ ಕೇಳುತ್ತಾ ಮತ್ತೆ ನನ್ನೆಬ್ಬಿಸಲು ಪ್ರಯತ್ನ ಪಡ್ತಾರೆ. ನಾನು ಮಿಸುಕಾಡೋಲ್ಲ.
ಕಂದಾ, ನಾನೂ‌ ನಿನ್ನ ಜೊತೆಗೆ ಮಲಗ್ತೀನಿ ಕಣೋ ಅಂತ ಆ ಸಣ್ಣ ಮಂಚದ ಮೇಲೆ ನನ್ನನ್ನು ಮೂಲೆಗೆ ದಬ್ಬಿ ತಮ್ಮ ದೈತ್ಯ ದೇಹವನ್ನು ಎತ್ತಿ ಹಾಕಿ ಮಲಗ್ತಾರೆ. ಪುಣ್ಯಾತ್ಮ , ರಾತ್ರಿಯಿಡೀ ಗಡಿಯಾರ ನೋಡೋದೇ‌ ಆಗಿರುತ್ತೆ. ಮಲಗಿದ ಎರಡೇ‌ ನಿಮಿಷಕ್ಕೆ ಗೊರಕೆ ಶುರು ಮಾಡ್ತಾರೆ. ಆ‌ ಸಣ್ಣ ಜಾಗದಲ್ಲಿ ಉಸಿರುಗಟ್ಟಿ, ಗೊರಕೆಯ ಹಿಂಸೆಗೆ ನಾನು ತಡೀಲಾರದೆ ಏಳ್ತೀನಿ. ಅಪ್ಪನಿಗೆ ಚೆನ್ನಾಗಿ ನಿದ್ದೆ, ಗೊರಕೆ ನಡೆದೇ ಇರುತ್ತೆ.

ನಾನು ಕಾಫಿ ಕುಡಿಯುತ್ತಾ ಅಮ್ಮನ ಜೊತೆಗೆ ಮಾತು ಶುರು ಮಾಡ್ತೀನಿ. ಸ್ವಲ್ಪ ಹೊತ್ತಿಗೆ ಯಾವಾಗ್ಲೋ ಎದ್ದು ನಂಗೂ ಸ್ವಲ್ಪ ಕಾಫಿ ಕೊಡೇ‌ ಅಂತ ಅಪ್ಪ ಒಳಗೆ ಬರ್ತಾರೆ.
ಏನು ಮಗನೇ, ಏನು ಸಮಾಚಾರ. ಆಗಿರೋದು ನೋಡಲೇ, ನಾಯಿಗೆ ಹೊಡೆಯೋ‌ ಕೋಲು ತರ ಇದ್ದೀಯಾ. ಸರಿಯಾಗೆ ತಿನ್ನೋ ಮಗನೇ‌ ಅಂತ ಶುರು ಮಾಡ್ತಾರೆ.

ಇನ್ನು ಊರಿಗೆ ತಂಗೀನೂ ಬಂದಿದ್ರೆ ಮುಗಿದೇ‌ ಹೋಯಿತು.
ಮನೆಗೆ ಹೋಗ್ತಿದ್ದ ಹಾಗೆಯೇ ಅಪ್ಪ ನನ್ನ ಮೇಲೆ ತೋರಿಸೋ‌ ವರಸೆಯನ್ನೆಲ್ಲಾ ನಾನು ಅವಳ ಮೇಲೆ ಪ್ರಯೋಗಿಸ್ತೀನಿ. ಮಲಗಿದ್ದೋಳನ್ನ ಬಲವಂತವಾಗಿ ಹೊಡೆದೂ, ತಟ್ಟಿ ಎಬ್ಬಿಸ್ತೀನಿ.
ಅಣ್ಣಾ, ಪ್ಲೀಸ್ ಸುಮ್ನೆರೋ. ಅಮ್ಮಾ ನೋಡಮ್ಮಾ, ಸುಮ್ನಿರೋಕೆ ಹೇಳಮ್ಮಾ ಅಂತ ಅವಳು ಕೂಗಿ, ಅಮ್ಮ ಬಂದು ಏಯ್ ಸುಮ್ನೆರಬಾರ್ದೇನೋ, ಪಾಪದ್ದು ಅದನ್ಯಾಕೆ ಹಿಂಸೆ ಮಾಡ್ತೀಯಾ ಅಂತ ಬೈದ ಮೇಲೆ, ಕೊನೇ ಸಲ ಅಂತ ಅವಳಿಗೆ ಒದ್ದು 'ಹೂಂ ಬಿದ್ಕೋ' ಎಂದು ಹೇಳಿ, ಏನೋ ಸಾಧಿಸಿದೋನ ತರಹ ನನ್ನ ಹಾಸಿಗೆಯ ಕಡೆಗೆ ಮಲಗಲು ನಡೆಯುತ್ತೇನೆ.

ನಾನು ಊರಿಗೆ ಹೋದಾಗ, ಸಾಮಾನ್ಯವಾಗಿ ಅಪ್ಪ ಆಫೀಸಿಗೆ ರಜೆ ಹಾಕಿರುತ್ತಾರೆ.

ಮಧ್ಯಾಹ್ನದವರೆಗೂ‌ ಅಪ್ಪ ಸುಮ್ನಿರ್ತಾರೆ. ಆಮೇಲೆ ಬರ್ತೀಯೇನಲೆ ಹೊಲದ ಕಡೆ ಹೋಗ್ಬರಣಾ ಅಂತ ಕೇಳ್ತಾರೆ.

ನಾನು, ನಡಿ ಅಂತ ಹೊರಡ್ತೀನಿ.

ಊಟದ ಟೈಮಿಗೆ ಸರಿಯಾಗಿ ಹೊರಡ್ತೀರ. ಈಗೇನೂ ಬೇಡ. ಆಮೇಲೆ ಹೋಗಿ. ನೀನು ಹಿಂದುಗಡೆಗೆ ಹೋಗೋದಿದ್ರೆ ಹೋಗಿ, ಸ್ನಾನ ಮಾಡ್ಕೊಂಡ್ ಬಾ. ಬ್ರಹ್ಮ ಶೌಚ ನಿಂದು . ಗಂಟೆಗಟ್ಟಲೆ ಮಾಡ್ತೀಯಾ.. ಅಮ್ಮ ಒಳಗಡೆಯಿಂದ ಇಬ್ಬರಿಗೂ ಬೈಯಲು ಶುರು ಮಾಡ್ತಾಳೆ.

ಅಪ್ಪ - ಆಯ್ತು ಬಿಡವ್ವ ನೀನು ಹೇಳಿದಂಗೇ‌ ಆಗಲಿ.

ಅಮ್ಮ - ಅವ್ವ ಗಿವ್ವ ಅಂದ್ರೆ ಸುಮ್ನಿರಲ್ಲ.

ಅಪ್ಪ ನನ್ಕಡೆ ನೋಡಿ, ನೋಡಲೇ ಹೆಂಗೆ ದಬಾಯಿಸ್ತಾಳೆ ನಿಮ್ಮಮ್ಮ.

ನಾನು- ಹೌದು ಮತ್ತೆ ಸರಿಯಾಗೇ‌ ಹೇಳ್ತಾಳೆ. ನನ್ನ ತಂಗಿಯೂ ದನಿಗೂಡಿಸುತ್ತಾಳೆ.

ಅಪ್ಪ- ನೀವಿಬ್ರೂ ಬಂದಿದ್ದೀರಲ್ಲಾ, ಅವಳಿಗೆ ಎರಡು ಕೊಂಬು ಬಂದ್ಬಿಟ್ಟಿದ್ದಾವೆ. ಮನೆ ಯಜಮಾನ ನಾನು. ಮೂರು ಕಾಸಿನ ಬೆಲೆ ಇಲ್ಲ ನನಗೆ.

ಮುಂದೆ ಮಾತಾಡ್ಲಿಕ್ಕೆ ಹೊಳೀದೇ‌ ಸಿಗರೇಟ್ ಹಚ್ಕೊಂಡ್ ಹೊರಗಡೆ ಹೋಗ್ತಾರೆ.

ಊಟ ಆದ ಮೇಲೆ ತಂಗಿಯಿಂದ ಹಾಡು ಹೇಳಿಸೋ ಕಾರ್ಯಕ್ರಮ.

ಅವಳು ಕಷ್ಟಪಟ್ಟು ಕೀರ್ತನೆ ಹಾಡಿದರೆ, ನಾನು ಥೇಟ್ ಶಂಕರಾಭರಣದ ಶಾಸ್ತ್ರಿಗಳ ಸ್ಟೈಲಲ್ಲಿ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳ್ತಿರ್ತೀನಿ. ಅವಳು ಹಾಡ್ತಾನೇ‌ ನನ್ನನ್ನು ಕಣ್ಣಲ್ಲಿ ಸುಟ್ಟು ಹಾಕ್ತಿರ್ತಾಳೆ. ದೀಪಕರಾಗ ನನ್ನ ಮೇಲೇ ಪ್ರಯೋಗ ಮಾಡಿದ ಹಾಗಿರುತ್ತದೆ.

ಅವಳು, ಕೀರ್ತನೆ, ಸ್ವರ, ಗಮಕ ಎಲ್ಲಾ ಹೇಳ್ತಿರಬೇಕಾದ್ರೆ ಸುಮ್ನೆ ಕಣ್ಮುಚ್ಕೊಂಡ್ ಕೇಳ್ತಾ ಇರಬೇಕು. ಎಲ್ಲೋ ಸ್ವರ್ಗದಲ್ಲಿ ತೇಲುತ್ತಾ ಇದ್ದ ಹಾಗಿರುತ್ತೆ. ಹಾಗಂತ ಅವಳಿಗೆ ಹೇಳಬಾರದು. ಆಮೇಲೆ ನಮಗೆಲ್ಲಿ ಬೆಲೆ ಇರುತ್ತೆ. ನಾನು ಬೈತಿರಬೇಕು, ಅವಳು ಹಾಡ್ತಿರಬೇಕು ಅಷ್ಟೇ.

ಅವಳೆಲ್ಲಾ ಹಾಡಿ ಮುಗಿಸಿದ ಮೇಲೆ, ನಾನು ಆ ಹಾಡಲ್ಲಿ ಶ್ರುತಿ ತಪ್ಪಿದ್ದೆ, ಇದನ್ನು ಹೇಳಬೇಕಾದರೆ ಉಸಿರು ಜಾಸ್ತಿ ಬಿಡ್ತಿದ್ದೆ ಇತ್ಯಾದಿ ಹೇಳಿ ಇನ್ನೊಂದು ಸಲ ಹಾಡಲು ಹೇಳ್ತೀನಿ.

ಅವಳು, 'ಹೋಗೋ! ಅಷ್ಟೇ. ಇನ್ನು ಹೇಳಲ್ಲ.'

ನಾನು ಕಣೇ, ನಿನ್ನಣ್ಣ ಹೇಳ್ತಿದ್ದೀನಿ, ನೀನೀಗ ಹಾಡ್ಬೇಕು ಅಷ್ಟೇ.

'ಹೋಗಲೋ' ಎಂದು ಅವಳು ಏಳ್ತಾಳೆ.

ನಾನು ಏಳೋದಿಕ್ಕೆ ಬಿಡೋದಿಲ್ಲ. ಕೈ ತಿರುಚಿ ಹೊಡೆದು, 'ಹೇಳ್ತೀಯಾ, ಇಲ್ವಾ?'

ಅಪ್ಪಾ‌, ನೋಡಪ್ಪಾ ಹೆಂಗೆ ಹೊಡೀತಾನೆ?

ಯಾವನೋ ಅವನು ನನ್ನ ಮಗಳನ್ನ ಹೊಡೆಯೋದು, ಎಷ್ಟೋ ಧೈರ್ಯ ನಿಂಗೆ? ಹೆಂಗೆ ಹೊಡೆದ್ಯೋ?

ನಾನು ಅಪ್ಪನಿಗೆ ಕಾಣುವ ಹಾಗೆ ಅವಳಿಗೆ ಮತ್ತೆ ಹೊಡೀತೀನಿ, ಅವಳು ಮತ್ತೆ ಕೂಗಿಕೊಳ್ತಾಳೆ.

ನೋಡು, ನಾನು ಸುಮ್ನಿರಲ್ಲ. ಇನ್ನೊಂದ್ಸಲ ಹೊಡೆದ್ರೆ ಅಷ್ಟೇ? ಅಪ್ಪ ಹೇಳ್ತಾರೆ.

ನಾನು ಮತ್ತೆ ಹೊಡೀತೀನಿ.

ಅಷ್ಟೊತ್ತಿಗಾಗಲೇ ಅವಳಿಗೆ ನಮ್ಮಿಬ್ಬರ ಉದ್ದೇಶ ಅರ್ಥ ಆಗಿರುತ್ತೆ. ಅಮ್ಮನ್ನ ಕರೀತಾಳೆ. 'ನೋಡಮ್ಮಾ'

ಸುಮ್ನಿರ‍್ರೋ, ಅವಳನ್ಯಾಕೆ ಗೋಳು ಹುಯ್ಕೋತೀರಾ? ಕುಸುಮ ಕೋಮಲೆ ಅವಳು. ಅಮ್ಮನ ಉವಾಚ.

ನಾನು ಸುಮ್ಮನೆ ಬಿಡ್ತೀನಿ. ಅಮ್ಮ ಕಿಚಾಯಿಸಿದ್ರೂ ಅವಳ ಹತ್ರಾನೇ‌ಹೋಗಿ. 'ನೋಡಮ್ಮಾ ಹೆಂಗೆ ಹೊಡೆದ, ಕೈ ಕೆಂಪಗಾಗಿದೆ'

ಅಯ್ಯೋ ಕಂದಾ, ಎಣ್ಣೆ ತಂದು ಹಚ್ಚಲೇನೇ?

ಹೋಗೇ, ಅಂತ ಬೈಯುತ್ತಾ, ಅವಳು ಅಮ್ಮನ ತೊಡೆ ಮೇಲೆ ಮಲಗುತ್ತಾಳೆ.

ಅಷ್ಟರಲ್ಲಿ, ಅಪ್ಪ ನನ್ನ ಕಡೆ ನೋಡುತ್ತಾ ಅಮ್ಮನಿಗೆ ಕಾಫಿ ಮಾಡಲು ಹೇಳು ಎಂದು ಕಣ್ಸನ್ನೆ ಮಾಡ್ತಿರುತ್ತಾರೆ. ನಾನು ಇಲ್ಲ ಎಂದು ಹೇಳ್ತೀನಿ. ಸ್ವಲ್ಪ ಹೊತ್ತು ನಮ್ಮ ದೃಷ್ಟಿ ಯುದ್ಧ ನಡೆದ ಮೇಲೆ ಅಪ್ಪ ಎದ್ದು ಹೇಳ್ತಾರೆ. 'ನಾನೇ‌ ಕಾಫಿ ಮಾಡ್ತೀನಿ. ನಿಂಗೂ‌ ಬೇಕೇನೋ? '

ಅಮ್ಮಂಗೆ ಅರ್ಥ ಆಗುತ್ತೆ.

