Friday, September 17, 2010

ಅಪರಾಧಿ ನಾನಲ್ಲ

ಧಾವಂತದಿಂದ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಕಡೆಗೆ ಮೋಹನ ಅಡ್ಡಾಡುತ್ತಿದ್ದ. ಹಣೆಯ ಮೇಲೆ ಬೆವರ ಹನಿಗಳು ಸದ್ದಿಲ್ಲದಂತೆ ಹುಟ್ಟುತ್ತಿದ್ದವು. ಪದೇ ಪದೇ ರಸ್ತೆಯ ಕಡೆಗೆ ನೋಡುತ್ತಿದ್ದ. ಸಣ್ಣ ಶಬ್ದಕ್ಕೂ  ಬೆದರುವಂತಾಗುತ್ತಿತ್ತು. ಆರಡಿ ಎತ್ತರದ ಅಜಾನುಬಾಹು ಹೀಗೆ ಹೆದರುತ್ತಾ ನಿಲ್ಲುವುದು ಬೇರೆಯವರಿಗೆ ತಮಾಷೆಯಾಗಿ ಕಂಡರೂ ಉಸಿರು ಜೋರಾಗಿ ಬಿಡಲೂ ಆಗದಷ್ಟು ಮೋಹನ ಹೆದರಿದ್ದ.

ಜೀವನದಲ್ಲಿ ಮೊಟ್ಟಮೊದಲನೆಯ ಬಾರಿಗೆ ತಪ್ಪು ಮಾಡಿದ್ದ. ಮೇಲಾಗಿ ಸಿಕ್ಕಿ ಬಿದ್ದಿದ್ದ. ಶ್ರಾವಣಿ ನೋಡಿ ಬಿಟ್ಟಿದ್ದಳು. ಅವಳು ಈ ಹೊತ್ತಿನಲ್ಲಿ  ಇಲ್ಲಿಗೇಕೆ ಬಂದಳು ಎನ್ನುವುದು ಮೋಹನನಿಗೆ ತಿಳಿಯದಾಗಿತ್ತು. ಅದೆಷ್ಟು ದಿನಗಳಿಂದ ಈ‌ಯೋಜನೆ ರೂಪಿಸಿದ್ದ ಅವನು. ಹೀಗೆ ಸಿಕ್ಕಿ ಬೀಳುವುದರಲ್ಲಿ ಅರ್ಥವೇ ಇಲ್ಲ. ಛೇ, ಈಗೇನು ಮಾಡುವುದು?‌ಇಷ್ಟು ಹೊತ್ತಿನಲ್ಲಿ ಶ್ರಾವಣಿ‌ ಮನೆಗೆ ಹೋಗಿರಬಹುದಾ? ಅವಳ ಅಪ್ಪ-ಅಮ್ಮಂಗೆ ಹೇಳಿಬಿಟ್ಟಿರ‍್ತಾಳಾ? ಊಹೂಂ, ಇಲ್ಲ. ಅವಳ ಅಪ್ಪ ಅಮ್ಮ ಹೊರಗೆ ಹೋಗುವುದನ್ನ ಆಗಲೇ‌ ನೋಡಿದ್ದ. ಹಾಗಾದ್ರೆ, ಮನೆಗೆ ಹೋಗಿ ಶ್ರಾವಣಿ‌  ಹತ್ತಿರ ಮಾತಾಡ್ಲಾ? ಪ್ಚ, ಅಷ್ಟು ಚಿಕ್ಕ ಹುಡುಗಿಗೆ ಏನು ಅರ್ಥ ಆಗುತ್ತೆ? ಇವತ್ತಲ್ಲಾ‌ ನಾಳೆ ಯಾರಿಗಾದ್ರೂ ಹೇಳಿಯೇ ಬಿಡ್ತಾಳೆ. ಬೇಡ, ಬೇಡ. ಏನಾದ್ರೂ‌ ಮಾಡಲೇಬೇಕು. ಅದೂ ಅವಳ ಅಪ್ಪ ಅಮ್ಮ ಮನೆಗೆ ಬರೋದ್ರೊಳಗೇ ಆಗಬೇಕು. ಆದ್ರೆ ಏನು ಮಾಡಬೇಕು ? ಅಯ್ಯೋ, ಜೋರಾಗಿ ಉಸಿರು ಬಿಟ್ಟ. ಮೋಹನ ಎತ್ತಿ ಬೆಳೆಸಿದ ಹುಡುಗಿ ಶ್ರಾವಣಿ‌ . ಇನ್ನೂ ಹೈಸ್ಕೂಲಿಗೆ ಹೋಗ್ತ್ತಿದ್ದಾಳೆ. ಅವಳನ್ನು ಕಂಡರೆ ಮೋಹನನಿಗೆ ಏನೋ ಪ್ರೀತಿ, ಮಮತೆ. ಆದರೆ ಈಗ ಎದುರಿಗಿರುವುದು ತನ್ನ ಜೀವನದ ಪ್ರಶ್ನೆ. ವಿಷಯ ಹೊರಗೆ ಬಂದರೆ ಜೀವನ ಪೂರ್ತಿ ಜೈಲಿನಲ್ಲಿರಬೇಕು. ಮರ್ಯಾದೆಯಂತೂ ಹರಾಜಾಗಿ ಹೋಗುತ್ತದೆ. ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ.
ಛೇ, ಶ್ರಾವಣಿ‌  ಅಲ್ಲಿಗೆ ಬರದೇ ಹೋಗಿದ್ರೆ ಎಲ್ಲಾ ಸರಿ ಹೋಗುತ್ತಿತ್ತು.
ಈಗ್ಲೂ ಸರಿ ಹೋಗುತ್ತೆ, ಶ್ರಾವಣೀನೇ ಇಲ್ಲ ಎಂದರೆ. ಮನದಲ್ಲಿ ಯಾವುದೋ‌ ದನಿ ಹೇಳಿದಂತಾಯಿತು.
ಛೇ, ಛೇ, ಅದೆಲ್ಲಾ ಆಗಲ್ಲ.
ಮತ್ತೆ ನೀನು ಜೈಲಿಗೆ ಹೋಗ್ತೀಯಾ?
ಹ್ಮ್...
ಮೋಹನನೀಗ ಕಸಿವಿಸಿ ಶುರುವಾಗಿತ್ತು. ತನ್ನ ಜೀವನವೋ, ಇಲ್ಲಾ ತಾನು ಎತ್ತಿ ಆಡಿಸಿದ ಜೀವವೋ?
ಈಗ್ಲೇ ಹೋದ್ರೆ ಯಾರಿಗೂ ಗೊತ್ತಾಗಲ್ಲ. ಅವಳ ಮನೇಲೂ ಯಾರೂ ಇಲ್ಲ. ಚಿಕ್ಕ ಹುಡುಗಿ. ಲೆಕ್ಕವೇ ಅಲ್ಲ. ಒಳಗಿನ ದನಿ ಹೇಳುತ್ತಲೇ ಇತ್ತು.
ಆದ್ರೆ, ಪಾಪ. ಏನೂ ಗೊತ್ತಿಲ್ಲದ ಹುಡುಗಿ. ಇನ್ನೂ ಬಾಳಿ ಬದುಕಬೇಕಾದವಳು.
ಹಾಗಂತ ನಿನ್ನ ಜೀವನ ಬಲಿ ಕೊಡ್ತೀಯಾ? ಅವಳು ಯಾರ ಹತ್ರನಾದ್ರೂ ಬಾಯಿ ಬಿಟ್ರೆ ಕಥೆ ಮುಗಿಯಿತು. ಏನೇ ಮಾಡಿದರೂ ಇನ್ನು ಹತ್ತು ನಿಮಿಷದ ಒಳಗೆ ಮಾಡಿ ಮುಗಿಸಬೇಕು. ಬೇಗ, ಬೇಗ.. ಹೊರಡು. ದನಿ ಒತ್ತಾಯ ಪಡಿಸಿತು.

