Wednesday, December 29, 2010

ಒಮ್ಮೊಮ್ಮೆ ಹೀಗೂ..




ಮನದಲ್ಲೊಂದು ಮುಸಲಧಾರೆ
ಮುಗಿಲ ತುಂಬೆಲ್ಲಾ ಮಳೆಬಿಲ್ಲು 
ನಾಡೊಳಗೆ ನಲಿವಿನ ನರ್ತನ
ಸಂತೃಪ್ತಿಯೊಂದು ಮಗುವಾದರೆ
ಹೆಸರು ಹುಡುಕುವುದು ಬಲು ಕಷ್ಟ

ಮೆತ್ತನೆ ಹಿಮದ ಮೇಲೆ
ಸುಳಿಗಾಳಿಯ ಚೆಲ್ಲಾಟ.
ಸಂತೋಷ ಗಾಳಿಯಲ್ಲಡಗಿದೆಯೋ
ನೋಡುವ ಕಣ್ಣೊಳಗಿದೆಯೋ
ಗುಪ್ತಗಾಮಿನಿಯಾಗಿ ಮನದಲ್ಲಿದೆಯೋ
ಜೀವಸೆಲೆಯಾಗೆ ಎದೆಯಲ್ಲಿದೆಯೋ

ಮೆದುವಾಗಿ ಹಿತವಾಗಿ
ತೆರೆಯಾಗಿ ಅಲೆ ಬೀಸಲು
ಮೈಮೇಲೆ ಬಿದ್ದದ್ದು ಹಿಮವೋ
ಬಾನಿಂದುದುರಿದ ಬೆಳಕೋ
ಏನೋ ತಿಳಿಯದಾಗಿದೆ

ಬೆಳಗಾಗಿದೆ, ಗರಿ ಮೂಡಿದೆ, ಮಜವಾಗಿದೆ

Friday, September 17, 2010

ಅಪರಾಧಿ ನಾನಲ್ಲ

ಧಾವಂತದಿಂದ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಕಡೆಗೆ ಮೋಹನ ಅಡ್ಡಾಡುತ್ತಿದ್ದ. ಹಣೆಯ ಮೇಲೆ ಬೆವರ ಹನಿಗಳು ಸದ್ದಿಲ್ಲದಂತೆ ಹುಟ್ಟುತ್ತಿದ್ದವು. ಪದೇ ಪದೇ ರಸ್ತೆಯ ಕಡೆಗೆ ನೋಡುತ್ತಿದ್ದ. ಸಣ್ಣ ಶಬ್ದಕ್ಕೂ  ಬೆದರುವಂತಾಗುತ್ತಿತ್ತು. ಆರಡಿ ಎತ್ತರದ ಅಜಾನುಬಾಹು ಹೀಗೆ ಹೆದರುತ್ತಾ ನಿಲ್ಲುವುದು ಬೇರೆಯವರಿಗೆ ತಮಾಷೆಯಾಗಿ ಕಂಡರೂ ಉಸಿರು ಜೋರಾಗಿ ಬಿಡಲೂ ಆಗದಷ್ಟು ಮೋಹನ ಹೆದರಿದ್ದ.

ಜೀವನದಲ್ಲಿ ಮೊಟ್ಟಮೊದಲನೆಯ ಬಾರಿಗೆ ತಪ್ಪು ಮಾಡಿದ್ದ. ಮೇಲಾಗಿ ಸಿಕ್ಕಿ ಬಿದ್ದಿದ್ದ. ಶ್ರಾವಣಿ ನೋಡಿ ಬಿಟ್ಟಿದ್ದಳು. ಅವಳು ಈ ಹೊತ್ತಿನಲ್ಲಿ  ಇಲ್ಲಿಗೇಕೆ ಬಂದಳು ಎನ್ನುವುದು ಮೋಹನನಿಗೆ ತಿಳಿಯದಾಗಿತ್ತು. ಅದೆಷ್ಟು ದಿನಗಳಿಂದ ಈ‌ಯೋಜನೆ ರೂಪಿಸಿದ್ದ ಅವನು. ಹೀಗೆ ಸಿಕ್ಕಿ ಬೀಳುವುದರಲ್ಲಿ ಅರ್ಥವೇ ಇಲ್ಲ. ಛೇ, ಈಗೇನು ಮಾಡುವುದು?‌ಇಷ್ಟು ಹೊತ್ತಿನಲ್ಲಿ ಶ್ರಾವಣಿ‌ ಮನೆಗೆ ಹೋಗಿರಬಹುದಾ? ಅವಳ ಅಪ್ಪ-ಅಮ್ಮಂಗೆ ಹೇಳಿಬಿಟ್ಟಿರ‍್ತಾಳಾ? ಊಹೂಂ, ಇಲ್ಲ. ಅವಳ ಅಪ್ಪ ಅಮ್ಮ ಹೊರಗೆ ಹೋಗುವುದನ್ನ ಆಗಲೇ‌ ನೋಡಿದ್ದ. ಹಾಗಾದ್ರೆ, ಮನೆಗೆ ಹೋಗಿ ಶ್ರಾವಣಿ‌  ಹತ್ತಿರ ಮಾತಾಡ್ಲಾ? ಪ್ಚ, ಅಷ್ಟು ಚಿಕ್ಕ ಹುಡುಗಿಗೆ ಏನು ಅರ್ಥ ಆಗುತ್ತೆ? ಇವತ್ತಲ್ಲಾ‌ ನಾಳೆ ಯಾರಿಗಾದ್ರೂ ಹೇಳಿಯೇ ಬಿಡ್ತಾಳೆ. ಬೇಡ, ಬೇಡ. ಏನಾದ್ರೂ‌ ಮಾಡಲೇಬೇಕು. ಅದೂ ಅವಳ ಅಪ್ಪ ಅಮ್ಮ ಮನೆಗೆ ಬರೋದ್ರೊಳಗೇ ಆಗಬೇಕು. ಆದ್ರೆ ಏನು ಮಾಡಬೇಕು ? ಅಯ್ಯೋ, ಜೋರಾಗಿ ಉಸಿರು ಬಿಟ್ಟ. ಮೋಹನ ಎತ್ತಿ ಬೆಳೆಸಿದ ಹುಡುಗಿ ಶ್ರಾವಣಿ‌ . ಇನ್ನೂ ಹೈಸ್ಕೂಲಿಗೆ ಹೋಗ್ತ್ತಿದ್ದಾಳೆ. ಅವಳನ್ನು ಕಂಡರೆ ಮೋಹನನಿಗೆ ಏನೋ ಪ್ರೀತಿ, ಮಮತೆ. ಆದರೆ ಈಗ ಎದುರಿಗಿರುವುದು ತನ್ನ ಜೀವನದ ಪ್ರಶ್ನೆ. ವಿಷಯ ಹೊರಗೆ ಬಂದರೆ ಜೀವನ ಪೂರ್ತಿ ಜೈಲಿನಲ್ಲಿರಬೇಕು. ಮರ್ಯಾದೆಯಂತೂ ಹರಾಜಾಗಿ ಹೋಗುತ್ತದೆ. ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ.
ಛೇ, ಶ್ರಾವಣಿ‌  ಅಲ್ಲಿಗೆ ಬರದೇ ಹೋಗಿದ್ರೆ ಎಲ್ಲಾ ಸರಿ ಹೋಗುತ್ತಿತ್ತು.
ಈಗ್ಲೂ ಸರಿ ಹೋಗುತ್ತೆ, ಶ್ರಾವಣೀನೇ ಇಲ್ಲ ಎಂದರೆ. ಮನದಲ್ಲಿ ಯಾವುದೋ‌ ದನಿ ಹೇಳಿದಂತಾಯಿತು.
ಛೇ, ಛೇ, ಅದೆಲ್ಲಾ ಆಗಲ್ಲ.
ಮತ್ತೆ ನೀನು ಜೈಲಿಗೆ ಹೋಗ್ತೀಯಾ?
ಹ್ಮ್...
ಮೋಹನನೀಗ ಕಸಿವಿಸಿ ಶುರುವಾಗಿತ್ತು. ತನ್ನ ಜೀವನವೋ, ಇಲ್ಲಾ ತಾನು ಎತ್ತಿ ಆಡಿಸಿದ ಜೀವವೋ?
ಈಗ್ಲೇ ಹೋದ್ರೆ ಯಾರಿಗೂ ಗೊತ್ತಾಗಲ್ಲ. ಅವಳ ಮನೇಲೂ ಯಾರೂ ಇಲ್ಲ. ಚಿಕ್ಕ ಹುಡುಗಿ. ಲೆಕ್ಕವೇ ಅಲ್ಲ. ಒಳಗಿನ ದನಿ ಹೇಳುತ್ತಲೇ ಇತ್ತು.
ಆದ್ರೆ, ಪಾಪ. ಏನೂ ಗೊತ್ತಿಲ್ಲದ ಹುಡುಗಿ. ಇನ್ನೂ ಬಾಳಿ ಬದುಕಬೇಕಾದವಳು.
ಹಾಗಂತ ನಿನ್ನ ಜೀವನ ಬಲಿ ಕೊಡ್ತೀಯಾ? ಅವಳು ಯಾರ ಹತ್ರನಾದ್ರೂ ಬಾಯಿ ಬಿಟ್ರೆ ಕಥೆ ಮುಗಿಯಿತು. ಏನೇ ಮಾಡಿದರೂ ಇನ್ನು ಹತ್ತು ನಿಮಿಷದ ಒಳಗೆ ಮಾಡಿ ಮುಗಿಸಬೇಕು. ಬೇಗ, ಬೇಗ.. ಹೊರಡು. ದನಿ ಒತ್ತಾಯ ಪಡಿಸಿತು.

ಕೊನೆಗೂ ಮೋಹನನಿಗೆ ಅವನ ಜೀವನವೇ ಮುಖ್ಯವಾಯಿತು. ದುರ್ದಾನ ತೆಗೆದುಕೊಂಡವನಂತೆ ಶ್ರಾವಣಿಯ  ಮನೆ ಕಡೆಗೆ ಹೆಜ್ಜೆ ಹಾಕತೊಡಗಿದ. ಅವನ ಮನವಾಗಲೇ  ಕೆಲಸ ಹೇಗೆ  ಮುಗಿಸಬೇಕೆಂದು ಯೋಚಿಸತೊಡಗಿತ್ತು.

*******

ಬರೆಯುತ್ತಿದ್ದ ಕಥೆ ಅರ್ಧಕ್ಕೇ ನಿಲ್ಲಿಸಿ ಮಹರ್ಷಿ ಆಕಳಿಸಿದ. ತುಂಬ ಹೊತ್ತಿನಿಂದ ಬರೆಯುತ್ತಿದ್ದುದರಿಂದ ಮೈ ಕೈ ಎಲ್ಲಾ ಹಿಡಿದಂತಾಗಿತ್ತು. ಕುರ್ಚಿಗೆ ಹಾಗೇ ಒರಗಿ ಮೈ ಮುರಿದ. ಅವನ ಅತ್ಯಂತ ಮಹತ್ವಾಕಾಂಕ್ಷೆಯ ಕಥೆಯಾಗಿತ್ತದು.
ಮಹರ್ಷಿಯ ಕಥೆಗಳೆಲ್ಲಾ ಸುಖಾಂತ್ಯವಾಗುತ್ತವೆ. ಅವನ ಕಥೆಗಳು  ಒಂದು ಕಮರ್ಷಿಯಲ್ ಸಿನಿಮಾ ನೋಡಿದ ಹಾಗಿರುತ್ತದೆಯೇ ಹೊರತು ನಿಜ ಜೀವನಕ್ಕೆ ಹತ್ತಿರವಾಗಿರುವುದಿಲ್ಲ. ಮತ್ತೆ ಮತ್ತೆ ಕಾಡುವುದಿಲ್ಲ ಎಂಬಿತ್ಯಾದಿ ಯಾರೋ ಪತ್ರಿಕೆಯಲ್ಲಿ ವಿಮರ್ಶೆ ಮಾಡಿದ್ದರು. ಮಹರ್ಷಿಗೆ ಅದನ್ನು ಒಪ್ಪಲಾಗಿರಲಿಲ್ಲ. ಪತ್ರಿಕೆಗಾಗಲೀ, ಮತ್ತಿನ್ನಾರಿಗಾದರೂ‌ ಏನೂ‌ ಹೇಳದಿದ್ದರೂ ತಾನೊಂದು ಹೊಸ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದ್ದ. ಅವನ ಹೊಸ ಕಥೆಯಲ್ಲಿನ ಕೇಂದ್ರ ಪಾತ್ರ ಮೋಹನನ್ನು ತುಂಬಾ ಸಜ್ಜನನಂತೆ ಚಿತ್ರಿಸಿ, ಅಂತ್ಯದಲ್ಲಿ ಕೊಲೆಗಾರನನ್ನಾಗಿಸಿ ಓದುಗನನ್ನು ದಿಗ್ಭ್ರಮೆಗೊಳಿಸುವ ಉಪಾಯ ಮಾಡಿದ್ದ. ವೈಯಕ್ತಿಕವಾಗಿ ಅವನಿಗಿದು ತೀರಾ ವ್ಯತಿರಿಕ್ತ ನಿರ್ಧಾರ. ಕಥೆ ಓದಿದ ಮೇಲೆ ಓದುಗನಿಗೊಂದು ಭರವಸೆ ಸಿಗಬೇಕೇ ಹೊರತು ಮತ್ತಷ್ಟು ಸಂಕಟಕ್ಕೀಡು ಮಾಡಬಾರದೆಂಬುದು ಅವನ ಅಭಿಪ್ರಾಯ. ಈ‌ ಬಾರಿ ಯಾರೋ  ಅವನನ್ನು ಟೀಕಿಸಿದರೆಂದು  ಬಲವಂತಪೂರ್ವಕವಾಗಿ  ತನ್ನ ಶೈಲಿ ಬದಲಿಸಲು ಪ್ರಯತ್ನ ಪಡುತ್ತಿದ್ದ.

ಮಹರ್ಷಿ ಬರೆಯುತ್ತಿದ್ದ ಕಥೆ ಅದಾಗಲೇ ಮುಗಿಯುವ ಹಂತಕ್ಕೆ ಬಂದಿತ್ತು. ಮೋಹನನಿಂದ ಶ್ರಾವಣಿಯ ಕೊಲೆ ಮಾಡಿಸಿದ ತಕ್ಷಣಕ್ಕೆ ಮುಗಿದು ಹೋದಂತೇ ಲೆಕ್ಕ. ಕೊಲೆ ಮಾಡಿಸಲು ಯಾವ ಮಾರ್ಗ ಹಿಡಿಯುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ, ಟಕ್ ಟಕ್ ಟಕ್ ಎಂದು ಯಾರೋ ಬಾಗಿಲು ಬಡಿದರು.

ಮಹರ್ಷಿ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಯಾರೋ ಮಧ್ಯ ವಯಸ್ಕ. ಸಾಕಷ್ಟು ಎತ್ತರವಾಗಿದ್ದ. ಎಲ್ಲೋ ನೋಡಿದ್ದೀನಿ ಎಂದು ಮಹರ್ಷಿಗೆ ಅನ್ನಿಸಿದರೂ ತಕ್ಷಣಕ್ಕೆ ಗೊತ್ತಾಗಲಿಲ್ಲ.

ಮಹೀ, ನೀನು ಮಾಡುತ್ತಿರುವುದು ಸರಿಯಲ್ಲ.. ಬಂದಾತ ಹೇಳಿದ.

ಮಹರ್ಷಿಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೇವಲ ಅವನ ಆಪ್ತೇಷ್ಟರಷ್ಟೇ ಅವನನ್ನು ಮಹೀ ಎಂದು ಕರೆಯುತ್ತಿದ್ದುದು. ಬಂದಾತನ ಗುರುತು ನೆನಪಾಗುತ್ತಿಲ್ಲ. ಮೇಲಾಗಿ, ತಾನು ಏನು ತಪ್ಪು ಮಾಡುತ್ತಿದ್ದೇನೆ ಎಂಬುದೇ ಅವನಿಗೆ ಹೊಳೆಯಲಿಲ್ಲ.