ಊಟ ಆಗಿ ಇನ್ನೂ ಸ್ವಲ್ಪ ಹೊತ್ತಾಗಿಲ್ಲಪ್ಪ. ಆಗಲೇ ಕಾಫಿ. ಅದೆಷ್ಟು ಕುಡೀತೀರೋ? ಎದ್ದು ಅಡಿಗೆ ಮನೆಗೆ ಹೋಗ್ತಾ ನನ್ನ ಕಡೆಗೆ ತಿರುಗಿ 'ನಿಂಗೂ‌ ಬೇಕೇನೋ'

ನಾನು ಮಳ್ಳನ ತರಹ, 'ಸ್ವಲ್ಪ ಕೊಡು'

ಕಾಫಿ ಕುಡಿದು ನಾವಿಬ್ರೂ ಅಪ್ಪ ಮಗ ಹೊಲಕ್ಕೆ ಹೊರಡ್ತೀವಿ.

ಬೈಕ್ ಹತ್ತಿ ಹೋಗ್ತಿರಬೇಕಾದ್ರೆ ಊರಿನ ಎಲ್ಲಾ ಸುದ್ದಿಗಳೂ ಒಂದ್ಸಲ ಬಂದು ಹೋಗ್ತಾವೆ. ಹೊಲಕ್ಕೆ ಹೋದ ಮೇಲೆ, ಪೂರ್ತಿಯಾಗಿ ಅಲ್ಲಿಯದೇ ವಿಷಯ. ಅಪ್ಪ ಹೇಳ್ತಾನೇ ಹೋಗ್ತಾರೆ.

ಇದೇ ಕೊನೆ ಬೆಳೆ, ಮುಂದಿನ ಸಲಕ್ಕೆ ಬಾಳೆ ತೆಗಿಸಿಬಿಡ್ತೀನಿ. ಅಡಿಕೆಗೆ ಬೆಳೆಯೋದಿಕ್ಕೆ ಅನುಕೂಲವಾಗುತ್ತೆ.

ಇನ್ನೂ ಮೂರು ವರ್ಷ ಬೇಕಲ್ವೇನಪ್ಪಾ?

ಹೌದು ಮಗನೇ, ಕಾಯಬೇಕು. ನಿನ್ನ ಆಫೀಸಿನ ವಿಷಯ ಹೇಳಪ್ಪಾ, ಏನಾಯ್ತು. ಮೊನ್ನೆ ಅವಾರ್ಡ್ ಕೊಟ್ರಲ್ಲ, ಆಮೇಲೆ ದುಡ್ಡೇನಾದ್ರೂ ಜಾಸ್ತಿ ಮಾಡಿದ್ರಾ?

ಇಲ್ಲ ಕಣಪ್ಪಾ, ಅದು ಹಾಗಲ್ಲ.

ಏಯ್, ಬಿಡೋ ಅದೇನು ಕಂಪನೀನೋ, ಅಷ್ಟು ವರ್ಷದಿಂದ ಕೆಲಸ ಮಾಡ್ತಿದ್ದೀಯಾ. ಒಂದು ಅವಾರ್ಡ್ ಕೊಟ್ಟು ಹಂಗೇ ಬಿಟ್ತಾರೇನೋ? ನಿನ್ನ ಮ್ಯಾನೇಜರ್ ಫೋನ್ ನಂಬರ್ ಕೊಡು. ನಾನು ಮಾತಾಡ್ತೀನಿ.

ನೀನು ಸುಮ್ನಿರಪ್ಪಾ. ಚೆನ್ನಾಗಿ ಕೆಲಸ ಮಾಡ್ತೀವಿ ಅಂತ ಗುರುತಿಸ್ತಾರಲ್ಲಾ, ಅಷ್ಟು ಸಾಕು.

ಹೀಗೇ ಮಾತಾಡ್ತಾ, ಹೊಲಕ್ಕೆ ಒಂದು ಸುತ್ತು ಬಂದಿರುತ್ತೀವಿ. ಸಂಜೆ ಆಗ್ತಾ ಬಂದಿರುತ್ತೆ, ಮನೆಗೆ ಹೊರಡ್ತೀವಿ.

ಸಂಜೆಯಿಂದ ಮನೆಯಲ್ಲೇ ಇರೋದರಿಂದ, ಸ್ವಲ್ಪ ಅನಾನುಕೂಲ. ಅಪ್ಪ ಅಮ್ಮ ಯಾವಾಗ ಬೇಕಾದರೂ ನನ್ನ ಮದುವೆಯ ವಿಷಯ ಎತ್ತುತ್ತಾರೆ.

ನೋಡು ನಿನ್ನ ವಾರಿಗೆಯವರೆಲ್ಲಾ ಮದುವೆಯಾಗ್ತಿದ್ದಾರೆ. ನಿಂಗೇನು ಧಾಡಿ. ಇಬ್ಬರಲ್ಲಿ ಯಾರು ಮಾತಾಡಿದರೂ‌ ಒಂದೇ ಧ್ವನಿ.

ಅದು, ಹಂಗಲ್ಲ. ಇಷ್ಟು ಬೇಗ ಯಾಕೆ ಅಂತ.

ನೋಡಪ್ಪಾ, ನಿನ್ನ ಕೈಲಿ ಸಾಕೋದಿಕ್ಕಾಗಲ್ಲಾ ಅಂತ ಹಾಗೆ ಹೇಳ್ತೀಯಾ ಅನ್ನೋದಾದ್ರೆ, ಸೊಸೇನಾ, ನಾವು ಸಾಕ್ತೀವಿ. ನಿನ್ನ ಕೈಲಿ ಯಾವಾಗಾಗುತ್ತೋ ಅವಾಗ ಬಂದು ಕರೆದುಕೊಂಡು ಹೋಗು.

ನನಗೆ ಈ ವರಸೆಗಳೆಲ್ಲಾ ಚೆನ್ನಾಗಿ ಗೊತ್ತಿರೋದರಿಂದ. ಹೊಲದಿಂದ ವಾಪಸ್ ಬರುವಾಗಲೇ ರಾತ್ರಿ ಸೆಕೆಂಡ್ ಶೋ‌ ಸಿನಿಮಾಗೆ ಹೋಗಲು ಯಾರನ್ನಾದರೂ ಒಪ್ಪಿಸಿ ಬಂದಿರ್ತೀನಿ. ಅವರು ಬಂದು ನನ್ನ ಹೆಸರು ಕೂಗಿದರೂಂದರೆ ತಕ್ಷಣಕ್ಕೆ ಮನೆಯಿಂದ ಠಣ್ ಅಂತ ನೆಗೆದು ಸಿನಿಮಾಗೆ ಓಡಿ ಬಿಡ್ತೀನಿ.

ಮರುದಿನ ಮತ್ತೆ ಎಲ್ಲಾ ಯಥಾಪ್ರಕಾರ...

ಕಣ್ಣು ಮುಚ್ಚಿ ತೆಗೆಯುವುದರೊಳಗೆ ರಜೆ ಮುಗಿದು ವಾಪಸ್ ಹೊರಡೋ ಸಮಯ ಬಂದಿರುತ್ತೆ. ಎಲ್ಲರೂ ಬಸ್ ಸ್ಟ್ಯಾಂಡ್ ಗೆ ಬರುತ್ತಾರೆ.

ನೀನು ಇನ್ನೂ ಬಂದಿಲ್ಲಾ ಅಂದರೆ, ನಾಳೆ ಬರ್ತೀಯಾ, ಇವತ್ತು ಬರ್ತೀಯಾ ಅಂತ ಆಸೆಯಿಂದ ಕಾಯ್ತಿರ್ತೀವಿ. ಬಂದ ಮೇಲೆ ಸಂಕಟ ಆಗುತ್ತೆ ಕಣೋ. ನಾಳೆ ‌ ಈ ಹೊತ್ತಿಗೆ ನೀನು ಆಗಲೇ ಹೊರಟು ಹೋಗ್ತೀಯಾ ಅಂತ ಬೇಜಾರಾಗುತ್ತಿರುತ್ತೆ. ನೀನು ಇಲ್ಲದಿದ್ದಾದ ಇಲ್ಲಾ ಅನ್ನೋ ಸಂಕಟ, ಇದ್ದಾಗ ಹೊರಟು ಹೋಗ್ತೀಯಾ ಅನ್ನೋ ಸಂಕಟ. ಇಲ್ಲೇ ಯಾವುದಾದ್ರೂ ಕೆಲಸ ಮಾಡ್ಕೊಂಡ್ ಇರಬಾರ್ದೇನೋ?

ನಾನು ಮಾತಾಡೋಲ್ಲ. ಬಸ್ ಬಂದ ತಕ್ಷಣ ಅವರಿಗೆಲ್ಲಾ ಟಾಟಾ‌ಮಾಡಿ ಹೊರಟು ಬಿಡ್ತೀನಿ.

ಈ ರಾತ್ರಿ ಅದೆಲ್ಲಾ ಮತ್ತೆ ಮತ್ತೆ ನೆನಪಾಗ್ತಿದೆ. ಬೇರನ್ನೆಲ್ಲೋ‌ ಬಿಟ್ಟು ಬಳ್ಳಿ ಮತ್ತೆಲ್ಲೋ ಹಬ್ಬಲು ಯತ್ನಿಸಿದಂತೆ ನಾನೆಲ್ಲೋ‌ ಒಂದು ಕಡೆ ನನ್ನವರೆಲ್ಲೋ ಒಂದು ಕಡೆ.

ಈ‌ ರಾತ್ರಿ ಲೇಟಾಗಿ ಮಲಗಿದೆನೆಂದು ಗೊತ್ತಾದರೆ, ಫೋನಲ್ಲಿ ಉಪದೇಶ 'ಹಾಗೆ ಮಾಡ್ಬೇಡ್ವೋ, ಮೊದಲೇ ಕಂಪ್ಯೂಟರ್ ಕೆಲಸ. ಮನೆಗೆ ಬಂದಮೇಲೂ ಅದನ್ನೇ ಮಾಡ್ತೀಯಾ, ಕಣ್ಣಿಗೆ ಸ್ವಲ್ಪ ರೆಸ್ಟ್ ಕೊಡೋ. ಆಮೇಲೆ ದಪ್ಪ ಕನ್ನಡಕ ಹಾಕ್ಕೋ ಬೇಕಾಗುತ್ತೆ. ಮದುವೆಯಾಗೋದಕ್ಕೆ ಹುಡುಗಿಯರು ಒಪ್ಪಲ್ವೋ'

Tuesday, January 12, 2010

ಆಸೆ

ಜಗವೆಲ್ಲಾ ಮಲಗಿರಲು
ಒಲವಿನ ಅಲೆ ಬೀಸುತಿರಲು
ಪ್ರೀತಿಯೇ‌ ಮೈಯಾಗಿ ಹುಟ್ಟುವ
ಮುಂಜಾನೆಯ ಮುತ್ತಿನ ಹುಟ್ಟು
ನೋಡುವ ಆಸೆ

ಒಲವಿನ ಅರಮನೆಯಲ್ಲಿ
ಗಾನಸುಧೆ ಹರಿದಿರಲು
ಅರಿವೇ ಇಲ್ಲದಿರಲು
ಆ ಸಂಗೀತದ ಅಲೆಯಲ್ಲೊಂದು
ಕಂಪನವಾಗುವ ಆಸೆ

ಪ್ರೀತಿಯ ಶಕ್ತಿಗೆ ಮರುಳಾಗಿ
ನಡೆವ ಪ್ರತಿ ಹೆಜ್ಜೆಯೂ‌ ಕವಿತೆಯಾಗಿ
ಜಗವೆಲ್ಲಾ‌ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ

ಹೊಸತೆಲ್ಲವನ್ನೂ‌ ಬಯಸುತಿರಲು
ಯುಗಗಳೆಲ್ಲಾ ಕ್ಷಣಗಳಾಗಿರಲು
ಜಗವೇ‌ ಅಂಗೈಯಲಿರಲು
ಮಾಯಾಮೃಗದ ಬೆನ್ನೇರಿ ಓಡುವ ಆಸೆ

ಹುಡುಗು ಕಣ್ಣಿಗೆ ಎಲ್ಲವೂ‌ ಕೌತುಕವಾಗಿರಲು
ಕಂಡದ್ದರ ಹಿಂದೆ ಕಾಣದ್ದನ್ನು ಹುಡುಕುತಿರಲು
ರಾತ್ರಿ ಬೆಳಕೆಂಬ ಆಟವಾಡುವ
ಸೂರ್ಯನ ಬೆನ್ನತ್ತುವ ಆಸೆ

ಜೀವನದ ಪ್ರತಿ ಪುಟದಲ್ಲೂ
ಹೊಸ ಜಾಗ ಕಂಡಿರಲು
ಹೊಸ ಅಲೆ ಹೊರಟಿರಲು
ಆ ಅಲೆಯ ಜಾಡು ಹಿಡಿದು
ದಿಗಂತದೆಡೆಗೆ ಹೋಗುವ ಆಸೆ

Wednesday, January 6, 2010

ಅವನಿರಬೇಕಿತ್ತು ಇಂದು

ಕುಣಿದು ಕುಪ್ಪಳಿಸುವಾಗ
ಹುಚ್ಚೆದ್ದು ನಗುವಾಗ
ಊರೂರು ಅಲೆಯುವಾಗ
ಅವನೆಲ್ಲೋ ನಕ್ಕಂತೆ ಭಾಸ

ಬೀಸಿ ಬಂದ ಗಾಳಿ
ತಂದು ಸವರಿದ್ದು ಅವನುಸಿರಾ
ಇಲ್ಲವೇ ಅವನ ನೆನಪಾ

ಥಿಯೇಟರಿನೆದುರು ನಿಂತು
ಟಿಕೇಟು ನೀ ತೆಗೆಸು
ಎಂದು ಜಗಳವಾಡುತ್ತಿರುವಾಗ
ಅವನಿದ್ದಿದ್ದರೆ ಅವನಿಗೊಂದು
ತೆಗೆಸಬೇಕಿತ್ತಲ್ಲವೇ ಎಂಬ ನೆನಪು
ರಿಟರ್ನ್ ಟಿಕೆಟ್ ತೆಗೆಸದೇ
ಊರಿಗೆ ಹೊರಟು ಹೋದ ಪಾಪಿ

ಪ್ರತೀ ಹುಟ್ಟುಹಬ್ಬಕ್ಕೆ
ಒದೆ ತಿನ್ನುವಾಗಲೂ ನೆನಪಾಗುತ್ತಾನೆ
ಅವನಿಗೆ ಕೊಡಬೇಕಾದವು ಇನ್ನೂ ಹಾಗೇ ಉಳಿದಿವೆ
ಎದುರಿಗೆ ಸಿಕ್ಕರೆ ಎಲ್ಲರದೂ ಸೇರಿಸಿ
ಬಾಕಿ ತೀರಿಸುತ್ತೇನೆ
ಪಾರ್ಟಿ ಕೊಡಲು ಹೆದರಿ ಓಡಿಹೋದನೇನೋ

ಒಬ್ಬೊಬ್ಬರದೇ ಮದುವೆಯಾದಾಗ
ಸದ್ದಿಲ್ಲದೇ ಹಿಂಡು ಖಾಲಿಯಾದಾಗ
ಮರೆಯಲ್ಲಿ ನಿಂತು ನಗುತ್ತಿರುತ್ತಾನೇನೋ
ಅವನಿಷ್ಟು ಬೇಗ ಮದುವೆಯಾಗುತ್ತಿದ್ದನೇ?
ಊಹೂಂ, ಇರಲಿಕ್ಕಿಲ್ಲ