ಕೊನೆಗೂ ಮೋಹನನಿಗೆ ಅವನ ಜೀವನವೇ ಮುಖ್ಯವಾಯಿತು. ದುರ್ದಾನ ತೆಗೆದುಕೊಂಡವನಂತೆ ಶ್ರಾವಣಿಯ  ಮನೆ ಕಡೆಗೆ ಹೆಜ್ಜೆ ಹಾಕತೊಡಗಿದ. ಅವನ ಮನವಾಗಲೇ  ಕೆಲಸ ಹೇಗೆ  ಮುಗಿಸಬೇಕೆಂದು ಯೋಚಿಸತೊಡಗಿತ್ತು.

*******

ಬರೆಯುತ್ತಿದ್ದ ಕಥೆ ಅರ್ಧಕ್ಕೇ ನಿಲ್ಲಿಸಿ ಮಹರ್ಷಿ ಆಕಳಿಸಿದ. ತುಂಬ ಹೊತ್ತಿನಿಂದ ಬರೆಯುತ್ತಿದ್ದುದರಿಂದ ಮೈ ಕೈ ಎಲ್ಲಾ ಹಿಡಿದಂತಾಗಿತ್ತು. ಕುರ್ಚಿಗೆ ಹಾಗೇ ಒರಗಿ ಮೈ ಮುರಿದ. ಅವನ ಅತ್ಯಂತ ಮಹತ್ವಾಕಾಂಕ್ಷೆಯ ಕಥೆಯಾಗಿತ್ತದು.
ಮಹರ್ಷಿಯ ಕಥೆಗಳೆಲ್ಲಾ ಸುಖಾಂತ್ಯವಾಗುತ್ತವೆ. ಅವನ ಕಥೆಗಳು  ಒಂದು ಕಮರ್ಷಿಯಲ್ ಸಿನಿಮಾ ನೋಡಿದ ಹಾಗಿರುತ್ತದೆಯೇ ಹೊರತು ನಿಜ ಜೀವನಕ್ಕೆ ಹತ್ತಿರವಾಗಿರುವುದಿಲ್ಲ. ಮತ್ತೆ ಮತ್ತೆ ಕಾಡುವುದಿಲ್ಲ ಎಂಬಿತ್ಯಾದಿ ಯಾರೋ ಪತ್ರಿಕೆಯಲ್ಲಿ ವಿಮರ್ಶೆ ಮಾಡಿದ್ದರು. ಮಹರ್ಷಿಗೆ ಅದನ್ನು ಒಪ್ಪಲಾಗಿರಲಿಲ್ಲ. ಪತ್ರಿಕೆಗಾಗಲೀ, ಮತ್ತಿನ್ನಾರಿಗಾದರೂ‌ ಏನೂ‌ ಹೇಳದಿದ್ದರೂ ತಾನೊಂದು ಹೊಸ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದ್ದ. ಅವನ ಹೊಸ ಕಥೆಯಲ್ಲಿನ ಕೇಂದ್ರ ಪಾತ್ರ ಮೋಹನನ್ನು ತುಂಬಾ ಸಜ್ಜನನಂತೆ ಚಿತ್ರಿಸಿ, ಅಂತ್ಯದಲ್ಲಿ ಕೊಲೆಗಾರನನ್ನಾಗಿಸಿ ಓದುಗನನ್ನು ದಿಗ್ಭ್ರಮೆಗೊಳಿಸುವ ಉಪಾಯ ಮಾಡಿದ್ದ. ವೈಯಕ್ತಿಕವಾಗಿ ಅವನಿಗಿದು ತೀರಾ ವ್ಯತಿರಿಕ್ತ ನಿರ್ಧಾರ. ಕಥೆ ಓದಿದ ಮೇಲೆ ಓದುಗನಿಗೊಂದು ಭರವಸೆ ಸಿಗಬೇಕೇ ಹೊರತು ಮತ್ತಷ್ಟು ಸಂಕಟಕ್ಕೀಡು ಮಾಡಬಾರದೆಂಬುದು ಅವನ ಅಭಿಪ್ರಾಯ. ಈ‌ ಬಾರಿ ಯಾರೋ  ಅವನನ್ನು ಟೀಕಿಸಿದರೆಂದು  ಬಲವಂತಪೂರ್ವಕವಾಗಿ  ತನ್ನ ಶೈಲಿ ಬದಲಿಸಲು ಪ್ರಯತ್ನ ಪಡುತ್ತಿದ್ದ.

ಮಹರ್ಷಿ ಬರೆಯುತ್ತಿದ್ದ ಕಥೆ ಅದಾಗಲೇ ಮುಗಿಯುವ ಹಂತಕ್ಕೆ ಬಂದಿತ್ತು. ಮೋಹನನಿಂದ ಶ್ರಾವಣಿಯ ಕೊಲೆ ಮಾಡಿಸಿದ ತಕ್ಷಣಕ್ಕೆ ಮುಗಿದು ಹೋದಂತೇ ಲೆಕ್ಕ. ಕೊಲೆ ಮಾಡಿಸಲು ಯಾವ ಮಾರ್ಗ ಹಿಡಿಯುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ, ಟಕ್ ಟಕ್ ಟಕ್ ಎಂದು ಯಾರೋ ಬಾಗಿಲು ಬಡಿದರು.

ಮಹರ್ಷಿ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಯಾರೋ ಮಧ್ಯ ವಯಸ್ಕ. ಸಾಕಷ್ಟು ಎತ್ತರವಾಗಿದ್ದ. ಎಲ್ಲೋ ನೋಡಿದ್ದೀನಿ ಎಂದು ಮಹರ್ಷಿಗೆ ಅನ್ನಿಸಿದರೂ ತಕ್ಷಣಕ್ಕೆ ಗೊತ್ತಾಗಲಿಲ್ಲ.

ಮಹೀ, ನೀನು ಮಾಡುತ್ತಿರುವುದು ಸರಿಯಲ್ಲ.. ಬಂದಾತ ಹೇಳಿದ.

ಮಹರ್ಷಿಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೇವಲ ಅವನ ಆಪ್ತೇಷ್ಟರಷ್ಟೇ ಅವನನ್ನು ಮಹೀ ಎಂದು ಕರೆಯುತ್ತಿದ್ದುದು. ಬಂದಾತನ ಗುರುತು ನೆನಪಾಗುತ್ತಿಲ್ಲ. ಮೇಲಾಗಿ, ತಾನು ಏನು ತಪ್ಪು ಮಾಡುತ್ತಿದ್ದೇನೆ ಎಂಬುದೇ ಅವನಿಗೆ ಹೊಳೆಯಲಿಲ್ಲ.

ಏ..ಏನು ಮಾಡ್ತಿರೋದು ಸರಿಯಲ್ಲ? ನೀವ್ಯಾರು ಗೊತ್ತಾಗಲಿಲ್ಲ. ನಿಧಾನವಾಗಿ ಹೇಳಿದ.

ಯಾಕೆ ಮಹೀ, ಏನಾಯಿತು. ಗುರುತು ಸಿಗಲಿಲ್ವ?‌ನಾನು ಮೋಹನ.

ಬಾಗಿಲನ್ನು ಹಿಡಿದಿರಲಿಲ್ಲವೆಂದರೆ ಮಹರ್ಷಿ ಅಲ್ಲೇ ಬಿದ್ದುಬಿಡುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ನಿಶ್ಶಕ್ತಿ ಆವರಿಸಿಕೊಂಡಿತು. ಬಂದಾತನನ್ನು ಈಗ ಗುರುತು ಹಿಡಿದ.
ಮೋಹನ, ಮೋಹನ ಅಂದ್ರೆ... ಮಹರ್ಷಿ ತೊದಲಿದ.

ಹೌದು ಅದೇ ಮೋಹನ. ನಾನು ಕೊಲೆಗಾರ ಅಲ್ಲ ಮಹೀ. ದಯವಿಟ್ಟು ನನ್ನಿಂದ ಆ ಕೆಲಸ ಮಾಡಿಸಬೇಡ.

ಮಹರ್ಷಿಗೆ ತಲೆ ತಿರುಗುವುದೊಂದು ಬಾಕಿ. ಏನು ಹೇಳಬೇಕೆಂಬುದು ತಿಳಿಯದೆ ಅವನನ್ನು ಒಳಗೆ ಕರೆದು ಕೂರಿಸಿದ.