ಏ..ಏನು ಮಾಡ್ತಿರೋದು ಸರಿಯಲ್ಲ? ನೀವ್ಯಾರು ಗೊತ್ತಾಗಲಿಲ್ಲ. ನಿಧಾನವಾಗಿ ಹೇಳಿದ.

ಯಾಕೆ ಮಹೀ, ಏನಾಯಿತು. ಗುರುತು ಸಿಗಲಿಲ್ವ?‌ನಾನು ಮೋಹನ.

ಬಾಗಿಲನ್ನು ಹಿಡಿದಿರಲಿಲ್ಲವೆಂದರೆ ಮಹರ್ಷಿ ಅಲ್ಲೇ ಬಿದ್ದುಬಿಡುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ನಿಶ್ಶಕ್ತಿ ಆವರಿಸಿಕೊಂಡಿತು. ಬಂದಾತನನ್ನು ಈಗ ಗುರುತು ಹಿಡಿದ.
ಮೋಹನ, ಮೋಹನ ಅಂದ್ರೆ... ಮಹರ್ಷಿ ತೊದಲಿದ.

ಹೌದು ಅದೇ ಮೋಹನ. ನಾನು ಕೊಲೆಗಾರ ಅಲ್ಲ ಮಹೀ. ದಯವಿಟ್ಟು ನನ್ನಿಂದ ಆ ಕೆಲಸ ಮಾಡಿಸಬೇಡ.

ಮಹರ್ಷಿಗೆ ತಲೆ ತಿರುಗುವುದೊಂದು ಬಾಕಿ. ಏನು ಹೇಳಬೇಕೆಂಬುದು ತಿಳಿಯದೆ ಅವನನ್ನು ಒಳಗೆ ಕರೆದು ಕೂರಿಸಿದ.

ನೀನು, ನೀ...ನೀವು ಇಲ್ಲಿಗೆ ಹೇಗೆ ಬಂದ್ರಿ? ಕೇಳಿದ

ನೀನು ಎಂದೇ ಹೇಳು. ಬೇರೆ ಏನು ಕರೆದರೂ ಅಸಹಜವಾಗಿರುತ್ತದೆ. ಮುಖ್ಯವಾಗಿ ನೀನೀಗ ಕೇಳಬೇಕಾಗಿರುವುದು ನಾನು ಹೇಗೆ ಬಂದೆ ಎನ್ನುವುದಲ್ಲ. ಯಾಕೆ ಬಂದೆ ಎನ್ನುವುದು. ಹೇಗೆ ಎನ್ನುವುದು ಸದ್ಯಕ್ಕೆ ಬೇಕಾಗಿಲ್ಲ. ಮೋಹನ ಹೇಳಿದ.

ಹಾಂ, ಹೌದು. ಯಾಕೆ ಬಂದೆ. ಮಹರ್ಷಿಗೆ ಇನ್ನೂ ಗೊಂದಲ.

ನಾನು ತಪ್ಪು ಮಾಡುವುದನ್ನು ತಪ್ಪಿಸಿಕೊಳ್ಳಲು.

ಅಂದರೆ?

ಕೊಲೆ ಮಾಡುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ ಮಹೀ. ಅದೂ ನಾನು ಎತ್ತಿ ಆಡಿಸಿದ ಮಗುವನ್ನು? ನಿನಗೆ ಆ ರೀತಿ ಯೋಚಿಸಲು ಮನಸ್ಸಾದರೂ‌ ಹೇಗೆ ಬಂತು? ಆ ಕೆಲಸ ನನ್ನಿಂದ ಸಾಧ್ಯವಿಲ್ಲ. ಅವನ ಧ್ವನಿ ಭಾರವಾಗಿತ್ತು.

ಮಹರ್ಷಿಗೆ ಅವನ ದು:ಖ ನೋಡಿ ಸ್ವಲ್ಪ ಎಚ್ಚೆತ್ತಂತಾಯಿತು.
ನೀನೇನು ಹೇಳಬೇಕು ಅಂತಿದ್ದೀಯಾ? ಕೇಳಿದ.

ನೀನು ಬರೆಯುತ್ತಿರುವ ಕಥೆಯಲ್ಲಿ ಕೊಲೆ ಮಾಡಿಸಬೇಡ. ನಾನು ಮಾಡಲಾರೆ. ಮೋಹನ ಹೇಳಿದ.

ಇಷ್ಟು ಹೊತ್ತಿಗಾಗಲೇ, ಮಹರ್ಷಿಗೆ ಧೈರ್ಯ ಬಂದಿತ್ತು.
ಅದು ಹೇಗಾಗುತ್ತೆ?‌ಅದು ನನ್ನ ಕಥೆ. ನಾನು ಬರೆಯುತ್ತಿರುವುದು. ನಾನು ಎಣಿಸಿದಂತೆಯೇ ಇರಬೇಕು.

ಅದು ನನ್ನ ಕಥೆ ಕೂಡ ಮಹೀ. ಮೋಹನ ಹೇಳಿದ.

ನೀನು ಕೇವಲ ಪಾತ್ರ. ನೀನಿಲ್ಲಿಗೆ ಬಂದು ಈ ರೀತಿ ಮಾತನಾಡುತ್ತಿರುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅದೂ ಈ‌ ರೀತಿ! ಮಹರ್ಷಿ ಹೇಳುತ್ತಲೇ ಹೋದ.

ಇದು ನನ್ನ ವ್ಯಕ್ತಿತ್ವದ ಅಳಿವು ಉಳಿವಿನ ಪ್ರಶ್ನೆ ಮಹೀ. ನಾನು ಬರಲೇ ಬೇಕಿತ್ತು. ನಾಳೆ ಬೇರೆ ಯಾರಾದರೂ ನಿನ್ನ ಕಥೆ ಹೇಳುವಾಗ ನಿಜ ಹೇಳಲಿ ಎಂದು ನೀನು ಬಯಸುವುದಿಲ್ಲವೇನು? ಇಲ್ಲ ಸಲ್ಲದ ಅಪವಾದ ಮಾಡಿದರೆ, ಇಲ್ಲವೇ ನಿನ್ನ ಸ್ವಭಾವವನ್ನೇ ತಿರುಚಿ ಬರೆದರೆ  ಸುಮ್ಮನಿರುತ್ತೀಯಾ?

ಅದು ಸರಿ, ಆದರೆ ನೀನು ಇಲ್ಲಿ?

ಪದೇ ಪದೇ ಅದನ್ನೇ ಕೇಳಬೇಡ. ಈಗ ನಾನು ಹೇಳುವುದನ್ನು ನೀನು ಮಾಡ್ತೀಯೋ ಇಲ್ಲವೋ  ಅಷ್ಟು ಹೇಳು. ಮೋಹನನ  ಧ್ವನಿ ಗಡುಸಾಗಿತ್ತು.

ಮಹರ್ಷಿಗೆ ಸಿಟ್ಟು ಬಂತು. ಅವನು ಬರೆಯುತ್ತಿರುವ, ಅವನ ಕಥೆಯಲ್ಲಿನ ಪಾತ್ರ ಅವನಿಗೇ ಧಮಕಿ ಹಾಕುವುದನ್ನು ಅವನು ಸಹಿಸದಾದ.
ನೋಡು, ನಾನು ಹೇಳಿದಂತೆ ಮಾಡುವುದಷ್ಟೇ‌ ನಿನ್ನ ಕೆಲಸ. ನನ್ನ ಸೃಷ್ಟಿ ನೀನು. ನನಗೇ‌ ಬುದ್ಧಿ  ಹೇಳುವಷ್ಟು  ನಿನಗೆ ಅಧಿಕಾರವಿಲ್ಲ.

ಬೇಡ ಮಹೀ, ನನ್ನಿಂದ ಆ ಕೊಲೆ ಮಾಡಿಸಬೇಡ.

ನೀನು ಜೋರು ಮಾಡುತ್ತೀಯೋ, ಬೇಡುತ್ತೀಯೋ, ಏನೇ ಮಾಡಿದರೂ ನನ್ನ ಮನಸು ಬದಲಿಸಲಾರೆ. ನನ್ನ ಕಥೆ ಅದು. ನಾನು ಹೇಗೆ ಬರೆಯಬೇಕೆಂದು ನಿರ್ಧರಿಸಿದ್ದೀನೋ ಹಾಗೇ ಬರೆಯುವೆ. ಆ ಕೊಲೆ ಆಗೇ ತೀರಬೇಕು. ಅದೇ ನನ್ನ ನಿರ್ಧಾರ.

ಯಾವುದೇ ಕಾರಣಕ್ಕ್ಕೆ ನೀನು ಮನಸು ಬದಲಿಸಲಾರೆಯೇನು?

ಖಂಡಿತಾ ಸಾಧ್ಯವಿಲ್ಲ.

ಇನ್ನೊಮ್ಮೆ ಯೋಚನೆ ಮಾಡು.

ಪ್ರಶ್ನೆನೇ ಇಲ್ಲ. ಏನು ಹೆದರಿಸ್ತಾ ಇದ್ದೀಯಾ?

ಹಾಗೇ‌ ತಿಳಿದುಕೋ. ಆದರೆ ನಾನು ಆ ಕೊಲೆ ಮಾಡಲಾರೆ.

ನಾನೂ‌ ನೋಡೇ ಬಿಡ್ತೀನಿ.

ಬೇಡ ಮಹೀ.

ಇಲ್ಲಾ ಅಂದ್ರೆ ಏನು ಮಾಡ್ತೀಯಾ? ನಿನ್ನಿಂದ ಏನೂ‌ ಮಾಡ್ಲಿಕ್ಕೆ ಸಾಧ್ಯವಿಲ್ಲ. ನಾನು ಹೇಳಿದಂಗೆ ನೀನು ಕೇಳ್ಬೇಕು. ಈಗ ನೀನು ಇಲ್ಲಿಂದ ಹೊರಡು. ಅದೆಲ್ಲಿಂದ ಬಂದಿದೀಯೋ ಅಲ್ಲಿಗೇ ಹೋಗು. ಮಹರ್ಷಿ ಸಿಟ್ಟಿನಿಂದ ಕೂಗಿದ.

ಮೋಹನ ನಿಟ್ಟುಸಿರುಬಿಟ್ಟ. ಸರಿ ಮಹೀ. ಕೊನೆಗೂ ನನ್ನ ಕೊಲೆಗಾರನನ್ನಾಗಿಸಿ ಬಿಡ್ತೀಯ ಅಂದಾಯ್ತು. ಹಂ, ಆಗ್ಲಿ. ಆದ್ರೆ ಶ್ರಾವಣೀನ ಕೊಲೆ ಮಾಡುವಷ್ಟು  ನೀಚ ನಾನಿನ್ನೂ ಆಗಿಲ್ಲ. ಅದರ ಬದಲಿಗೆ ನಿನ್ನನ್ನೇ ಮುಗಿಸಿದರೆ ಒಂದು ಚಿಕ್ಕ ಹುಡುಗಿಯ ಪ್ರಾಣ ಉಳಿಸಿದ ತೃಪ್ತಿ ನನಗಿರುತ್ತದೆ.
ಮೋಹನ ಮುಂದೆ ಬಂದವನೇ, ಮಹರ್ಷಿಯ ಕತ್ತು ಹಿಸುಕತೊಡಗಿದ. ಮಹರ್ಷಿಯ ಕಣ್ಣು ಕತ್ತಲಾಗುತ್ತಾ ಬಂತು. ದಡಬಡಿಸಿ ಕೈ ಕಾಲು ಆಡಿಸಿದ. ಆಸರೆಗಾಗಿ ತಡಕಾಡಿದ. ಇದ್ದಕ್ಕಿದ್ದಂತೆ  ಬಿಗಿತ ಸಡಿಲಾದಂತಾಯಿತು. ಮಹರ್ಷಿ ಕಣ್ಣು ತೆರೆದ. ಯಾರೂ ಇರಲಿಲ್ಲ. ಅವನು ಬರೆಯುತ್ತಾ ಕುಳಿತಿದ್ದ ಟೇಬಲ್ ಚೆಲ್ಲಾಪಿಲ್ಲಿಯಾಗಿತ್ತು. ಮಹರ್ಷಿ ಇನ್ನೂ ಕುರ್ಚಿಯಲ್ಲಿ ಕುಳಿತಿದ್ದ.

ತಾನು ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗಲಿಕ್ಕೆ ಕೆಲ ಹೊತ್ತು ಬೇಕಾಯಿತು. ಮಹರ್ಷಿ ಇನ್ನೂ‌ ಬೆವರುತ್ತಲೇ ಇದ್ದ. ಮನಸ್ಸನ್ನು ತಹಬದಿಗೆ ತರಲು ಅವನಿಗೆ ಮತ್ತೂ ಸ್ವಲ್ಪ ಹೊತ್ತೇ ಹಿಡಿಯಿತು. ಸ್ವಲ್ಪ ಸಮಾಧಾನವಾದ ಮೇಲೆ, ಕುರ್ಚಿಯಿಂದೆದ್ದು , ಕನಸಲ್ಲಿ ಬೆಚ್ಚಿಬಿದ್ದ ರಭಸಕ್ಕೆ ಹಾರಿ ಹೋಗಿದ್ದ ಹಾಳೆಗಳನ್ನೆಲ್ಲಾ ತಂದು ಮೇಜಿನ ಮೇಲೆ ಜೋಡಿಸಿದ. ಅವನಿಗೆ ತನ್ನ ಮೇಲೇ ನಗು ಬಂತು. ಕಥೆಯೊಳಗಿನ ಪಾತ್ರ ತನ್ನ ಕೊಲೆ ಮಾಡಿದಂತೆ? ಸಣ್ಣಗೆ ನಕ್ಕ. ಸರಿ, ದಣಿವಾರಿದ್ದರಿಂದ ಕಥೆ ಮುಂದುವರೆಸೋಣವೆಂದು  ಮಹರ್ಷಿ ಮತ್ತೆ ಬರೆಯಲು ಕುಳಿತ.

ಆಗ, ಟಕ್ ಟಕ್ ಟಕ್ ಎಂದು ಬಾಗಿಲು ಬಡಿದ ಸದ್ದಾಯಿತು.

Saturday, September 4, 2010

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನಿದ್ದು ಬಿಟ್ಟರೆ (ಆಸ್ಪತ್ರೆಯಲ್ಲಿದ್ದು ಬಂದಂತೆ), ಮತ್ತೆ ಮೊದಲಿನ ವೇಗಕ್ಕೆ ಮರಳಲು ಕೆಲ ಸಮಯ ಬೇಕಾಗುತ್ತದೆ. ಅದು ಮನಸ್ಸಿಗೂ ಅನ್ವಯಿಸುತ್ತದೆ ಅಂತ ಈಗ ಗೊತ್ತಾಗಿದೆ. ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಇಷ್ಟು ದಿನಗಳವರೆಗೆ ಬರವಣಿಗೆಗೆ ರಜೆ ಹಾಕಿ, ಆಫೀಸು-ಮನೆ ಅಂತ ಸುತ್ತಾಡುತ್ತಿದವನು ದಿಢೀರ್ ಆಗಿ ಪುಸ್ತಕ ಪೆನ್ನು ಎತ್ತಿಕೊಂಡರೆ, ಅಯ್ಯೋ ಊಹೂಂ ಏನೂ ಹೊಳೆಯುತ್ತಿಲ್ಲ. ಅರ್ಧ ಬರೆದ ಕತೆಗಳು ನನ್ನೆಡೆಗೆ ದೈನೇಸಿ ನೋಟ ಬೀರುತ್ತಿದ್ದರೆ, ನಾನು ಮುಖ ಮುಚ್ಚಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಸುತ್ತಾಡುತ್ತಿದ್ದಾಗ, ಸಿನಿಮಾ ನೋಡುತ್ತಿದ್ದಾಗ ಅಥವಾ ಏನಾದರೂ ಮಾಡುತ್ತಿದ್ದಾಗ ಒಂದಿಷ್ಟು ಯೋಚನೆಗಳು ಮೂಡುತ್ತಿದ್ದವು. ರಾತ್ರಿ ಬರೆಯೋಣವೆಂದು ಕುಳಿತರೆ, ಅಷ್ಟೊತ್ತಿಗಾಗಲೇ ಆ ಭಾವ ತೀವ್ರತೆ ಇರುತ್ತಿರಲಿಲ್ಲ. ಹೀಗೇ ಆದರೆ ಸರಿಯಿಲ್ಲ, ಏನಾದರೂ ಬರೆಯಲೇಬೇಕು ಅಂತ ನಿರ್ಧಾರ ಮಾಡಿ ಕುಳಿತಾಗ ಹೊಳೆದದ್ದೇ ಈ ಲೇಖನ.