ಕನಸುಗಳೆಷ್ಟಿದ್ದವು
ಹಂಚಿಕೊಳ್ಳಲು, ಪೂರೈಸಲು
ಜೊತೆನಿಂತು ಬೆನ್ನಿಗೆ ಗುದ್ದಲು
ನಾವಿರಲಿಲ್ಲವೇ
ಅದಾರು ಸಿಕ್ಕಿಹರು ನಿನಗಲ್ಲಿ
ಇರಲಿ ಬಿಡು,
ಅಲ್ಲಿಗೆ ಬಂದಾಗ ಗುರುತು ಹಿಡಿದು ನೆನೆಸು

ಅವನ ಬಗ್ಗೆ ಒಂದು ಕವನ
ಬರೆದಿದ್ದು ತಿಳಿದರೆ ಬಿದ್ದು ಬಿದ್ದು ನಕ್ಕಾನು
ಅಪಹಾಸ್ಯ ಮಾಡಲಿಕ್ಕಾದರೂ ಅವನಿರಬೇಕಿತ್ತು

Sunday, January 3, 2010

ಕಡಲ ತೀರದ ಪ್ರತಿಮೆಗಳು





ಕಡಲ ತಡಿಯಲ್ಲಿ
ಹಾಲು ಬೆಳದಿಂಗಳು
ಉಕ್ಕುವ ತೆರೆ, ಚೆಲ್ಲಿದ ನೊರೆ
ಬೆಕ್ಕಸ ಬೆರಗಾದ ಕಂಗಳು

ಮನದೊಳವಿತಿದ್ದ ಬಾಲ್ಯ
ಮೆಲ್ಲನೆ ಹೊರಬಿದ್ದು
ಎವೆಯಿಕ್ಕುವಷ್ಟರಲ್ಲಿ
ಉಸುಕಲ್ಲಿ ಉರುಳಾಡಿ
ಅಲೆಯಲ್ಲಿ ಹೊರಳಾಡಿ
ಗಹಗಹಿಸಿ ನಕ್ಕಿತು

ಸ್ವಚ್ಛ ಹುಣ್ಣಿಮೆಯಲ್ಲಿ
ಹುಚ್ಚು ಅಲೆಗಳ ಮೇಲೆ
ತೇಲಿತ್ತು ಮನಸು
ದೂರದಲಿ ಹೊರಟಿದ್ದ
ನಾವೆಯ ಮೇಲೆ ನೆಟ್ಟಿತ್ತು ಕನಸು

ನೀರವ ತೀರದಲಿ
ಬೀಸುವ ಗಾಳಿಯಲಿ
ಅಲೆದಾಡಿದ ಭಾವನೆಗಳ ನಡುವೆ
ಕಾಲನ ಗಡಿಯಾರದಲ್ಲೊಂದು
ಮುಳ್ಳು ಮೆಲ್ಲನೆ ಮುಂದೆ ಸರಿದಿತ್ತು





ವೈಧವ್ಯದ ವಾಸನೆಯೋ ಏನೋ
ಬಿಳೀ ಬಟ್ಟೆ ಹೊದ್ದು, ಅಲ್ಲಲ್ಲಿ ಕೆದರಿ
ಬೋರಲು ಬಿದ್ದ ತೀರ

ವಾರಿಧಿಯ ಕಳವಳ
ದಡಕಪ್ಪಳಿಸಿ ನೊರೆ ನೊರೆ ವೇದನೆ
ಹೆಜ್ಜೆ ಗುರುತುಳಿಸದಷ್ಟು ಆಕ್ರೋಶ
ತೀರದ ತುಂಬಾ

ಬೀಸಿದ ಚಳಿಗಾಳಿಯಲಿ
ತಣ್ಣನೆಯ ಕ್ರೌರ್ಯ
ಯಾರ ಮೇಲಿನ ಸಿಟ್ಟು
ಹೊಟ್ಟೆಯಲ್ಲಡಗಿದೆಯೋ

ದೂರ ದೂರಕೂ ಬರಿಯೇ ನೀರು
ಅಲ್ಲೆಲ್ಲೋ ಜಾರಿಬಿದ್ದ ಮುಗಿಲು
ದಡದಿಂದ ದಡಕ್ಕೆ ಅದೆಷ್ಟು ಯೋಜನ
ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೇ ಯಾನ

Tuesday, December 29, 2009

ಹೊಸ ವರ್ಷಕ್ಕೊಂದು ಕಿಚಡಿ

ವರ್ಷದ ಕೊನೆಗೊಂದು ಭರ್ಜರಿ ಲೇಖನ ಬರೆಯೋಣ ಅಂತ ಹೊರಟವನು, ಏನು ಬರೆಯೋದಕ್ಕೂ ತಿಳಿಯದೆ ಏನೇನೋ ಗೀಚ್ಹಾಕ್ಬಿಟ್ಟೆ. ( ಏಳು ಸುತ್ತಿನ ಕೋಟೆ ಚಿತ್ರದ ಏನೋ ಮಾಡಲು ಹೋಗಿ.. ಹಾಡು ನೆನೆಪಿಸಿಕೊಳ್ಳಿ )

ಹಳೇ ಸಿನಿಮಾಗಳಲ್ಲಿ ತೋರಿಸುವಂತೆ, ಬರೆದು ಬರೆದು ಸಮಾಧಾನವಾಗದೆ ಹರಿದು ಎಸೆಯುತ್ತಾರಲ್ಲ, ಹಾಗೆ ಮಾಡ್ಬೇಕಿತ್ತು ಆದ್ರೆ ನಾನು ಮಾಡ್ಲಿಲ್ಲ. ನಾನು ಸ್ವಲ್ಪ different. ಯಾವ್ಯಾವ ರೀತಿಯಲ್ಲಿ ಬರೀಬೇಕು ಅಂತ ಹೊರಟಿದ್ದೆನೋ ಅವುಗಳನ್ನೆಲ್ಲಾ ಹಾಗೇ ನಿಮ್ಮ ಮುಂದಿಡ್ತಾ ಇದ್ದೀನಿ. ಓದೋ ಕಷ್ಟ ನಿಮ್ದು. ನಿಮ್ಮಲ್ಲಿ ಯಾರಿಗಾದರೂ ಈ ರೀತಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನನಗಿದು ಮೊದಲ ಸಲ. ಕೆಟ್ಟದಾಗದ್ರೂ ಸರಿ, ಬರೆದು ಮುಗಿಸ್ತಿದ್ದೆ. ಆದರೆ ಈ ಸಲ ಭಯಂಕರವಾಗಿ ಬರೀಬೇಕು ಅಂತ ಹೊರಟು ಏನೂ ಆಗ್ಲಿಲ್ಲ.

Trust me on this, this article looks just like me. Haphazard, confused and lost!

Well, here you go :)

***
1

ನಡೆದದ್ದೇ ಹಾದಿ ಎಂಬಂತೆ ಬಿಡು ಬೀಸಾಗಿ ಹೆಜ್ಜೆ ಹಾಕುತ್ತಾ ವರ್ಷದ ಕೊನೆಗಾಗಲೇ ಬಂದಾಗಿದೆ.
ಮನೆಯಲ್ಲಿ ನಿನಗಿನ್ನೂ ಹುಡುಗುಬುದ್ಧಿ ಹೋಗಿಲ್ಲ ಅನ್ನುವ ಹೊತ್ತಿಗೇ ಆಫೀಸಿನಲ್ಲಿ ನೀವು ಈ ಸಮಯದಲ್ಲಿ ಊರಿಗೆ ಹೋಗಲೇಬೇಕಾ ಎಂದು ಕೇಳುತ್ತಿದ್ದಾರೆ.
ಅರ್ಥ ಇಷ್ಟೇ, ನನಗಿನ್ನೂ ಜವಾಬ್ದಾರಿ ಬಂದಿಲ್ಲ. ( at least ಅವರು ಬಯಸುವಷ್ಟು )
ಯಾಕೆ ಬಂದಿಲ್ಲ? ದಿನಾ ಬೆಳಗ್ಗೆ ಸ್ವತಃ ನಾನೇ, ಅಲಾರಾಂ ಇಟ್ಟುಕೊಳ್ಳದೆ , ಎದ್ದು ಯಾರಿಂದಲೂ ಹೇಳಿಸಿಕೊಳ್ಳದೆ ತಯಾರಾಗುತ್ತೇನೆ. ಒಂದೆರಡು ಗಂಟೆಯ ವ್ಯತ್ಯಾಸವಾದ್ರೂ ಪ್ರತಿದಿನ ತಪ್ಪದೇ ಆಫೀಸಿಗೆ ಹೋಗುತ್ತೇನೆ.

***
2

ಇನ್ನೂ ನಿನ್ನೆ ಮೊನ್ನೆ ಹೊಸವರ್ಷವನ್ನು ಸ್ವಾಗತಿಸಿದಂತಿರುವಾಗಲೇ, ವರ್ಷ ಮುಗಿದಾಗಿದೆ. ಇನ್ನೊಂದೆರಡು ದಿನ ಬೆಚ್ಚಗೆ ಹೊದ್ದು ಮಲಗಿದರಾಗಲೇ ಮತ್ತೊಂದು ವರ್ಷ.
ಸಮಯ ಅದು ಹೇಗೆ ಓಡುತ್ತದಲ್ಲವೇ? ಈ ಮುನ್ನೂರು ಚಿಲ್ಲರೆ ದಿನಗಳಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನು ನೋಡಿದ್ದೇವೆ. ಇಂದಿರೆಯ ಹತ್ಯೆಯಾಗಿ ಇಪ್ಪತ್ತೈದು ವರ್ಷ. ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ಕ್ರಿಕೆಟ್ ನಿಂದ ದುಡ್ಡು ಮಾಡಲು ಶುರುಮಾಡಿ ಇಪ್ಪತ್ತು ವರ್ಷ. ಮುಂಬಯಿಯ ನರಮೇಧಕ್ಕೂ ಆಗಲೇ ಒಂದು ವರ್ಷ. ಹಾಂ, ಮಹಾಪ್ರಳಯಕ್ಕಿನ್ನೆರಡೇ ವರ್ಷ!.

***
3
ಹ್ಮ್, ಇಂಗ್ಲೀಷಲ್ಲೂ ಒಂದ್ ಕೈ ನೋಡೇ ಬಿಡಣ ಅಂತ ಹೊರಟೆ

I'm not gonna say that this year has been fantastic, may the coming one be better than this. We've achieved a lot in this year, but still there are a lotta things to do blah blah blah...

For me, this one was just like any other year in my life so far. Charming, challenging, with lot of unexpected twists n turns, and funny with a little dark shadow to it. I saw this year become a fine lady from a small girl. Well, it's already the time to hug another silly little girl now. Ah, she's standing there at the doorstep already, staring at me with her cute little face and a wicked smile on her lips. Dunno what her plans for me are, but I'm gonna love her just like how I've loved all my twenty odd ex-girlfriends. Hey! a little patience darling, I'll catch up with you soon.

ಇಲ್ಲಿಗೆ, ಇದನ್ನು ಇನ್ನು ಮುಂದುವರೆಸಬಾರದು ಅಂತ, ಪ್ರಯತ್ನ ಮಾಡೋದನ್ನ ಕೈಬಿಟ್ಟೆ :(

***

ಈ ಬಾರಿ, ಸಮುದ್ರ ತೀರವೊಂದಕ್ಕೆ ಹೊಸ ವರ್ಷವನ್ನು ಸ್ವಾಗತಿಸಲು, ಎಂದಿನಂತೆ ಕಪಿ ಸೈನ್ಯದೊಂದಿಗೆ ತೆರಳುತ್ತಿದ್ದೇನೆ. ( ಬ್ರಹ್ಮಚಾರೀ ಶತಮರ್ಕಟ ಅಂತ ಅಪ್ಪ ಹೇಳ್ತಾ ಇದ್ರು. ನಾವೊಂದು ಹದಿನೈದಿಪ್ಪತ್ತು ಜನ ಮದುವೆಯಾಗದವರು ಅಲ್ಲಿಗೆ ಹೋಗ್ತಾ ಇದ್ದೀವಿ, ಅಲ್ಲಿ ಏನಾಗುತ್ತೋ !)
ನನ್ನ ಬಹುಪಾಲು ಗೆಳೆಯರ ಪಾಲಿಗೆ ಬಹುಶಃ ಇದೇ ಕೊನೆಯ bachelors' party ಆಗಬಹುದು.
ಕೆಲವರ ಸ್ವಾತಂತ್ರ್ಯ ಹರಣಕ್ಕಾಗಲೇ ಮಸಲತ್ತು ನಡೆಯುತ್ತಿರುವ ಬಗ್ಗೆ ವರದಿ ಬಂದಿದೆ. And it seems they're happy about the life sentence!

ನಾಳೇನೇ ಊರಿಗೆ ಹೋಗ್ತಿರೋದರಿಂದ ನಿಮಗೆಲ್ಲರಿಗೂ in advance, new year wishes.
ಹೊಸ ವರ್ಷ ನಿಮ್ಮೆಲ್ಲರಲ್ಲಿ ಹೊಸ ಕನಸುಗಳನ್ನು ಬಿತ್ತಲಿ. May you see all your dreams blossom in the coming year.

P.S. : As a new year gift, I promise you that I won't post another one like this :)

Sunday, December 20, 2009

ಅಲ್ಲಿ ಪರ್ವತ ಪವಡಿಸಿತು!

ಈ ಸರಣಿಯಲ್ಲಿ ಬಂದ ಮೊದಲ ಕಥೆಯನ್ನು ಬರೆದಷ್ಟೇ ಆಸ್ಥೆಯಿಂದ ಇದನ್ನೂ ಕನ್ನಡಕ್ಕೆ ತಂದಿದ್ದೇನೆ.
ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದರೆ ಸಿಗುವ ಸಂತೋಷವೇ ಬೇರೆ. ಅದೇ ಕಾರಣಕ್ಕೆ ಸ್ವಲ್ಪ ದೊಡ್ಡದಾದರೂ ಒಂದೇ ಕಂತಿನಲ್ಲಿ ಇದನ್ನು ನಿಮ್ಮ ಮುಂದಿಡುತ್ತಿದ್ದೀನಿ. ಓದುವ ಖುಶಿ ನಿಮ್ಮದಾಗಲಿ. ನಿಮಗನ್ನಿಸಿದ್ದನ್ನು ತಿಳಿಸಿದರೆ ನನಗೂ ಖುಶಿಯಾಗುತ್ತೆ. :)
----------------------------------------------------------------------


ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಊರಿನ ಬೆಳಗು ಅವನಿಗೆ ಹಿಡಿಸಿತು.

ಊರು ಶುರುವಾಗ್ತಾ ಇದ್ದ ಹಾಗೇ ಅರಳಿಮರ ಇತ್ತು. ಕಟ್ಟೆ ಕೂಡ ಇತ್ತು. ಅಲೆಮಾರಿಗೆ ಯಾವ ಹಂಗು, ಅಲ್ಲೇ ಕುಳಿತ. ಹಾಗೇ ಮುಂಜಾನೆಯ ಸೊಬಗನ್ನು ಸವಿಯಲು ಶುರು ಮಾಡಿದ.

ಕುಳಿತಲ್ಲಿಂದಲೇ ತಲೆ ಮೇಲಕ್ಕೆತ್ತಿದ. ಎದುರಿಗೇ ಅದೆಷ್ಟೂ ಎತ್ತರಕ್ಕೆ ಪರ್ವತವೊಂದು ಹಬ್ಬಿತ್ತು. ದಟ್ಟವಾಗಿ ಬೆಳೆದ ಮರಗಳು. ಹೆಸರೇ ಗೊತ್ತಿಲ್ಲದ ಪಕ್ಷಿಗಳು. ಮರದಿಂದ ಮರಕ್ಕೆ ಹಾರಿ ಕೂತ್ಕೊಳ್ತಿದ್ದ ಬೆಳ್ಳಕ್ಕಿಗಳು. ತುಂಬಾ ಸೊಗಸಾಗಿದೆ ಅಂತ ಯೋಚಿಸುವಷ್ಟರಲ್ಲೇ ಇದ್ದಕ್ಕಿದ್ದಂತೆ ಮಂಗಗಳು ಅಸಾಧ್ಯ ದನಿಯಲ್ಲಿ ಕೂಗತೊಡಗಿದವು.