ನೀನು, ನೀ...ನೀವು ಇಲ್ಲಿಗೆ ಹೇಗೆ ಬಂದ್ರಿ? ಕೇಳಿದ

ನೀನು ಎಂದೇ ಹೇಳು. ಬೇರೆ ಏನು ಕರೆದರೂ ಅಸಹಜವಾಗಿರುತ್ತದೆ. ಮುಖ್ಯವಾಗಿ ನೀನೀಗ ಕೇಳಬೇಕಾಗಿರುವುದು ನಾನು ಹೇಗೆ ಬಂದೆ ಎನ್ನುವುದಲ್ಲ. ಯಾಕೆ ಬಂದೆ ಎನ್ನುವುದು. ಹೇಗೆ ಎನ್ನುವುದು ಸದ್ಯಕ್ಕೆ ಬೇಕಾಗಿಲ್ಲ. ಮೋಹನ ಹೇಳಿದ.

ಹಾಂ, ಹೌದು. ಯಾಕೆ ಬಂದೆ. ಮಹರ್ಷಿಗೆ ಇನ್ನೂ ಗೊಂದಲ.

ನಾನು ತಪ್ಪು ಮಾಡುವುದನ್ನು ತಪ್ಪಿಸಿಕೊಳ್ಳಲು.

ಅಂದರೆ?

ಕೊಲೆ ಮಾಡುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ ಮಹೀ. ಅದೂ ನಾನು ಎತ್ತಿ ಆಡಿಸಿದ ಮಗುವನ್ನು? ನಿನಗೆ ಆ ರೀತಿ ಯೋಚಿಸಲು ಮನಸ್ಸಾದರೂ‌ ಹೇಗೆ ಬಂತು? ಆ ಕೆಲಸ ನನ್ನಿಂದ ಸಾಧ್ಯವಿಲ್ಲ. ಅವನ ಧ್ವನಿ ಭಾರವಾಗಿತ್ತು.

ಮಹರ್ಷಿಗೆ ಅವನ ದು:ಖ ನೋಡಿ ಸ್ವಲ್ಪ ಎಚ್ಚೆತ್ತಂತಾಯಿತು.
ನೀನೇನು ಹೇಳಬೇಕು ಅಂತಿದ್ದೀಯಾ? ಕೇಳಿದ.

ನೀನು ಬರೆಯುತ್ತಿರುವ ಕಥೆಯಲ್ಲಿ ಕೊಲೆ ಮಾಡಿಸಬೇಡ. ನಾನು ಮಾಡಲಾರೆ. ಮೋಹನ ಹೇಳಿದ.

ಇಷ್ಟು ಹೊತ್ತಿಗಾಗಲೇ, ಮಹರ್ಷಿಗೆ ಧೈರ್ಯ ಬಂದಿತ್ತು.
ಅದು ಹೇಗಾಗುತ್ತೆ?‌ಅದು ನನ್ನ ಕಥೆ. ನಾನು ಬರೆಯುತ್ತಿರುವುದು. ನಾನು ಎಣಿಸಿದಂತೆಯೇ ಇರಬೇಕು.

ಅದು ನನ್ನ ಕಥೆ ಕೂಡ ಮಹೀ. ಮೋಹನ ಹೇಳಿದ.

ನೀನು ಕೇವಲ ಪಾತ್ರ. ನೀನಿಲ್ಲಿಗೆ ಬಂದು ಈ ರೀತಿ ಮಾತನಾಡುತ್ತಿರುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅದೂ ಈ‌ ರೀತಿ! ಮಹರ್ಷಿ ಹೇಳುತ್ತಲೇ ಹೋದ.

ಇದು ನನ್ನ ವ್ಯಕ್ತಿತ್ವದ ಅಳಿವು ಉಳಿವಿನ ಪ್ರಶ್ನೆ ಮಹೀ. ನಾನು ಬರಲೇ ಬೇಕಿತ್ತು. ನಾಳೆ ಬೇರೆ ಯಾರಾದರೂ ನಿನ್ನ ಕಥೆ ಹೇಳುವಾಗ ನಿಜ ಹೇಳಲಿ ಎಂದು ನೀನು ಬಯಸುವುದಿಲ್ಲವೇನು? ಇಲ್ಲ ಸಲ್ಲದ ಅಪವಾದ ಮಾಡಿದರೆ, ಇಲ್ಲವೇ ನಿನ್ನ ಸ್ವಭಾವವನ್ನೇ ತಿರುಚಿ ಬರೆದರೆ  ಸುಮ್ಮನಿರುತ್ತೀಯಾ?

ಅದು ಸರಿ, ಆದರೆ ನೀನು ಇಲ್ಲಿ?

ಪದೇ ಪದೇ ಅದನ್ನೇ ಕೇಳಬೇಡ. ಈಗ ನಾನು ಹೇಳುವುದನ್ನು ನೀನು ಮಾಡ್ತೀಯೋ ಇಲ್ಲವೋ  ಅಷ್ಟು ಹೇಳು. ಮೋಹನನ  ಧ್ವನಿ ಗಡುಸಾಗಿತ್ತು.

ಮಹರ್ಷಿಗೆ ಸಿಟ್ಟು ಬಂತು. ಅವನು ಬರೆಯುತ್ತಿರುವ, ಅವನ ಕಥೆಯಲ್ಲಿನ ಪಾತ್ರ ಅವನಿಗೇ ಧಮಕಿ ಹಾಕುವುದನ್ನು ಅವನು ಸಹಿಸದಾದ.
ನೋಡು, ನಾನು ಹೇಳಿದಂತೆ ಮಾಡುವುದಷ್ಟೇ‌ ನಿನ್ನ ಕೆಲಸ. ನನ್ನ ಸೃಷ್ಟಿ ನೀನು. ನನಗೇ‌ ಬುದ್ಧಿ  ಹೇಳುವಷ್ಟು  ನಿನಗೆ ಅಧಿಕಾರವಿಲ್ಲ.

ಬೇಡ ಮಹೀ, ನನ್ನಿಂದ ಆ ಕೊಲೆ ಮಾಡಿಸಬೇಡ.

ನೀನು ಜೋರು ಮಾಡುತ್ತೀಯೋ, ಬೇಡುತ್ತೀಯೋ, ಏನೇ ಮಾಡಿದರೂ ನನ್ನ ಮನಸು ಬದಲಿಸಲಾರೆ. ನನ್ನ ಕಥೆ ಅದು. ನಾನು ಹೇಗೆ ಬರೆಯಬೇಕೆಂದು ನಿರ್ಧರಿಸಿದ್ದೀನೋ ಹಾಗೇ ಬರೆಯುವೆ. ಆ ಕೊಲೆ ಆಗೇ ತೀರಬೇಕು. ಅದೇ ನನ್ನ ನಿರ್ಧಾರ.

ಯಾವುದೇ ಕಾರಣಕ್ಕ್ಕೆ ನೀನು ಮನಸು ಬದಲಿಸಲಾರೆಯೇನು?

ಖಂಡಿತಾ ಸಾಧ್ಯವಿಲ್ಲ.

ಇನ್ನೊಮ್ಮೆ ಯೋಚನೆ ಮಾಡು.

ಪ್ರಶ್ನೆನೇ ಇಲ್ಲ. ಏನು ಹೆದರಿಸ್ತಾ ಇದ್ದೀಯಾ?

ಹಾಗೇ‌ ತಿಳಿದುಕೋ. ಆದರೆ ನಾನು ಆ ಕೊಲೆ ಮಾಡಲಾರೆ.

ನಾನೂ‌ ನೋಡೇ ಬಿಡ್ತೀನಿ.

ಬೇಡ ಮಹೀ.

ಇಲ್ಲಾ ಅಂದ್ರೆ ಏನು ಮಾಡ್ತೀಯಾ? ನಿನ್ನಿಂದ ಏನೂ‌ ಮಾಡ್ಲಿಕ್ಕೆ ಸಾಧ್ಯವಿಲ್ಲ. ನಾನು ಹೇಳಿದಂಗೆ ನೀನು ಕೇಳ್ಬೇಕು. ಈಗ ನೀನು ಇಲ್ಲಿಂದ ಹೊರಡು. ಅದೆಲ್ಲಿಂದ ಬಂದಿದೀಯೋ ಅಲ್ಲಿಗೇ ಹೋಗು. ಮಹರ್ಷಿ ಸಿಟ್ಟಿನಿಂದ ಕೂಗಿದ.