ನನಗೆ ಮೊದಲಿನಿಂದಲೂ ಓದುವ ಗೀಳು. ನಾವು ಕೆಲವು ಗೆಳೆಯರು ಸೇರಿಕೊಂಡಾಗ ಬರೀ ಪುಸ್ತಕಗಳ ಬಗ್ಗೆಯೇ ಚರ್ಚೆ ಮಾಡುತ್ತಿರುತ್ತೇವೆ. ಒಂದು ಹೊಸ ಪುಸ್ತಕ, ಇಲ್ಲವೇ ಎಲ್ಲರೂ ಓದಿರುವ ಪುಸ್ತಕಕ್ಕೆ ಒಂದು ಹೊಸ ನೋಟ, ಇತ್ಯಾದಿ ಮಾತನಾಡಲು ತುಂಬ ಖುಶಿಯಾಗುತ್ತೆ. ಅದನ್ನೇ ಇಲ್ಲಿಯೂ ಮಾಡುವ ಪ್ರಯತ್ನ ಮಾಡಿದ್ದೇನೆ. ಒಂದಿಷ್ಟು ಪುಸ್ತಕಗಳನ್ನು ಓದಿದಾಗ ನನಗಾದ ಸಂತೋಷ, ಸಂಕಟಗಳನ್ನು ಹಂಚಿಕೊಳ್ಳುವ ಬಯಕೆಯಿದೆ. ಸ್ವಂತವಾಗಿಯಾದರೆ ಏನಾದರೂ ಬರೆಯಬಹುದು. ಆದರೆ, ಪರಿಚಯ? ಉಹುಂ, ನನಗಿನ್ನೂ ಬರುವುದಿಲ್ಲ. ನನ್ನ ಮೊದಲ ಪ್ರಯತ್ನವಿದು. ನಿಮಗಿಷ್ಟವಾದಲ್ಲಿ ಮುಂದಿನದ್ದು ಯೋಚಿಸಿದರಾಯಿತು.


ಧರ್ಮ, ದೇವರು, ಭಕ್ತಿ, ನಂಬಿಕೆಗಳಂತಹ ಸೂಕ್ಷ್ಮ ವಿಚಾರಗಳ ಮೇಲೆ, ಕಾಲಾಂತರದಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. ಪರ ವಿರೋಧ ಎಂದಿಗೂ ಇದ್ದಿದ್ದೇ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ, ಯೋಚನೆಗಳನ್ನು ಚರ್ಚಿಸುವ ಹಕ್ಕು, ಸ್ವಾತಂತ್ರ್ಯ ಇದ್ದೇ ಇದೆ. ವೈಯಕ್ತಿಕವಾಗಿ ಏನು ಮಾಡಿದರೂ ಚೆನ್ನವೇ. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹೇರಲು ಪ್ರಯತ್ನಿಸಿದಾಗಲೇ ತೊಂದರೆ ಶುರುವಾಗುವುದು.

ದೇವರೆಂಬ ಕಲ್ಪನೆ(!), ಮನುಷ್ಯನ ನೆನಪು ಎಲ್ಲಿಯವರೆಗೆ ಹೋಗುವುದೋ ಅಲ್ಲಿಯವರೆಗೆ ಸಾಗುತ್ತದೆ. ದೇವರು ಕಲ್ಪನೆಯೋ, ಸಾಧ್ಯತೆಯೋ ನಾನು ಚರ್ಚಿಸಲು ಹೋಗುವುದಿಲ್ಲ. ಕನ್ನಡದಲ್ಲಿ ಅನೇಕ ಹಿರಿಯರು ಇದೇ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಕಾರಂತರ ಮೂಕಜ್ಜಿ ಹೇಳುವ ದೇವರು ಎಷ್ಟು ಆಸಕ್ತಿಕರವಾಗಿದೆಯೋ, ಮೂರ್ತಿರಾಯರ ದೇವರೂ ಸಹ ಅಷ್ಟೇ ಚೆನ್ನಾಗಿದೆ. ಈ ಲೇಖನದ ಉದ್ದೇಶ ದೇವರಲ್ಲ. ಆದರೆ, ದೇವರೆಂಬ ಕಲ್ಪನೆ ಮತ್ತು ನಂಬಿಕೆಗಳ ಸುತ್ತ ಹೆಣೆದಿರುವ ಒಂದು ಪುಸ್ತಕ ಸರಣಿಯೊಂದರ ಪರಿಚಯ ಮಾಡಿಸುವ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ.

ನೀವು ಭೈರಪ್ಪನವರ ಪರ್ವ ಓದಿದ್ದಲ್ಲಿ, ಈ ರೀತಿಯ ಪ್ರಯತ್ನವನ್ನು ಖಂಡಿತಾ ಪ್ರಶಂಸಿಸುತ್ತೀರಿ. ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು, ಆದರೆ ಅಷ್ಟು ವಿಭಿನ್ನವಾಗಿ ಯೋಚಿಸುವುದು ನಿಜಕ್ಕೂ ಅಭಿನಂದನಾರ್ಹ.

Philip Pullman ಬರೆದಿರುವ "His Dark Materials" - trilogy ಈ‌ ಲೇಖನದ ಉದ್ದೇಶ.

ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಈ ಕಥಾ ಸರಣಿ, ಮೂರು ಪುಸ್ತಕಗಳಲ್ಲಿ , ಅತ್ಯಂತ ವಿವಾದಕ್ಕೀಡಾದ, ಚರ್ಚೆಗೊಳಗಾದ ಕಥೆ ಹೇಳುತ್ತದೆ. ( Northern Lights, Subtle Knife, Amber Spyglass ). ಈ ಸರಣಿ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ಕಥೆ ಪ್ರಾರಂಭಿಸುವ ಮುನ್ನ ಲೇಖಕ ಈ ಕೆಳಗಿನ ಪದ್ಯ ಉಲ್ಲೇಖಿಸುತ್ತಾನೆ. ಇಲ್ಲಿಂದಲೇ ಸರಣಿಯ ಹೆಸರನ್ನೂ ಎರವಲು ಪಡೆದಿದ್ದಾನೆ. ಮಿಲ್ಟನ್ ನ ಪುಸ್ತಕದ ಪ್ರಭಾವ, ಲೇಖಕನೇ ಒಪ್ಪಿಕೊಂಡಂತೆ, ಗಾಢವಾಗಿದೆ.

Into this wild abyss,
The womb of nature and perhaps her grave,
Of neither sea, nor shore, nor air, nor fire,
But all these in their pregnant causes mixed
Confusedly, and which thus must ever fight,
Unless the almighty maker them ordain
His dark materials to create more worlds,
Into this wild abyss the wary fiend
Stood on the brink of hell and looked a while,
Pondering his voyage...
John Milton: Paradise Lost, Book II

ದೇವರು, ವಿಜ್ಞಾನ ಮತ್ತು ಕಲ್ಪನೆಯನ್ನು ಈ ಸರಣಿಯಲ್ಲಿ ಎಷ್ಟು ಸುಂದರವಾಗಿ ಹೆಣೆಯಲಾಗಿದೆಯೆಂದರೆ, ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸದೆ ಕೆಳಗಿಡಲು ಮನಸ್ಸಾಗುವುದಿಲ್ಲ.ಒಂದು ಅದ್ಭುತ ಕಥೆಯಾಗಿಯೂ, ಧರ್ಮ ವಿರೋಧಿಯಾಗಿಯೂ ಎದ್ದು ನಿಲ್ಲುವುದು ಈ ಪುಸ್ತಕಗಳ ವಿಶೇಷ.

ಕೇವಲ ಕಥೆಯಾಗಿ ಓದುವುದಾದರೆ, ಒಂದು ಅದ್ಭುತ ಲೋಕವನ್ನು ಲೇಖಕ ಬಿಚ್ಚಿಡುತ್ತಾನೆ. ಆ ಲೋಕದಲ್ಲಿ, ಕೇವಲ ರವಿಯಿಲ್ಲ, ಭುವಿಯಿಲ್ಲ. ಬದಲಿಗೆ ಅನೇಕಾನೇಕ ಭುವಿಗಳಿವೆ. ಒಂದು ಸುಂದರ ಸಮಾನಾಂತರ ಜಗತ್ತುಗಳ ಕಲ್ಪನೆಯಿದೆ. ಅಲ್ಲಿ ಒಂದು ವಿಶ್ವದಿಂದ ಮತ್ತೊಂದು ವಿಶ್ವಕ್ಕೆ ಹೋಗಬಹುದು. ನಿಮ್ಮ ಆತ್ಮದ ಜೊತೆ ಮಾತನಾಡಬಹುದು. ಖುದ್ದು ಭಗವಂತನಿಗೇ ಯುದ್ಧಕ್ಕೆ ಆಹ್ವಾನ ನೀಡಬಹುದು!

ತುಂಬ ಕುತೂಹಲಕಾರಿಯಾಗಿ ಬರೆದಿರುವ ಈ ಸರಣಿಯನ್ನು ಸಿನಿಮಾ ಮಾಡುವ ಪ್ರಯತ್ನ ಕೂಡ ನಡೆಯಿತು. Golden Compass ಎನ್ನುವ ಹೆಸರಲ್ಲಿ ಬಿಡುಗಡೆಯಾದ ಚಿತ್ರ, ಈ ಸರಣಿಯಲ್ಲಿ ಮೊದಲ ಭಾಗದ ಕಥೆಯನ್ನು ಮಾತ್ರ ಹೇಳುತ್ತದೆ. ಚಿತ್ರ ಬಿಡುಗಡೆಯಾದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಒಬ್ಬ ಹನ್ನೆರಡು ವರ್ಷದ ಹುಡುಗಿಯ ಸುತ್ತ ಗಿರಕಿ ಹೊಡೆಯುವ ಈ ಕಥೆಯಲ್ಲಿ ಅನೇಕ ಅನೂಹ್ಯ ಕಲ್ಪನಾ ಪ್ರಯೋಗಗಳಿವೆ. ಮೊದಲಿಗೆ , ಲೇಖಕ, Daemon ಎನ್ನುವ ಹೊಸ ಕಲ್ಪನೆ ತೇಲಿ ಬಿಡುತ್ತಾನೆ. ನಿಮ್ಮ ಆತ್ಮದಿಂದ ಒಂದು ಭಾಗವನ್ನು ತೆಗೆದು ಅದಕ್ಕೊಂದು ರೂಪ ಕೊಟ್ಟರೆ, ಅದು Daemon. ನೀವು ಮತ್ತು ನಿಮ್ಮ Daemon ಒಬ್ಬರನ್ನೊಬ್ಬರು ಬಿಟ್ಟು ದೂರ ಹೋಗಲು ಸಾಧ್ಯವಿಲ್ಲ. Daemonಗಳ ರೂಪ ಕೂಡ ವಿಶಿಷ್ಟ. ಚಿಕ್ಕ ಮಕ್ಕಳ Daemonಗಳು ಯಾವ ವೇಷ ಬೇಕಾದರೂ ಧರಿಸಬಹುದು. ( ಬೆಕ್ಕು, ಗಿಳಿ, ನಾಯಿ ಇತ್ಯಾದಿ ). ದೊಡ್ಡವರ Daemonಗಳು ಒಂದೇ ರೂಪದಲ್ಲಿ ಸ್ಥಿರಗೊಂಡಿರುತ್ತವೆ. Daemonಗಳು ವ್ಯಕ್ತಿಗಳ ಸ್ವಭಾವಕ್ಕ್ಕೆ ತಕ್ಕಂತೆ ಇರುತ್ತವಾದ್ದರಿಂದ, ಸೇವಕರ Daemonಗಳು ಸಾಮಾನ್ಯವಾಗಿ ನಾಯಿಗಳಾಗಿರುತ್ತವೆ. ಸೈನಿಕರಿಗೆ ತೋಳ, ಹುಲಿ Daemonಗಳು. ನೀಚ ಬುದ್ಧಿಯವರಿಗೆ ಹಾವು ಇತ್ಯಾದಿ. ಅದೆಷ್ಟು ವಿಚಿತ್ರ ಈ ಕಲ್ಪನೆ!

ನಂತರ ಲೇಖಕ ಬೇರೆ ಬೇರೆ ವಿಶ್ವಗಳ ಬಗ್ಗೆ ಹೇಳುತ್ತಾನೆ. ವಿಜ್ಞಾನ ಹೇಳುತ್ತಾ ಬಂದಿರುವಂತೆ, ಈ ಬ್ರಹ್ಮಾಂಡದಲ್ಲಿ ನಮ್ಮದಷ್ಟೇ ಅಲ್ಲ, ಅನೇಕ ಭುವಿಗಳಿವೆ. ಅಲ್ಲಿಯೂ ಜೀವ ವಿಕಸನವಾಗಿದೆ. ಇಲ್ಲಿಯವರೆಗೂ ಸರಿ, ಎಲ್ಲರೂ ಒಪ್ಪುವಂಥದ್ದೇ. ಅಲ್ಲಿಂದ ಮುಂದೆ ಲೇಖಕ Quantum Physicsಗೆ ಸಾಗುತ್ತಾನೆ. ಸಮಾನಾಂತರ ಜಗತ್ತು ಬಿಚ್ಚಿಕೊಳ್ಳುತ್ತದೆ. ವಿಚಾರ ಮಾಡಿ, ಎರಡು ವಿಶ್ವಗಳು ಒಟ್ಟೊಟ್ಟಿಗೇ ವಿಕಸನಗೊಳ್ಳುತ್ತವೆ. ಎರಡೂ ಕಡೆ ಒಂದೇ ರೀತಿಯ ಜೀವ ಸಂಕುಲ. ನೀವು ಇಲ್ಲಿ ಇದ್ದಲ್ಲಿ, ಆ ವಿಶ್ವದಲ್ಲಿಯೂ ಇರಬಹುದು. ಆದರೆ ಇಲ್ಲಿ ಆದದ್ದೆಲ್ಲಾ ಅಲ್ಲಿಯೂ ಆಗಬೇಕೆಂದೇನಿಲ್ಲ. ಅವೆರಡೂ ಸಮಾನಾಂತರ ವಿಶ್ವಗಳಷ್ಟೇ (parallel universe).

ಈಗ ಸಮಾನಾಂತರ ಅಥವಾ ಅನೇಕ ವಿಶ್ವಗಳಿದ್ದಲ್ಲಿ, ಒಂದರಿಂದ ಮತ್ತೊಂದಕ್ಕೆ, ಅಥವಾ ಎಲ್ಲಾ ವಿಶ್ವಗಳಿಗೂ ಹೋಗಿ ಬರುವ ಅವಕಾಶವಿಲ್ಲದಿದ್ದಲ್ಲಿ ಕಥೆ ಕುತೂಹಲಕಾರಿಯಾಗಿರುವುದಿಲ್ಲ. ಹಾಗಾಗಿ, ಅದನ್ನು ಸಾಧಿಸಲು ಲೇಖಕ ಚಾಕುವೊಂದನ್ನು ಸೃಷ್ಟಿಸುತ್ತಾನೆ. ಈ ಚಾಕುವಿನ ಅಲಗು ಬರಿಗಣ್ಣಲ್ಲಿ ನೋಡಲಾಗದಷ್ಟು ಹರಿತ. ಅದು ಎಷ್ಟು ಶಕ್ತಿಶಾಲಿಯೆಂದರೆ, ಅದು ಯಾವ ವಸ್ತುವನ್ನು ಬೇಕಾದರೂ ತುಂಡು ಮಾಡೀತು. ಅದನ್ನು ಉಪಯೋಗಿಸಿ ವಿಶ್ವಗಳನ್ನು ಬೇರ್ಪಡಿಸುವ ಅದೃಶ್ಯ ಗೋಡೆಗಳನ್ನು ಕೂಡ ಸೀಳಬಹುದು.