ಅಚ್ಯುತನಿಗೆ ರಸಭಂಗವಾಗಿ ದಿಕ್ಕಿನೆಡೆಗೇ ನೋಡಿದ. ಸ್ವಲ್ಪ ಹೊತ್ತಿಗೆ ಮುಂಚೆ ನೋಡಿದ ಜಾಗದಲ್ಲಿ ಆಗಲೇ ಒಂದು ಕಮಾನು ಎದ್ದಿತ್ತು. ಗುಡ್ಡ ತಾನಾಗಿ ಮೇಲೆದ್ದಿದೆಯೇನೋ ಅನ್ನೋ ಹಾಗೆ ಭೂಮಿ ತುಸು ಮೇಲೆದ್ದು ಗುಡ್ಡದ ತುದಿಯಲ್ಲಿ ಒಂದು ತೂತಾಗಿತ್ತು.
ಅದನ್ನೇ ನೋಡ್ತಾ ಕುಳಿತುಬಿಟ್ಟ.
ಸ್ವಲ್ಪ ಹೊತ್ತಿನ ನಂತರ ಅದು ದಿಢೀರ್ ಅಂತ ಮಾಯವಾಗ್ಬಿಟ್ತು. ಅವನಿಗೆ ಅಚ್ಚರಿಯಾಯ್ತು, ಆದರೆ ಇಂಥದ್ದನ್ನೆಲ್ಲಾ ತುಂಬಾ ನೋಡಿದ್ದನಾದ್ದರಿಂದ ಭಯಪಡಲಿಲ್ಲ.

ಅವನಿಗೆ ಬುದ್ಧಿ ತಿಳಿದಾಗಿನಿಂದಲೂ ಅವನು ಅಘೋರಿಗಳ ಗುಂಪೊಂದರಲ್ಲಿ ಇದ್ದ. ಅವರು ಹೇಳಿದ ಪ್ರಕಾರ, ಅವನು ಕೇವಲ ಮೂರು ದಿನದ ಕೂಸಿದ್ದಾಗ ಅವರು ಅವನನ್ನು ಎತ್ತಿಕೊಂಡು ಬಂದಿದ್ದರು. ತಾರುಣ್ಯಕ್ಕೆ ಬರುವವರೆಗೂ ಅವರ ಜೊತೆ ಇದ್ದ ಅವನು ಸಾಕಷ್ಟು ತಂತ್ರವಿದ್ಯೆಯನ್ನು ಕಲಿತಿದ್ದ. ಒಂದು ದಿನ ಬದುಕು ಬೇಸರವಾಗಿ ಹಿಮಾಲಯಕ್ಕೆ ನಡೆದಿದ್ದ. ವರ್ಷಗಳ ಕಾಲ ಹಿಮಾಲಯದಲ್ಲಿ ಅಲೆದವನು ಪೂರ್ತಿಯಾಗಿ ಬದಲಾಗಿದ್ದ. ಅವನೀಗ ಅಘೋರಿಯಾಗಿರಲಿಲ್ಲ, ಸನ್ಯಾಸಿಯಾಗಿರಲಿಲ್ಲ, ಬದಲಾಗಿ ಅವನೀಗ ಅವನೇ ಆಗಿದ್ದ. ಬದುಕನ್ನು ಅಮಿತ ಅಚ್ಚರಿಯಿಂದ ನೋಡುತ್ತಲೇ ಅದರ ಹಂಗು ತೊರೆದವನಾಗಿದ್ದ. ಅವನಿಗಾಗಲೇ ಸಾಧುವೊಬ್ಬನ ಮುಖಲಕ್ಷಣ ದೊರಕಿತ್ತು. ಕಣ್ಣುಗಳು ತಾವರೆ ಕೊಳದಂತೆ ಪ್ರಶಾಂತ. ಎದುರಿಗೆ ಬಂದವರ್ಯಾರೂ ಒಮ್ಮೆ ನಮಸ್ಕಾರ ಮಾಡದೆ ಮುಂದೆ ಹೋಗುತ್ತಿರಲಿಲ್ಲ.

ಕಮಾನು ನೋಡಿದ ನಂತರ ಅಚ್ಯುತ ಅಲ್ಲಿಂದ ಎದ್ದು ಊರೆಡೆಗೆ ನಡೆದ.

ಊರು ಮುಟ್ತಿದ್ದ ಹಾಗೇ ಚಿಕ್ಕ ಮಕ್ಕಳ ಗುಂಪೊಂದು ಆಟ ಆಡ್ತಿದ್ದುದು ಕಾಣಿಸ್ತು. ಅವರ ಬಳಿ ನಡೆದವನು ಒಬ್ಬ ಚಿಕ್ಕ ಹುಡುಗನನ್ನು ಕರೆದು ಊರ ಹೆಸರೇನಪ್ಪಾ ಅಂತ ಕೇಳಿದ.

-ಕಲ್ಲಡ್ಕ! ಅಂತ ಹೇಳಿದುದೇ ಒಮ್ಮೆ ವಿನಾಕಾರಣ ಹ್ಹಿ ಹ್ಹಿ ಹ್ಹಿ ಅಂತ ನಕ್ಕು ಮಗು ಓಡಿಬಿಟ್ಟಿತ್ತು. ಉಳಿದ ಮಕ್ಕಳೂ ಅದರ ಹಿಂದೇನೇ ಓಡಿದವು.

ಚಿಕ್ಕ ಮಕ್ಕಳಿಗೆ ಏನೇನಕ್ಕೆ ಸಂತೋಷವಾಗುತ್ತೋ ಅಂತ ಯೋಚಿಸುತ್ತಾ ಮುಂದೆ ನಡೆದ. ಸ್ವಲ್ಪ ದೂರ ಹೋಗ್ತಿದ್ದ ಹಾಗೆಯೇ ಒಂದು ದೊಡ್ಡ ಮನೆ ಕಾಣಿಸಿತು.
ಸೀದಾ ಅಲ್ಲಿಗೇ ನಡೆದ. ಅಲ್ಲಿಯಾಗಲೇ ಒಂದು ಜನರ ಗುಂಪು ಕುಳಿತು ಏನೋ ಚರ್ಚೆ ಮಾಡುತ್ತಿತ್ತು. ದನಿ ಸ್ವಲ್ಪ ಎತ್ತರವಾಗಿಯೇ ಇತ್ತು.

ಈಗ ಗುಡ್ಡದಯ್ಯನ ತಾವಕ್ಕೆ ಹ್ಯಾಂಗ್ ಹ್ವಾಗಾದು?

ಹುಡಕ್ಕಂಡು ಹ್ವಾದೋರ ಗತಿ ಹಿಂಗಾಗ್ತೈತಲ್ಲಾ...

ಬಿಳೀ ಧೋತರ, ಉತ್ತರೀಯದಲ್ಲಿದ್ದ ಅಚ್ಯುತನನ್ನು ನೋಡಿ ಅವರೆಲ್ಲಾ ತಮ್ಮ ಮಾತು ನಿಲ್ಲಿಸಿದರು.

ನಮಸ್ಕಾರ, ಕುಡಿಯೋದಕ್ಕೆ ಸ್ವಲ್ಪ ನೀರು ಸಿಗುತ್ತಾ? ಅಚ್ಯುತ ಕೇಳಿದ.

ಬನ್ನಿ ಸ್ವಾಮಿ ಕುಳಿತುಕೊಳ್ಳಿ - ಮುಖ್ಯಸ್ಥನ ರೀತಿ ಕಾಣ್ತಿದ್ದ ಒಬ್ಬನು ಕಟ್ಟೆಯಿಂದೆದ್ದು ಕರೆದ.

ಅಚ್ಯುತ ಅಲ್ಲಿಗೆ ಹೋಗಿ ಕುಳಿತ. ಒಳಗಿನಿಂದ ಹಾಲು ಹಣ್ಣು ಬಂದವು.

ಹಣ್ಣು ತಿನ್ನುತ್ತ ಜನರನ್ನ ಗಮನಿಸತೊಡಗಿದ. ಎಲ್ಲರ ಮುಖಗಳೂ ಮ್ಲಾನವಾಗಿದ್ದವು.

ಏನೋ ಕಷ್ಟದಲ್ಲಿರೋ ಹಾಗಿದೆ? ಅಚ್ಯುತ ಕೇಳಿದ.

ಮುಖ್ಯಸ್ಥನಂತಿದ್ದವನು ಮುಂದೆ ಬಂದ.

ಸ್ವಾಮೀ, ನಿಮ್ಮಂಥೋರು ಹೊತ್ನಾಗೆ ಇಲ್ಲಿಗೆ ಬಂದಿದ್ದು ನಮ್ಮ ಪುಣ್ಯ. ನೀವಾಗಿ ಕೇಳಿದ್ರಿಂದ ಹೇಳ್ತೀವ್ನಿ. ನಮಗೆ ಸಹಾಯ ಮಾಡ್ತೀರಾ?
ಅಂಗಲಾಚುವ ದನಿಯಲ್ಲಿ ಅವನು ಮಾತಾಡ್ತಿದ್ದ.

ಅಚ್ಯುತ ತಲೆಯಲ್ಲಾಡಿಸಿದ. ’ವಿಷಯ ಹೇಳಿ

ಮುಖ್ಯಸ್ಥನ ದನಿಗೆ ಜೀವ ಬಂತು.

ಗುಡ್ಡದ ಕಾಡೊಳಗೆಲ್ಲೋ ಗುಡ್ಡದಯ್ಯನೋರು ಅವ್ರೆ. ಅವ್ರನ್ನ ಹುಡಿಕ್ಕೊಡ್ತೀರ?

ಗುಡ್ಡದಯ್ಯ ಎಂದರೆ ಒಬ್ಬ ವ್ಯಕ್ತಿ ಎಂದು ಅಚ್ಯುತನಿಗೆ ತಿಳಿಯಿತು.

ಮುಖ್ಯಸ್ಥ ಮಾತು ಮುಂದುವರೆಸಿದ.

ನಮ್ಮಪ್ಪ, ಅಜ್ಜನ ಕಾಲ್ದಿಂದೂವೆ ಗುಡ್ದಾಗೆ ದೇವ್ರೈತೆ ಸ್ವಾಮಿ. ನಮ್ಮ ಅಯ್ಯನೋರಿಗೆ ಮಾತ್ರ ದೇವ್ರು ಹೇಳಾದು ಗೊತ್ತಾಕತಿ ಸ್ವಾಮಿ.
ನಾವು ಮರ ಕಡೀಬೇಕಂತ ಹೊಂಟ್ರೂ, ಶಿಕಾರಿಗೆ ಹ್ವಾದ್ರೂ ಅವರನ್ನ ಕೇಳೇ ಹೋಗಾದು. ಗುಡ್ದಾಗೆ ಬಾಳ್ ವಿಚಿತ್ರ ಆಕತಿ. ಇವತ್ತು ಮರ ಕಡುದ್ರೆ ನಾಳೀಕಾಗಲೇ ಬೆಳೆದ್ ಬಿಟ್ತಾವೆ. ಶಿಕಾರಿಗ್ವಾದಾಗ ಎಂತೆಂತವೋ ಪ್ರಾಣಿ ಸಿಕ್ತಾವೆ. ನೋಡಾಕ್ ಒಳ್ಳೆ ನರಿ ಇದ್ದಂಗಿರ್ತಾವೆ, ಆದ್ರೆ ಮಕ ಮಾತ್ರ ಮಂಗ್ಯಾಂದ್ ಇದ್ದಂಗಿರ್ತತಿ. ಅಂಗಾಗಿ, ನಾವು ಗುಡ್ಡಕ್ ಹೋಗಾಗ್ಮುಂಚೆ ಅಯ್ಯನೋರ್ನ ಕೇಳೇ ಹೋಗಾದು.

ಆದ್ರೆ ಈಗ ಒಂದ್ ತಿಂಗಳಿಂದ ಅಯ್ಯನೋರು ಊರಾಗ್ ಕಾಣ್ತಿಲ್ಲ. ಅವ್ರು ಮೊದ್ಲೂ ಹಿಂಗೇ ಗುಡ್ಡದ್ವಳಗೆ ಹೋಗಿ ಕುಂತ್ಕಂಬಿಡೋರು. ಆದ್ರೆ ಸಲ ಮಾತ್ರಾ ಬಾಳ ದಿನ ಆದ್ರೂ ವಾಪಸ್ ಬಂದಿಲ್ಲ. ನಮಗೇನ್ಮಾಡ್ಬುಕಂತನೇ ಗೊತ್ತಾಗ್ವಲ್ದು. ಅವ್ರನ್ನ ಹುಡುಕಾಕೆ ಅಂತ ಜನ ಕಳ್ಸಿದ್ವಿ. ಹೋದೋರು ಹೆಂಗೆಂಗೋ ಮಾಡಿ ಸ್ವಲ್ಪ ದಿನಕ್ಕೆ ವಾಪಸ್ ಬಂದ್ರು. ಪೂರ್ತಿ ಸುಸ್ತಾಗಿದ್ರು. ಬಂದೋರಿಗೆ ಜ್ವರ ಹಿಡ್ಕಂಡಿದ್ದು ಜೀವ ಹೋಗತಂಕ ಬಿಡ್ಲಿಲ್ಲ. ಒಬ್ರೂ ಉಳೀಲಿಲ್ಲ ಸ್ವಾಮಿ. ನಮ್ಗೆ ಏನೂ ಗೊತ್ತಾಗ್ವಲ್ದು ಸ್ವಾಮಿ.

ಅಚ್ಯುತ ಸ್ವಲ್ಪ ಹೊತ್ತು ಯೋಚನೆ ಮಾಡಿ, ’ಆಯ್ತು ನೋಡೋಣ, ಏನಂದ್ರಿ ಅವರ ಹೆಸರು?’ ಎಂದು ಕೇಳಿದ.

ಮಲ್ಲಿಕಾರ್ಜುನಯ್ಯನೋರು ಅಂತ, ನಾವೆಲ್ಲಾ ಗುಡ್ಡದಯ್ಯ ಅಂತ ಕರೀತೀವಿ.

ಅಚ್ಯುತ ಒಬ್ಬನೇ ಗುಡ್ಡಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟ.

ಗುಡ್ಡದ ಬಳಿ ಹೋಗ್ತಿದ್ದ ಹಾಗೆಯೇ, ಅಲ್ಲಿ ಯಾವುದೋ ಅದೃಶ್ಯ ಶಕ್ತಿ ಇಡೀ ಗುಡ್ಡವನ್ನೇ ಹಿಡಿದಿಟ್ಟಿದೆಯೇನೋ ಅನ್ನುವಂತೆ ಭಾಸವಾಯಿತು. ನೆಲದಿಂದ ಉದ್ಭವವಾಗಿ, ಎಲೆ ಎಲೆಯನ್ನೂ ಮುಟ್ಟಿ, ಅವನ್ನು ಸುತ್ತಿ ಉಸಿರುಗಟ್ಟಿಸುವಂತೆ ತಬ್ಬಿ ಹಿಡಿದಿದೆಯೇನೋ ಅನ್ನುವಂತಿತ್ತು. ಗುಡ್ಡವೊಂದು ಶಕ್ತಿ ಚೇತನದ ತಾಣ, ಅಲ್ಲೊಂದು ಜೀವಸೆಲೆ ಹರಿಯುತ್ತಿದೆಯೆಂದು ಅವನಿಗೆ ತಿಳಿಯಿತು.