ಮೋಹನ ನಿಟ್ಟುಸಿರುಬಿಟ್ಟ. ಸರಿ ಮಹೀ. ಕೊನೆಗೂ ನನ್ನ ಕೊಲೆಗಾರನನ್ನಾಗಿಸಿ ಬಿಡ್ತೀಯ ಅಂದಾಯ್ತು. ಹಂ, ಆಗ್ಲಿ. ಆದ್ರೆ ಶ್ರಾವಣೀನ ಕೊಲೆ ಮಾಡುವಷ್ಟು  ನೀಚ ನಾನಿನ್ನೂ ಆಗಿಲ್ಲ. ಅದರ ಬದಲಿಗೆ ನಿನ್ನನ್ನೇ ಮುಗಿಸಿದರೆ ಒಂದು ಚಿಕ್ಕ ಹುಡುಗಿಯ ಪ್ರಾಣ ಉಳಿಸಿದ ತೃಪ್ತಿ ನನಗಿರುತ್ತದೆ.
ಮೋಹನ ಮುಂದೆ ಬಂದವನೇ, ಮಹರ್ಷಿಯ ಕತ್ತು ಹಿಸುಕತೊಡಗಿದ. ಮಹರ್ಷಿಯ ಕಣ್ಣು ಕತ್ತಲಾಗುತ್ತಾ ಬಂತು. ದಡಬಡಿಸಿ ಕೈ ಕಾಲು ಆಡಿಸಿದ. ಆಸರೆಗಾಗಿ ತಡಕಾಡಿದ. ಇದ್ದಕ್ಕಿದ್ದಂತೆ  ಬಿಗಿತ ಸಡಿಲಾದಂತಾಯಿತು. ಮಹರ್ಷಿ ಕಣ್ಣು ತೆರೆದ. ಯಾರೂ ಇರಲಿಲ್ಲ. ಅವನು ಬರೆಯುತ್ತಾ ಕುಳಿತಿದ್ದ ಟೇಬಲ್ ಚೆಲ್ಲಾಪಿಲ್ಲಿಯಾಗಿತ್ತು. ಮಹರ್ಷಿ ಇನ್ನೂ ಕುರ್ಚಿಯಲ್ಲಿ ಕುಳಿತಿದ್ದ.

ತಾನು ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗಲಿಕ್ಕೆ ಕೆಲ ಹೊತ್ತು ಬೇಕಾಯಿತು. ಮಹರ್ಷಿ ಇನ್ನೂ‌ ಬೆವರುತ್ತಲೇ ಇದ್ದ. ಮನಸ್ಸನ್ನು ತಹಬದಿಗೆ ತರಲು ಅವನಿಗೆ ಮತ್ತೂ ಸ್ವಲ್ಪ ಹೊತ್ತೇ ಹಿಡಿಯಿತು. ಸ್ವಲ್ಪ ಸಮಾಧಾನವಾದ ಮೇಲೆ, ಕುರ್ಚಿಯಿಂದೆದ್ದು , ಕನಸಲ್ಲಿ ಬೆಚ್ಚಿಬಿದ್ದ ರಭಸಕ್ಕೆ ಹಾರಿ ಹೋಗಿದ್ದ ಹಾಳೆಗಳನ್ನೆಲ್ಲಾ ತಂದು ಮೇಜಿನ ಮೇಲೆ ಜೋಡಿಸಿದ. ಅವನಿಗೆ ತನ್ನ ಮೇಲೇ ನಗು ಬಂತು. ಕಥೆಯೊಳಗಿನ ಪಾತ್ರ ತನ್ನ ಕೊಲೆ ಮಾಡಿದಂತೆ? ಸಣ್ಣಗೆ ನಕ್ಕ. ಸರಿ, ದಣಿವಾರಿದ್ದರಿಂದ ಕಥೆ ಮುಂದುವರೆಸೋಣವೆಂದು  ಮಹರ್ಷಿ ಮತ್ತೆ ಬರೆಯಲು ಕುಳಿತ.

ಆಗ, ಟಕ್ ಟಕ್ ಟಕ್ ಎಂದು ಬಾಗಿಲು ಬಡಿದ ಸದ್ದಾಯಿತು.

Saturday, September 4, 2010

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನಿದ್ದು ಬಿಟ್ಟರೆ (ಆಸ್ಪತ್ರೆಯಲ್ಲಿದ್ದು ಬಂದಂತೆ), ಮತ್ತೆ ಮೊದಲಿನ ವೇಗಕ್ಕೆ ಮರಳಲು ಕೆಲ ಸಮಯ ಬೇಕಾಗುತ್ತದೆ. ಅದು ಮನಸ್ಸಿಗೂ ಅನ್ವಯಿಸುತ್ತದೆ ಅಂತ ಈಗ ಗೊತ್ತಾಗಿದೆ. ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಇಷ್ಟು ದಿನಗಳವರೆಗೆ ಬರವಣಿಗೆಗೆ ರಜೆ ಹಾಕಿ, ಆಫೀಸು-ಮನೆ ಅಂತ ಸುತ್ತಾಡುತ್ತಿದವನು ದಿಢೀರ್ ಆಗಿ ಪುಸ್ತಕ ಪೆನ್ನು ಎತ್ತಿಕೊಂಡರೆ, ಅಯ್ಯೋ ಊಹೂಂ ಏನೂ ಹೊಳೆಯುತ್ತಿಲ್ಲ. ಅರ್ಧ ಬರೆದ ಕತೆಗಳು ನನ್ನೆಡೆಗೆ ದೈನೇಸಿ ನೋಟ ಬೀರುತ್ತಿದ್ದರೆ, ನಾನು ಮುಖ ಮುಚ್ಚಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಸುತ್ತಾಡುತ್ತಿದ್ದಾಗ, ಸಿನಿಮಾ ನೋಡುತ್ತಿದ್ದಾಗ ಅಥವಾ ಏನಾದರೂ ಮಾಡುತ್ತಿದ್ದಾಗ ಒಂದಿಷ್ಟು ಯೋಚನೆಗಳು ಮೂಡುತ್ತಿದ್ದವು. ರಾತ್ರಿ ಬರೆಯೋಣವೆಂದು ಕುಳಿತರೆ, ಅಷ್ಟೊತ್ತಿಗಾಗಲೇ ಆ ಭಾವ ತೀವ್ರತೆ ಇರುತ್ತಿರಲಿಲ್ಲ. ಹೀಗೇ ಆದರೆ ಸರಿಯಿಲ್ಲ, ಏನಾದರೂ ಬರೆಯಲೇಬೇಕು ಅಂತ ನಿರ್ಧಾರ ಮಾಡಿ ಕುಳಿತಾಗ ಹೊಳೆದದ್ದೇ ಈ ಲೇಖನ.

ನನಗೆ ಮೊದಲಿನಿಂದಲೂ ಓದುವ ಗೀಳು. ನಾವು ಕೆಲವು ಗೆಳೆಯರು ಸೇರಿಕೊಂಡಾಗ ಬರೀ ಪುಸ್ತಕಗಳ ಬಗ್ಗೆಯೇ ಚರ್ಚೆ ಮಾಡುತ್ತಿರುತ್ತೇವೆ. ಒಂದು ಹೊಸ ಪುಸ್ತಕ, ಇಲ್ಲವೇ ಎಲ್ಲರೂ ಓದಿರುವ ಪುಸ್ತಕಕ್ಕೆ ಒಂದು ಹೊಸ ನೋಟ, ಇತ್ಯಾದಿ ಮಾತನಾಡಲು ತುಂಬ ಖುಶಿಯಾಗುತ್ತೆ. ಅದನ್ನೇ ಇಲ್ಲಿಯೂ ಮಾಡುವ ಪ್ರಯತ್ನ ಮಾಡಿದ್ದೇನೆ. ಒಂದಿಷ್ಟು ಪುಸ್ತಕಗಳನ್ನು ಓದಿದಾಗ ನನಗಾದ ಸಂತೋಷ, ಸಂಕಟಗಳನ್ನು ಹಂಚಿಕೊಳ್ಳುವ ಬಯಕೆಯಿದೆ. ಸ್ವಂತವಾಗಿಯಾದರೆ ಏನಾದರೂ ಬರೆಯಬಹುದು. ಆದರೆ, ಪರಿಚಯ? ಉಹುಂ, ನನಗಿನ್ನೂ ಬರುವುದಿಲ್ಲ. ನನ್ನ ಮೊದಲ ಪ್ರಯತ್ನವಿದು. ನಿಮಗಿಷ್ಟವಾದಲ್ಲಿ ಮುಂದಿನದ್ದು ಯೋಚಿಸಿದರಾಯಿತು.