ಮನುಷ್ಯ ಮಾತ್ರನಿಗೆ ಈ‌ ಅನೇಕ ವಿಶ್ವಗಳ ಬಗೆಗೆ ಕಲ್ಪನೆ ಬಂದದ್ದಾದರೂ ಹೇಗೆ? ಅವನು ಬೌದ್ಧಿಕವಾಗಿ ಇಷ್ಟು ಬೆಳವಣಿಗೆ ಹೊಂದಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಲೇಖಕ ಮತ್ತೊಂದು ಹೊಸ ವಿಚಾರವನ್ನು ಹೇಳುತ್ತಾನೆ. ಅವನ ಪ್ರಕಾರ ಇದಕ್ಕೆಲ್ಲಾ ಕಾರಣ Dust! ಹೌದು Dust ಅಥವಾ ಆಡು ಭಾಷೆಯಲ್ಲಿ ಹೇಳುವುದಾದರೆ , ಧೂಳು ಇದಕ್ಕೆಲ್ಲಾ ಕಾರಣ. ಆದರೆ Dust ಎಂದರೆ ಸಾಧಾರಣ ಧೂಳಿನ ಕಣಗಳಲ್ಲ. ಅವು ಪ್ರಜ್ಞೆ . ಅವೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ. ಭೌತಶಾಸ್ತ್ರ ಹೇಳುವಂತೆ, neutron, proton, electronಗಳ ತರಹ Dust ಕೂಡ ಒಂದು ಪರಮಾಣು ಕಣ. ಈಗ ಈ‌ ಕಣಗಳಿಗೆ ಪ್ರಜ್ಞೆ ಇದ್ದಲ್ಲಿ, ಅವಕ್ಕೆ ತಮ್ಮದೇ ಆದ ಇಚ್ಛೆ ಇದ್ದಲ್ಲಿ, ಉದ್ದೇಶವಿದ್ದಲ್ಲಿ! ಲೇಖಕ ಅವುಗಳಿಗೆ Dust ಅಥವಾ Dark Matter ಎಂದು ಕರೆಯುತ್ತಾನೆ. ಅವುಗಳಿಗೆ ತಮ್ಮದೇ ಆದ ಉದ್ದೇಶವಿದ್ದಿದ್ದರಿಂದ ಅವು ಮನುಷ್ಯನ ಬೆಳವಣಿಗೆಗೆ ಸಹಕರಿಸಿದವು. ಬೇರೆ ಇನ್ಯಾವುದೋ ವಿಶ್ವದಲ್ಲಿ, ಅವುಗಳ ಅನುಕೂಲಕ್ಕೆ ತಕ್ಕಂತೆ ಮತ್ತೆ ಬೇರೆ ಯಾವ ಪ್ರಾಣಿಗೋ ಅವು ಸಹಕರಿಸಿದ್ದಾವು!

ಮಕ್ಕಳೊಂದಿಗೆ Dustನ ನಂಟು ಸ್ವಲ್ಪ ಕಡಿಮೆ. ಹಾಗಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಕಡಿಮೆ. ಅವುಗಳ ವ್ಯಕ್ತಿತ್ವ ಇನ್ನೂ ಪರಿಪೂರ್ಣವಾಗಿ ರೂಪುಗೊಂಡಿಲ್ಲವಾದ್ದರಿಂದ ಮಕ್ಕಳ daemonಗಳಿಗೆ ಒಂದು ಸ್ಥಿರವಾದ ರೂಪವಿಲ್ಲ ! ಹರೆಯಕ್ಕೆ ಬರುತ್ತಿದ್ದಂತೆ, Dustನ ಸಾಂದ್ರತೆ ಹೆಚ್ಚಾಗುವುದರಿಂದ, ಬುದ್ಧಿಶಕ್ತಿ ಹೆಚ್ಚಾಗುತ್ತದೆ. ವ್ಯಕ್ತಿತ್ವ ಸ್ಪಷ್ಟವಾಗುತ್ತದೆ. Daemonಗಳೂ ಒಂದು ರೂಪದಲ್ಲಿ ಸ್ಥಿರವಾಗುತ್ತವೆ.

ಇಷ್ಟೆಲ್ಲಾ ಅನೂಹ್ಯ ಸಂಗತಿಗಳನ್ನು ಹೇಳುತ್ತಾ ಹೋಗುವ ಲೇಖಕ, ಕಥೆಯನ್ನು ಇನ್ನೂ ಕುತೂಹಲಕಾರಿಯನ್ನಾಗಿಸಲು, ಇಡೀ ಬ್ರಹ್ಮಾಂಡಕ್ಕೇ ಆಪತ್ತನ್ನು ತಂದಿಡುತ್ತಾನೆ, ಚಾಕುವಿನಿಂದ.ವಿಷಯವೇನೆಂದರೆ, ವಿಶ್ವದಿಂದ ವಿಶ್ವಕ್ಕೆ ಹೋಗಲು ಚಾಕುವಿನಿಂದ ಕನ್ನ ಕೊರೆದ ಮೇಲೆ, ಅದನ್ನು ಮುಚ್ಚದಿದ್ದಲ್ಲಿ, Dust ಪಾತಾಳಕ್ಕೆ ಸೋರಿಹೋಗುತ್ತದಂತೆ. ಹಾಗೂ ಪ್ರತಿ ಬಾರಿ ಕನ್ನ ಕೊರೆದಾಗ ಪಾತಾಳದಿಂದ ಒಂದು ದುಷ್ಟ ಕಣದ ಸೃಷ್ಟಿಯಾಗುತ್ತದಂತೆ. ಮತ್ತೆ ಆ ದುಷ್ಟ ಕಣದ ಆಹಾರವೇ ಸಮಸ್ತ ಲೋಕದ ಅಭ್ಯುದಯಕ್ಕೆ ಕಾರಣವಾದ Dust. ಹೀಗಾಗಿ, ಸೋರಿ ಹೋಗುತ್ತಿರುವ Dust ಉಳಿಸುವ ಮತ್ತು ಪಾತಾಳ ಲೋಕದ ದುಷ್ಟ ಕಣಗಳನ್ನು ನಾಶ ಮಾಡುವ ಜವಾಬ್ದಾರಿ, ನಮ್ಮ ಕಥಾನಾಯಕಿ, ಹನ್ನೆರಡು ವರ್ಷದ ಪೋರಿಯ ಮೇಲೆ ಬೀಳುತ್ತದೆ. ಇನ್ನೂ ಮಜವಾದ ಸಂಗತಿಯೆಂದರೆ, ಆಕೆ ತನಗರಿವಿಲ್ಲದಂತೆಯೇ ಈ ಕಾರ್ಯ ಮಾಡಿ ಮುಗಿಸಬೇಕು. ಆಕೆಯೇ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಯಾರಾದರೂ ಆಕೆಗೆ ಏನು ಮಾಡಬೇಕೆಂದು ಹೇಳಿದರೆ, ಭವಿಷ್ಯವೇ ಬದಲಾಗಬಹುದು. ಹೀಗಾಗಿ, ವಿಷಯ ಗೊತ್ತಿದ್ದವರು ಆಕೆಗೆ ಏನೂ ಹೇಳುವಂತಿಲ್ಲ, ಆದರೆ ಆಕೆಗೆ ಖುದ್ದು ವಿಷಯವೇ ಗೊತ್ತಿಲ್ಲ. In her ignorance lies the fate of the world!

ಸರಣಿಯ ಮೂರನೆಯ ಪುಸ್ತಕದಲ್ಲಿ, ಲೇಖಕ, ಅತ್ಯಂತ ಚರ್ಚೆಗೊಳಗಾದ ಭಗವಂತನ ಕುರಿತಾದ ತನ್ನ ಕಲ್ಪನೆಯನ್ನು ಹಂಚಿಕೊಳ್ಳುತ್ತಾನೆ. ಅವನ ಪ್ರಕಾರ, ಅನೇಕಾನೇಕ ವಿಶ್ವಗಳಿದ್ದಂತೆ, ನಮ್ಮ ಭೂಮಿಯಿದ್ದಂತೆ, ಸ್ವರ್ಗ (heaven) ಕೂಡ ಒಂದು ಲೋಕ. ಅಲ್ಲಿ ದೇವತೆಗಳು (Angel) ಇರುತ್ತಾರೆ. ಅದಕ್ಕೆ ಸರಿಯಾಗಿ ನರಕ ಸಹ ಮತ್ತೊಂದು ಲೋಕ. ಲೇಖಕ ಅದನ್ನು ಸತ್ತವರ ಲೋಕವೆಂದು ಕರೆಯುತ್ತಾನೆ.

ಲೇಖಕ ಹೇಳುವಂತೆ, ಜೀವ ವಿಕಸನದ ಪ್ರಕ್ರಿಯೆಯಲ್ಲಿ, ಭಗವಂತ (Authority) ಮೊದಲಿಗೆ ಜನಿಸಿದ. ಆ ನಂತರ ಹುಟ್ಟಿದವರಿಗೆ ಅವನೇ ಅವರನ್ನೆಲ್ಲ ಸೃಷ್ಟಿಸಿದ್ದೆಂದು ಸುಳ್ಳು ಹೇಳಿದ. ದೇವ, ದೇವತೆಗಳೆಂದರೆ, ಜೀವ ವೈವಿಧ್ಯತೆಯಲ್ಲಿ ಒಂದು ಬಗೆ. ಮನುಷ್ಯ, ಪ್ರಾಣಿ, ಪಕ್ಷಿಗಳಂತೆ ದೇವತೆಗಳೂ ಒಂದು ಬಗೆಯ ಜೀವಿ. Angels are one of those creatures which have evolved in some world, and Authority is just another angel. But he happens to be the first one to evolve.

ದೇವತೆಗಳಿಗೆ ದೇಹವಿಲ್ಲ. ಅವರ ಶರೀರ ಸಂಪೂರ್ಣವಾಗಿ Dustನಿಂದ ಕೂಡಿದೆ. ಕೇವಲ ಕಣಗಳಿಂದ ಮಾಡಲ್ಪಟ್ಟಿರುವುದರಿಂದ ಅವರಿಗೆ ದೇಹವಿಲ್ಲ. ಹಾಗಾಗಿ, ದೈಹಿಕವಾಗಿ ಅವರು ಮಾನವರಿಗಿಂತ ದುರ್ಬಲರು. ಅವರಲ್ಲಿ ಕೆಲವರು ದೇವತೆಗಳಾಗಿಯೇ ಜನಿಸುತ್ತಾರೆ. ಇನ್ನು ಕೆಲವು ಮಾನವರು ದೇವತೆಗಳ ಸಹಾಯದಿಂದ ಸತ್ತ ಮೇಲೆ ದೇವತೆಗಳಾಗುತ್ತಾರೆ.

ಇನ್ನು ಸಾವು! ಸಾವಿನ ಕಲ್ಪನೆ ಕೂಡ ಸೊಗಸಾಗಿದೆ. ಸಾವು ಸದಾ ನಮ್ಮೊಡನೆಯೇ ಇರುತ್ತದಂತೆ. ಪ್ರತಿಯೊಬ್ಬರಿಗೂ ಅವರದೇ ಆದ ಸಾವು ಇರುತ್ತದೆ. ಆದರೆ, ಸಾವನ್ನು ನೋಡಲು ಸಾಮಾನ್ಯವಾಗಿ ಯಾರೂ ಇಷ್ಟ ಪಡದ ಕಾರಣ, ಅದು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುತ್ತದೆ. ಸಾವಿನೊಂದಿಗೆ ಮನಸಾರೆ ಸ್ನೇಹ ಬಯಸಿದಲ್ಲಿ, ಸಾವಿನ ಸಾಂಗತ್ಯದಲ್ಲಿಯೇ ಬದುಕಬಹುದು. ಕೊನೆಗೆ , ಸಮಯ ಬಂದಾಗ ಸತ್ತವರ ಲೋಕಕ್ಕೆ ಕರೆದೊಯ್ಯಲು ಸಾವು ಸಹಾಯ ಮಾಡುತ್ತದೆ. ಕೇವಲ ಸಾವಿಗೆ ಮಾತ್ರ ಅಲ್ಲಿಗೆ ಹೋಗುವ ದಾರಿ ತಿಳಿದಿರುತ್ತದೆ. ಅಲ್ಲಿಗೆ ಕರೆದೊಯ್ದು ಬಿಟ್ಟ ಮೇಲೆ ಅದರ ಕರ್ತವ್ಯ ಮುಗಿಯುತ್ತದೆ.

ಕಥೆಯ ಕೊನೆಯ ಭಾಗ ರೋಚಕವಾಗಿದೆ. ಭಗವಂತನಿಗೀಗ ವಯಸ್ಸಾಗಿದೆ. ಈಗ ಆತ ಹೊರಗೆಲ್ಲೂ ಬರುವುದಿಲ್ಲ. ಆತನಿಗೊಬ್ಬ ಸೇನಾಧಿಕಾರಿಯಿದ್ದಾನೆ. ಭಗವಂತನಿಗೀಗ ವಯಸ್ಸಾಗಿರುವುದರಿಂದ ಸೇನಾಧಿಕಾರಿಯೇ ಎಲ್ಲ ಕಾರ್ಯಕಲಾಪಗಳನ್ನು ನೋಡಿಕೊಳ್ಳುತ್ತಾನೆ. ಬ್ರಹ್ಮಾಂಡದಲ್ಲಿನ ಎಲ್ಲಾ ಪ್ರಜ್ಞಾಪೂರ್ವಕ ಜೀವಿಗಳು ಅತ್ಯಂತ ಸ್ವತಂತ್ರರಾಗಿದ್ದಾರೆಂದು ಭಗವಂತನಿಗೆ ಅನಿಸಿದೆ. ಅವನು ಮತ್ತೆ ಸೇನಾಧಿಕಾರಿ ಸೇರಿ ಈ ಬಗ್ಗೆ ಮೊದಲೇ ವಿಚಾರ ಮಾಡಿದ್ದರಿಂದ, ಸೇನಾಧಿಕಾರಿ ಎಲ್ಲ ವಿಶ್ವಗಳ ಮೇಲೂ ತನ್ನ ಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾನೆ. ಇದಕ್ಕೆ ವಿರುದ್ಧವಾಗಿ ಮಾನವನೊಬ್ಬ ಸಿಡಿದೇಳುತ್ತಾನೆ. ಬ್ರಹ್ಮಾಂಡದೆಲ್ಲೆಡೆಯಿಂದ ಅವನಿಗೆ ಸಹಾಯ ಹರಿದು ಬರುತ್ತದೆ. ಈ ದೇವ-ಮಾನವ ಯುದ್ಧವನ್ನು ಪುಸ್ತಕದಲ್ಲಿ ಓದುವುದೇ ಒಂದು ಮುದ.