ಅಷ್ಟು ದಟ್ಟ ಕಾಡನ್ನು ಹೊಂದಿರುವ ಯಾವುದೇ ಗುಡ್ಡವಾದರೂ ತನ್ನದೇ ಆದ ಒಂದು ನಿಲುವು ಹೊಂದಿರುತ್ತೆ. ಶಕ್ತಿ ತಾಣ ಗುಡ್ಡಕ್ಕೆ ಒಂದು ಅಲೌಕಿಕ ಕಳೆ ತಂದು ಕೊಟ್ಟಿತ್ತು.

ಅಚ್ಯುತ ಯೋಚಿಸುತ್ತಿದ್ದ.
ಶಕ್ತಿ ಚೇತನವಿದೆ ಎಂದರೆ ಅದನ್ನು ನಿಯಂತ್ರಿಸಲು ಯಾವುದಾದರೂ ಮತ್ತೊಂದು ಶಕ್ತಿ ಇದೆ ಎಂದಾಯ್ತು. ಬಹುಶಃ ಗುಡ್ಡದಯ್ಯನಿಗೆ ಅದರ ಬಗ್ಗೆ ತಿಳಿದಿರಬೇಕು. ಊರ ಜನ ತುಂಬ ಪ್ರೀತಿಸ್ತಾರೆ ಇವನನ್ನ. ಯಾವ ರೀತಿಯ ವ್ಯಕ್ತಿ ಇರಬಹುದು ಗುಡ್ಡದಯ್ಯ?

ಹಾಗೇ ಯೋಚಿಸುತ್ತಾ ಮುಂದೆ ಹೋಗುತ್ತಿರಬೇಕಾದರೆ, ಅವನಿಗೆ ದಾರಿಯಲ್ಲಿ ಯಾರೋ ಬಿದ್ದಿರುವುದು ಕಾಣಿಸಿತು. ದಡಬಡಿಸಿ ಹತ್ತಿರ ಹೋಗಿ ನೋಡಿದರೆ ಯಾರೋ ಚಿಕ್ಕ ಹುಡುಗ. ಸುಮಾರು ಹನ್ನೆರಡು-ಹದಿಮೂರು ವರ್ಷವಿರಬಹುದೇನೋ.

ಮುಖಕ್ಕೆ ನೀರು ಚಿಮುಕಿಸಿ ಅವನನ್ನೆಬ್ಬಿಸಿದ.

ಪಾಪ, ಸುಸ್ತಾಗಿ ಎಚ್ಚರತಪ್ಪಿ ಬಿದ್ದಿದ್ದ ಅವನು. ನೀರು ಕುಡಿದು ಸ್ವಲ್ಪ ಸಮಾಧಾನವಾದವನಂತೆ ಕಂಡ ಮೇಲೆ ಅವನನ್ನು ಕೇಳಿದ.

ಊರಿಂದ ತಪ್ಪಿಸಿಕೊಂಡು ಬಂದೆಯಾ? ಇಲ್ಲೇನು ಮಾಡ್ತಿದ್ದೀಯ?

ನಾನು ಅಯ್ಯನೋರ ಶಿಷ್ಯ. ಅವರನ್ನ ಹುಡುಕ್ಕಂತ ಇಂಗ್ಬಂದೆ.

ಅಚ್ಯುತನಿಗೆ ಆಶ್ಚರ್ಯವಾಯಿತು. ಗುಡ್ಡದಯ್ಯನಿಗೆ ಶಿಷ್ಯ ಬೇರೆ ಇದ್ದಾನಾ?

ನೋಡು, ಇಲ್ಲೇ ಕುಳಿತಿರು, ನಾನು ನಿಮ್ಮ ಅಯ್ಯನೋರನ್ನ ಹುಡುಕುತ್ತೀನಿ. ಎಂದ.

ನಾಲ್ಕು ಹೆಜ್ಜೆ ಮುಂದೆ ಬಂದವನು, ಸ್ವಲ್ಪ ಹುಲ್ಲಿರೋ ಜಾಗದಲ್ಲಿ ಪದ್ಮಾಸನ ಹಾಕಿ ಕುಳಿತ.

ಹುಡುಗ ಬೆರಗುಗಣ್ಣಿಂದ ನೋಡ್ತಾ ಇದ್ದ. ’ಏನು ಮಾಡ್ತಿದ್ದೀರ?’ ಕೇಳಿದ.

ನಿಮ್ಮ ಅಯ್ಯನೋರನ್ನ ಹುಡುಕ್ತಾ ಇದ್ದೀನಿ. ನಮಗೆಲ್ಲಾ ನರ ಇರ್ತಾವಲ್ಲಾ, ಹಾಗೇ ಗುಡ್ಡಕ್ಕೂ ನರಗಳಿರ್ತಾವೆ. ಎಲ್ಲಾ ಕಡೇನೂ ಹಬ್ಬಿರ್ತಾವೆ. ಕಣ್ಣಿಗೆ ಕಾಣೋಲ್ಲ. ಪ್ರತಿ ಗಿಡ, ಮರ, ಎಲೆ, ಹಣ್ಣು, ಹೂವನ್ನು ಕೂಡ ಅವು ತಮ್ಮಿಷ್ಟದಂತೆಯೇ ಬೆಳೆಸುತ್ತಾವೆ. ಅವಕ್ಕೆ ಅಷ್ಟು ಶಕ್ತಿಯಿರುತ್ತದೆ. ಜಾಗದಲ್ಲಿ ಹುಲ್ಲಿದೆ ಅಂದರೆ ಅವಕ್ಕೆ ಜಾಗದಲ್ಲಿ ಬೇರೆ ಏನು ಬೆಳೆಯುವುದೂ ಇಷ್ಟ ಇಲ್ಲ ಅಂತ ಅರ್ಥ. ಎಲ್ಲಾ ಕಡೆ ಹಬ್ಬಿರುತ್ತಾವೆ ಅಂತ ಅಂದೆನಲ್ಲ, ಈಗ ಅವುಗಳ ಜಾಡು ಹಿಡಿದು ನಿಮ್ಮ ಅಯ್ಯನೋರು ಎಲ್ಲಿದಾರೆ ಅಂತ ನೋಡೋಣ.

ಹುಡುಗ, ಕಣ್ಣು ಬಿಟ್ಟುಕೊಂಡು ನೋಡ್ತಾ ಇದ್ದ.
ಅಚ್ಯುತ, ಹಾಗೇ ಕುಳಿತವನು, ಸ್ವಲ್ಪ ತಡಕಾಡಿ ಒಂದು ಕಡೆ ಅಂಗೈಯೂರಿದ. ಅವನು ಹೇಳಿದ ಹಾಗೇ, ಗುಡ್ಡದ ಧಮನಿಗಳು ಅವನನ್ನು ತಬ್ಬಿ ಹಿಡಿದವು. ನೋಡುವವರಿಗೆ ಅವನನ್ನು ಯಾರೋ ಅದೃಶ್ಯ ಬಳ್ಳಿಗಳಿಂದ ಕಟ್ಟಿದ್ದಾರೇನೋ ಅನ್ನುವಂತಿತ್ತು. ಅಚ್ಯುತ ಮಾತ್ರ ಸಮಾಧಾನವಾಗಿಯೇ ಕುಳಿತಿದ್ದ. ಅವುಗಳಿಗೆ ಪೂರ್ತಿಯಾಗಿ ಶರಣಾಗಿದ್ದ. ಗುಡ್ಡದಲ್ಲೊಂದಾಗಿ ಬಿಟ್ಟಿದ್ದ. ಅವನಿಗೆ ಅಲ್ಲಿನ ಪ್ರತಿ ಚಲನೆಯೂ ಗೊತ್ತಾಗುತ್ತಿತ್ತು. ಪ್ರತಿ ಎಲೆ ಮಿಸುಗುವುದನ್ನೂ ಗುರುತಿಸಬಲ್ಲವನಾಗಿದ್ದ. ಪ್ರತಿ ಹೂವು, ಕಾಯಿ.. ಎಲ್ಲಾ... ಅವನಿಗೀಗ ಇಡೀ ಗುಡ್ಡದ ಜೀವ ಬಡಿತದ ಅರಿವಾಗತೊಡಗಿತ್ತು.
ಜೀವಸೆಲೆಯ ಕೇಂದ್ರಸ್ಥಾನವೆಲ್ಲಿದೆ ಅಂತ ಅರಸತೊಡಗಿದ. ಇಲ್ಲಿಲ್ಲ... ಅಲ್ಲಿಲ್ಲ... ಬಹುಶಃ ಅಲ್ಲಿದೆ ಎಂದು ನೋಡುವಷ್ಟರಲ್ಲಿ ಅದೃಶ್ಯ ಬಳ್ಳಿಗಳು ಅವನನ್ನು ಬಿಟ್ಟು ಬಿಟ್ಟವು. ತಮ್ಮನ್ನು ನಿಯಂತ್ರಿಸುವವನನ್ನು ಬಿಗಿದಪ್ಪುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಅವಕ್ಕನ್ನಿಸಿರಬೇಕು.

ಯಾವ ದಿಕ್ಕಿನಲ್ಲಿ ಶಕ್ತಿಕೇಂದ್ರವಿದೆಯೆಂದು ಅವನಿಗನ್ನಿಸಿತ್ತೋ ದಿಕ್ಕಿನೆಡೆಗೆ ಹೊರಟ.

ನಡಿ ಹೋಗೋಣ, ಅಚ್ಯುತ ಹುಡುಗನಿಗೆ ಹೇಳಿದ.

ಹೂಂ, ಮುಂದೆ ಉಸುರಿಲ್ಲ.

ಏನು ನಿನ್ನ ಹೆಸರು?

ಶಿವು, ಮತ್ತೆ ಮಾತಿಲ್ಲ. ಹುಡುಗನಿಗೆ ಸ್ವಲ್ಪ ಭಯವಾದಂತಿತ್ತು.

ನಡೆಯುತ್ತಾ ಇಬ್ಬರೂ ಗುಡ್ಡದ ಮೇಲೆ ಬಂದರು. ಹಾಗೇ ಅತ್ತ ಇತ್ತ ನೋಡ್ತಿರಬೇಕಾದರೆ, ಒಂದು ಘಂಟೆಯ ಶಬ್ದ ಕೇಳಿಸಿತು. ಅಚ್ಯುತ ಥಟ್ಟಂತ ದಿಕ್ಕಿನೆಡೆಗೆ ನೋಡಿದ. ಶಿವು ಕೂಡಾ ಕಡೆಗೆ ತಿರುಗಿದ್ದನ್ನ ಗಮನಿಸಿದ.

ಅಷ್ಟೇ, ಮತ್ತೆ ಸದ್ದಿಲ್ಲ.

ಬಹುಶ: ಇಲ್ಲೇ ಎಲ್ಲೋ ಇರಬೇಕು. ಅಚ್ಯುತ ಹೇಳಿದ.

ಶಿವು, ಆಗಲೇ ಅಲ್ಲಿದ್ದ ಬಂಡೆಗೆ ಒರಗಿಕೊಂಡು ಕೆಳಗೆ ಬಗ್ಗಿ ನೋಡ್ತಾ ಇದ್ದ.

ಅಲ್ಲಿ, ಅಲ್ಲಿ! ಎಂದು ಕೈ ತೋರಿಸಿದ.

ಅವನು ತೋರಿಸಿದ ಕಡೆ ಒಂದು ಗುಡಿಸಲಿತ್ತು.

ಅವರಿಬ್ಬರೂ ಕಡೆಗೇ ನಡೆದರು.

ಗುಡಿಸಲ ಹತ್ತಿರ ಬರುತ್ತಿದ್ದಂತೆಯೇ ಅಲ್ಲಿ ಯಾರೋ ವಾಸವಾಗಿದ್ದಾರೆಂದು ತಿಳಿಯುವಷ್ಟು ಗುರುತುಗಳಿದ್ದವು. ಒಳಗಡೆ ಹೋದರು.

ಒಳಗಡೆ ಅಯ್ಯನೋರು ಇದ್ದರು.

ಬಿಳೀ ಗಡ್ಡ, ನೀಳ ದೇಹ. ಸ್ವಚ್ಛ ಬಟ್ಟೆ. ವಯಸ್ಸಾಗಿತ್ತು. ಯಾರೇ ನೋಡಿದರೂ ಗೌರವ ಮೂಡಿಸುವಂಥಾ ವ್ಯಕ್ತಿತ್ವ. ಅಚ್ಯುತನಿಗೆ ಹಿಮಾಲಯದಲ್ಲಿ ಅಲೆಯುವ ಸಮಯದಲ್ಲಿ ಭೇಟಿಯಾದ ಸಾಧುಗಳ ನೆನಪಾಯಿತು.

ಶಿವು ಆಗಲೇ ಅವರ ಜೊತೆ ಮಾತು ಆರಂಭಿಸಿಬಿಟ್ಟಿದ್ದ.

ಸರಿ ಸರಿ, ನೀವು ಆಯ ತಪ್ಪಿ ಬಿದ್ಬಿಟ್ರಿ. ಆಮೇಲೆ? ಶಿವು ಕೇಳಿದ.

ಬಿದ್ದ ಕೂಡಲೇ ಕಾಲು ಉಳುಕಿಬಿಟ್ಟಿತು. ಅಸಾಧ್ಯ ನೋವು. ಬಹುಶ: ಮೂಳೆ ಮುರಿದಿರಬೇಕು. ಅಡ್ಡಾಡಲಿಕ್ಕಂತೂ ವಿಪರೀತ ಕಷ್ಟವಾಗ್ತಿತ್ತು. ಹೇಗೋ ಏನೋ ಮಾಡಿ, ಇಲ್ಲೀವರೆಗೂ ಬಂದೆ. ಹತ್ತಿರದಲ್ಲಿರೋ ಮರಗಳ ಹಣ್ಣು ತಿಂದು ಬದುಕಿದ್ದೀನಿ. ಹತ್ತಿರದಲ್ಲೇ ನೀರಿನ ಝರಿಯೊಂದಿರೋದರಿಂದ ನೀರಿಗೂ ಏನೂ ಬರ ಇರಲಿಲ್ಲ.

ಹಾಗೇ ಹೇಳ್ತಾ ಅಚ್ಯುತನ ಕಡೆಗೆ ತಿರುಗಿದರು.

ನನ್ನಿಂದಾಗಿ ನಿಮಗೆ ತೊಂದರೆ ಆಯ್ತು. ಸುಮ್ನೆ ಹೀಗೆ ಕಾಡಲ್ಲಿ ಬರೋ ಹಾಗಾಯ್ತು. ಇನ್ನೊಂದೆರಡು ದಿನ ಆಗಿದ್ರೆ ನಾನೇ ಬರ್ತಾ ಇದ್ದೆ. ಹಳ್ಳೀ ಜನ ಸಣ್ಣದಕ್ಕೆಲ್ಲಾ ಗಾಬರಿ ಬೀಳ್ತಾರೆ.