ಧರ್ಮ, ದೇವರು, ಭಕ್ತಿ, ನಂಬಿಕೆಗಳಂತಹ ಸೂಕ್ಷ್ಮ ವಿಚಾರಗಳ ಮೇಲೆ, ಕಾಲಾಂತರದಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. ಪರ ವಿರೋಧ ಎಂದಿಗೂ ಇದ್ದಿದ್ದೇ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ, ಯೋಚನೆಗಳನ್ನು ಚರ್ಚಿಸುವ ಹಕ್ಕು, ಸ್ವಾತಂತ್ರ್ಯ ಇದ್ದೇ ಇದೆ. ವೈಯಕ್ತಿಕವಾಗಿ ಏನು ಮಾಡಿದರೂ ಚೆನ್ನವೇ. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹೇರಲು ಪ್ರಯತ್ನಿಸಿದಾಗಲೇ ತೊಂದರೆ ಶುರುವಾಗುವುದು.

ದೇವರೆಂಬ ಕಲ್ಪನೆ(!), ಮನುಷ್ಯನ ನೆನಪು ಎಲ್ಲಿಯವರೆಗೆ ಹೋಗುವುದೋ ಅಲ್ಲಿಯವರೆಗೆ ಸಾಗುತ್ತದೆ. ದೇವರು ಕಲ್ಪನೆಯೋ, ಸಾಧ್ಯತೆಯೋ ನಾನು ಚರ್ಚಿಸಲು ಹೋಗುವುದಿಲ್ಲ. ಕನ್ನಡದಲ್ಲಿ ಅನೇಕ ಹಿರಿಯರು ಇದೇ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಕಾರಂತರ ಮೂಕಜ್ಜಿ ಹೇಳುವ ದೇವರು ಎಷ್ಟು ಆಸಕ್ತಿಕರವಾಗಿದೆಯೋ, ಮೂರ್ತಿರಾಯರ ದೇವರೂ ಸಹ ಅಷ್ಟೇ ಚೆನ್ನಾಗಿದೆ. ಈ ಲೇಖನದ ಉದ್ದೇಶ ದೇವರಲ್ಲ. ಆದರೆ, ದೇವರೆಂಬ ಕಲ್ಪನೆ ಮತ್ತು ನಂಬಿಕೆಗಳ ಸುತ್ತ ಹೆಣೆದಿರುವ ಒಂದು ಪುಸ್ತಕ ಸರಣಿಯೊಂದರ ಪರಿಚಯ ಮಾಡಿಸುವ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ.

ನೀವು ಭೈರಪ್ಪನವರ ಪರ್ವ ಓದಿದ್ದಲ್ಲಿ, ಈ ರೀತಿಯ ಪ್ರಯತ್ನವನ್ನು ಖಂಡಿತಾ ಪ್ರಶಂಸಿಸುತ್ತೀರಿ. ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು, ಆದರೆ ಅಷ್ಟು ವಿಭಿನ್ನವಾಗಿ ಯೋಚಿಸುವುದು ನಿಜಕ್ಕೂ ಅಭಿನಂದನಾರ್ಹ.

Philip Pullman ಬರೆದಿರುವ "His Dark Materials" - trilogy ಈ‌ ಲೇಖನದ ಉದ್ದೇಶ.

ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಈ ಕಥಾ ಸರಣಿ, ಮೂರು ಪುಸ್ತಕಗಳಲ್ಲಿ , ಅತ್ಯಂತ ವಿವಾದಕ್ಕೀಡಾದ, ಚರ್ಚೆಗೊಳಗಾದ ಕಥೆ ಹೇಳುತ್ತದೆ. ( Northern Lights, Subtle Knife, Amber Spyglass ). ಈ ಸರಣಿ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ಕಥೆ ಪ್ರಾರಂಭಿಸುವ ಮುನ್ನ ಲೇಖಕ ಈ ಕೆಳಗಿನ ಪದ್ಯ ಉಲ್ಲೇಖಿಸುತ್ತಾನೆ. ಇಲ್ಲಿಂದಲೇ ಸರಣಿಯ ಹೆಸರನ್ನೂ ಎರವಲು ಪಡೆದಿದ್ದಾನೆ. ಮಿಲ್ಟನ್ ನ ಪುಸ್ತಕದ ಪ್ರಭಾವ, ಲೇಖಕನೇ ಒಪ್ಪಿಕೊಂಡಂತೆ, ಗಾಢವಾಗಿದೆ.

Into this wild abyss,
The womb of nature and perhaps her grave,
Of neither sea, nor shore, nor air, nor fire,
But all these in their pregnant causes mixed
Confusedly, and which thus must ever fight,
Unless the almighty maker them ordain
His dark materials to create more worlds,
Into this wild abyss the wary fiend
Stood on the brink of hell and looked a while,
Pondering his voyage...
John Milton: Paradise Lost, Book II

ದೇವರು, ವಿಜ್ಞಾನ ಮತ್ತು ಕಲ್ಪನೆಯನ್ನು ಈ ಸರಣಿಯಲ್ಲಿ ಎಷ್ಟು ಸುಂದರವಾಗಿ ಹೆಣೆಯಲಾಗಿದೆಯೆಂದರೆ, ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸದೆ ಕೆಳಗಿಡಲು ಮನಸ್ಸಾಗುವುದಿಲ್ಲ.ಒಂದು ಅದ್ಭುತ ಕಥೆಯಾಗಿಯೂ, ಧರ್ಮ ವಿರೋಧಿಯಾಗಿಯೂ ಎದ್ದು ನಿಲ್ಲುವುದು ಈ ಪುಸ್ತಕಗಳ ವಿಶೇಷ.

ಕೇವಲ ಕಥೆಯಾಗಿ ಓದುವುದಾದರೆ, ಒಂದು ಅದ್ಭುತ ಲೋಕವನ್ನು ಲೇಖಕ ಬಿಚ್ಚಿಡುತ್ತಾನೆ. ಆ ಲೋಕದಲ್ಲಿ, ಕೇವಲ ರವಿಯಿಲ್ಲ, ಭುವಿಯಿಲ್ಲ. ಬದಲಿಗೆ ಅನೇಕಾನೇಕ ಭುವಿಗಳಿವೆ. ಒಂದು ಸುಂದರ ಸಮಾನಾಂತರ ಜಗತ್ತುಗಳ ಕಲ್ಪನೆಯಿದೆ. ಅಲ್ಲಿ ಒಂದು ವಿಶ್ವದಿಂದ ಮತ್ತೊಂದು ವಿಶ್ವಕ್ಕೆ ಹೋಗಬಹುದು. ನಿಮ್ಮ ಆತ್ಮದ ಜೊತೆ ಮಾತನಾಡಬಹುದು. ಖುದ್ದು ಭಗವಂತನಿಗೇ ಯುದ್ಧಕ್ಕೆ ಆಹ್ವಾನ ನೀಡಬಹುದು!