ಕಥೆಯ ಕೊನೆಯ ಹಂತದಲ್ಲಿ ಲೇಖಕ Butterfly Effect ಎಂಬ ಮತ್ತೊಂದು ಭೌತಶಾಸ್ತ್ರದ ಎಳೆಯೊಂದನ್ನು ತಂದು ಮುಕ್ತಾಯಗೊಳಿಸುತ್ತಾನೆ. ಅದರ ಪ್ರಕಾರ ಜಗತ್ತಿನಲ್ಲಿ ನಡೆಯುವ ಯಾವುದೇ ಅತಿ ಚಿಕ್ಕ ಘಟನೆ ಕಾಲಾಂತರದಲ್ಲಿ ಅತ್ಯಂತ ದೊಡ್ಡ ಘಟನೆಗೆ ಕಾರಣವಾಗುತ್ತದೆ. ಈ ಸಿದ್ಧಾಂತ ಎಷ್ಟು ವಿಚಿತ್ರವಾದ ವಿಷಯಗಳನ್ನು ಹೇಳುತ್ತದೆಯೆಂದರೆ, ಬೆಂಗಳೂರಲ್ಲಿ ಇವತ್ತು ಚಿಟ್ಟೆಯೊಂದು ರೆಕ್ಕೆ ಬಡಿದರೆ ಮುಂದೆ ಯಾವತ್ತೋ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವೇಳುತ್ತದೆಯಂತೆ!

ಕಥಾನಾಯಕಿ, ಕಥೆ ಮುಗಿಯುವ ಹಂತಕ್ಕೆ ಬಂದಾಗ ಹರೆಯಕ್ಕೆ ಬರುತ್ತಾಳೆ. ಗೆಳೆಯನೊಂದಿಗೆ ಪ್ರೇಮಾಂಕುರವಾಗುವುದರೊಂದಿಗೆ (Original sin ?) ಜಗತ್ತಿಗೆ ಬಂದಿದ್ದ ಗಂಡಾಂತರ ತೊಲಗುತ್ತದೆ. ಯಾವುದೇ ನದಿಯ ಹರಿವನ್ನು ಬದಲಿಸಲು, ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಒಂದೇ ಒಂದು ಚಿಕ್ಕ ಕಲ್ಲನ್ನಿಟ್ಟರೆ ಸಾಕೋ, ಅದೇ ರೀತಿ, ಕಥಾನಾಯಕಿಯ ಪ್ರೇಮಪ್ರಸಂಗ ಬ್ರಹ್ಮಾಂಡದ ಚಲನೆಯನ್ನೇ ಬದಲಿಸುತ್ತದೆ.


ಕೊ: ಇದೇ ಲೇಖಕನ ಇನ್ನೊಂದು ಕೃತಿ "Good Man Jesus and the Scoundrel Christ" ಇತ್ತೀಚಿಗೆ ಬಿಡುಗಡೆಯಾಗಿದೆ. ಒಂದು ಅಧ್ಯಾಯ ಇಲ್ಲಿದೆ.

Thursday, August 5, 2010

ಸಾಂತ್ವನ

ಹೂತು ಹೋದವು ಮಾತು
ಮರೆತೇ ಹೋಯಿತೆ ನಗು
ಎಲ್ಲಿಂದ ಇಳಿದಿದೀ‌ ಮೌನ
ಮನದ ಮೂಲೆಯೊಳಗೆ

ಬರಿದಾಗಿ ಹೋಯಿತೇ ಗಾಡಿ
ಕನಸು ಕೊಳ್ಳುವ ಮುನ್ನ
ಬರೆಯಲಾಗದ ಕವನ
ಹಾಕಿ ಒಯ್ದರೇ‌ ಕನ್ನ

ಮರೆಯಾಗದ ನೆನಪುಗಳು
ಮನದೊಳಗೆ ಮೆರೆದಿರಲು
ಉರುಟಿ ಹೋದ ಕನಸುಗಳು
ಮತ್ತೆ ಮತ್ತೆ ಮರಳಿರಲು
ಬಿಸಿ ಉಸಿರು, ಅಸಹನೆ
ತಾಳಲಾಗದ ತಪನೆ

ತಲ್ಲಣಿಸದಿರು ಗೆಳೆಯಾ
ಬೀಸುವುದು ತಂಗಾಳಿ.
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ
ಮತ್ತೆ ಮೂಡೀತು ಬೆಳಕು
ಕಾಲ ಸರಿದಂತೆ

Monday, July 19, 2010

ಮರಳಿ ಗೂಡಿಗೆ....

ದೂರ ಹೋಗುವ ಮಾತನಾಡಿದಾಗ, ನೀವು ತೋರಿಸಿದ ಪ್ರೀತಿ, ಹಾರೈಕೆ, ಸಾಂತ್ವನಗಳಿಗೆ ಆಭಾರಿ. ಅವುಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಕ್ಷಮೆಯಿರಲಿ.

ಈಗ ಎಲ್ಲಾ ಒಂದು ಹಂತಕ್ಕೆ ಬಂದಂತಿದೆ. ಅಬ್ಬ, ಇಲ್ಲಿಗೆ ಎಲ್ಲಾ ಸರಿಹೋಯಿತು ಅನ್ನುವಷ್ಟರಲ್ಲಿ ಮತ್ತೇನಾದರೂ ಅನಾಹುತವಾಗುತ್ತಿತ್ತು. ಸಣ್ಣವನಿದ್ದಾಗ ಸಾವು ನೋವು ನೋಡಿದ್ದು ಬಿಟ್ಟರೆ, ಇಲ್ಲಿಯವರೆಗೂ ಆ ಸಂಕಟ ಮತ್ತೆ ಅನುಭವಿಸಿರಲಿಲ್ಲ. ಅದೂ ಮೇಲಿಂದ ಮೇಲೆ. ಕಳೆದ ಕೆಲವು ತಿಂಗಳುಗಳಲ್ಲಿ ಬದುಕು ಸಾಕಷ್ಟು ಪಾಠ ಕಲಿಸಿದೆ. ಒಂದೇ ಗುಕ್ಕಿನಲ್ಲಿ ಸಾವು, ನೋವು, ಸಂಭ್ರಮ ಸಂತೋಷ ಎಲ್ಲವನ್ನೂ ಅನುಭವಿಸಿದ್ದೇನೆ. ರಜೆ ಹಾಕಿದ್ದು ಸಾಕು ಅಂತ ಅನಿಸಿದರೂ, ಮನಸ್ಸಿಗಿನ್ನೂ ಸೂತಕ ಕಳೆದಿಲ್ಲ. ಮನೆ-ಆಫೀಸು ಅಂತ ಇಷ್ಟರಲ್ಲೇ ದಿನ ಕಳೆದು ಹೋಗುತ್ತಿದೆ. ನನಗಾಗಿ ಒಂದಿಷ್ಟು ಸಮಯ ಎತ್ತಿಟ್ಟುಕೊಳ್ಳಬೇಕೆನ್ನುವುದು ಕೇವಲ ಮಾತಲ್ಲೇ ಉಳಿದು ಹೋಗುತ್ತದೆಯೆನ್ನುವ ಭಯದಿಂದ ಇವತ್ತು ಮತ್ತೆ ಬರೆಯಲು ಕುಳಿತಿದ್ದೇನೆ.

ಒಪ್ಪಿಕೊಂಡ ಕೆಲಸಗಳು ಒಂದಿಷ್ಟು ಹಾಗೇ ಉಳಿದಿವೆ. ಒಂದೊಂದಾಗಿ ಎಲ್ಲವನ್ನೂ ಮುಗಿಸಬೇಕಾಗಿದೆ. ನಾನು ತಪ್ಪಿಸಿಕೊಂಡ ನಿಮ್ಮೆಲ್ಲರ ಬರಹಗಳನ್ನು ಓದಬೇಕು, ಈ ಮುಂಚೆ ಅರ್ಧಕ್ಕೇ ನಿಲ್ಲಿಸಿರುವ ಕಥೆಗಳಿಗೊಂದು ಅಂತ್ಯ ಕಾಣಿಸಬೇಕು. ರಜೆ ಹಾಕಿದ ಇಷ್ಟು ದಿನಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅವನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹ ಲೋಕಕ್ಕೆ ಮತ್ತೆ ಮರಳಬೇಕು. ಹಾಗೆಂದು ನಿರ್ಧರಿಸಿದ್ದೇನೆ.

Friday, February 26, 2010

ದೂರ ಹೋಗುವ ಮುನ್ನ

ಇತ್ತ ಕಡೆ ತಲೆ ಹಾಕಿ ಬಹಳ ದಿನಗಳಾಗಿದ್ದವು. ಬರವಣಿಗೆ ಶುರು ಮಾಡಿದಾಗ ನಿರಂತರವಾಗಿ ಸಾಗುತ್ತದೆಂದುಕೊಂಡಿದ್ದೆ. ಆದರೆ ಈ ನಡುವೆ ಅನಿವಾರ್ಯ ಕಾರಣದಿಂದಾಗಿ ಅಂತರ್ಜಾಲದಿಂದಲೇ ದೂರವಾಗಿದ್ದೇನೆ. ಒಂದಾದ ಮೇಲೊಂದು ಅಹಿತಕರ ಘಟನೆಗಳು ನಡೆಯುತ್ತಿವೆ. ದೇಹಕ್ಕಿಂತಾ ಮನಸ್ಸಿಗೆ ಹೆಚ್ಚು ದಣಿವಾಗಿದೆ. ಸದ್ಯಕ್ಕಂತೂ ಬರವಣಿಗೆ ದೂರದ ಮಾತು. ರಜೆ ಹಾಕುವ ಮುನ್ನ ನಿಮಗೊಮ್ಮೆ ಹೇಳಬೇಕೆನಿಸಿತು.
ಮನಸ್ಸು ತಿಳಿಯಾದ ಮೇಲೆ ಮತ್ತೆ ಸಿಗುತ್ತೇನೆ.

ವಂದನೆಗಳು.

Monday, January 25, 2010

ಕವಿತೆ ಹುಟ್ಟದ ರಾತ್ರಿ

ಕೈಗೆ ಸಿಗದ ಶಬ್ದಗಳು
ಜಾರಿಬಿದ್ದ ಚಿನ್ಹೆಗಳು
ಬರೆ ಬರೆದು ಸವೆದ ಸಾಲುಗಳು
ಮರೆತುಹೋದ ಪದ್ಯಗಳು
ಅಮೂರ್ತ ಭಾವಗಳು
ದಂಡಾಗಿ ಬಂದು
ದಂಡೆಗೆ ಅಪ್ಪಳಿಸಿದಂತೆ.
ಭರ್ಜರಿ ಮೊರೆತ
ಕಿವಿ ತಮಟೆ ತೂತಾಗಿ
ಕಣ್ಣುಗಳು ಕತ್ತಲಾಗಿ
ಕಾಲ ಕೆಳಗಿನ ನೆಲ ಕುಸಿದು
ಆಸರೆಗೆ ತಡಕಾಡಿ
ಆಗಸಕೆ ಕೈ ಎತ್ತಿ
ದನಿ ಇಂಗಿ ಬಾಯ್ತೆರೆದು
ಕವಿತೆ ಹುಟ್ಟದ ರಾತ್ರಿ ಬೆಚ್ಚಿಬಿದ್ದೆ.

Friday, January 22, 2010

दिल तो बच्चा है जी

ಇತ್ತೀಚಿನ ದಿನಗಳಲ್ಲಿ ನಾನು ಕೇಳಿದ ಅತ್ಯಂತ ಸರಳ ಸುಂದರ ಹಾಡಿದು. ಥೇಟ್ ರಾಜ್ ಕಪೂರ್ ಕಾಲದ ಗೀತೆಯಂತಿದೆ.

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಇಷ್ಕಿಯಾ' ಚಿತ್ರದ ಗೀತೆಯಿದು. ಚಿತ್ರ ನಿರ್ದೇಶನದ ಜೊತೆಜೊತೆಗೆ ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನವನ್ನು ಸಹ ಮಾಡಿದ್ದಾರೆ. ಗುಲ್ಜಾರ್ ಸಾಹಿತ್ಯವಿದೆ.

ಸಂಗೀತ, ಸಾಹಿತ್ಯ ಒಂದಕ್ಕೊಂದು ಪೂರಕವಾಗಿದೆಯೋ, ಇಲ್ಲಾ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಿವೆಯೋ ಎನ್ನುವಷ್ಟರ ಮಟ್ಟಿಗೆ ಇದು ಚೆನ್ನಾಗಿ ಬಂದಿದೆ. ರಾಹತ್ ಫತೇ ಅಲಿ ಖಾನ್ ತಮ್ಮ ದ್ವನಿಯಿಂದ ಇದಕ್ಕೆ ಬೇರೆಯದೇ ಮೆರುಗು ನೀಡಿದ್ದಾರೆ.

ವೃದ್ಧನೊಬ್ಬನ ಆಲಾಪದಂತಿರುವ ಈ ಹಾಡಿಗೆ ನಾಸಿರುದ್ದೀನ್ ಷಾ ಹೇಗೆ ಅಭಿನಯಿಸಿರಬೇಡ ಎಂದು ಊಹಿಸುತ್ತಾ ಕುಳಿತಿದ್ದೇನೆ. ಮುಂದಿನವಾರ ಚಿತ್ರ ಬಿಡುಗಡೆಯಾಗಲಿದೆ.

ಇಂತಹ ಒಂದು ಹಾಡನ್ನು ನೀಡಿದ ವಿಶಾಲ್ ಮತ್ತು ಗುಲ್ಜಾರ್ ರಿಗೆ ವಂದನೆಗಳನ್ನು ಸಲ್ಲಿಸುತ್ತಾ ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದೇನೆ.

ಸುಮ್ಮನೆ ಹಾಡು ಕೇಳುತ್ತಾ ಓದುತ್ತಾ ಹೋಗಿ, ಆನಂದವಾದೀತು.



ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं
वल्ला ये धड़कन भड्ने लगी है
चेहरे की रंगत उड़ने लगी है
डर लगता है तनहा सोने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं

किसको पता था पेहलु में रखा
दिल ऐसा बाजी भी होगा
हम तो हमेशा समझते थे कोई
हम जैसा हाजी ही होगा
हाई जोर करें, कितना शोर करें
बेवजा बातों पे ऐंवे गौर करें
दिल सा कोई कमीना नहीं
कोई तो रोके, कोई तो टोके
इस उम्र में अब खाओगे धोखे
डर लगता है इश्क करने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उधासी बैठी है दिल पे
हस्सने से घबरा रहे हैं
सारी जवानी कतरा के काटी
पीरी में टकरा गए हैं
दिल धड़कता है तो ऐसे लगता है वो
आ रहा है यहीं देखता ही न वो
प्रेम की मारें कटार रे
तौबह ये लम्हे कट ते नहीं क्यूँ
आँखों से मेरी हट ते नहीं क्यूँ
डर लगता है मुझसे केहने में जी

दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

Wednesday, January 20, 2010

ಜಾರಿಬಿದ್ದ ನಕ್ಷತ್ರ

ಸುರಿವ ಕತ್ತಲೆಯ ರಾತ್ರಿ
ಮನೆಯ ಮಹಡಿಯ ಮೇಲೆ
ನಿಂತು ನೋಡುತ್ತಿರಲು
ದೈತ್ಯ ಗುಡ್ಡದ ಹಿಂದೆ
ಸ್ತಬ್ಧ ಕಾಡಿನ ನಡುವೆ
ನಕ್ಷತ್ರವೊಂದು ಜಾರಿಬಿತ್ತು

ತಾರೆಗಳ ರಾಜಕುಮಾರಿ
ತಾರಸಿಯಿಂದ ಬಗ್ಗಿ ನೋಡಿ
ಜಾರಿಬಿದ್ದು ಕಾಲುಮುರಿದುಕೊಂಡಿರಲು
ನಾನಲ್ಲಿಗೆ ಹೋಗಿ...
ಛೇ, ಅಪ್ಪ ಹೇಳಿದ ಕಥೆ ಈಗೆಷ್ಟು ಬಾಲಿಶ
ಓದಿ ಕೆಟ್ಟೆನೋ ನಾನು
ಅಬಲೆ ತಾರೆಯ ಕೂಗು
ನನಗಿಂದು ಕೇಳುತ್ತಿಲ್ಲ

ಹರಿವ ತುಂಗೆಯ ಮೇಲೆ
ಬೆರಗುಗಣ್ಣು ತೇಲಿದಂತಾಗಿ
ಮೆಟ್ಟಿಲಿಳಿದು ಮನೆಗೆ
ಬಂದು ಕದವಿಕ್ಕಿದೆ

ಬೀಸಿಬಂದ ಬಾಲ್ಯ
ಬಾಗಿಲಿಗೆ ಬಡಿದು
ಅಂಗಳದಲ್ಲಿ ಬಿದ್ದಿತ್ತು
ನಿನ್ನೆಯೇ ಉತ್ತರಾಯಣ
ಆದರೂ ರಾತ್ರಿಯಿಡೀ ನರಳಿತ್ತು





ಬಾಲ್ಯದ ನೆನಪನ್ನು ಬರೆಯ ಹೊರಟವನು ಮತ್ತೆಲ್ಲಿಗೋ ಹೋಗಿ ನಿಂತೆ. ಬಾಲ್ಯದ ನೆನಪು ಎಷ್ಟು ಮಧುರವೋ ಅದು ಮುಗಿದು ಹೋಯಿತೆಂಬ ಅರಿವು ಅಷ್ಟೇ ಖೇದಕರ. ನಾನಿನ್ನು ಚಿಕ್ಕಮಗುವಲ್ಲ, ಅವುಗಳ ಬೆರಗು, ಆ ಕುತೂಹಲ ನನ್ನಲ್ಲಿನ್ನೂ ಉಳಿದಿಲ್ಲ. ಮತ್ತೇನು ಮಾಡಹೊರಟರೂ ಅಂದಿನ ನೆನಪಿನ ನಕಲಾದೀತಷ್ಟೇ. ನಿಸರ್ಗದ ಸೊಬಗನ್ನು ಸವಿಯಬಲ್ಲೆ, ಆದರೆ ಹೌದಾ ಅಪ್ಪಾ, ಅದು ಹಾಗಾ... ಊಹೂಂ, ಉಳಿದಿಲ್ಲ. ಬದುಕಲು ಅನ್ನ ನೀಡಿದ ವಿದ್ಯೆ ಆ ಚಿಕ್ಕಚಿಕ್ಕ ಸಂತೋಷಗಳನ್ನು ನನ್ನಿಂದ ಕಸಿದಿದೆ.