ನನ್ನ ಹೆಸರು ಮಲ್ಲಿಕಾರ್ಜುನ ಅಂತ, ನಿಮ್ಮ ಪರಿಚಯ ಆಗ್ಲಿಲ್ಲ.

ಅಲ್ಲೀತನಕ ತನ್ನ ಹೆಸರೇ ಹೇಳಿಕೊಳ್ಳದೇ ಇದ್ದದು ಅಚ್ಯುತನಿಗೆ ನೆನಪಾಯ್ತು.

ನನಗೆ ಗೊತ್ತು, ಊರ ಜನ ನಿಮ್ಮ ಬಗ್ಗೆ ಎಲ್ಲಾ ಹೇಳಿದಾರೆ. ನನ್ನ ಹೆಸರು ಅಚ್ಯುತ.

ಇಬ್ಬರೂ ಮತ್ತೊಮ್ಮೆ ಒಬ್ಬರಿಗೊಬ್ಬರು ನಮಸ್ಕಾರ ತಿಳಿಸಿದರು.


ಅಯ್ಯನೋರು ಮಾತು ಮುಂದುವರೆಸಿದರು.

ಇಷ್ಟು ಚಿಕ್ಕ ಪೆಟ್ಟಿಗೆಲ್ಲಾ ಹೀಗೆ ದಿನಗಟ್ಟಲೆ ಕೂರಬೇಕಾಯ್ತಲ್ಲಾ ಅಂತ ಬೇಜಾರಾಗ್ತಿದೆ. ಹೀಗೆ ಸುಮ್ಮನೆ ಕೂತು ಅಭ್ಯಾಸನೇ ಇಲ್ಲ. ಕಾಡಿನ ಮೂಲೆ ಮೂಲೆನೂ ನನಗೆ ಗೊತ್ತು. ಆದ್ರೂನೂ ಬೀಳಬೇಕಾಗಿ ಬಂತಲ್ಲ, ಹ್ಮ್ ವಯಸ್ಸಾಯ್ತು ನೋಡಿ. ಇನ್ನಾಗಲ್ಲ ಸಾಕು ಮಾಡ್ಬಿಟ್ತೀನಿ.

ಶಿವು ಅಷ್ಟೊತ್ತಿಗಾಗಲೇ ಅಯ್ಯನೋರ ತೊಡೆ ಮೇಲೆ ತಲೆಯಿಟ್ಟು ನಿದ್ದೆ ಮಾಡಿದ್ದ.

ಏನು ಸಾಕು ಮಾಡ್ತೀರ? ಗುಡ್ಡದ ಶಕ್ತಿಯನ್ನು ನಿಯಂತ್ರಿಸೋದನ್ನಾ? ಅಚ್ಯುತ ಕೇಳಿದ.
ಇಷ್ಟು ವಿಚಿತ್ರಗಳೆಲ್ಲಾ ಆಗೋದಕ್ಕೆ ನೀವೇ ಕಾರಣ ಅಲ್ವಾ? ನೀವು ಬಿದ್ದು ಕಾಲು ಮುರಿದುಕೊಂಡ್ರಿ, ಶಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗಲಿಲ್ಲ, ನಿಜ ತಾನೇ?

ಅಯ್ಯನೋರು ಸುಮ್ಮನೆ ಮುಗುಳ್ನಕ್ಕರು.

ನೀವು ಇಲ್ಲೀ ತನಕ ಅನಾಯಾಸವಾಗಿ ಬಂದಾಗಲೇ ಅಂದ್ಕೊಂಡೆ ನೀವು ಸಾಮಾನ್ಯರಲ್ಲ ಅಂತ. ನಿಮ್ಮಷ್ಟಕ್ಕೆ ನೀವೇ ಬಹಳಷ್ಟು ವಿಷಯ ತಿಳಿದುಕೊಂಡಿದ್ದೀರಿ. ಹೌದು ನಿಜ, ನನ್ನ ಅನಾರೋಗ್ಯದ ಕಾರಣ ನನಗೆ ಅದನ್ನ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತಿತ್ತು. ಆದರೆ, ಬಹುಶಃ ನಾಳೆಯಿಂದ ಎಲ್ಲಾ ಸರಿಹೋಗುತ್ತೆ ಅಂದ್ಕೋತೀನಿ. ಕಾಲು ನೋವು ಅದಕ್ಕೆಲ್ಲಾ ಅಡ್ಡಿ ಮಾಡಲಾರದು. ನಾಳೆಯಿಂದ ಗುಡ್ಡ ಮತ್ತೆ ಮೊದಲಿನಂತೆ ಸಹಜ ಸ್ಥಿತಿಗೆ ಮರಳುತ್ತದೆ.

ಇದು ಸಾಮಾನ್ಯದ ವಿಷಯವಲ್ಲ. ನೀವು ನಿಯಂತ್ರಿಸುತ್ತಿರೋದು ಯಾವುದೋ ಒಂದು ವಾಮಾಚಾರದ ಕ್ಷುದ್ರಶಕ್ತಿಯಲ್ಲ. ಗುಡ್ಡದ ಆತ್ಮ ಅದು. ಒಬ್ಬ ಮನುಷ್ಯನಾಗಿ ಅದನ್ನು ನಿಯಂತ್ರಿಸೋದು ಅತ್ಯಂತ ಕಷ್ಟದ ಕೆಲಸ. ಬಯಸೀ ಬಯಸೀ ಕಷ್ಟದ ಕೆಲಸ ಹೆಗಲಮೇಲೆ ಹಾಕಿಕೊಂಡಿದ್ದೀರಲ್ಲಾ, ನೀವು ರೀತಿ ಮಾಡ್ಲಿಕ್ಕೆ ವಿಶೇಷವಾದ ಕಾರಣವೇನಾದರೂ ಇದೆಯೇ? ಅಚ್ಯುತ ಕೇಳಿದ.

ನೀವೀಗಾಗಲೇ ಗುರುತಿಸಿದಂತೆ ಗುಡ್ಡವೊಂದು ಶಕ್ತಿತಾಣ. ಮುಂಚೆ ಇಲ್ಲಿ, ಹಳ್ಳಿ ಜನ ಏನು ದೇವರು ಅಂತ ಕರೀತಾರೋ, ದೇವರು ಅಥವಾ ಶಕ್ತಿ ಒಂದು ಪ್ರಾಣಿರೂಪದಲ್ಲಿ ಅಡ್ಡಾಡಿಕೊಂಡಿತ್ತು. ಜನ, ಗೊತ್ತಿಲ್ಲದೆ ಅದನ್ನು ಕೊಂದು ಹಾಕಿದರು.
ನಾನಾವಾಗ ಮಂತ್ರ ತಂತ್ರ ಕಲ್ತ್ಕೊಂಡು ಅಲ್ಲಿ ಇಲ್ಲಿ ಅಂತ ಅಡ್ಡಾಡ್ತಾ ಇದ್ದೆ. ಹಳ್ಳಿಜನ ಕಷ್ಟದಲ್ಲಿರೋದನ್ನ ನೋಡಿ, ನನ್ನ ಹೆಂಡತಿ ಜೊತೆ ಗುಡ್ಡಕ್ಕೆ ಬಂದೆ. ಜಾಗದಲ್ಲಿದ್ದ ಶಕ್ತಿಯನ್ನು ನನ್ನ ಮೇಲೆ ಆವಾಹಿಸಿಕೊಂಡು ನಾನೇ ದೇವರಾದೆ. ಆದರೆ ನನ್ನ ದುರಾದೃಷ್ಟ, ಬಂದ ಕೆಲವೇ ದಿನಗಳಲ್ಲಿ ನನ್ನ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ ತೀರಿ ಹೋದಳು. ಅಯ್ಯನೋರು ನಿಟ್ಟುಸಿರು ಬಿಟ್ಟರು.

ಹಾಗಾದ್ರೆ , ನಿಮ್ಮ ನಂತರ ಮುಂದಿನ ದೇವರು ಹುಡುಗನಾ? ಮಲಗಿದ್ದ ಶಿವು ಕಡೆ ಕೈ ತೋರಿಸಿ ಅಚ್ಯತ ಕೇಳಿದ.
ಈಗಾಗಲೇ ಅವನಿಗೆ ಸಾಕಷ್ಟು ಗುಡ್ಡದ, ಕಾಡಿನ ಪರಿಚಯವಾದಂತಿದೆ.

ಹೌದು. ಅಯ್ಯನೋರು ಉತ್ತರಿಸಿದರು.

ಅವರು ಯಾವುದಕ್ಕೆ ಹೌದೆಂದರು ಎಂದು ಅಚ್ಯುತನಿಗೆ ತಿಳಿಯಲಿಲ್ಲ. ಕೇಳಬೇಕೆನ್ನಿಸುವಷ್ಟರಲ್ಲಿ ಅವರು ಮಾತು ಮುಂದುವರೆಸಿದರು.

ಶಿವು ಗುಡ್ಡದಲ್ಲೇ ಬೆಳೆದಿದ್ದು.

ನೀವು ಹಳ್ಳೀಲಿ ಹುಟ್ಟೋ ಮಕ್ಕಳನ್ನು ಗಮನಿಸಿದ್ದೀರಾ? ಗುಡ್ಡದಿಂದ ಹರಿಯೋ ನೀರಲ್ಲೂ ಶಕ್ತಿ ಇದೆ. ಊರ ಜನ ಅದನ್ನೇ ಎಲ್ಲದಕ್ಕೂ ಉಪಯೋಗಿಸ್ತಾರೆ. ಬೆಕ್ಕು ಮರಿ ಹಾಕಿದಂತೆ ಇಲ್ಲಿ ಮಕ್ಕಳು ಹುಟ್ತಾವೆ. ಎರಡು, ಮೂರು, ನಾಲ್ಕು... ಒಂದ್ಸಲವಂತ್ರೂ ಒಬ್ಳು ಆರು ಮಕ್ಕಳನ್ನು ಹೆತ್ತಿದ್ಳು.

ಹಳ್ಳಿಜನ ಸಾಕೋದಿಕ್ಕಾಗಲ್ಲಾ ಅಂತ ಮಕ್ಕಳನ್ನು ತಂದು ಕಾಡೊಳಗೆ ಬಿಟ್ಟು ಹೋಗ್ತಾರೆ.

ಮಗು ಮಾತ್ರ ಯಾವ ಕಾಡುಪ್ರಾಣಿಯ ಕಣ್ಣಿಗೂ ಬಿದ್ದಿರಲಿಲ್ಲ. ನಾನು ಎತ್ತಿಕೊಂಡು ಬಂದೆ ಸಾಕಿದೆ. ಆದರೆ, ಇದರ ಜೊತೆ ಹುಟ್ಟಿದ್ದ ಮಗು, ಊರಲ್ಲಿತ್ತಲ್ಲ, ಅದಕ್ಕೆ ಆಯಸ್ಸು ಜಾಸ್ತಿ ಇರಲಿಲ್ಲ. ಸತ್ತ್ಹೋಗ್ಬಿಟ್ತು ಅದು. ಇನ್ನೊಂದು ಮಗು ಉಳಿದಿರೋದು ಅದರ ಅಪ್ಪ ಅಮ್ಮಂಗೆ ಗೊತ್ತಾಗಿ ಅವರು ಬಂದು ಇದನ್ನ ಕರೆದುಕೊಂಡು ಹೋಗುವವರೆಗೂ ಇದು ಇಲ್ಲೇ ಬೆಳೆದಿತ್ತು.

ಎಷ್ಟು ಸ್ವಾರ್ಥಿ ಜನಗಳು. ಅಚ್ಯುತ ತನ್ನ ಅಸಮಾಧಾನ ಹೊರ ಹಾಕಿದ.

ಪ್ರಪಂಚದಲ್ಲಿ ಇನ್ನೂ ಏನೇನು ವಿಚಿತ್ರಗಳಿದ್ದಾವೋ? ಅಯ್ಯನೋರು ಮೇಲೆ ನೋಡ್ತಾ ಮಾತಾಡ್ತಿದ್ದರು. ಭಗವಂತ ಹ್ಯಾಗೆ ಆಡಿಸ್ತಾನೋ, ಎಲ್ಲರೂ ಹಾಗೇ ಆಡ್ತಾರೆ.
ಈಗ ನೋಡಿ, ನೀವು ಊರೂರು ತಿರುಗುತ್ತೀರ ಅಂತ ಹೇಳಿದ್ರಿ. ನನಗೂ ಹಾಗೇ ಅಲೀಬೇಕು ಅಂತ ತುಂಬಾ ಆಸೆ. ಆದರೆ ವಿಚಿತ್ರ ನೋಡಿ, ನಾನು ಗುಡ್ಡದಲ್ಲಿ ಬಂಧಿ. ಇಲ್ಲಿಂದ ಹೊರಗೆ ಹೋಗ್ಲಿಕ್ಕೆ ಆಗಲ್ಲ. ಹೋಗ್ಲಿ ಬಿಡಿ, ಒಳ್ಳೇದಕ್ಕೋ, ಕೆಟ್ಟದಕ್ಕೋ ನನ್ನ ಕೊನೇ ಉಸಿರು ಗುಡ್ಡದ ಗಾಳಿ ಜೊತೆ ತೇಲಿ ಹೋಗುತ್ತೆ.

ಅಷ್ಟು ಹೊತ್ತಿಗೆ ಮಲಗಿದ್ದ ಶಿವು ಎದ್ದು ಕುಳಿತ.

ಅಚ್ಯುತನಿಗೆ ಶಿವು ಎದುರಿಗೆ ಸಂಭಾಷಣೆ ಮುಂದುವರೆಸಲು ಇಷ್ಟವಾಗಲಿಲ್ಲ. ಎದ್ದು ನಿಂತ.

ನೋಡಿ ನಾನು ಊರಿಗೆ ಹೋಗಿ ನಿಮ್ಮ ಬಗ್ಗೆ ಜನಕ್ಕೆ ಹೇಳ್ತೀನಿ. ತುಂಬಾ ಗಾಬರಿಯಾಗಿದ್ದಾರೆ ಅವರು. ನೀವು ಸಿಕ್ಕಿರೋದು ಗೊತ್ತಾದರೆ ಸಮಾಧಾನವಾಗುತ್ತೆ ಅವರಿಗೆ. ಅಚ್ಯುತ ಹೇಳಿದ.

ನಾನೂ ಬರ್ತೀನಿ. ಶಿವು ಹೇಳಿದ.

ಅಯ್ಯನೋರು ಆಗಲಿ ಎಂದು ಒಪ್ಪಿಗೆ ಕೊಟ್ಟರು.

ಅಚ್ಯುತ, ಶಿವು ಪುನಃ ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರು. ಇನ್ನೇನು ಗುಡ್ಡ ಇಳಿಯಬೇಕು ಅನ್ನುವಾಗ ಮತ್ತೆ ಘಂಟೆ ಶಬ್ದ ಕೇಳಿಸಿತು.
ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು. ಏನೂ ಮಾತಾಡಲಿಲ್ಲ.

ಊರೊಳಗೆ ಬರ್ತಿದ್ದಂತೆಯೇ, ಜನ ಸೇರೋದಕ್ಕೆ ಶುರುಮಾಡಿದರು.

ಏನಾಯ್ತು ಸ್ವಾಮೀ, ಅಯ್ಯನೋರು ಸಿಕ್ಕಿದ್ರಾ? ಪುನಃ ಮುಖ್ಯಸ್ಥ ಮುಂದೆ ಬಂದು ಕೇಳಿದ.