ತುಂಬ ಕುತೂಹಲಕಾರಿಯಾಗಿ ಬರೆದಿರುವ ಈ ಸರಣಿಯನ್ನು ಸಿನಿಮಾ ಮಾಡುವ ಪ್ರಯತ್ನ ಕೂಡ ನಡೆಯಿತು. Golden Compass ಎನ್ನುವ ಹೆಸರಲ್ಲಿ ಬಿಡುಗಡೆಯಾದ ಚಿತ್ರ, ಈ ಸರಣಿಯಲ್ಲಿ ಮೊದಲ ಭಾಗದ ಕಥೆಯನ್ನು ಮಾತ್ರ ಹೇಳುತ್ತದೆ. ಚಿತ್ರ ಬಿಡುಗಡೆಯಾದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಒಬ್ಬ ಹನ್ನೆರಡು ವರ್ಷದ ಹುಡುಗಿಯ ಸುತ್ತ ಗಿರಕಿ ಹೊಡೆಯುವ ಈ ಕಥೆಯಲ್ಲಿ ಅನೇಕ ಅನೂಹ್ಯ ಕಲ್ಪನಾ ಪ್ರಯೋಗಗಳಿವೆ. ಮೊದಲಿಗೆ , ಲೇಖಕ, Daemon ಎನ್ನುವ ಹೊಸ ಕಲ್ಪನೆ ತೇಲಿ ಬಿಡುತ್ತಾನೆ. ನಿಮ್ಮ ಆತ್ಮದಿಂದ ಒಂದು ಭಾಗವನ್ನು ತೆಗೆದು ಅದಕ್ಕೊಂದು ರೂಪ ಕೊಟ್ಟರೆ, ಅದು Daemon. ನೀವು ಮತ್ತು ನಿಮ್ಮ Daemon ಒಬ್ಬರನ್ನೊಬ್ಬರು ಬಿಟ್ಟು ದೂರ ಹೋಗಲು ಸಾಧ್ಯವಿಲ್ಲ. Daemonಗಳ ರೂಪ ಕೂಡ ವಿಶಿಷ್ಟ. ಚಿಕ್ಕ ಮಕ್ಕಳ Daemonಗಳು ಯಾವ ವೇಷ ಬೇಕಾದರೂ ಧರಿಸಬಹುದು. ( ಬೆಕ್ಕು, ಗಿಳಿ, ನಾಯಿ ಇತ್ಯಾದಿ ). ದೊಡ್ಡವರ Daemonಗಳು ಒಂದೇ ರೂಪದಲ್ಲಿ ಸ್ಥಿರಗೊಂಡಿರುತ್ತವೆ. Daemonಗಳು ವ್ಯಕ್ತಿಗಳ ಸ್ವಭಾವಕ್ಕ್ಕೆ ತಕ್ಕಂತೆ ಇರುತ್ತವಾದ್ದರಿಂದ, ಸೇವಕರ Daemonಗಳು ಸಾಮಾನ್ಯವಾಗಿ ನಾಯಿಗಳಾಗಿರುತ್ತವೆ. ಸೈನಿಕರಿಗೆ ತೋಳ, ಹುಲಿ Daemonಗಳು. ನೀಚ ಬುದ್ಧಿಯವರಿಗೆ ಹಾವು ಇತ್ಯಾದಿ. ಅದೆಷ್ಟು ವಿಚಿತ್ರ ಈ ಕಲ್ಪನೆ!

ನಂತರ ಲೇಖಕ ಬೇರೆ ಬೇರೆ ವಿಶ್ವಗಳ ಬಗ್ಗೆ ಹೇಳುತ್ತಾನೆ. ವಿಜ್ಞಾನ ಹೇಳುತ್ತಾ ಬಂದಿರುವಂತೆ, ಈ ಬ್ರಹ್ಮಾಂಡದಲ್ಲಿ ನಮ್ಮದಷ್ಟೇ ಅಲ್ಲ, ಅನೇಕ ಭುವಿಗಳಿವೆ. ಅಲ್ಲಿಯೂ ಜೀವ ವಿಕಸನವಾಗಿದೆ. ಇಲ್ಲಿಯವರೆಗೂ ಸರಿ, ಎಲ್ಲರೂ ಒಪ್ಪುವಂಥದ್ದೇ. ಅಲ್ಲಿಂದ ಮುಂದೆ ಲೇಖಕ Quantum Physicsಗೆ ಸಾಗುತ್ತಾನೆ. ಸಮಾನಾಂತರ ಜಗತ್ತು ಬಿಚ್ಚಿಕೊಳ್ಳುತ್ತದೆ. ವಿಚಾರ ಮಾಡಿ, ಎರಡು ವಿಶ್ವಗಳು ಒಟ್ಟೊಟ್ಟಿಗೇ ವಿಕಸನಗೊಳ್ಳುತ್ತವೆ. ಎರಡೂ ಕಡೆ ಒಂದೇ ರೀತಿಯ ಜೀವ ಸಂಕುಲ. ನೀವು ಇಲ್ಲಿ ಇದ್ದಲ್ಲಿ, ಆ ವಿಶ್ವದಲ್ಲಿಯೂ ಇರಬಹುದು. ಆದರೆ ಇಲ್ಲಿ ಆದದ್ದೆಲ್ಲಾ ಅಲ್ಲಿಯೂ ಆಗಬೇಕೆಂದೇನಿಲ್ಲ. ಅವೆರಡೂ ಸಮಾನಾಂತರ ವಿಶ್ವಗಳಷ್ಟೇ (parallel universe).

ಈಗ ಸಮಾನಾಂತರ ಅಥವಾ ಅನೇಕ ವಿಶ್ವಗಳಿದ್ದಲ್ಲಿ, ಒಂದರಿಂದ ಮತ್ತೊಂದಕ್ಕೆ, ಅಥವಾ ಎಲ್ಲಾ ವಿಶ್ವಗಳಿಗೂ ಹೋಗಿ ಬರುವ ಅವಕಾಶವಿಲ್ಲದಿದ್ದಲ್ಲಿ ಕಥೆ ಕುತೂಹಲಕಾರಿಯಾಗಿರುವುದಿಲ್ಲ. ಹಾಗಾಗಿ, ಅದನ್ನು ಸಾಧಿಸಲು ಲೇಖಕ ಚಾಕುವೊಂದನ್ನು ಸೃಷ್ಟಿಸುತ್ತಾನೆ. ಈ ಚಾಕುವಿನ ಅಲಗು ಬರಿಗಣ್ಣಲ್ಲಿ ನೋಡಲಾಗದಷ್ಟು ಹರಿತ. ಅದು ಎಷ್ಟು ಶಕ್ತಿಶಾಲಿಯೆಂದರೆ, ಅದು ಯಾವ ವಸ್ತುವನ್ನು ಬೇಕಾದರೂ ತುಂಡು ಮಾಡೀತು. ಅದನ್ನು ಉಪಯೋಗಿಸಿ ವಿಶ್ವಗಳನ್ನು ಬೇರ್ಪಡಿಸುವ ಅದೃಶ್ಯ ಗೋಡೆಗಳನ್ನು ಕೂಡ ಸೀಳಬಹುದು.

ಮನುಷ್ಯ ಮಾತ್ರನಿಗೆ ಈ‌ ಅನೇಕ ವಿಶ್ವಗಳ ಬಗೆಗೆ ಕಲ್ಪನೆ ಬಂದದ್ದಾದರೂ ಹೇಗೆ? ಅವನು ಬೌದ್ಧಿಕವಾಗಿ ಇಷ್ಟು ಬೆಳವಣಿಗೆ ಹೊಂದಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಲೇಖಕ ಮತ್ತೊಂದು ಹೊಸ ವಿಚಾರವನ್ನು ಹೇಳುತ್ತಾನೆ. ಅವನ ಪ್ರಕಾರ ಇದಕ್ಕೆಲ್ಲಾ ಕಾರಣ Dust! ಹೌದು Dust ಅಥವಾ ಆಡು ಭಾಷೆಯಲ್ಲಿ ಹೇಳುವುದಾದರೆ , ಧೂಳು ಇದಕ್ಕೆಲ್ಲಾ ಕಾರಣ. ಆದರೆ Dust ಎಂದರೆ ಸಾಧಾರಣ ಧೂಳಿನ ಕಣಗಳಲ್ಲ. ಅವು ಪ್ರಜ್ಞೆ . ಅವೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ. ಭೌತಶಾಸ್ತ್ರ ಹೇಳುವಂತೆ, neutron, proton, electronಗಳ ತರಹ Dust ಕೂಡ ಒಂದು ಪರಮಾಣು ಕಣ. ಈಗ ಈ‌ ಕಣಗಳಿಗೆ ಪ್ರಜ್ಞೆ ಇದ್ದಲ್ಲಿ, ಅವಕ್ಕೆ ತಮ್ಮದೇ ಆದ ಇಚ್ಛೆ ಇದ್ದಲ್ಲಿ, ಉದ್ದೇಶವಿದ್ದಲ್ಲಿ! ಲೇಖಕ ಅವುಗಳಿಗೆ Dust ಅಥವಾ Dark Matter ಎಂದು ಕರೆಯುತ್ತಾನೆ. ಅವುಗಳಿಗೆ ತಮ್ಮದೇ ಆದ ಉದ್ದೇಶವಿದ್ದಿದ್ದರಿಂದ ಅವು ಮನುಷ್ಯನ ಬೆಳವಣಿಗೆಗೆ ಸಹಕರಿಸಿದವು. ಬೇರೆ ಇನ್ಯಾವುದೋ ವಿಶ್ವದಲ್ಲಿ, ಅವುಗಳ ಅನುಕೂಲಕ್ಕೆ ತಕ್ಕಂತೆ ಮತ್ತೆ ಬೇರೆ ಯಾವ ಪ್ರಾಣಿಗೋ ಅವು ಸಹಕರಿಸಿದ್ದಾವು!