Monday, January 18, 2010

ಬೇರಿಲ್ಲದ ಊರಲ್ಲಿ

ನಾಳೆ ಬೆಳಗಾದರೆ ಎದ್ದು ರೆಡಿಯಾಗಿ ಆಫೀಸಿಗೆ ಹೋಗಬೇಕು. ಈ ರಾತ್ರಿ ಯಾಕೋ ಊರಿನ ನೆನಪು ಸ್ವಲ್ಪ ಹೆಚ್ಚಾಗೇ‌ ಕಾಡುತ್ತಿದೆ. ಮಲಗಿದರೆ ಮುಗಿಯಿತು. ನಾಳೆಯಿಂದ ಮತ್ತೆ ಅದೇ‌ ಕೆಲಸ, ಅದೇ ಜೀವನ. ಸ್ವಲ್ಪ ಬೇಜಾರಾದರೂ ಸರಿ, ಊರಿನ ನೆನಪಿರಲಿ ಎಂದು ಹಾಗೇ‌ ಎದ್ದು ಕುಳಿತಿದ್ದೀನಿ. ಈ‌ ಹೊತ್ತಲ್ಲಿ ಅಲ್ಲಿ ಹೇಗಿದ್ದೀತು ಅಂತ ಯೋಚಿಸುತ್ತಾ ಅಲ್ಲಿಗೇ ನಿಧಾನವಾಗಿ ಹೋಗುತ್ತಿದ್ದೇನೆ. ಬೀದಿ ನಾಯಿಗಳ ಕೂಗು ಮತ್ತೆ ನನ್ನನ್ನು ಇಲ್ಲಿಗೇ ಕರೆ ತರುತ್ತಿದೆ.

ಊರಿಂದ ಹೊರಬಿದ್ದು ವರ್ಷಗಳೇ ಆದರೂ ದಿನದಿಂದ ದಿನಕ್ಕೆ ಅಲ್ಲಿನ ನೆನಪು, ಸೆಳೆತ ಹೆಚ್ಚಾಗುತ್ತಲೇ ಇದೆ. ನಾನಿರುವ ಜಾಗಕ್ಕೇ‌ ನನ್ನವರು ಬಂದರೂ ಅವರು ಪರಕೀಯ ಮತ್ತೆ ನಾನೂ. ನಾನು ಅಲ್ಲಿಗೇ‌ ಹೋಗಬೇಕು ಮತ್ತೆ ನನ್ನೂರು ನನ್ನ ಜನ ಹಾಗೇ ಇರಬೇಕು. ಸ್ವಾರ್ಥ ನಂದು. ಆದರೆ ಅದಾವುದೂ‌ ಆಗುವ ಮಾತಲ್ಲ. ನಾನಲ್ಲಿಗೆ ಹೋಗುವುದಿಲ್ಲ. ಹೋದರೂ ಎರಡು ದಿನದಅತಿಥಿ. ವಾಪಸ್ ಊರಿಗೆ ಯಾವಾಗ ಹೋಗ್ತೀರಾ?‌ ಅಲ್ಲಿಗೆ ಹೋದಾಗ ಜನ ಕೇಳ್ತಾರೆ. ನನ್ನಾಗಲೇ ಅವರು ತಮ್ಮ ಊರಿಂದ ಆಚೆ ಅಟ್ಟಿಬಿಟ್ಟಿದ್ದಾರೆ. ಆ ಮಟ್ಟಿಗೆ ನಾನು ನನ್ನ ಊರಲ್ಲಿ ಪರಕೀಯ. ಆದರೂ ನಾನಲ್ಲಿಗೆ ಹೋಗಬೇಕು.

ಊರಿಗೆ ಬಂದಾಗಲೂ ನೀನು ಪುಸ್ತಕ ಓದ್ತೀಯಾ, ಬಿಟ್ಟರೆ ಮಲಗ್ತೀಯಾ ಅಂತ ಅಮ್ಮ ಬೈತಾಳೆ. ಆದರೆ ಪ್ರತೀ ಸಲ ಊರಿಗೆ ಹೋದಾಗ ಮಲಗಲಿಕ್ಕೆ ಹಾಸಿಗೆ ಸಿದ್ಧ ಮಾಡ್ತಾಳೆ. ಎದ್ದ ಕೂಡಲೇ‌ ತಿಂಡಿ. ತಿಂಡಿ ತಿನ್ನುತ್ತಲೇ‌ ಆ ದಿನದ ಪೇಪರ್ ಓದುವುದು. ಮುಗಿದ ಮೇಲೆ ಟೀಪಾಯ್ ಕೆಳಗೆ ಬಗ್ಗಿ ನೋಡಿದರೆ ನಾನು ಓದಿರದ ಪುಸ್ತಕಗಳನ್ನೆಲ್ಲಾ ಒಂದೆಡೆ ಜೋಡಿಸಿ ಇಟ್ಟಿರುತ್ತಾಳೆ. ನಾನು ಯಾವುದಾದರೂ ಒಂದು ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ಅವಳು ಕಾಫಿ ತಂದು ಕೊಡುತ್ತಾಳೆ. ಕಾಫಿ ಕುಡಿದು ಮಂಚದ ಮೇಲೆ ಅಮ್ಮನ ತೊಡೆ ಮೇಲೆ ತಲೆಯಿಟ್ಟು ಮಲಗಿ ಹಾಗೇ‌ ಪುಸ್ತಕ ಓದ್ತಿರಬೇಕಾದ್ರೆ, ಅಮ್ಮ ಹಿತವಾಗಿ ತಲೆ ಒತ್ತುತ್ತಾ ಮೆಲ್ಲನೆಯ ದನಿಯಲ್ಲಿ ಮತ್ತೆ ಬೈತಿರುತ್ತಾಳೆ. ನೀನು ಊರಿಗೆ ಬಂದರೆ ಬರೀ ಮಲಗ್ತೀಯಾ, ಇಲ್ಲ ಓದ್ತೀಯಾ.. ಈ ಚಂದಕ್ಕೆ ಯಾಕೆ ಬರಬೇಕು...

ಇನ್ನು ಅಪ್ಪನ ಕಥೆ ಬೇರೆ. ನಾನು ಬರ್ತೀನಿ ಅಂದ್ರೆ ಸಾಕು. ಮಧ್ಯರಾತ್ರಿಯಿಂದಲೇ ಆಗಾಗ ಎದ್ದು ಗಡಿಯಾರ ನೋಡಿ ಇನ್ನೊಂದ್ ಸ್ವಲ್ಪ ಹೊತ್ತಿಗೆ ಬರ್ತಾನೆ ಅಂತ ಹೇಳ್ತಿರ್ತಾರೆ.
ನಂಗೆ ತಲೆ ಚಿಟ್ ಹಿಡಿದು ಹೋಗುತ್ತೆ ಮಾರಾಯ, ನೀನು ಹೇಳದಂಗೇ‌ ಊರಿಗೆ ಬಾ ಅಂತ ಅಮ್ಮ ಹೇಳ್ತಿರ್ತಾಳೆ. ಆದ್ರೂ‌ ಪ್ರತೀ ಸಲ ಅವರಿಗೆ ಸುದ್ದಿ ಮುಟ್ಟಿರುತ್ತದೆ. ಅಮ್ಮನೇ‌ ಹೇಳಿರ್ತಾಳೆ.
ನಾನು ಬಸ್ಸಿಂದ ಊರಲ್ಲಿ ಇಳಿಯುವ ಹೊತ್ತಿಗೆ ಕೈಯಲ್ಲೊಂದು ಸಿಗರೇಟ್ ಹಿಡ್ಕೊಂಡು ಬಸ್ ಸ್ಟ್ಯಾಂಡ್ ನ ಉದ್ದಕ್ಕೂ ಅಪ್ಪ ನಡೆದಾಡ್ತಿರುತ್ತಾರೆ.
ಈ ಹೊತ್ತಲ್ಲಿ ಯಾಕೆ ಬಂದ್ಯಪ್ಪಾ ಅಂತ ಕೇಳಿದ್ರೆ ಸುಮ್ನೆ ಬಾರಲೇ‌ ಅಂತ ಬೈದು ಮನೆಗೆ ಕರೆದೊಯ್ತಾರೆ.
ಮನೆಗೆ ಹೋದ ಮೇಲೆ ಯಥಾಪ್ರಕಾರ ನಾನು ಮಲಗ್ತೀನಿ. ಒಂದು ಗಂಟೆ ಸುಮ್ನಿರ್ತಾರೆ ಅಷ್ಟೇ. ಆಮೇಲೆ ಪ್ರತೀ ಅರ್ಧ ಗಂಟೆಗೊಂದ್ಸಲ 'ಎದ್ದೇಳೋ‌ ಪಾಪು, ಕಂದಾ ಎದ್ದೇಳೋ, ಎದ್ದೇಳೋ‌ ಹೈವಾನ್' ಅಂತ ಬಗೆಬಗೆಯಾಗಿ ಎಬ್ಬಿಸಲು ಪ್ರಯತ್ನ ಪಡುತ್ತಿರುತ್ತಾರೆ.
ಅಷ್ಟರಲ್ಲಿ ಅಮ್ಮ ಬಂದು 'ಅಯ್ಯೋ, ಸ್ವಲ್ಪ ಸುಮ್ನಿರಬಾರ‍್ದಾ, ಅಷ್ಟು ದೂರದಿಂದ ಬಂದಿದ್ದಾನೆ. ಪಾಪ, ಮಲಗಲಿಕ್ಕೆ ಬಿಟ್ಟರೆ ಗಂಟೇನು ಹೋಗುತ್ತೆ?' ಅಂತ ಅಪ್ಪನಿಗೆ ದಬಾಯಿಸುತ್ತಿರುತ್ತಾಳೆ.

ಸ್ವಲ್ಪ ಬೆಳಗಾಯ್ತು ಅನ್ನೋ ಹೊತ್ತಿಗೆ ಊರಲ್ಲಿ ಮುಲ್ಲಾ, ಬೀರಪ್ಪ, ಕಾಳಮ್ಮ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಜೋರಾಗಿ ಪ್ರಾರ್ಥನೆ ಶುರು ಮಾಡ್ತಾರೆ. ಅವರ ಆರ್ಭಟ ಎಲ್ಲಾ ಮುಗಿದ ಮೇಲೆ ಅಮ್ಮ ನನಗಿಷ್ಟವಾದ ಭಾವಗೀತೆಗಳನ್ನೋ, ಹಾಡುಗಳನ್ನೋ ಮೆಲ್ಲನೆಯ ದನಿಯಲ್ಲಿ ಪ್ಲೇಯರ್ ಗೆ ಹಾಕುತ್ತಾಳೆ.

ಅಷ್ಟರಲ್ಲಿ ಅಪ್ಪ, ಹೂಂ, ಇನ್ನೂ‌ ಎದ್ದಿಲ್ವೇನೇ‌ ಇವನು ಅಂತ ನಮ್ಮಿಬ್ಬರನ್ನೂ ಕೇಳುತ್ತಾ ಮತ್ತೆ ನನ್ನೆಬ್ಬಿಸಲು ಪ್ರಯತ್ನ ಪಡ್ತಾರೆ. ನಾನು ಮಿಸುಕಾಡೋಲ್ಲ.
ಕಂದಾ, ನಾನೂ‌ ನಿನ್ನ ಜೊತೆಗೆ ಮಲಗ್ತೀನಿ ಕಣೋ ಅಂತ ಆ ಸಣ್ಣ ಮಂಚದ ಮೇಲೆ ನನ್ನನ್ನು ಮೂಲೆಗೆ ದಬ್ಬಿ ತಮ್ಮ ದೈತ್ಯ ದೇಹವನ್ನು ಎತ್ತಿ ಹಾಕಿ ಮಲಗ್ತಾರೆ. ಪುಣ್ಯಾತ್ಮ , ರಾತ್ರಿಯಿಡೀ ಗಡಿಯಾರ ನೋಡೋದೇ‌ ಆಗಿರುತ್ತೆ. ಮಲಗಿದ ಎರಡೇ‌ ನಿಮಿಷಕ್ಕೆ ಗೊರಕೆ ಶುರು ಮಾಡ್ತಾರೆ. ಆ‌ ಸಣ್ಣ ಜಾಗದಲ್ಲಿ ಉಸಿರುಗಟ್ಟಿ, ಗೊರಕೆಯ ಹಿಂಸೆಗೆ ನಾನು ತಡೀಲಾರದೆ ಏಳ್ತೀನಿ. ಅಪ್ಪನಿಗೆ ಚೆನ್ನಾಗಿ ನಿದ್ದೆ, ಗೊರಕೆ ನಡೆದೇ ಇರುತ್ತೆ.

ನಾನು ಕಾಫಿ ಕುಡಿಯುತ್ತಾ ಅಮ್ಮನ ಜೊತೆಗೆ ಮಾತು ಶುರು ಮಾಡ್ತೀನಿ. ಸ್ವಲ್ಪ ಹೊತ್ತಿಗೆ ಯಾವಾಗ್ಲೋ ಎದ್ದು ನಂಗೂ ಸ್ವಲ್ಪ ಕಾಫಿ ಕೊಡೇ‌ ಅಂತ ಅಪ್ಪ ಒಳಗೆ ಬರ್ತಾರೆ.
ಏನು ಮಗನೇ, ಏನು ಸಮಾಚಾರ. ಆಗಿರೋದು ನೋಡಲೇ, ನಾಯಿಗೆ ಹೊಡೆಯೋ‌ ಕೋಲು ತರ ಇದ್ದೀಯಾ. ಸರಿಯಾಗೆ ತಿನ್ನೋ ಮಗನೇ‌ ಅಂತ ಶುರು ಮಾಡ್ತಾರೆ.