ಅಚ್ಯುತ ಚುಟುಕಾಗಿ ಅಯ್ಯನೋರ ಕಾಲಿನ ಬಗ್ಗೆ, ಅವರ ಬಗ್ಗೆ ತಿಳಿಸಿದ. ಅವರಿಗೆ ಹೇಳತೀರದ ಸಂತಸ, ಅವರ ಗುಡ್ಡದಯ್ಯ ಸಿಕ್ಕಿದ್ದರು.

ಮಾರನೇ ದಿನ, ಯಾರು ಏನು ಮಾಡಬೇಕೆಂದು ಆಗಲೇ ಅವರು ಚರ್ಚೆ ಶುರು ಮಾಡಿದ್ದರು.

ಅಚ್ಯುತ ರಾತ್ರಿ ಹಳ್ಳಿಯಲ್ಲಿಯೇ ಉಳಿದ.

ಮಲಗಿದವನಿಗೆ ರಾತ್ರಿ ಯಾವುದೋ ಹೊತ್ತಿನಲ್ಲಿ ಎಚ್ಚರವಾಯ್ತು. ನೀರವ ರಾತ್ರಿಯಲ್ಲಿ ಘಂಟಾನಾದ ಸ್ಪಷ್ಟವಾಗಿಯೇ ಕೇಳುತ್ತಿತ್ತು.

ಅಚ್ಯುತ, ಎದ್ದು ಶಬ್ದದ ಜಾಡನ್ನಿಡಿದು ಗುಡ್ಡದೆಡೆಗೆ ಹೊರಟ. ಗುಡ್ಡದ ಬುಡದಲ್ಲಿ ಯಾರೋ ನಿಂತಂತಿತ್ತು. ಹತ್ತಿರ ಹೋಗಿ ನೋಡಿದರೆ ಶಿವು!

ಏನಿದು ಶಬ್ದ? ಇಲ್ಲಿ ಯಾವುದೂ ಗುಡಿ ಇಲ್ಲ. ಊರಲ್ಲಿ ಬೇರೆ ಯಾರಿಗೂ ಶಬ್ದ ಕೇಳಿಸೋಲ್ಲ.
ಅಚ್ಯುತ ಏನಾದರೂ ಕೇಳುವುದಕ್ಕೆ ಮುಂಚೆಯೇ ಶಿವು ಕೇಳಿದ್ದ.

ನಾನು ಕೂಡ ಅದನ್ನು ಕಂಡು ಹಿಡಿಯಬೇಕೆಂದೇ ಬಂದಿದ್ದು. ಶಬ್ದ ಯಾವಾಗಿನಿಂದ ಕೇಳ್ತಾ ಇದೆ ನಿನಗೆ? ಅಚ್ಯುತ ಕೇಳಿದ.

ಈಗ್ಗೆ ಸ್ವಲ್ಪ ದಿನಗಳ ಕೆಳಗೆ ಶುರುವಾಗಿದ್ದು. ಇವತ್ಯಾಕೋ ಸ್ವಲ್ಪ ಜೋರಾಗೇ ಕೇಳಿ ಬಂತು. ಅದಕ್ಕೇ ಇಲ್ಲಿಗೆ ಬಂದೆ. ಶಿವು ಉತ್ತರಿಸಿದ.

ಅಚ್ಯುತ ಯೋಚನೆ ಮಾಡ್ತಿದ್ದ. ಇದು ಗಾಳಿಯ ಕೆಲಸವಲ್ಲವೇ ಅಲ್ಲ. ರಾತ್ರಿ ಹೊತ್ತು ಬೀಸುವ ಗಾಳಿ ಒಂದೊಂದ್ಸಲ ವಿಚಿತ್ರವಾದ ಸದ್ದುಗಳನ್ನು ಮಾಡುತ್ತದಾದರೂ ರೀತಿ ಸಾಧ್ಯವಿಲ್ಲ. ಬಹುಶಃ ಅಯ್ಯನೋರೇನಾದ್ರೂ ಅದನ್ನ... ಅವನಿಗೆ ಗಾಬರಿಯಾಯಿತು.

ಶಿವು ಕಡೆಗೆ ತಿರುಗಿ ಕೇಳಿದ.
ನಿಂಗೊಂದು ಪ್ರಶ್ನೆ ಕೇಳ್ತೀನಿ. ಸುಳ್ಳು ಹೇಳಬಾರದು. ಗುಡ್ಡದ ದೇವರಾಗೋದು ಹೇಗೆ ಅಂತ ಕಲ್ತಿದ್ದೀಯಾ?

ಗುಡ್ಡದ ದೇವ್ರು? ಶಿವು ಕೇಳಿದ. ಅವನಿಗೇನೂ ಅರ್ಥ ಆಗಿರಲಿಲ್ಲ.

ಗುಡ್ಡದ ದೇವ್ರಾಗೋದು ಹೇಗೆ ಅಂತ ಗೊತ್ತಿದೆಯಾ? ಅಚ್ಯುತ ಮತ್ತೆ ಕೇಳಿದ.
ಒಂದು ಶಕ್ತಿಯನ್ನು ಆವಾಹಿಸಿಕೊಂಡು ನಿಯಂತ್ರಿಸಿದರೆ ಗುಡ್ಡದಲ್ಲಿ ನಡೆಯುವುದೆಲ್ಲಾ ನಿನ್ನ ಹಿಡಿತದಲ್ಲಿರುತ್ತದೆ. ಶಕ್ತಿಯನ್ನು ಆವಾಹಿಸಿದಾಗ ಇಡೀ ಗುಡ್ಡದ ಚಲನವಲನ ನಿನಗೆ ಗೊತ್ತಾಗುತ್ತೆ. ಒಂದು ಚಿಕ್ಕ ಹುಲ್ಲುಕಡ್ಡಿ ಅಲ್ಲಾಡಿದ್ದೂ ನಿನಗೆ ತಿಳಿಯುತ್ತೆ. ಭಾವಸಮುದ್ರದ ಹೊಡೆತ ನಿನಗೆ ತಡೆದುಕೊಳ್ಳಬಲ್ಲೆಯಾದರೆ ನೀನು ಗುಡ್ಡದ ದೇವರಾದಂತೆಯೇ. ಈಗ ಹೇಳು, ನಿನಗಿದು ಗೊತ್ತೇ?

ಪಾಪ, ಚಿಕ್ಕ ಹುಡುಗ ಶಿವು. ಅವನಿಗೇನೂ ಅರ್ಥವಾಗಿರಲಿಲ್ಲ.

ಇಲ್ಲ, ನನಗೇನೂ ಇದರ ಬಗ್ಗೆ ಗೊತ್ತಿಲ್ಲ. ಅವನುತ್ತರಿಸಿದ್ದ.

ಹೌದಾ ಸರಿ ಬಿಡು. ಕೆಲವೊಮ್ಮೆ ಮರಕ್ಕೆ ಗಾಳಿ ಬಡಿದಾಗ, ಘಂಟೆಯ ಶಬ್ದ ಬರುತ್ತೆ. ನೀನದರ ಬಗ್ಗೆ ಯೋಚಿಸಬೇಡ. ಮನೆಗೆ ಹೋಗು. ಅಚ್ಯುತ ಹೇಳಿದ.

ನೀವೆಲ್ಲಿಗೆ ಹೋಗ್ತಾ ಇದ್ದೀರಾ? ಶಿವು ಕೇಳಿದ.

ಏನಿಲ್ಲ, ರಾತ್ರಿ ಗುಡ್ಡದಲ್ಲಿ ಅಡ್ಡಾಡಿಕೊಂಡು ಬರಲಿಕ್ಕೆ ಚೆನ್ನಾಗಿರುತ್ತೆ. ಒಂದ್ಸಲ ಹೋಗಿ ಬರ್ತೀನಿ. ಅಚ್ಯುತ ಪೂರ್ತಿ ವಿಷಯ ಹೇಳಲಿಲ್ಲ.

ಅಚ್ಯುತ ಮುಂದೆ ಹೊರಟ. ಅಷ್ಟೊತ್ತಿಗಾಗಲೇ ಗುಡ್ಡ ಮತ್ತೆ ಶಾಂತವಾಗಿತ್ತು.

ಅದಾಗಲೇ ಇಲ್ಲೀ ತನಕ ಬಂದುಬಿಟ್ಟಿದೆಯಾ? ಗುಡ್ಡದಯ್ಯಾ, ಅದು ಆಟವಾಡೋ ವಸ್ತು ಅಲ್ಲ. ಅಚ್ಯುತ ಯೋಚಿಸುತ್ತಿದ್ದ.

ಆಗ ಮತ್ತೆ ಘಂಟೆ ಶಬ್ದ ಕೇಳಿಸಿತು.

ಎಲ್ಲಿಂದ ಬಂತು ಅಂತ ಗಮನವಿಟ್ಟು ಕೇಳಿದಾಗ ಗುಡ್ಡದ ತುದಿಯಿಂದ ಬಂದದ್ದೆಂದು ತಿಳಿಯಿತು. ಓಡುತ್ತಲೇ ಗುಡ್ಡ ಹತ್ತತೊಡಗಿದ.

ಗುಡ್ಡದ ತುದಿಯಲ್ಲಿ ಅಯ್ಯನೋರು ಕುಳಿತಿದ್ದರು.

ಅವರನ್ನ ಅಲ್ಲಿ ನೋಡಿದ ತಕ್ಷಣ ಅಚ್ಯುತನಿಗೆ ತಾನು ಎಣಿಸಿದಂತೆಯೇ ಆಗುತ್ತಿದೆ ಎಂದೆನಿಸಿತು.

ನಿಮ್ಮ ಕಾಲು ಮುರಿದೇ ಇರಲಿಲ್ಲ. ನಿಮ್ಮನ್ನ ಜನ ಹುಡುಕಬಾರದೂಂತ ಇಲ್ಲಿಗೆ ಬಂದಿದ್ರಿ ಅಲ್ವಾ? ಅಚ್ಯುತ ಏದುಸಿರು ಬಿಡುತ್ತಲೇ ಕೇಳಿದ.

ಏನು ಹೇಳ್ತಾ ಇದ್ದೀರಿ? ಅಯ್ಯನೋರು ಕೇಳಿದರು.

ನನಗೆ ಘಂಟೆ ಶಬ್ದ ಕೇಳಿಸ್ತು. ನೀವೀಗ ಕುಚಿನಿಕೆಯನ್ನು ಕರೀತಾ ಇದ್ದೀರಿ ಅಲ್ವಾ? ಇಪ್ಪತ್ತೊಂದು ದಿನಗಳ ಕಾಲ ನಡೆಸೋ ಪ್ರಯೋಗ ಅದು. ಪ್ರಯೋಗ ಮುಗಿಯುತ್ತಾ ಬಂದ ಹಾಗೇ ಘಂಟೆ ಶಬ್ದ ಜೋರಾಗಿ ಕೇಳುತ್ತೆ. ಆದರೆ ಎಲ್ಲರಿಗೂ ಶಬ್ದ ಕೇಳೋಲ್ಲ. ನೀವೀಗ ಕುಚಿನಿಕೆಯನ್ನು ಕರೆದು, ನಿಮ್ಮನ್ನ ನೀವೇ ಬಲಿಕೊಟ್ಟು, ಅದರ ಕೈಗೆ ಗುಡ್ಡ ಬಿಟ್ಟು ಹೋಗಬೇಕು ಅಂತ ತೀರ್ಮಾನ ಮಾಡಿದ್ದೀರಿ ಅಲ್ವಾ? ಯಾಕೆ? ಅಚ್ಯುತ ಒಂದೇ ಉಸಿರಿನಲ್ಲಿ ಪ್ರಶ್ನಿಸಿದ.

ಅಯ್ಯನೋರು ಒಮ್ಮೆ ಜೋರಾಗಿ ಉಸಿರು ಬಿಟ್ಟರು.

ಮುಂಚೆ ಇಲ್ಲಿ ಇದ್ದ ಕುಚಿನಿಕೆ ಒಂದು ಸುಂದರವಾದ ಜಿಂಕೆಯ ರೂಪದಲ್ಲಿತ್ತು. ಅದರ ಕೋಡೇ ಸುಮಾರು ಎರಡು ಅಡಿ ಎತ್ತರವಿತ್ತು. ಅದು ಓಡ್ತಿದ್ರೆ ನೋಡ್ತಾನೇ ಇರಬೇಕು ಅಂತ ಅನ್ನಿಸೋದು. ಅಷ್ಟು ಸುಂದರವಾದ ಬೇರೆ ಕುಚಿನಿಕೆಯನ್ನು ನಾನು ನೋಡಿಲ್ಲ. ಆದ್ರೆ ನಾನು ಪಾಪಿ, ತಪ್ಪು ಮಾಡಿಬಿಟ್ಟೆ.

ಅಚ್ಯುತ ಅವರ ಮಾತನ್ನು ಅರ್ಧದಲ್ಲಿಯೇ ತಡೆದ.

ವಿಷಯ ಆಮೇಲೆ ಹೇಳಿ. ಮೊದಲು ಇಲ್ಲಿಗೊಂದು ದಿಗ್ಬಂಧನ ಹಾಕಬೇಕು. ಅಂದವನೇ ಅಲ್ಲೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ತಮ್ಮಿಬ್ಬರ ಸುತ್ತಲೂ ಒಂದು ಗೆರೆ ಹಾಕುತ್ತಾ ಮಂತ್ರ ಹೇಳತೊಡಗಿದ.

ಅಯ್ಯನೋರು ಮಾತು ಮುಂದುವರೆಸಿದರು.

ಇದರಿಂದೇನೂ ಆಗುವುದಿಲ್ಲ. ಅವಳಾಗಲೇ ಗುಡ್ಡಕ್ಕೆ ಬಂದಾಗಿದೆ. ಮೇಲಾಗಿ ಅವಳ ಶಕ್ತಿಯ ಮುಂದೆ ಇದೆಲ್ಲಾ ಏನೂ ಅಲ್ಲ. ಅವಳು, ಗುಡ್ಡಕ್ಕೆ ದೇವರಾಗಿರಬೇಕು, ನನ್ನಂತವನು ಅಲ್ಲ. ಆಮೇಲೆ ಇನ್ನೊಂದು, ನಾನು ಶಿವುಗೆ ಹೇಳಿಕೊಟ್ಟದ್ದು ನನಗೆ ತಿಳಿದ ಅಲ್ಪ ಸ್ವಲ್ಪ ವಿದ್ಯೆ ಹೊರತು ಅವನನ್ನು ನನ್ನ ನಂತರ ಇಲ್ಲಿ ಕೂರಿಸ್ಬೇಕು ಅಂತ ನನಗ್ಯಾವತ್ತೂ ಅನ್ನಿಸಿಲ್ಲ.

ನೀವು ಹೀಗೆ ಬಿಟ್ಟು ಹೋದರೆ ಊರವರ ಗತಿ ಏನು? ನಿಮ್ಮನ್ನು ಪೂಜೆ ಮಾಡ್ತಾರೆ ಅವರು. ನೀವು ಬೇಕು ಜನಕ್ಕೆ. ನೀವು ರೀತಿ ಹೋಗ್ಲಿಕ್ಕೆ ನಾನು ಬಿಡಲ್ಲ. ಅಚ್ಯುತ ಹೇಳ್ತಾನೇ ಹೋದ.

ದೂರ ಹೋಗು? ಅಯ್ಯನೋರ ದನಿ ಗಡುಸಾಗಿತ್ತು.