ಮಕ್ಕಳೊಂದಿಗೆ Dustನ ನಂಟು ಸ್ವಲ್ಪ ಕಡಿಮೆ. ಹಾಗಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಕಡಿಮೆ. ಅವುಗಳ ವ್ಯಕ್ತಿತ್ವ ಇನ್ನೂ ಪರಿಪೂರ್ಣವಾಗಿ ರೂಪುಗೊಂಡಿಲ್ಲವಾದ್ದರಿಂದ ಮಕ್ಕಳ daemonಗಳಿಗೆ ಒಂದು ಸ್ಥಿರವಾದ ರೂಪವಿಲ್ಲ ! ಹರೆಯಕ್ಕೆ ಬರುತ್ತಿದ್ದಂತೆ, Dustನ ಸಾಂದ್ರತೆ ಹೆಚ್ಚಾಗುವುದರಿಂದ, ಬುದ್ಧಿಶಕ್ತಿ ಹೆಚ್ಚಾಗುತ್ತದೆ. ವ್ಯಕ್ತಿತ್ವ ಸ್ಪಷ್ಟವಾಗುತ್ತದೆ. Daemonಗಳೂ ಒಂದು ರೂಪದಲ್ಲಿ ಸ್ಥಿರವಾಗುತ್ತವೆ.

ಇಷ್ಟೆಲ್ಲಾ ಅನೂಹ್ಯ ಸಂಗತಿಗಳನ್ನು ಹೇಳುತ್ತಾ ಹೋಗುವ ಲೇಖಕ, ಕಥೆಯನ್ನು ಇನ್ನೂ ಕುತೂಹಲಕಾರಿಯನ್ನಾಗಿಸಲು, ಇಡೀ ಬ್ರಹ್ಮಾಂಡಕ್ಕೇ ಆಪತ್ತನ್ನು ತಂದಿಡುತ್ತಾನೆ, ಚಾಕುವಿನಿಂದ.ವಿಷಯವೇನೆಂದರೆ, ವಿಶ್ವದಿಂದ ವಿಶ್ವಕ್ಕೆ ಹೋಗಲು ಚಾಕುವಿನಿಂದ ಕನ್ನ ಕೊರೆದ ಮೇಲೆ, ಅದನ್ನು ಮುಚ್ಚದಿದ್ದಲ್ಲಿ, Dust ಪಾತಾಳಕ್ಕೆ ಸೋರಿಹೋಗುತ್ತದಂತೆ. ಹಾಗೂ ಪ್ರತಿ ಬಾರಿ ಕನ್ನ ಕೊರೆದಾಗ ಪಾತಾಳದಿಂದ ಒಂದು ದುಷ್ಟ ಕಣದ ಸೃಷ್ಟಿಯಾಗುತ್ತದಂತೆ. ಮತ್ತೆ ಆ ದುಷ್ಟ ಕಣದ ಆಹಾರವೇ ಸಮಸ್ತ ಲೋಕದ ಅಭ್ಯುದಯಕ್ಕೆ ಕಾರಣವಾದ Dust. ಹೀಗಾಗಿ, ಸೋರಿ ಹೋಗುತ್ತಿರುವ Dust ಉಳಿಸುವ ಮತ್ತು ಪಾತಾಳ ಲೋಕದ ದುಷ್ಟ ಕಣಗಳನ್ನು ನಾಶ ಮಾಡುವ ಜವಾಬ್ದಾರಿ, ನಮ್ಮ ಕಥಾನಾಯಕಿ, ಹನ್ನೆರಡು ವರ್ಷದ ಪೋರಿಯ ಮೇಲೆ ಬೀಳುತ್ತದೆ. ಇನ್ನೂ ಮಜವಾದ ಸಂಗತಿಯೆಂದರೆ, ಆಕೆ ತನಗರಿವಿಲ್ಲದಂತೆಯೇ ಈ ಕಾರ್ಯ ಮಾಡಿ ಮುಗಿಸಬೇಕು. ಆಕೆಯೇ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಯಾರಾದರೂ ಆಕೆಗೆ ಏನು ಮಾಡಬೇಕೆಂದು ಹೇಳಿದರೆ, ಭವಿಷ್ಯವೇ ಬದಲಾಗಬಹುದು. ಹೀಗಾಗಿ, ವಿಷಯ ಗೊತ್ತಿದ್ದವರು ಆಕೆಗೆ ಏನೂ ಹೇಳುವಂತಿಲ್ಲ, ಆದರೆ ಆಕೆಗೆ ಖುದ್ದು ವಿಷಯವೇ ಗೊತ್ತಿಲ್ಲ. In her ignorance lies the fate of the world!

ಸರಣಿಯ ಮೂರನೆಯ ಪುಸ್ತಕದಲ್ಲಿ, ಲೇಖಕ, ಅತ್ಯಂತ ಚರ್ಚೆಗೊಳಗಾದ ಭಗವಂತನ ಕುರಿತಾದ ತನ್ನ ಕಲ್ಪನೆಯನ್ನು ಹಂಚಿಕೊಳ್ಳುತ್ತಾನೆ. ಅವನ ಪ್ರಕಾರ, ಅನೇಕಾನೇಕ ವಿಶ್ವಗಳಿದ್ದಂತೆ, ನಮ್ಮ ಭೂಮಿಯಿದ್ದಂತೆ, ಸ್ವರ್ಗ (heaven) ಕೂಡ ಒಂದು ಲೋಕ. ಅಲ್ಲಿ ದೇವತೆಗಳು (Angel) ಇರುತ್ತಾರೆ. ಅದಕ್ಕೆ ಸರಿಯಾಗಿ ನರಕ ಸಹ ಮತ್ತೊಂದು ಲೋಕ. ಲೇಖಕ ಅದನ್ನು ಸತ್ತವರ ಲೋಕವೆಂದು ಕರೆಯುತ್ತಾನೆ.

ಲೇಖಕ ಹೇಳುವಂತೆ, ಜೀವ ವಿಕಸನದ ಪ್ರಕ್ರಿಯೆಯಲ್ಲಿ, ಭಗವಂತ (Authority) ಮೊದಲಿಗೆ ಜನಿಸಿದ. ಆ ನಂತರ ಹುಟ್ಟಿದವರಿಗೆ ಅವನೇ ಅವರನ್ನೆಲ್ಲ ಸೃಷ್ಟಿಸಿದ್ದೆಂದು ಸುಳ್ಳು ಹೇಳಿದ. ದೇವ, ದೇವತೆಗಳೆಂದರೆ, ಜೀವ ವೈವಿಧ್ಯತೆಯಲ್ಲಿ ಒಂದು ಬಗೆ. ಮನುಷ್ಯ, ಪ್ರಾಣಿ, ಪಕ್ಷಿಗಳಂತೆ ದೇವತೆಗಳೂ ಒಂದು ಬಗೆಯ ಜೀವಿ. Angels are one of those creatures which have evolved in some world, and Authority is just another angel. But he happens to be the first one to evolve.