ಇನ್ನು ಊರಿಗೆ ತಂಗೀನೂ ಬಂದಿದ್ರೆ ಮುಗಿದೇ‌ ಹೋಯಿತು.
ಮನೆಗೆ ಹೋಗ್ತಿದ್ದ ಹಾಗೆಯೇ ಅಪ್ಪ ನನ್ನ ಮೇಲೆ ತೋರಿಸೋ‌ ವರಸೆಯನ್ನೆಲ್ಲಾ ನಾನು ಅವಳ ಮೇಲೆ ಪ್ರಯೋಗಿಸ್ತೀನಿ. ಮಲಗಿದ್ದೋಳನ್ನ ಬಲವಂತವಾಗಿ ಹೊಡೆದೂ, ತಟ್ಟಿ ಎಬ್ಬಿಸ್ತೀನಿ.
ಅಣ್ಣಾ, ಪ್ಲೀಸ್ ಸುಮ್ನೆರೋ. ಅಮ್ಮಾ ನೋಡಮ್ಮಾ, ಸುಮ್ನಿರೋಕೆ ಹೇಳಮ್ಮಾ ಅಂತ ಅವಳು ಕೂಗಿ, ಅಮ್ಮ ಬಂದು ಏಯ್ ಸುಮ್ನೆರಬಾರ್ದೇನೋ, ಪಾಪದ್ದು ಅದನ್ಯಾಕೆ ಹಿಂಸೆ ಮಾಡ್ತೀಯಾ ಅಂತ ಬೈದ ಮೇಲೆ, ಕೊನೇ ಸಲ ಅಂತ ಅವಳಿಗೆ ಒದ್ದು 'ಹೂಂ ಬಿದ್ಕೋ' ಎಂದು ಹೇಳಿ, ಏನೋ ಸಾಧಿಸಿದೋನ ತರಹ ನನ್ನ ಹಾಸಿಗೆಯ ಕಡೆಗೆ ಮಲಗಲು ನಡೆಯುತ್ತೇನೆ.

ನಾನು ಊರಿಗೆ ಹೋದಾಗ, ಸಾಮಾನ್ಯವಾಗಿ ಅಪ್ಪ ಆಫೀಸಿಗೆ ರಜೆ ಹಾಕಿರುತ್ತಾರೆ.

ಮಧ್ಯಾಹ್ನದವರೆಗೂ‌ ಅಪ್ಪ ಸುಮ್ನಿರ್ತಾರೆ. ಆಮೇಲೆ ಬರ್ತೀಯೇನಲೆ ಹೊಲದ ಕಡೆ ಹೋಗ್ಬರಣಾ ಅಂತ ಕೇಳ್ತಾರೆ.

ನಾನು, ನಡಿ ಅಂತ ಹೊರಡ್ತೀನಿ.

ಊಟದ ಟೈಮಿಗೆ ಸರಿಯಾಗಿ ಹೊರಡ್ತೀರ. ಈಗೇನೂ ಬೇಡ. ಆಮೇಲೆ ಹೋಗಿ. ನೀನು ಹಿಂದುಗಡೆಗೆ ಹೋಗೋದಿದ್ರೆ ಹೋಗಿ, ಸ್ನಾನ ಮಾಡ್ಕೊಂಡ್ ಬಾ. ಬ್ರಹ್ಮ ಶೌಚ ನಿಂದು . ಗಂಟೆಗಟ್ಟಲೆ ಮಾಡ್ತೀಯಾ.. ಅಮ್ಮ ಒಳಗಡೆಯಿಂದ ಇಬ್ಬರಿಗೂ ಬೈಯಲು ಶುರು ಮಾಡ್ತಾಳೆ.

ಅಪ್ಪ - ಆಯ್ತು ಬಿಡವ್ವ ನೀನು ಹೇಳಿದಂಗೇ‌ ಆಗಲಿ.

ಅಮ್ಮ - ಅವ್ವ ಗಿವ್ವ ಅಂದ್ರೆ ಸುಮ್ನಿರಲ್ಲ.

ಅಪ್ಪ ನನ್ಕಡೆ ನೋಡಿ, ನೋಡಲೇ ಹೆಂಗೆ ದಬಾಯಿಸ್ತಾಳೆ ನಿಮ್ಮಮ್ಮ.

ನಾನು- ಹೌದು ಮತ್ತೆ ಸರಿಯಾಗೇ‌ ಹೇಳ್ತಾಳೆ. ನನ್ನ ತಂಗಿಯೂ ದನಿಗೂಡಿಸುತ್ತಾಳೆ.

ಅಪ್ಪ- ನೀವಿಬ್ರೂ ಬಂದಿದ್ದೀರಲ್ಲಾ, ಅವಳಿಗೆ ಎರಡು ಕೊಂಬು ಬಂದ್ಬಿಟ್ಟಿದ್ದಾವೆ. ಮನೆ ಯಜಮಾನ ನಾನು. ಮೂರು ಕಾಸಿನ ಬೆಲೆ ಇಲ್ಲ ನನಗೆ.

ಮುಂದೆ ಮಾತಾಡ್ಲಿಕ್ಕೆ ಹೊಳೀದೇ‌ ಸಿಗರೇಟ್ ಹಚ್ಕೊಂಡ್ ಹೊರಗಡೆ ಹೋಗ್ತಾರೆ.

ಊಟ ಆದ ಮೇಲೆ ತಂಗಿಯಿಂದ ಹಾಡು ಹೇಳಿಸೋ ಕಾರ್ಯಕ್ರಮ.

ಅವಳು ಕಷ್ಟಪಟ್ಟು ಕೀರ್ತನೆ ಹಾಡಿದರೆ, ನಾನು ಥೇಟ್ ಶಂಕರಾಭರಣದ ಶಾಸ್ತ್ರಿಗಳ ಸ್ಟೈಲಲ್ಲಿ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳ್ತಿರ್ತೀನಿ. ಅವಳು ಹಾಡ್ತಾನೇ‌ ನನ್ನನ್ನು ಕಣ್ಣಲ್ಲಿ ಸುಟ್ಟು ಹಾಕ್ತಿರ್ತಾಳೆ. ದೀಪಕರಾಗ ನನ್ನ ಮೇಲೇ ಪ್ರಯೋಗ ಮಾಡಿದ ಹಾಗಿರುತ್ತದೆ.

ಅವಳು, ಕೀರ್ತನೆ, ಸ್ವರ, ಗಮಕ ಎಲ್ಲಾ ಹೇಳ್ತಿರಬೇಕಾದ್ರೆ ಸುಮ್ನೆ ಕಣ್ಮುಚ್ಕೊಂಡ್ ಕೇಳ್ತಾ ಇರಬೇಕು. ಎಲ್ಲೋ ಸ್ವರ್ಗದಲ್ಲಿ ತೇಲುತ್ತಾ ಇದ್ದ ಹಾಗಿರುತ್ತೆ. ಹಾಗಂತ ಅವಳಿಗೆ ಹೇಳಬಾರದು. ಆಮೇಲೆ ನಮಗೆಲ್ಲಿ ಬೆಲೆ ಇರುತ್ತೆ. ನಾನು ಬೈತಿರಬೇಕು, ಅವಳು ಹಾಡ್ತಿರಬೇಕು ಅಷ್ಟೇ.

ಅವಳೆಲ್ಲಾ ಹಾಡಿ ಮುಗಿಸಿದ ಮೇಲೆ, ನಾನು ಆ ಹಾಡಲ್ಲಿ ಶ್ರುತಿ ತಪ್ಪಿದ್ದೆ, ಇದನ್ನು ಹೇಳಬೇಕಾದರೆ ಉಸಿರು ಜಾಸ್ತಿ ಬಿಡ್ತಿದ್ದೆ ಇತ್ಯಾದಿ ಹೇಳಿ ಇನ್ನೊಂದು ಸಲ ಹಾಡಲು ಹೇಳ್ತೀನಿ.

ಅವಳು, 'ಹೋಗೋ! ಅಷ್ಟೇ. ಇನ್ನು ಹೇಳಲ್ಲ.'

ನಾನು ಕಣೇ, ನಿನ್ನಣ್ಣ ಹೇಳ್ತಿದ್ದೀನಿ, ನೀನೀಗ ಹಾಡ್ಬೇಕು ಅಷ್ಟೇ.

'ಹೋಗಲೋ' ಎಂದು ಅವಳು ಏಳ್ತಾಳೆ.

ನಾನು ಏಳೋದಿಕ್ಕೆ ಬಿಡೋದಿಲ್ಲ. ಕೈ ತಿರುಚಿ ಹೊಡೆದು, 'ಹೇಳ್ತೀಯಾ, ಇಲ್ವಾ?'

ಅಪ್ಪಾ‌, ನೋಡಪ್ಪಾ ಹೆಂಗೆ ಹೊಡೀತಾನೆ?

ಯಾವನೋ ಅವನು ನನ್ನ ಮಗಳನ್ನ ಹೊಡೆಯೋದು, ಎಷ್ಟೋ ಧೈರ್ಯ ನಿಂಗೆ? ಹೆಂಗೆ ಹೊಡೆದ್ಯೋ?

ನಾನು ಅಪ್ಪನಿಗೆ ಕಾಣುವ ಹಾಗೆ ಅವಳಿಗೆ ಮತ್ತೆ ಹೊಡೀತೀನಿ, ಅವಳು ಮತ್ತೆ ಕೂಗಿಕೊಳ್ತಾಳೆ.

ನೋಡು, ನಾನು ಸುಮ್ನಿರಲ್ಲ. ಇನ್ನೊಂದ್ಸಲ ಹೊಡೆದ್ರೆ ಅಷ್ಟೇ? ಅಪ್ಪ ಹೇಳ್ತಾರೆ.

ನಾನು ಮತ್ತೆ ಹೊಡೀತೀನಿ.

ಅಷ್ಟೊತ್ತಿಗಾಗಲೇ ಅವಳಿಗೆ ನಮ್ಮಿಬ್ಬರ ಉದ್ದೇಶ ಅರ್ಥ ಆಗಿರುತ್ತೆ. ಅಮ್ಮನ್ನ ಕರೀತಾಳೆ. 'ನೋಡಮ್ಮಾ'

ಸುಮ್ನಿರ‍್ರೋ, ಅವಳನ್ಯಾಕೆ ಗೋಳು ಹುಯ್ಕೋತೀರಾ? ಕುಸುಮ ಕೋಮಲೆ ಅವಳು. ಅಮ್ಮನ ಉವಾಚ.

ನಾನು ಸುಮ್ಮನೆ ಬಿಡ್ತೀನಿ. ಅಮ್ಮ ಕಿಚಾಯಿಸಿದ್ರೂ ಅವಳ ಹತ್ರಾನೇ‌ಹೋಗಿ. 'ನೋಡಮ್ಮಾ ಹೆಂಗೆ ಹೊಡೆದ, ಕೈ ಕೆಂಪಗಾಗಿದೆ'

ಅಯ್ಯೋ ಕಂದಾ, ಎಣ್ಣೆ ತಂದು ಹಚ್ಚಲೇನೇ?

ಹೋಗೇ, ಅಂತ ಬೈಯುತ್ತಾ, ಅವಳು ಅಮ್ಮನ ತೊಡೆ ಮೇಲೆ ಮಲಗುತ್ತಾಳೆ.

ಅಷ್ಟರಲ್ಲಿ, ಅಪ್ಪ ನನ್ನ ಕಡೆ ನೋಡುತ್ತಾ ಅಮ್ಮನಿಗೆ ಕಾಫಿ ಮಾಡಲು ಹೇಳು ಎಂದು ಕಣ್ಸನ್ನೆ ಮಾಡ್ತಿರುತ್ತಾರೆ. ನಾನು ಇಲ್ಲ ಎಂದು ಹೇಳ್ತೀನಿ. ಸ್ವಲ್ಪ ಹೊತ್ತು ನಮ್ಮ ದೃಷ್ಟಿ ಯುದ್ಧ ನಡೆದ ಮೇಲೆ ಅಪ್ಪ ಎದ್ದು ಹೇಳ್ತಾರೆ. 'ನಾನೇ‌ ಕಾಫಿ ಮಾಡ್ತೀನಿ. ನಿಂಗೂ‌ ಬೇಕೇನೋ? '

ಅಮ್ಮಂಗೆ ಅರ್ಥ ಆಗುತ್ತೆ.

ಊಟ ಆಗಿ ಇನ್ನೂ ಸ್ವಲ್ಪ ಹೊತ್ತಾಗಿಲ್ಲಪ್ಪ. ಆಗಲೇ ಕಾಫಿ. ಅದೆಷ್ಟು ಕುಡೀತೀರೋ? ಎದ್ದು ಅಡಿಗೆ ಮನೆಗೆ ಹೋಗ್ತಾ ನನ್ನ ಕಡೆಗೆ ತಿರುಗಿ 'ನಿಂಗೂ‌ ಬೇಕೇನೋ'

ನಾನು ಮಳ್ಳನ ತರಹ, 'ಸ್ವಲ್ಪ ಕೊಡು'

ಕಾಫಿ ಕುಡಿದು ನಾವಿಬ್ರೂ ಅಪ್ಪ ಮಗ ಹೊಲಕ್ಕೆ ಹೊರಡ್ತೀವಿ.

ಬೈಕ್ ಹತ್ತಿ ಹೋಗ್ತಿರಬೇಕಾದ್ರೆ ಊರಿನ ಎಲ್ಲಾ ಸುದ್ದಿಗಳೂ ಒಂದ್ಸಲ ಬಂದು ಹೋಗ್ತಾವೆ. ಹೊಲಕ್ಕೆ ಹೋದ ಮೇಲೆ, ಪೂರ್ತಿಯಾಗಿ ಅಲ್ಲಿಯದೇ ವಿಷಯ. ಅಪ್ಪ ಹೇಳ್ತಾನೇ ಹೋಗ್ತಾರೆ.

ಇದೇ ಕೊನೆ ಬೆಳೆ, ಮುಂದಿನ ಸಲಕ್ಕೆ ಬಾಳೆ ತೆಗಿಸಿಬಿಡ್ತೀನಿ. ಅಡಿಕೆಗೆ ಬೆಳೆಯೋದಿಕ್ಕೆ ಅನುಕೂಲವಾಗುತ್ತೆ.

ಇನ್ನೂ ಮೂರು ವರ್ಷ ಬೇಕಲ್ವೇನಪ್ಪಾ?

ಹೌದು ಮಗನೇ, ಕಾಯಬೇಕು. ನಿನ್ನ ಆಫೀಸಿನ ವಿಷಯ ಹೇಳಪ್ಪಾ, ಏನಾಯ್ತು. ಮೊನ್ನೆ ಅವಾರ್ಡ್ ಕೊಟ್ರಲ್ಲ, ಆಮೇಲೆ ದುಡ್ಡೇನಾದ್ರೂ ಜಾಸ್ತಿ ಮಾಡಿದ್ರಾ?

ಇಲ್ಲ ಕಣಪ್ಪಾ, ಅದು ಹಾಗಲ್ಲ.

ಏಯ್, ಬಿಡೋ ಅದೇನು ಕಂಪನೀನೋ, ಅಷ್ಟು ವರ್ಷದಿಂದ ಕೆಲಸ ಮಾಡ್ತಿದ್ದೀಯಾ. ಒಂದು ಅವಾರ್ಡ್ ಕೊಟ್ಟು ಹಂಗೇ ಬಿಟ್ತಾರೇನೋ? ನಿನ್ನ ಮ್ಯಾನೇಜರ್ ಫೋನ್ ನಂಬರ್ ಕೊಡು. ನಾನು ಮಾತಾಡ್ತೀನಿ.

ನೀನು ಸುಮ್ನಿರಪ್ಪಾ. ಚೆನ್ನಾಗಿ ಕೆಲಸ ಮಾಡ್ತೀವಿ ಅಂತ ಗುರುತಿಸ್ತಾರಲ್ಲಾ, ಅಷ್ಟು ಸಾಕು.