ಇದ್ದಕ್ಕಿದ್ದಂತೆ ಯಾವುದೋ ಅದೃಶ್ಯ ಶಕ್ತಿ ಅವನನ್ನು ಕೆಳಗೆ ನೂಕಿತು. ನಿಂತಿದ್ದ ಬಂಡೆಯಿಂದ ಕೆಳಗೆ ಬಿದ್ದ ಅವನು ಮೇಲೆ ನೋಡಿದ.

ಅಯ್ಯನೋರು ತಮ್ಮೆರಡೂ ಕೈಗಳನ್ನು ಮೇಲೆತ್ತಿ ನಿಂತಿದ್ದರು. ಮುಖ ಪ್ರಶಾಂತವಾಗಿತ್ತು. ಕಣ್ಣುಗಳು ಮುಚ್ಚಿದ್ದವು. ಅದೆಲ್ಲಿತ್ತೋ ಏನೋ ವಿಪರೀತ ರಭಸವಾಗಿ ಗಾಳಿ ಬೀಸತೊಡಗಿತು. ಯಾವುದೋ ಬೆಳಕು ಹತ್ತಿರಕ್ಕೆ ಬರುತ್ತಿದೆಯೇನೋ ಅಂತ ಅನ್ನಿಸಿತು.
ಬೆಳಕು ಹತ್ತಿರಕ್ಕೆ ಬಂದ ಹಾಗೇ ಕಣ್ಣು ಬಿಡಲಿಕ್ಕಾಗದಷ್ಟು ಪ್ರಕಾಶಮಾನವಾಗಿತ್ತು.
ಅದರಲ್ಲೇ ಕಷ್ಟಪಟ್ಟು ಅಯ್ಯನೋರ ಕಡೆಗೆ ನೋಡಿದ. ಅವರು ಬೆಳಕಲ್ಲಿ ನೆಂದು ಹೋಗಿದ್ದರು. ಅವರೇ ಒಂದು ದೀಪವೇನೋ ಅನ್ನುವಂತೆ ಹೊಳೆಯುತ್ತಾ ಇದ್ದರು. ನೋಡ್ತಾ ಇದ್ದ ಹಾಗೇ ಅವರು ಬೆಳಕಿನಲ್ಲಿ ಕರಗಿ ಹೋದರು.

ಅಚ್ಯುತ ಅಲ್ಲಿ ನಿಂತಿದ್ದವನು ಎಚ್ಚರ ತಪ್ಪಿ ಬಿದ್ದ.

ಅರೆ ಪ್ರಜ್ಞಾವಸ್ಥೆಯಲ್ಲಿದ್ದವನಿಗೆ ಒಂದು ಕನಸು ಕಂಡಿತು.

ಒಂದು ಮನೆ, ತುಂಬಾ ಜನರಿದ್ದಾರೆ. ಅಯ್ಯನೋರು ಕೂಡಾ ಇದ್ದರು. ಆದರೆ ಈಗಿನಂತೆ ವಯಸ್ಸಾಗಿರಲಿಲ್ಲ.

ಯಾರೋ ಕೇಳಿದರು.

ನೀವ್ಯಾಕೆ ನಮ್ಮಲ್ಲೇ ಉಳೀಬಾರ್ದು? ಪಾರುತೀನ ಮದುವೆಯಾಗಿ ಇಲ್ಲೇ ಉಳಿದುಬಿಡಬಹುದಲ್ವಾ?

ಇಲ್ಲ. ಅಲೆದಾಟ ಅನ್ನೋದು ನನಗೆ ಚಿಕ್ಕಂದಿನಿಂದ ಅಂಟಿದ ರೋಗ. ಒಂದೇ ಕಡೆ ನೆಲೆ ನಿಲ್ಲೋದು ಜೀವಕ್ಕೆ ಒಗ್ಗೋಲ್ಲ. ಅಯ್ಯನೋರು ಹೇಳಿದರು.

ನಿಜಕ್ಕೂ ಆಗಲ್ವಾ? ಪಾರುತೀಗೆ ಊರು ಅಂದ್ರೆ ತುಂಬಾ ಇಷ್ಟ. ಮತ್ತೊಬ್ಬಾಕೆ ಯಾರೋ ಕೇಳಿದರು. ಬಹುಶಃ ಪಾರುತಿ ತಾಯಿ ಇರಬೇಕು.

ಒಂದು ದಾರಿ ಇದೆ. ಗುಡ್ಡದಲ್ಲಿರೋ ಕುಚಿನಿಕೆಯನ್ನು ಬದಿಗೆ ಸರಿಸಿ, ನಾನೇ ಅಲ್ಲಿ ಉಳಿದುಬಿಡುವುದು. ಆಗ ನನ್ನ ಪ್ರಯೋಗಕ್ಕೂ ಅಡ್ಡಿ ಇರೋದಿಲ್ಲ. ನಿಮ್ಮ ಮಗಳೂ ಊರಲ್ಲಿದ್ದ ಹಾಗಾಗುತ್ತೆ. ಅಯ್ಯನೋರು ಜೋರಾಗಿ ನಕ್ಕರು.

ಉಳಿದವರೂ ನಕ್ಕರು. ಕುಚಿನಿಕೆ ಅಂದರೆ ಏನೆಂದು ಅವರಿಗೆ ಗೊತ್ತಿಲ್ಲ, ಆದರೆ ಗುಡ್ಡದಲ್ಲಿ ದೇವರಿದೆ ಅಂತ ಅವರಿಗೆ ಗೊತ್ತಿತ್ತು.


ಛೇ, ಛೇ, ಹಾಗೆಲ್ಲಾ ತಮಾಷೆಗೂ ಹೇಳುವುದು ತಪ್ಪು. ಕುಚಿನಿಕೆಯನ್ನು ಸರಿಸುವುದು? ಛೇ, ಅಯ್ಯನೋರಿಗೆ ಬೇಜಾರಾಗಿತ್ತು. ಉಳಿದವರೂ ಸುಮ್ಮನಾದರು.

ಮತ್ತೊಂದು ದೃಶ್ಯ.

ಅಯ್ಯನೋರ ಪೆಟ್ಟಿಗೆ ಮುಚ್ಚಳ ತೆರೆದಿದೆ. ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಯ್ಯನೋರ ಮುಖದಲ್ಲಿ ಗಾಬರಿ.

ಎಂಥಾ ಅನಾಹುತ ಆಗ್ಹೋಯ್ತು. ಅಯ್ಯೋ ಅಷ್ಟು ಅಮೂಲ್ಯವಾದದ್ದನ್ನು ಹೀಗ್ಯಾಕೆ ಬೇಜವಾಬ್ದಾರಿಯಿಂದ ಇಟ್ಟಿದ್ದೆ?

ಬಾಗಿಲು ಬಡಿದ ಸದ್ದು. ಅಯ್ಯನೋರು ತಡಬಡಿಸಿ ಎದ್ದು ಬಾಗಿಲು ತೆರೆದರು. ಹೊರಗಡೆ ಪಾರುತಿ ನಿಂತಿದ್ದಳು. ಮೈಯೆಲ್ಲಾ ರಕ್ತ. ಮುಖದಲ್ಲಿ ಕ್ಷುದ್ರಕಳೆ. ಕೈ ನೋಡ್ತಾರೆ, ಜಿಂಕೆ ತಲೆಯೊಂದನ್ನ ಹಿಡಿದಿದ್ದಳು.

ನಾನು ಸರಿಸಿಬಿಟ್ಟೆ. ನೀವು ಬಯಸಿದಂತೆ, ಗುಡ್ಡ ಇನ್ಮೇಲೆ ನಿಮ್ದೇ! ಅಲ್ಲಿ ಈಗ ಯಾರೂ ಇಲ್ಲ. ಈಗ ಇಲ್ಲೇ ಉಳಿದ್ಬಿಡಿ, ದಯವಿಟ್ಟು...
ಹಾಗೆ ಹೇಳ್ತಾನೇ ಅವಳು ಕುಸಿದಳು.

ಅಚ್ಯುತನಿಗೆ ಎಚ್ಚರವಾಯ್ತು. ಅವನು ಗುಡ್ಡದಲ್ಲಿದ್ದ ಅಯ್ಯನೋರ ಗುಡಿಸಲಲ್ಲಿದ್ದ. ಎದುರಿಗೆ ಶಿವು ಕುಳಿತಿದ್ದ.

ಏನಾಯ್ತು? ಅಚ್ಯುತ ಕೇಳಿದ.

ಮೊನ್ನೆ ರಾತ್ರಿ ನೀವು ಕೂಗಿದ್ದನ್ನ ನಾನು ಕೇಳ್ಸ್ಕಂಡೆ. ಗುಡ್ಡ ಹತ್ತಿ ಮೇಲ್ಬಂದು ನೋಡಿದ್ರೆ ನೀವು ಎಚ್ಚರ ತಪ್ಪಿ ಬಿದ್ದಿದ್ರಿ. ಬೆಳಗ್ಗೆ ತನಕ ಕುಂತೆ, ನೀವು ಎದ್ದೇಳ್ಲಿಲ್ಲ. ಊರಿಂದ ಆಳು ಕರ್ಕಂಡ್ ಬಂದು ನಿಮ್ಮನ್ನ ಇಲ್ಲಿ ಮಲಗ್ಸೀವ್ನಿ. ಅಯ್ಯನೋರು ಎಲ್ಲಿ? ಶಿವು ಕೇಳಿದ.

ತಾನು ಎರಡು ದಿನದಿಂದ ಮಲಗಿದ್ದೀನಿ ಎಂದು ಅಚ್ಯುತನಿಗೆ ತಿಳಿಯಿತು.

ಅವರಿನ್ನಿಲ್ಲ, ಕುಚಿನಿಕೆ ಅವರನ್ನ ಆಪೋಶನ ತಗೊಂಡಳು. ಊರಲ್ಲಿ ಜನ ಏನಂತಾರೆ? ಅಚ್ಯುತ ಕೇಳಿದ.

ಶಿವು ಮುಖದಲ್ಲಿ ಸಮಾಧಾನ, ಸಂಕಟ ಎರಡೂ ಒಟ್ಟಿಗೇ ಗೋಚರಿಸಿದವು.

ಊರಲ್ಲಿ ಯಾರ್ಗೂ ಅವರ ನೆಪ್ಪಿಲ್ಲ. ಅಯ್ಯನೋರು ಅಂದ್ರೆ ಯಾರು ಅಂತಾರೆ. ನಿಮ್ಗೊಬ್ರಿಗೇ ಅವ್ರ ನೆನ್ಪಿರೋದು. ಶಿವು ಹೇಳಿದ.

ಅಚ್ಯುತನಿಗೆ ಆಶ್ಚರ್ಯವಾಯಿತು. ಕುಚಿನಿಕೆ ಅಯ್ಯನೋರನ್ನಷ್ಟೇ ಅಲ್ಲ, ಅವರ ಅಸ್ತಿತ್ವವನ್ನೇ ಅಳಿಸಿ ಹಾಕಿದ್ದಳು. ರಾತ್ರಿ ಗುಡ್ಡದಲ್ಲಿದ್ದುದರಿಂದ ತನಗೂ, ಶಿವುಗೂ ಅವರ ನೆನಪಿದೆ ಎಂದು ನಂತರ ಹೊಳೆಯಿತು.

ದಿನ, ಸಂಜೆ ಹೊತ್ತಿಗೆ ಅಚ್ಯುತ ಪೂರ್ತಿಯಾಗಿ ಸುಧಾರಿಸಿಕೊಂಡಿದ್ದ. ಶಿವುಗೆ ವಿದಾಯ ಹೇಳಿ ಮತ್ತೊಂದು ಸಲ ಕೊನೆಯದಾಗಿ ಗುಡ್ಡ ನೋಡಲು ಹೊರಟ.

ಗುಡ್ಡ ಹತ್ತುತ್ತಾ ರಾತ್ರಿಯಾಯಿತು. ಹುಣ್ಣಿಮೆಯಲ್ಲಿ ಗುಡ್ಡ ಮತ್ತಷ್ಟು ಸುಂದರವಾಗಿ ಕಾಣ್ತಿತ್ತು. ಯಾರೋ ಹಾಲಿನ ಪಾತ್ರೆ ಚೆಲ್ಲಿದ್ದಾರೇನೋ ಅನ್ನುವಂತೆ ಬೆಳದಿಂಗಳು ಬಿದ್ದಿತ್ತು. ಪರ್ವತ ನೆಮ್ಮದಿಯಾಗಿ ನಿದ್ರಿಸುತ್ತಿದೆ ಎಂದು ಅವನಿಗೆ ಅನ್ನಿಸಿತು.

ಅಚ್ಯುತನಿಗೆ ರಾತ್ರಿ ಮತ್ತೆ ನೆನಪಾಯಿತು.

ಬೇರೆ ಯಾವುದಾದ್ರೂ ಒಂದು ದಾರಿಯಿರಬೇಕು - ಇವನ ಧ್ವನಿ.

ಇಲ್ಲ, ಇದೊಂದೇ ದಾರಿ ಉಳಿದಿರುವುದು - ಅಯ್ಯನೋರ ದನಿ.

ಅಚ್ಯುತ ತಾನು ಕಂಡದ್ದು ಕನಸಲ್ಲ, ಅಯ್ಯನೋರೇ ಸ್ವತಃ ಯಾರಿಗೂ ಹೇಳದ ತಮ್ಮ ಕಥೆ ಹೇಳಿದ್ದೆಂದು ನಂಬಿದ್ದ.

ಅಚ್ಯುತ ಆಗಲೇ ಗುಡ್ಡದ ತುದಿ ತಲುಪಿದ್ದ. ಮತ್ತದೇ ಬಂಡೆಯ ಬಳಿ, ತಲೆಯೆತ್ತಿ ನೋಡಿದ. ಆಗ ಅದು ಕಾಣಿಸಿತು!

ಬಂಡೆಯ ಮೇಲೆ ನಂಬಲಸಾಧ್ಯವಾಗುವಷ್ಟು ಎತ್ತರಕ್ಕೆ ಸುರುಳಿಯಾಗಿ ಸುತ್ತಿಕೊಂಡು ಅಜಗರವೊಂದು ಕುಳಿತಿತ್ತು. ಇವನನ್ನೇ ದಿಟ್ಟಿಸಿ ನೋಡುತ್ತಿತ್ತು.

ಒಬ್ಬ ವ್ಯಕ್ತಿಯ ಆತ್ಮವನ್ನರಿಯುವುದು ಎಷ್ಟು ವಿಸ್ಮಯಕಾರಿ ಸಂಗತಿ ಅಲ್ಲವೇ ಕುಚಿನಿಕೆ? ಅಚ್ಯುತ ಕೇಳಿದ.

ಇವನನ್ನೇ ದಿಟ್ಟಿಸಿ ನೋಡುತ್ತಿದ್ದ ಅಜಗರ, ಸುರುಳಿಯಾಗಿ ಸುತ್ತಿದ್ದ ತನ್ನ ದೇಹದ ಮೇಲೆ ತಲೆಯನ್ನಿಟ್ಟು, ಕಣ್ಣು ಮುಚ್ಚಿ, ಒಮ್ಮೆ ಜೋರಾಗಿ ಭುಸುಗುಟ್ಟಿತು.

ಅದು ನಿಟ್ಟುಸಿರು ಬಿಟ್ಟಿತೋ, ಹೌದೆಂದಿತೋ ಅಚ್ಯುತನಿಗೆ ಗೊತ್ತಾಗಲಿಲ್ಲ.
ಅವನು ಅದನ್ನೇ ನೋಡುತ್ತಾ ಕುಳಿತ.