ದೇವತೆಗಳಿಗೆ ದೇಹವಿಲ್ಲ. ಅವರ ಶರೀರ ಸಂಪೂರ್ಣವಾಗಿ Dustನಿಂದ ಕೂಡಿದೆ. ಕೇವಲ ಕಣಗಳಿಂದ ಮಾಡಲ್ಪಟ್ಟಿರುವುದರಿಂದ ಅವರಿಗೆ ದೇಹವಿಲ್ಲ. ಹಾಗಾಗಿ, ದೈಹಿಕವಾಗಿ ಅವರು ಮಾನವರಿಗಿಂತ ದುರ್ಬಲರು. ಅವರಲ್ಲಿ ಕೆಲವರು ದೇವತೆಗಳಾಗಿಯೇ ಜನಿಸುತ್ತಾರೆ. ಇನ್ನು ಕೆಲವು ಮಾನವರು ದೇವತೆಗಳ ಸಹಾಯದಿಂದ ಸತ್ತ ಮೇಲೆ ದೇವತೆಗಳಾಗುತ್ತಾರೆ.

ಇನ್ನು ಸಾವು! ಸಾವಿನ ಕಲ್ಪನೆ ಕೂಡ ಸೊಗಸಾಗಿದೆ. ಸಾವು ಸದಾ ನಮ್ಮೊಡನೆಯೇ ಇರುತ್ತದಂತೆ. ಪ್ರತಿಯೊಬ್ಬರಿಗೂ ಅವರದೇ ಆದ ಸಾವು ಇರುತ್ತದೆ. ಆದರೆ, ಸಾವನ್ನು ನೋಡಲು ಸಾಮಾನ್ಯವಾಗಿ ಯಾರೂ ಇಷ್ಟ ಪಡದ ಕಾರಣ, ಅದು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುತ್ತದೆ. ಸಾವಿನೊಂದಿಗೆ ಮನಸಾರೆ ಸ್ನೇಹ ಬಯಸಿದಲ್ಲಿ, ಸಾವಿನ ಸಾಂಗತ್ಯದಲ್ಲಿಯೇ ಬದುಕಬಹುದು. ಕೊನೆಗೆ , ಸಮಯ ಬಂದಾಗ ಸತ್ತವರ ಲೋಕಕ್ಕೆ ಕರೆದೊಯ್ಯಲು ಸಾವು ಸಹಾಯ ಮಾಡುತ್ತದೆ. ಕೇವಲ ಸಾವಿಗೆ ಮಾತ್ರ ಅಲ್ಲಿಗೆ ಹೋಗುವ ದಾರಿ ತಿಳಿದಿರುತ್ತದೆ. ಅಲ್ಲಿಗೆ ಕರೆದೊಯ್ದು ಬಿಟ್ಟ ಮೇಲೆ ಅದರ ಕರ್ತವ್ಯ ಮುಗಿಯುತ್ತದೆ.

ಕಥೆಯ ಕೊನೆಯ ಭಾಗ ರೋಚಕವಾಗಿದೆ. ಭಗವಂತನಿಗೀಗ ವಯಸ್ಸಾಗಿದೆ. ಈಗ ಆತ ಹೊರಗೆಲ್ಲೂ ಬರುವುದಿಲ್ಲ. ಆತನಿಗೊಬ್ಬ ಸೇನಾಧಿಕಾರಿಯಿದ್ದಾನೆ. ಭಗವಂತನಿಗೀಗ ವಯಸ್ಸಾಗಿರುವುದರಿಂದ ಸೇನಾಧಿಕಾರಿಯೇ ಎಲ್ಲ ಕಾರ್ಯಕಲಾಪಗಳನ್ನು ನೋಡಿಕೊಳ್ಳುತ್ತಾನೆ. ಬ್ರಹ್ಮಾಂಡದಲ್ಲಿನ ಎಲ್ಲಾ ಪ್ರಜ್ಞಾಪೂರ್ವಕ ಜೀವಿಗಳು ಅತ್ಯಂತ ಸ್ವತಂತ್ರರಾಗಿದ್ದಾರೆಂದು ಭಗವಂತನಿಗೆ ಅನಿಸಿದೆ. ಅವನು ಮತ್ತೆ ಸೇನಾಧಿಕಾರಿ ಸೇರಿ ಈ ಬಗ್ಗೆ ಮೊದಲೇ ವಿಚಾರ ಮಾಡಿದ್ದರಿಂದ, ಸೇನಾಧಿಕಾರಿ ಎಲ್ಲ ವಿಶ್ವಗಳ ಮೇಲೂ ತನ್ನ ಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾನೆ. ಇದಕ್ಕೆ ವಿರುದ್ಧವಾಗಿ ಮಾನವನೊಬ್ಬ ಸಿಡಿದೇಳುತ್ತಾನೆ. ಬ್ರಹ್ಮಾಂಡದೆಲ್ಲೆಡೆಯಿಂದ ಅವನಿಗೆ ಸಹಾಯ ಹರಿದು ಬರುತ್ತದೆ. ಈ ದೇವ-ಮಾನವ ಯುದ್ಧವನ್ನು ಪುಸ್ತಕದಲ್ಲಿ ಓದುವುದೇ ಒಂದು ಮುದ.

ಕಥೆಯ ಕೊನೆಯ ಹಂತದಲ್ಲಿ ಲೇಖಕ Butterfly Effect ಎಂಬ ಮತ್ತೊಂದು ಭೌತಶಾಸ್ತ್ರದ ಎಳೆಯೊಂದನ್ನು ತಂದು ಮುಕ್ತಾಯಗೊಳಿಸುತ್ತಾನೆ. ಅದರ ಪ್ರಕಾರ ಜಗತ್ತಿನಲ್ಲಿ ನಡೆಯುವ ಯಾವುದೇ ಅತಿ ಚಿಕ್ಕ ಘಟನೆ ಕಾಲಾಂತರದಲ್ಲಿ ಅತ್ಯಂತ ದೊಡ್ಡ ಘಟನೆಗೆ ಕಾರಣವಾಗುತ್ತದೆ. ಈ ಸಿದ್ಧಾಂತ ಎಷ್ಟು ವಿಚಿತ್ರವಾದ ವಿಷಯಗಳನ್ನು ಹೇಳುತ್ತದೆಯೆಂದರೆ, ಬೆಂಗಳೂರಲ್ಲಿ ಇವತ್ತು ಚಿಟ್ಟೆಯೊಂದು ರೆಕ್ಕೆ ಬಡಿದರೆ ಮುಂದೆ ಯಾವತ್ತೋ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವೇಳುತ್ತದೆಯಂತೆ!

ಕಥಾನಾಯಕಿ, ಕಥೆ ಮುಗಿಯುವ ಹಂತಕ್ಕೆ ಬಂದಾಗ ಹರೆಯಕ್ಕೆ ಬರುತ್ತಾಳೆ. ಗೆಳೆಯನೊಂದಿಗೆ ಪ್ರೇಮಾಂಕುರವಾಗುವುದರೊಂದಿಗೆ (Original sin ?) ಜಗತ್ತಿಗೆ ಬಂದಿದ್ದ ಗಂಡಾಂತರ ತೊಲಗುತ್ತದೆ. ಯಾವುದೇ ನದಿಯ ಹರಿವನ್ನು ಬದಲಿಸಲು, ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಒಂದೇ ಒಂದು ಚಿಕ್ಕ ಕಲ್ಲನ್ನಿಟ್ಟರೆ ಸಾಕೋ, ಅದೇ ರೀತಿ, ಕಥಾನಾಯಕಿಯ ಪ್ರೇಮಪ್ರಸಂಗ ಬ್ರಹ್ಮಾಂಡದ ಚಲನೆಯನ್ನೇ ಬದಲಿಸುತ್ತದೆ.


ಕೊ: ಇದೇ ಲೇಖಕನ ಇನ್ನೊಂದು ಕೃತಿ "Good Man Jesus and the Scoundrel Christ" ಇತ್ತೀಚಿಗೆ ಬಿಡುಗಡೆಯಾಗಿದೆ. ಒಂದು ಅಧ್ಯಾಯ ಇಲ್ಲಿದೆ.