ಹೀಗೇ ಮಾತಾಡ್ತಾ, ಹೊಲಕ್ಕೆ ಒಂದು ಸುತ್ತು ಬಂದಿರುತ್ತೀವಿ. ಸಂಜೆ ಆಗ್ತಾ ಬಂದಿರುತ್ತೆ, ಮನೆಗೆ ಹೊರಡ್ತೀವಿ.

ಸಂಜೆಯಿಂದ ಮನೆಯಲ್ಲೇ ಇರೋದರಿಂದ, ಸ್ವಲ್ಪ ಅನಾನುಕೂಲ. ಅಪ್ಪ ಅಮ್ಮ ಯಾವಾಗ ಬೇಕಾದರೂ ನನ್ನ ಮದುವೆಯ ವಿಷಯ ಎತ್ತುತ್ತಾರೆ.

ನೋಡು ನಿನ್ನ ವಾರಿಗೆಯವರೆಲ್ಲಾ ಮದುವೆಯಾಗ್ತಿದ್ದಾರೆ. ನಿಂಗೇನು ಧಾಡಿ. ಇಬ್ಬರಲ್ಲಿ ಯಾರು ಮಾತಾಡಿದರೂ‌ ಒಂದೇ ಧ್ವನಿ.

ಅದು, ಹಂಗಲ್ಲ. ಇಷ್ಟು ಬೇಗ ಯಾಕೆ ಅಂತ.

ನೋಡಪ್ಪಾ, ನಿನ್ನ ಕೈಲಿ ಸಾಕೋದಿಕ್ಕಾಗಲ್ಲಾ ಅಂತ ಹಾಗೆ ಹೇಳ್ತೀಯಾ ಅನ್ನೋದಾದ್ರೆ, ಸೊಸೇನಾ, ನಾವು ಸಾಕ್ತೀವಿ. ನಿನ್ನ ಕೈಲಿ ಯಾವಾಗಾಗುತ್ತೋ ಅವಾಗ ಬಂದು ಕರೆದುಕೊಂಡು ಹೋಗು.

ನನಗೆ ಈ ವರಸೆಗಳೆಲ್ಲಾ ಚೆನ್ನಾಗಿ ಗೊತ್ತಿರೋದರಿಂದ. ಹೊಲದಿಂದ ವಾಪಸ್ ಬರುವಾಗಲೇ ರಾತ್ರಿ ಸೆಕೆಂಡ್ ಶೋ‌ ಸಿನಿಮಾಗೆ ಹೋಗಲು ಯಾರನ್ನಾದರೂ ಒಪ್ಪಿಸಿ ಬಂದಿರ್ತೀನಿ. ಅವರು ಬಂದು ನನ್ನ ಹೆಸರು ಕೂಗಿದರೂಂದರೆ ತಕ್ಷಣಕ್ಕೆ ಮನೆಯಿಂದ ಠಣ್ ಅಂತ ನೆಗೆದು ಸಿನಿಮಾಗೆ ಓಡಿ ಬಿಡ್ತೀನಿ.

ಮರುದಿನ ಮತ್ತೆ ಎಲ್ಲಾ ಯಥಾಪ್ರಕಾರ...

ಕಣ್ಣು ಮುಚ್ಚಿ ತೆಗೆಯುವುದರೊಳಗೆ ರಜೆ ಮುಗಿದು ವಾಪಸ್ ಹೊರಡೋ ಸಮಯ ಬಂದಿರುತ್ತೆ. ಎಲ್ಲರೂ ಬಸ್ ಸ್ಟ್ಯಾಂಡ್ ಗೆ ಬರುತ್ತಾರೆ.

ನೀನು ಇನ್ನೂ ಬಂದಿಲ್ಲಾ ಅಂದರೆ, ನಾಳೆ ಬರ್ತೀಯಾ, ಇವತ್ತು ಬರ್ತೀಯಾ ಅಂತ ಆಸೆಯಿಂದ ಕಾಯ್ತಿರ್ತೀವಿ. ಬಂದ ಮೇಲೆ ಸಂಕಟ ಆಗುತ್ತೆ ಕಣೋ. ನಾಳೆ ‌ ಈ ಹೊತ್ತಿಗೆ ನೀನು ಆಗಲೇ ಹೊರಟು ಹೋಗ್ತೀಯಾ ಅಂತ ಬೇಜಾರಾಗುತ್ತಿರುತ್ತೆ. ನೀನು ಇಲ್ಲದಿದ್ದಾದ ಇಲ್ಲಾ ಅನ್ನೋ ಸಂಕಟ, ಇದ್ದಾಗ ಹೊರಟು ಹೋಗ್ತೀಯಾ ಅನ್ನೋ ಸಂಕಟ. ಇಲ್ಲೇ ಯಾವುದಾದ್ರೂ ಕೆಲಸ ಮಾಡ್ಕೊಂಡ್ ಇರಬಾರ್ದೇನೋ?

ನಾನು ಮಾತಾಡೋಲ್ಲ. ಬಸ್ ಬಂದ ತಕ್ಷಣ ಅವರಿಗೆಲ್ಲಾ ಟಾಟಾ‌ಮಾಡಿ ಹೊರಟು ಬಿಡ್ತೀನಿ.

ಈ ರಾತ್ರಿ ಅದೆಲ್ಲಾ ಮತ್ತೆ ಮತ್ತೆ ನೆನಪಾಗ್ತಿದೆ. ಬೇರನ್ನೆಲ್ಲೋ‌ ಬಿಟ್ಟು ಬಳ್ಳಿ ಮತ್ತೆಲ್ಲೋ ಹಬ್ಬಲು ಯತ್ನಿಸಿದಂತೆ ನಾನೆಲ್ಲೋ‌ ಒಂದು ಕಡೆ ನನ್ನವರೆಲ್ಲೋ ಒಂದು ಕಡೆ.

ಈ‌ ರಾತ್ರಿ ಲೇಟಾಗಿ ಮಲಗಿದೆನೆಂದು ಗೊತ್ತಾದರೆ, ಫೋನಲ್ಲಿ ಉಪದೇಶ 'ಹಾಗೆ ಮಾಡ್ಬೇಡ್ವೋ, ಮೊದಲೇ ಕಂಪ್ಯೂಟರ್ ಕೆಲಸ. ಮನೆಗೆ ಬಂದಮೇಲೂ ಅದನ್ನೇ ಮಾಡ್ತೀಯಾ, ಕಣ್ಣಿಗೆ ಸ್ವಲ್ಪ ರೆಸ್ಟ್ ಕೊಡೋ. ಆಮೇಲೆ ದಪ್ಪ ಕನ್ನಡಕ ಹಾಕ್ಕೋ ಬೇಕಾಗುತ್ತೆ. ಮದುವೆಯಾಗೋದಕ್ಕೆ ಹುಡುಗಿಯರು ಒಪ್ಪಲ್ವೋ'

Tuesday, January 12, 2010

ಆಸೆ

ಜಗವೆಲ್ಲಾ ಮಲಗಿರಲು
ಒಲವಿನ ಅಲೆ ಬೀಸುತಿರಲು
ಪ್ರೀತಿಯೇ‌ ಮೈಯಾಗಿ ಹುಟ್ಟುವ
ಮುಂಜಾನೆಯ ಮುತ್ತಿನ ಹುಟ್ಟು
ನೋಡುವ ಆಸೆ

ಒಲವಿನ ಅರಮನೆಯಲ್ಲಿ
ಗಾನಸುಧೆ ಹರಿದಿರಲು
ಅರಿವೇ ಇಲ್ಲದಿರಲು
ಆ ಸಂಗೀತದ ಅಲೆಯಲ್ಲೊಂದು
ಕಂಪನವಾಗುವ ಆಸೆ

ಪ್ರೀತಿಯ ಶಕ್ತಿಗೆ ಮರುಳಾಗಿ
ನಡೆವ ಪ್ರತಿ ಹೆಜ್ಜೆಯೂ‌ ಕವಿತೆಯಾಗಿ
ಜಗವೆಲ್ಲಾ‌ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ

ಹೊಸತೆಲ್ಲವನ್ನೂ‌ ಬಯಸುತಿರಲು
ಯುಗಗಳೆಲ್ಲಾ ಕ್ಷಣಗಳಾಗಿರಲು
ಜಗವೇ‌ ಅಂಗೈಯಲಿರಲು
ಮಾಯಾಮೃಗದ ಬೆನ್ನೇರಿ ಓಡುವ ಆಸೆ

ಹುಡುಗು ಕಣ್ಣಿಗೆ ಎಲ್ಲವೂ‌ ಕೌತುಕವಾಗಿರಲು
ಕಂಡದ್ದರ ಹಿಂದೆ ಕಾಣದ್ದನ್ನು ಹುಡುಕುತಿರಲು
ರಾತ್ರಿ ಬೆಳಕೆಂಬ ಆಟವಾಡುವ
ಸೂರ್ಯನ ಬೆನ್ನತ್ತುವ ಆಸೆ

ಜೀವನದ ಪ್ರತಿ ಪುಟದಲ್ಲೂ
ಹೊಸ ಜಾಗ ಕಂಡಿರಲು
ಹೊಸ ಅಲೆ ಹೊರಟಿರಲು
ಆ ಅಲೆಯ ಜಾಡು ಹಿಡಿದು
ದಿಗಂತದೆಡೆಗೆ ಹೋಗುವ ಆಸೆ

Wednesday, January 6, 2010

ಅವನಿರಬೇಕಿತ್ತು ಇಂದು

ಕುಣಿದು ಕುಪ್ಪಳಿಸುವಾಗ
ಹುಚ್ಚೆದ್ದು ನಗುವಾಗ
ಊರೂರು ಅಲೆಯುವಾಗ
ಅವನೆಲ್ಲೋ ನಕ್ಕಂತೆ ಭಾಸ

ಬೀಸಿ ಬಂದ ಗಾಳಿ
ತಂದು ಸವರಿದ್ದು ಅವನುಸಿರಾ
ಇಲ್ಲವೇ ಅವನ ನೆನಪಾ

ಥಿಯೇಟರಿನೆದುರು ನಿಂತು
ಟಿಕೇಟು ನೀ ತೆಗೆಸು
ಎಂದು ಜಗಳವಾಡುತ್ತಿರುವಾಗ
ಅವನಿದ್ದಿದ್ದರೆ ಅವನಿಗೊಂದು
ತೆಗೆಸಬೇಕಿತ್ತಲ್ಲವೇ ಎಂಬ ನೆನಪು
ರಿಟರ್ನ್ ಟಿಕೆಟ್ ತೆಗೆಸದೇ
ಊರಿಗೆ ಹೊರಟು ಹೋದ ಪಾಪಿ

ಪ್ರತೀ ಹುಟ್ಟುಹಬ್ಬಕ್ಕೆ
ಒದೆ ತಿನ್ನುವಾಗಲೂ ನೆನಪಾಗುತ್ತಾನೆ
ಅವನಿಗೆ ಕೊಡಬೇಕಾದವು ಇನ್ನೂ ಹಾಗೇ ಉಳಿದಿವೆ
ಎದುರಿಗೆ ಸಿಕ್ಕರೆ ಎಲ್ಲರದೂ ಸೇರಿಸಿ
ಬಾಕಿ ತೀರಿಸುತ್ತೇನೆ
ಪಾರ್ಟಿ ಕೊಡಲು ಹೆದರಿ ಓಡಿಹೋದನೇನೋ

ಒಬ್ಬೊಬ್ಬರದೇ ಮದುವೆಯಾದಾಗ
ಸದ್ದಿಲ್ಲದೇ ಹಿಂಡು ಖಾಲಿಯಾದಾಗ
ಮರೆಯಲ್ಲಿ ನಿಂತು ನಗುತ್ತಿರುತ್ತಾನೇನೋ
ಅವನಿಷ್ಟು ಬೇಗ ಮದುವೆಯಾಗುತ್ತಿದ್ದನೇ?
ಊಹೂಂ, ಇರಲಿಕ್ಕಿಲ್ಲ

ಕನಸುಗಳೆಷ್ಟಿದ್ದವು
ಹಂಚಿಕೊಳ್ಳಲು, ಪೂರೈಸಲು
ಜೊತೆನಿಂತು ಬೆನ್ನಿಗೆ ಗುದ್ದಲು
ನಾವಿರಲಿಲ್ಲವೇ
ಅದಾರು ಸಿಕ್ಕಿಹರು ನಿನಗಲ್ಲಿ
ಇರಲಿ ಬಿಡು,
ಅಲ್ಲಿಗೆ ಬಂದಾಗ ಗುರುತು ಹಿಡಿದು ನೆನೆಸು

ಅವನ ಬಗ್ಗೆ ಒಂದು ಕವನ
ಬರೆದಿದ್ದು ತಿಳಿದರೆ ಬಿದ್ದು ಬಿದ್ದು ನಕ್ಕಾನು
ಅಪಹಾಸ್ಯ ಮಾಡಲಿಕ್ಕಾದರೂ ಅವನಿರಬೇಕಿತ್ತು

Sunday, January 3, 2010

ಕಡಲ ತೀರದ ಪ್ರತಿಮೆಗಳು





ಕಡಲ ತಡಿಯಲ್ಲಿ
ಹಾಲು ಬೆಳದಿಂಗಳು
ಉಕ್ಕುವ ತೆರೆ, ಚೆಲ್ಲಿದ ನೊರೆ
ಬೆಕ್ಕಸ ಬೆರಗಾದ ಕಂಗಳು

ಮನದೊಳವಿತಿದ್ದ ಬಾಲ್ಯ
ಮೆಲ್ಲನೆ ಹೊರಬಿದ್ದು
ಎವೆಯಿಕ್ಕುವಷ್ಟರಲ್ಲಿ
ಉಸುಕಲ್ಲಿ ಉರುಳಾಡಿ
ಅಲೆಯಲ್ಲಿ ಹೊರಳಾಡಿ
ಗಹಗಹಿಸಿ ನಕ್ಕಿತು

ಸ್ವಚ್ಛ ಹುಣ್ಣಿಮೆಯಲ್ಲಿ
ಹುಚ್ಚು ಅಲೆಗಳ ಮೇಲೆ
ತೇಲಿತ್ತು ಮನಸು
ದೂರದಲಿ ಹೊರಟಿದ್ದ
ನಾವೆಯ ಮೇಲೆ ನೆಟ್ಟಿತ್ತು ಕನಸು

ನೀರವ ತೀರದಲಿ
ಬೀಸುವ ಗಾಳಿಯಲಿ
ಅಲೆದಾಡಿದ ಭಾವನೆಗಳ ನಡುವೆ
ಕಾಲನ ಗಡಿಯಾರದಲ್ಲೊಂದು
ಮುಳ್ಳು ಮೆಲ್ಲನೆ ಮುಂದೆ ಸರಿದಿತ್ತು





ವೈಧವ್ಯದ ವಾಸನೆಯೋ ಏನೋ
ಬಿಳೀ ಬಟ್ಟೆ ಹೊದ್ದು, ಅಲ್ಲಲ್ಲಿ ಕೆದರಿ
ಬೋರಲು ಬಿದ್ದ ತೀರ

ವಾರಿಧಿಯ ಕಳವಳ
ದಡಕಪ್ಪಳಿಸಿ ನೊರೆ ನೊರೆ ವೇದನೆ
ಹೆಜ್ಜೆ ಗುರುತುಳಿಸದಷ್ಟು ಆಕ್ರೋಶ
ತೀರದ ತುಂಬಾ

ಬೀಸಿದ ಚಳಿಗಾಳಿಯಲಿ
ತಣ್ಣನೆಯ ಕ್ರೌರ್ಯ
ಯಾರ ಮೇಲಿನ ಸಿಟ್ಟು
ಹೊಟ್ಟೆಯಲ್ಲಡಗಿದೆಯೋ

ದೂರ ದೂರಕೂ ಬರಿಯೇ ನೀರು
ಅಲ್ಲೆಲ್ಲೋ ಜಾರಿಬಿದ್ದ ಮುಗಿಲು
ದಡದಿಂದ ದಡಕ್ಕೆ ಅದೆಷ್ಟು ಯೋಜನ
ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೇ ಯಾನ